ಅಂಬೇಡ್ಕರ್ ಚಿಂತನೆಗಳನ್ನು ಎಲ್ಲರಿಗೂ ತಲುಪಿಸಿ: ಅಶೋಕ
(SHIVAMOGA): ಶಂಕರಘಟ್ಟ: ಸಮಸಮಾಜ, ಸರ್ವೋದಯ ಸಮಾಜ ನಿರ್ಮಿಸಲು ಅಂಬೇಡ್ಕರ್ ಚಿಂತನೆಗಳು ಅತಿ ಅಗತ್ಯವಾಗಿವೆ. ಅಂಬೇಡ್ಕರ್ ಚಿಂತನೆಗಳನ್ನು ಎಲ್ಲರ ಮನ-ಮನೆಗಳಿಗೆ ತಲುಪಿಸುವ ಅಗತ್ಯವಿದೆ. ಅದುವೇ ಭಾರತ ಬದಲಾವಣೆಗಿರುವ ಹಾದಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶಿವಮೊಗ್ಗ ವಿಭಾಗದ ಜಂಟಿ ನಿರ್ದೇಶಕರಾದ ಅಶೋಕ್ ಎನ್ ಚಲವಾದಿ ಅವರು ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ಶಿವಮೊಗ್ಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ಪ್ರೊ. ಎಸ್. ಪಿ. ಹಿರೇಮಠ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಮತ್ತು ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಸಿ ಮಾತನಾಡಿದರು. ಬಸವಳಿದ ಬದುಕಿಗೆ ಆಸರೆಯಾದ ಅಂಬೇಡ್ಕರ್ ಅವರು ಮನುಷ್ಯ ಎಲ್ಲಿಯವರೆಗೆ ಪರಾವಲಂಬಿಯಾಗಿ ಬದುಕುತ್ತಾನೋ ಅಲ್ಲಿಯವರೆಗೆ ಅವನ ಸಂಕಷ್ಟಗಳು, ಸಂಕಟಗಳು ನಿರಂತರವಾಗಿ ಮುಂದುವರೆಯುತ್ತಲೇ ಇರುತ್ತವೆ. ಎಂತಹದೇ ಕಷ್ಟ ನಷ್ಟಗಳು ಬಂದರೂ ದಿಟ್ಟತನದಿಂದ ಎದುರಿಸಿ ತನ್ನದೇ ಆದ ಬದುಕನ್ನು ಕಟ್ಟಿಕೊಂಡು ಬದುಕುವುದನ್ನು ಮೊದಲು ಕಲಿಯಬೇಕು ಎಂಬುದೇ ಅಂಬೇಡ್ಕರ್ ಅವರ ಬಹುದೊಡ್ಡ ಜೀವನ ಸಂದೇಶವೆoದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾದ ಹಣಕಾಸು ಅಧಿಕಾರಿ ಜಿ. ಬಂಗಾರಪ್ಪ ಅವರು ಮಾತನಾಡಿ, ತಮ್ಮ ಇಡೀ ಜೀವನವನ್ನು ಸಮಾಜ ಮತ್ತು ರಾಷ್ಟ್ರದ ಸೇವೆಗಾಗಿ ಮೀಸಲಿಟ್ಟ ಒಬ್ಬ ಮಹೋನ್ನತ ನಾಯಕರಾಗಿದ್ದ ಅಂಬೇಡ್ಕರ್ ಅವರು ಚಿಂತನ-ಮoಥನದ ಫಲವಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಿದೆ. ಇದಕ್ಕೆ ಸಮಾಜದ ಎಲ್ಲಾ ಜನರು ಭಾಗವಹಿಸಲು ಮತ್ತು ದೇಶದ ಮುಖ್ಯವಾಹಿನಿಗೆ ಬರುವುದು ಅತ್ಯಾವಶ್ಯಕ. ಇಲ್ಲದೇ ಹೋದರೆ ಇಡೀ ವ್ಯವಸ್ಥೆ ಅಸಮಾನತೆಗಳ ಕೊಂಪೆ ಆಗಿ ಕುಸಿದುಬೀಳುವ ಅಪಾಯವಿರುತ್ತದೆ. ಈ ದೃಷ್ಟಿಯಿಂದಲೇ ಭಾರತೀಯ ಸಂವಿಧಾನದ ಅತ್ಯಂತ ಪರಿಣಾಮಕಾರಿ ಅಂಶ ಸಾಮಾಜಿಕ ನ್ಯಾಯವನ್ನು ಖಚಿತಪಡಿಸುವ ಮೀಸಲಾತಿ ವ್ಯವಸ್ಥೆ. ಇದರಿಂದ ಸಮಾಜದ ಅತ್ಯಂತ ಕೆಳವರ್ಗದ ಶೋಷಿತ, ವಂಚಿತ ಸಮೂದಾಯದ ವ್ಯಕ್ತಿ ಸಹ ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವ ಮತ್ತು ದೇಶ ನಿರ್ಮಾಣದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಸಂಪೂರ್ಣ ಅವಕಾಶವನ್ನು ಹೊಂದಿರುತ್ತಾರೆoದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿಗಳಾದ ಪ್ರೊ.ಎಸ್.ವೆಂಕಟೇಶ್ ಅವರು, ದಿಕ್ಕೆಟ್ಟ ಭಾರತೀಯ ಸಮಾಜವನ್ನು ಸಮಾನತೆಯ ತತ್ವ, ಸಾಮಾಜಿಕ ಏಳಿಗೆ, ಸ್ಥಿರ ಪ್ರಜಾಪ್ರಭುತ್ವದ ಮೂಲಕ ಭಾರತದ ಬದಲಾವಣೆಗೆ ನಾಂದಿ ಹಾಡಿದ ಅಂಬೇಡ್ಕರ್ ಅವರು ಭಾರತ ತನ್ನ ಸುದೀರ್ಘ ಇತಿಹಾಸದಲ್ಲಿ ಕೆಲವೇ ಮಹಾಮೇಧಾವಿಗಳಲ್ಲಿ ಒಬ್ಬರಾಗಿರುವರು. ಮಾನವನ ಸಂಕಲ್ಪಶಕ್ತಿಗೆ, ಪ್ರಯತ್ನಶೀಲತೆಗೆ ಬರೆದ ಮಹಾಭಾಷ್ಯ ಅಂಬೇಡ್ಕರ್ ಅವರ ಬದುಕು. ಸರ್ವರ ಉದ್ದಾರಕ್ಕೆ ಜೀವನವಿಡಿ ಹೋರಾಟ ಮಾಡಿದ ಮಹಾಸಾಧಕರು. ಎಲ್ಲರಿಗೂ ಕಲಿಯುವ ಹಕ್ಕಿದೆ ಮನುಷ್ಯ ಜೀವಿಸಲು ಆಹಾರ ಎಷ್ಟು ಅಗತ್ಯವೋ, ವಿದ್ಯೆಯು ಅಷ್ಟೇ ಅಗತ್ಯ ಎಂದಿರುವ ಅಂಬೇಡ್ಕರ್ ಚಿಂತನೆಗಳು ಭಾರತದ ಸಮಗ್ರ ಬದಲಾವಣೆಗೆ ಸಿದ್ದೌಷಧಿಯಾಗಿವೆಂದು ಅಭಿಪ್ರಾಯಪಟ್ಟರು.
ವಿಶೇಷ ಉಪನ್ಯಾಸ ನೀಡಿದ ಅಪರಾಧಶಾಸ್ತçದ ಪ್ರಾಧ್ಯಾಪಕರಾದ ಡಾ.ನಟರಾಜ್ ಅವರು ಮಾತನಾಡಿ ದಲಿತ, ಬಡವ ಹಾಗೂ ಮಹಿಳೆಯರ ಆರ್ಥಿಕ ಸ್ವಾವಲಂಬನೆ ದೇಶದ ಪ್ರಗತಿಗೆ ನಾಂದಿ ಎಂದಿರುವ ಅಂಬೇಡ್ಕರ್ ಚಿಂತನೆಗಳನ್ನು ಮನನ ಮಾಡಿ ಅನುಷ್ಠಾನಗೊಳಿಸಿದರೆ ಸಮಗ್ರ ಭಾರತವೇ ಬದಲಾಗುವುದರಲ್ಲಿ ಸಂಶಯವಿಲ್ಲವೆoದರು. ಭಾರತದ ಸಮಗ್ರ ಬದಲಾವಣೆಗೆ ಅಂಬೇಡ್ಕರ್ ಚಿಂತನೆಗಳು ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕನ್ನಡ ಭಾರತಿಯ ಮಾರುತಿ ಎಂ.ಸಿ., ದ್ವಿತೀಯ ಬಹುಮಾನ ಪಡೆದ ಎಸ್.ಸಾಹಿತ್ಯ, ತೃತೀಯ ಬಹುಮಾನಕ್ಕೆ ಪಾತ್ರರಾದ ವರುಣವಾಲಿ ಅವರಿಗೆ ಪ್ರಮಾಣಪತ್ರ ಸಂವಿಧಾನ ನಡಾವಳಿ ಸಂಪುಟಗಳನ್ನು ಬಹುಮಾನವಾಗಿ ನೀಡಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ನಿರ್ದೇಶಕರಾದ ಡಾ.ನೆಲ್ಲಿಕಕಟ್ಟೆ ಎಸ್.ಸಿದ್ದೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಎಚ್.ಉಮೇಶ್, ಆಕಾಶವಾಣಿ ಕಲಾವಿದ ಕುಣಿಗಲ್ ರಾಮಚಂದ್ರ ಹಾಜರಿದ್ದರು.