ಮನರಂಜನೆಶಿವಮೊಗ್ಗ

‘ಎಲ್ಲರಿಂತಲೂ ಹೆಚ್ಚು ಡಾರ್ಕ್ ಆಗಿ ನಿಮ್ಮ ಹ್ಯಾಂಡ್ ಪ್ರಿಂಟ್ ಬಂದಿದೆ’ ಅಥವಾ ‘ಸರ್ ಈ ತರದ ಉಡುಗೊರೆ ಯವಾಗಲಾದರೂ ಯಾರಾದರೂ ಕೊಟ್ಟಿದ್ರಾ?’

‘ಎಲ್ಲರಿಂತಲೂ ಹೆಚ್ಚು ಡಾರ್ಕ್ ಆಗಿ ನಿಮ್ಮ ಹ್ಯಾಂಡ್ ಪ್ರಿಂಟ್ ಬಂದಿದೆ’ ಅಥವಾ ‘ಸರ್ ಈ ತರದ ಉಡುಗೊರೆ ಯವಾಗಲಾದರೂ ಯಾರಾದರೂ ಕೊಟ್ಟಿದ್ರಾ?’

ಶಿಕ್ಷಕರ ದಿನಾಚರಣೆಗೆ ಮಕ್ಕಳು ಸಡಗರದ ಸಿದ್ಧತೆಗೆ ಮುಂದಾಗಿದ್ದರು. ಪಾವ್ನಿ ಮತ್ತು ಉಲ್ಲಾಸ್‌ಸ್ವಾಮಿ ಜೊತೆಗೆ ಕೆಲವು ಆಸಕ್ತಿಯ ಮಕ್ಕಳು ತಾವೇ ಮುಂಚೂಣಿಗೆ ಬಂದು ಮುಖ್ಯೋಪಾಧ್ಯಾಯರಿಗೆ ತಾವು ಮಾಡಲಿರುವ ಕಾರ್ಯಕ್ರಮ ಹೇಗಿರಲಿದೆ? ಏನೇನು? ಎಂದು ತಿಳಿಸಿ ಒಪ್ಪಿಗೆ ಪಡೆದುಕೊಂಡರು. ಅವರುಗಳೇ ಬಿಡುವಿನ ಸಮಯದಲ್ಲಿ ವಿವಿಧ ತರಗತಿಗಳಿಗೆ ಹೋಗಿ ‘ನಾವು ಶಿಕ್ಷಕರ ದಿನಾಚರಣೆ ಮಾಡುತ್ತಿದ್ದೇವೆ. ನೀವುಗಳು ನಮ್ಮ ಜೊತೆಗೆ ಕೈ ಜೋಡಿಸುವುದಾದರೆ ಸ್ವಾಗತ’ ಎಂದು ಹೇಳಿದರು. ಕೆಲವು ವಿದ್ಯಾರ್ಥಿಗಳು ಸಹಾಯಕ್ಕಾಗಿ ಜೊತೆಗೆ ನಿಂತರು. ಇನ್ನೂ ಕೆಲವರು ತರಗತಿಯಿಂದ ಹೊರಗೆ ಬರಲು ಅವಕಾಶ ಸಿಗುತ್ತದೆ ಎಂದು ‘ನಾನು ನಿಮಗೆ ಸಹಾಯ ಮಾಡಲು ಬರುತ್ತೇನೆ’ ಎಂದು ಬಂದರ ಬಂದಂತ ವಿದ್ಯಾರ್ಥಿಗಳಲ್ಲೇ ಹಲವು ತಂಡವನ್ನು ಮಾಡಿಕೊಂಡು ಯಾರು ಯಾರಿಗೆ ಯಾವ ರೀತಿಯ ಜವಾಬ್ದಾರಿಗಳನ್ನು ನೀಡುವುದು, ನೀಡಿದ ಕೆಲಸಗಳನ್ನು ಮಾತ್ರ ಮಾಡುವುದು, ಇತರರ ಕೆಲಸದಲ್ಲಿ ಮೂಗು ತೂರಿಸುವಂತಿಲ್ಲ, ನಾನು ಆ ಕೆಲಸವನ್ನು ಮಾಡುತ್ತೇನೆ, ಈ ಕೆಲಸವನ್ನು ಮಾಡುವುದಿಲ್ಲ ಎಂದು ಹೇಳದೇ ತಮಗೆ ನೀಡಿದ ಕೆಲಸವನ್ನು ಮಾಡಬೇಕಿದೆ ಎಂಬುದನ್ನು ತೀರ್ಮಾನಿಸಿದರು.
ಅದರಂತೆಯೇ ಎಲ್ಲಾರಿಗೂ ಕೆಲಸಗಳನ್ನು ಹಂಚಿದರು. ಎಲ್ಲಾ ಮಕ್ಕಳಿಗೆ ಸಿಹಿಯನ್ನು ವಿತರಿಸುವ ಜವಾಬ್ದಾರಿ, ಶಿಕ್ಷಕರಿಗೆ ವಿವಿಧ ರೀತಿಯ ಆಟೋಟಗಳನ್ನು ಆಡಿಸುವ ಕೆಲಸ, ಹಾಲ್ ಅನ್ನು ಸಿಂಗರಿಸುವುದು, ಸಿಹಿಯನ್ನು ತರುವುದು, ಸ್ವಾಗತಿಸುವುದು, ಉಡುಗೊರೆಗಳನ್ನು ತರುವುದು ಹೀಗೆ ವಿವಿಧ ರೀತಿಯ ಜವಾಬ್ದಾರಿಗಳನ್ನು ಹಂಚಿಕೊಂಡರು. ಕೆಲವರಿಗೆ ತಮಗೆ ನೀಡಿದ್ದ ಕೆಲಸ ಮಾಡಲು ಮನಸ್ಸಿಲ್ಲದಂತೆ ವರ್ತಿಸಿದಾಗ ಅನಿವಾರ್ಯವಾಗಿ ಯಾರು ಶಿಕ್ಷಕರ ದಿನಾಚರಣೆ ಮಾಡುತ್ತೇವೆ ಎಂದು ತೀರ್ಮಾನಿಸಿದ್ದರೋ ಅವರುಗಳೇ ಮಾರ್ಕೇಟ್‌ಗೆ ಹೋಗಿ ಬೇಕಾದ ಸಾಮಗ್ರಿಗಳನ್ನು ತಮ್ಮ ಪೋಷಕರೊಂದಿಗೆ ಹೋಗಿ ತೆಗೆದುಕೊಂಡು ಬರಬೇಕಾಯಿತು. ಇದರ ಮಧ್ಯೆ ಶಿಕ್ಷಕರಿಗೆ ಹೊಸತನದ ಉಡುಗೊರೆ ನೀಡುವ ಯೋಚನೆ ಪೂರ್ವಿಶೇಟ್ ಮತ್ತು ತ್ರಯಾಂಬಿಕ ಯೋಚಿಸಿದರು. ಇಬ್ಬರೂ ‘ಚಿತ್ರಕಲೆ’ಯಲ್ಲಿ ಆಸಕ್ತಿಯನ್ನು ಹೊಂದಿದ್ದ ಕಾರಣ, ಮತ್ತು ಚಿತ್ರಕಲೆ ತರಬೇತಿಯನ್ನು ಪಡೆಯುತ್ತಿದ್ದುದರಿಂದ ಬಣ್ಣದಿಂದ ವಿಶೇಷವಾಗಿ ಏನಾದರೂ ಕೊಡಬಹುದಾ? ಎಂದು ಯೋಚಿಸಿ ಕಡೆಗೆ ಒಂದು ತೀರ್ಮಾನಕ್ಕೆ ಬಂದರು. ಅದೇನೆಂದರೆ ಶಿಕ್ಷಕರ ಕೈಗಳಿಗೆ ಬಣ್ಣವನ್ನು ಹಾಕಿ ಅದೆಲ್ಲವನ್ನೂ ಒಂದು ಹಾಳೆಯಲ್ಲಿ ಸಂಗ್ರಹಿಸುವುದು. ಅಷ್ಟರಲ್ಲಿ ‘ಒಂದು ಮರದ ಚಿತ್ರ ಬರೆದು ಅದಕ್ಕೆ ಹೊಂದಿಕೆಯಾಗುವಂತೆ ಶಿಕ್ಷಕರಿಂದ ಕೈಗುರುತನ್ನು ಪಡೆಯೋಣ’ ಎಂದಳು ಪೂರ್ವಿ. ‘ಬಿಲ್ಡರ್ಸ್ ಆಫ್ ಸಾಂದೀಪನಿ’ ಎನ್ನುವ ಹೆಸರಿನಲ್ಲಿ ಬರೆಯಲು ತೀರ್ಮಾನಿಸಿದರು. ‘ವಿವಿಧ ವಿಷಯದ ಶಿಕ್ಷಕರೆಂದು ಗುರುತಿಸಲು ವಿಷಯವಾರು ಶಿಕ್ಷಕರಿಗೆ ಬೇರೆಬೇರೆ ಬಣ್ಣವನ್ನು ನೀಡೋಣ ಎಂಬ ಸಲಹೆ ನೀಡಿದಳು ತ್ರಯಾಂಬಿಕ. ಇವರ ಜೊತೆಗೆ ಇನ್ನೊಂದಿಷ್ಟು ಮಕ್ಕಳು ಸೇರಿಕೊಂಡರು.

ಮೊದಲು ಸಮಾಜವಿಜ್ಞಾನದ ಶಿಕ್ಷಕರಾದ ಉಮೇಶ್‌ಸರ್ ಬಳಿಗೆ ಹೋಗಿ ತ್ರಯಾಂಬಿಕ ತಾವು ಮಾಡುತ್ತಿರುವ ಕೆಲಸ ಮತ್ತು ಅದರ ಉದ್ದೇಶವನ್ನು ತಿಳಿಸಿದಳು. ಖುಷಿಯಿಂದ ಒಪ್ಪಿ ಕೈಗೆ ಬಣ್ಣವನ್ನು ಹಚ್ಚಿಕೊಂಡು ಹಾಳೆಯ ಮೇಲಿಟ್ಟರು. ಚೆಂದವಾಗಿ ಮೂಡಿಬಂದಿತ್ತು. ನಂತರ ಮುಖ್ಯೋಪಾಧ್ಯಾರ ಬಳಿಗೆ ಹೋದರು. ಮಕ್ಕಳನ್ನು ಗೋಳು ಹೋಯ್ದುಕೊಳ್ಳಲು ಇದಕ್ಕಿಂತ ಸಮಯ ಬೇಕೆ? ‘ಕೈ ತುಂಬಾ ಬಣ್ಣ ಆಗುತ್ತದೆ. ಅದನ್ನು ತೊಳೆಯುವುದು ಕಷ್ಟ ಆಗುತ್ತದೆ ಹಾಗಾಗಿ ನಾನು ಕೈಗೆ ಬಣ್ಣ ಹಾಕಿಕೊಳ್ಳಲ್ಲ’ ಎಂದರು. ವರ್ಷಿತ ‘ಏನು ಆಗಲ್ಲ ಸರ್ ಬೇಕಾದರೆ ನಾನೇ ಕೈ ತೊಳೆಯುತ್ತೇನೆ, ಅದಕ್ಕೆ ಸ್ಯಾನಿಟೈಸರ್ ತಂದಿದಿನಿ’ ಎಂದು ನಕ್ಕಳು. ಸರ್ ಕೂಡ ನಕ್ಕರು. ‘ಸರಿ ಅದೇನು ಮಾಡ್ತಿರೋ ಮಾಡಿ’ ಎಂದರು ಕೈತುಂಬಾ ಬಣ್ಣ ಹಚ್ಚಿ ಕಪ್ಪು ಹಾಳೆಯ ಮೇಲ್ಭಾಗದಲ್ಲಿ ಕೈಗುರುತನ್ನು ಪಡೆದರು. ತದ ನಂತರ ಗಣಿತ ಶಿಕ್ಷಕರ ಬಳಿ ಹೋದರು (ಅವರು ಇನ್ನೂ ಹೆಚ್ಚಾಗಿ ಗೋಳು ಹೊಯ್ದುಕೊಂಡರು). ‘ಸರ್ ನಿಮ್ಮ ಹ್ಯಾಂಡ್ ಪ್ರಿಂಟ್ ಬೇಕಿತ್ತು’. ಎಂದು ಮಕ್ಕಳು ಕೇಳಿಕೊಂಡರು, ‘ನೀವು ಯಾವುದೋ ಲೋ ಕ್ವಾಲಿಟಿ ಪೇಂಟ್ ತಂದು ನನ್ನ ಕೈ ಮೇಲೆ ಹಾಕಿ ಕೈಲಿರೋ ರೇಖೆಗಳೆಲ್ಲ ಅಳಿಸಿಹೋದರೆ? ನಾನಂತೂ ಕೊಡಲ್ಲ’ ಎಂದರು ತ್ರಯಾಂಬಿಕ, ‘ಇಲ್ಲ ಸರ್ ಒಳ್ಳೆಯ ಕ್ವಾಲಿಟಿಪೇಂಟ್ ತಂದಿದಿವಿ. ಮುಖ್ಯೋಪಾಧ್ಯಾಯರು ಹ್ಯಾಂಡ್‌ಪ್ರಿoಟ್ ಕೊಟ್ಟಿದ್ದಾರೆ’ ಹಾಗೇಹೀಗೇ ಎಂದು ಕೇಳುತ್ತಲೇ ಇದ್ದರು, ಇವರು ಕೊಡಲ್ಲ ಎಂದು ಕಾಡಿಸುತ್ತಲೇ ಇದ್ದರು. ಅಂತೂಇಂತೂ ಕೊನೆಗೂ ಒಪ್ಪಿದರು. ಆದರೆ ಅದಕ್ಕೆ ಒಂದಿಷ್ಟು ಕಂಡೀಷನ್‌ಗಳನ್ನು ಹಾಕಿದರು. ಅದೇನೆಂದರೆ, ‘ನಾನು ಹಾಳೆಯಲ್ಲಿ ಹ್ಯಾಂಡ್‌ಪ್ರಿoಟ್ ಹಾಕ್ತಿನಿ, ಹಾಗೇ ನಿಮ್ಮ ಮೇಲೂ ಹಾಕ್ತಿನಿ’ ಎಂದಿದ್ದರoತೆ. ಅದಕ್ಕೆ ‘ನಮ್ಮ ಬೀಳ್ಕೊಡುಗೆ ದಿನ ಹಾಕಿ ಸರ್ ಈಗ ಬೇಡ’ ಎಂದು ಅಪೂರ್ವ ಹೇಳಿದಳು. ‘ಸರಿ ಅದೇನು ಮಾಡ್ತಿರೋ ಮಾಡಿ’ ಎಂದು ಕೈ ನೀಡಿದರು. ಅವರಿಂದ ಪಡೆದುಕೊಂಡು ವಿವಿಧ ಶಿಕ್ಷಕರ ಬಳಿಯಲ್ಲಿ ತೆಗೆದುಕೊಳ್ಳ ತೊಡಗಿದರು. ಅದೇ ತಾನೆ ಊಟ ಮುಗಿಸಿ ಕೈತೊಳೆದಿದ್ದ ಸುದೀಂಧ್ರಸರ್ ಹತ್ರ ಹ್ಯಾಂಡ್‌ಪ್ರಿoಟ್ ತೆಗೆದುಕೊಂಡು ಮತ್ತೊಮ್ಮೆ ಕೈ ತೊಳೆಯುವಂತೆ ಮಾಡಿದರು.

ಇದರ ಮಧ್ಯೆ ವಿಜ್ಞಾನ ಶಿಕ್ಷಕಿ ಭಾರತಿಮೇಡಂ ಮತ್ತು ಪುಷ್ಪಮೇಡಂ ಅವರಿಬ್ಬರ ಹ್ಯಾಂಡ್‌ಪ್ರಿoಟ್ ಬಣ್ಣದಲ್ಲಿದ್ದ ಸಣ್ಣ ವ್ಯತ್ಯಾಸವನ್ನು ಕಡಿಮೆ ಮಾಡಲು ಭಾರತಿಮೇಡಂರಿoದ ಮತ್ತೊಮ್ಮೆ ಅದೇ ಹಾಳೆಯ, ಅದೇ ಹಳೆಯ ಹ್ಯಾಂಡ್‌ಪ್ರಿoಟ್ ಮೇಲೆಯೇ ಪಡೆದುಕೊಂಡರು. ಒಂದೇ ಹಾಳೆಯಲ್ಲಿ ಎರಡುಬಾರಿ ಹ್ಯಾಂಡ್‌ಪ್ರಿoಟ್ ನೀಡಿದ್ದು ಭಾರತಿಮೇಡಂ ಮಾತ್ರ.
ಚನ್ನೇಶ್‌ಸರ್ ‘ಎರಡೂ ಕೈಗಳಿಂದಲೂ ಪ್ರಿಂಟ್ ತೆಗೆದುಕೊಳ್ಳಿ’ ಎಂದರು. ಅದಕ್ಕೆ ಜಾಹ್ನವಿ, ‘ಸರ್ ಎಲ್ಲಾ ಶಿಕ್ಷಕರ ಹತ್ರ ಒಂದು ಕೈಯಿಂದ ಪ್ರಿಂಟ್ ತಗೊಂಡ್ರೇನೆ ಒಂದು ಶೀಟ್‌ಗಿಂತ ಜಾಸ್ತಿ ಆಗತ್ತೆ, ಎರಡೂ ಕೈಇಂದ ಅಂದರೆ ಇನ್ನೊಂದು ಶೀಟ್ ಅಂಟಿಸಬೇಕಾಗತ್ತೆ’ ಎಂದಾಗ ‘ಸರಿ ಕೊಡಿ’ ಎಂದು ಕೈಗೆ ಬಣ್ಣವನ್ನು ಬಳಿಸಿಕೊಂಡರು.

ಉಳಿದoತೆ ಇತರ ಶಿಕ್ಷಕರು ಖುಷಿಯಿಂದ ನೀಡಿದರು. ದೈಹಿಕ ಶಿಕ್ಷಕರು ಶಾಲಾ ಮೈದಾನದಲ್ಲಿದ್ದಾಗ ಹೋಗಿ ಕೇಳಿದಾಗ, ‘ಯಾಕೆ ಕೊಡಬೇಕು? ಕೊಡಲ್ಲ ಅಂದರೆ ಏನು ಮಾಡ್ತಿರಾ?’ ಎನ್ನುವಾಗ ಮೂವರು ಶಿಕ್ಷಕರನ್ನು ಹೊರತು ಪಡಿಸಿದರೆ ಈಗಾಗಲೇ ಎಲ್ಲಾ ಶಿಕ್ಷಕರು ಹ್ಯಾಂಡ್‌ಪ್ರಿoಟ್ ನೀಡಿದ್ದಾರೆ ಎಂದು ತಾವು ತಂದಿದ್ದ ಹಾಳೆಯನ್ನು ತೋರಿಸಿದಾಗ ಮರುಮಾತಿಲ್ಲದೆ ನಕ್ಕು ಬಣ್ಣವನ್ನು ಕೈಗೆ ಹಾಕಿಸಿಕೊಂಡರು. ಕಡೆಯದಾಗಿ ನನ್ನ ಬಳಿ ಬಂದಾಗ ನಾನು ರೇಗಿಸೋಣ ಎಂದುಕೊoಡೆ ಆದರೆ ಆಗಲೇ ಇಲ್ಲ. ಪೂರ್ವಿ ಬ್ರೆಷ್ ತೆಗೆದುಕೊಂಡು ಬಣ್ಣವನ್ನು ಹಾಕಲು ಮುಂದಾದಳು. ‘ನನಗೆ ನೀಲಿ ಬಣ್ಣಬೇಕಿದೆ’ ಎಂದೆ ‘ಕನ್ನಡ ಶಿಕ್ಷಕರುಗಳಿಗೆ ಕೇಸರಿ ಬಣ್ಣ. ಹಾಗಾಗಿ ಅದೇ ಬಣ್ಣ ನಿಮಗೆ ಹಚ್ಚೋದು’ ಎಂದಳು ಸುಮ್ಮನಾದೆ. ಹಾಳೆಯ ಮೇಲೆ ಕೈಯನ್ನು ತ್ರಯಾಂಬಿಕ ಒತ್ತಿ ಹಿಡಿದಳು ಎರಡು ನಿಮಿಷ ಬಿಟ್ಟು ತೆಗೆದಾಗ ‘ಎಲ್ಲರಿಂತಲೂ ಹೆಚ್ಚು ಡಾರ್ಕ್ ಆಗಿ ನಿಮ್ಮ ಹ್ಯಾಂಡ್‌ಪ್ರಿoಟ್ ಬಂದಿದೆ’ ಎಂದಳು ಪೂರ್ವಿ. ‘ಬರದೇ ಇನ್ನೇನು ಕೈಗೆ ಒಳ್ಳೆ ಗೋಡೆಗೆ ಬಳಿಯೋ ಹಾಗೆ ಬಳಿದಿದ್ಯಲ್ಲಮ್ಮ’ ಎಂದೆ ಎಲ್ಲರೂ ನಕ್ಕರು. ಅದಕ್ಕೆ ಫ್ರೇಮ್ ಹಾಕಿಸುವುದರ ಬಗ್ಗೆ ಮಾತಾನಾಡಿದರು. ಗೆಳೆಯನೊಬ್ಬನಿಗೆ ಕೇಳಿ ಹೇಳುತ್ತೇನೆ ಎಂದೆ. ಇದರ ಮಧ್ಯೆ ಪಾವ್ನಿ, ‘ಸರ್ ಈ ತರದ ಉಡುಗೊರೆ ಯವಾಗಲಾದರೂ ಯಾರಾದರೂ ಕೊಟ್ಟಿದ್ರಾ?’ ಎಂದಳು. ‘ಉಡುಗೊರೆ ಕೊಟ್ಟಿದ್ದಾರೆ. ಆದರೆ ಈ ರೀತಿಯ ಉಡುಗೊರೆ ಸಿಕ್ಕಿರಲಿಲ್ಲ’ ಎಂದಾಗ ಎಲ್ಲರಲ್ಲೂ ಅದೇನು ಸಂಭ್ರಮ, ಸಡಗರ ಮನೆ ಮಾಡಿತ್ತೆಂದರೆ ಹೇಳಲು ಅಸಾಧ್ಯ.

ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅದನ್ನು ಗೋಡೆಯ ಮೇಲೆ ಅಂಟಿಸಿದ್ದರು. ಮುಖ್ಯೋಪಾಧ್ಯಾಯರ ಅಣತಿಯಂತೆ ಅದನ್ನು ಮಾಡುವ ಯೋಜನೆ, ಅದಕ್ಕೆ ಸಹಕರಿಸದ ಮಕ್ಕಳಿಗೆ ಧನ್ಯವಾದಗಳನ್ನು ತಿಳಿಸಿದೆ. ‘ಕಬ್ಬಡ್ಡಿ’ ತಂಡದ ವಿದ್ಯಾರ್ಥಿಗಳು ಸಿಹಿಯನ್ನು ತರುವ ಹಂಚುವ ಕೆಲಸ ತಮ್ಮದು ಎಂದು ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು.
ಒಟ್ಟಾರೆಯಾಗಿ ವಿವಿಧ ಆಟೋಟಗಳ ನಡುವೆ ಶಿಕ್ಷಕರು ಇದ್ದದ್ದು, ಮಕ್ಕಳು ಶಿಕ್ಷಕರನ್ನು ಹುರುದುಂಬಿಸುತ್ತಿದ್ದದ್ದು, ಕೆಲವರು ಗೆದ್ದಾಗ ಸಂಭ್ರಮಿಸಿದ್ದು, ಸೋತಾಗ ‘ಅಯ್ಯೋ…!’ ಎಂಬ ಉದ್ಘಾರ ಬಂದದ್ದು, ಶಿಕ್ಷಕರನ್ನು ವೇದಿಕೆಗೆ ಕರೆಯುವಾಗ ಕೂಗಿದ್ದು… ಎಲ್ಲವೂ ಮರೆಯದ ನೆನಪಾಗಿತ್ತು. ಇದರ ಮಧ್ಯೆ ಎಲ್ಲಾ ಶಿಕ್ಷಕರ ‘ಹ್ಯಾಂಡ್‌ಪ್ರಿoಟ್’ ಇದ್ದ ಹಾಳೆ ಎಲ್ಲರ ಮನಸ್ಸನ್ನು ಆಕರ್ಷಿಸಿತು. ಅದು ಹಾಗೇ ಶಾಶ್ವತವಾಗಿ ಶಾಲೆಯಲ್ಲಿ ಉಳಿಯಲಿ ಎಂಬುದು ಎಲ್ಲರ ಆಸೆಯಾಗಿದೆ. ಅದನ್ನು ಕಂಡಾಗ ಎಲ್ಲವೂ ನೆನಪಾಗಲಿದೆ…

ಚೇತನ್ ಸಿ ರಾಯನಹಳ್ಳಿ, ಶಿವಮೊಗ್ಗ

Leave a Reply

Your email address will not be published. Required fields are marked *

Scan the code