ವಿಶ್ವದಲ್ಲಿ ಮಹತ್ತರ ಸ್ಥಾನ ಪಡೆದ ತೆಂಗು
(CHIKKAMAGALURU): ವಿಶ್ವದಲ್ಲಿ ತೆಂಗು ಎಲ್ಲಾ ವಿಭಾಗದಲ್ಲೂ ಮಹತ್ತರವಾದ ಸ್ಥಾನವನ್ನು ಪಡೆದುಕೊಂಡಿದೆ ಎಂದು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಚೈತನ್ಯ ವೆಂಕಿ ಹೇಳಿದರು.
ಪಟ್ಟಣದ ಮಲೆನಾಡಿನ ಒಳ್ಳೆಯ ಮನಸ್ಸುಗಳ ಒಕ್ಕೂಟ ಸೋಮವಾರ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ವಿಶ್ವ ತೆಂಗು ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತೀ ವರ್ಷ ಸೆಪ್ಟೆಂಬರ್ 2ರ ದಿನವನ್ನು ವಿಶ್ವ ತೆಂಗು ದಿನವನ್ನಾಗಿ ವಿಶ್ವದಲ್ಲಿ ಆಚರಿಸುತ್ತಿದ್ದು, ಇದು ಹಲವರ ಗಮನಕ್ಕೆ ಬಂದಿಲ್ಲ. ತೆಂಗು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು, ತೆಂಗಿನ ಸಸಿಯಿಂದ ಹಿಡಿದು ಅದು ಮರವಾಗುವವರೆಗೆ ಪ್ರತೀ ಹಂತದಲ್ಲಿಯೂ ನಮ್ಮ ಜೀವನಕ್ಕೆ ಉಪಯುಕ್ತವಾಗಿದೆ.
ಇಂಗು ಮತ್ತು ತೆಂಗು ಇವೆರಡಿದ್ದರೆ ಮಂಗನೂ ಅಡುಗೆ ಮಾಡಬಹುದು ಎಂಬ ಗಾದೆ ಮಾತಿನಂತೆ ಅಡುಗೆ ತಯಾರಿಯಲ್ಲಿ ತೆಂಗಿನ ಮಹತ್ವ ತಿಳಿಯುತ್ತದೆ. ಪ್ರಕೃತಿಯಲ್ಲಿ ಬಹುಮುಖ್ಯ ಉತ್ಪನ್ನಗಳಲ್ಲಿ ತೆಂಗು ಒಂದಾಗಿದೆ.
ತೆoಗು ಕೇವಲ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲದೇ, ಆರ್ಥಿಕವಾಗಿಯೂ ತನ್ನದೇ ಆದ ಸ್ಥಾನಮಾನವನ್ನು ಅದು ಪಡೆದುಕೊಂಡಿದೆ. ಧಾರ್ಮಿಕ ವಿಧಿ ವಿಧಾನಗಳಲ್ಲಂತೂ ತೆಂಗು ಇಲ್ಲದೇ ಯಾವುದೇ ಕಾರ್ಯವೂ ಮುನ್ನಡೆಯುವುದಿಲ್ಲ.
ತೆಂಗು ಬಹುಪಯೋಗಿ ಸಸ್ಯವಾಗಿದ್ದು, ಕೇವಲ ತೆಂಗಿನ ಕಾಯಿ, ಎಳನೀರು, ತೆಂಗಿನ ಎಣ್ಣೆಗೆ ಅಷ್ಟೇ ಸೀಮಿತವಾಗದೆ ಅದರ ಮರ, ಗರಿಗಳು ಹಲವು ಉಪಯೋಗಕ್ಕೆ ಬರಲಿದೆ. ತೆಂಗಿನ ನಾರು ಅನೇಕ ಕರಕುಶಲ ಕೆಲಸಗಳಿಗೆ ಬಳಕೆಯಾಗುತ್ತದೆ. ತೆಂಗಿನ ಬೆಳೆಗೆ ಸರ್ಕಾರಗಳು ಸಹ ಉತ್ತಮ ಪ್ರೋತ್ಸಾಹವನ್ನು ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ತೆಂಗಿನ ದಿನಾಚರಣೆಯನ್ನು ಹೆಚ್ಚು ಪ್ರಚುರಪಡಿಸಬೇಕಾಗಿದ್ದು, ವಿಶ್ವವ್ಯಾಪಿ ಆಚರಿಸುವಂತೆ ಮಾಡಬೇಕಿದೆ ಎಂದರು.
ತಾಲೂಕು ಕಸಾಪ ಕಾರ್ಯದರ್ಶಿ ಸತೀಶ್ ಅರಳೀಕೊಪ್ಪ, ಶಿಕ್ಷಕ ಸುರೇಂದ್ರ, ಕೆ.ಎಂ.ರಾಘವೇOದ್ರ, ಜೇಸಿಐ ಪೂರ್ವಾಧ್ಯಕ್ಷ ಸೈಯ್ಯದ್ ಫಾಜಿಲ್ ಹುಸೇನ್, ಸುಧಾಕರ್, ಎಚ್.ಗೋಪಾಲ್, ಪ್ರಮುಖರಾದ ಬಿ.ಎಸ್.ನಾಗರಾಜ್ಭಟ್, ಜಯಶೀಲ್, ವಿ.ರೋಹಿತ್ ಪೂಜಾರಿ, ಅಶೋಕ್, ಲ್ಯಾನ್ಸಿ ಪಿಂಟೋ, ರಾಜಣ್ಣ, ಚೇತನ್ಕುಮಾರ್ ಮತ್ತಿತರರು ಹಾಜರಿದ್ದರು.