ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾದ ಪ್ರತಿಭಾ ಕಾರಂಜಿಯು ಪ್ರತಿಭೆಗಳ ಅನಾವರಣಕ್ಕೆ ಅತ್ಯುತ್ತಮ ವೇದಿಕೆಯಾಗಿದೆ.
(KOLARA): ಬಂಗಾರಪೇಟೆ: ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾದ ಪ್ರತಿಭಾ ಕಾರಂಜಿಯು ಪ್ರತಿಭೆಗಳ ಅನಾವರಣಕ್ಕೆ ಅತ್ಯುತ್ತಮ ವೇದಿಕೆಯಾಗಿದೆ ಎಂದು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಮಂಜುಳ ಜಯಣ್ಣ ಹೇಳಿದರು.
ತಾಲ್ಲೂಕಿನ ದೋಣಿಮಡಗು ಗ್ರಾಮದ ಸರ್ಕಾರಿ ಹಿರಿಯ ಪ್ರೌಢಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಠ್ಯೇತರ ಚಟುವಟಿಕೆಯಲ್ಲಿಯೂ ಮಕ್ಕಳು ಸಾಕಷ್ಟು ಪ್ರತಿಭೆಯನ್ನು ಹೊಂದಿರುತ್ತಾರೆ. ಅದನ್ನು ಪರಾಮರ್ಶಿಸಿ ಪ್ರೋತ್ಸಾಹಿಸಿ ಇನ್ನಷ್ಟು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಹಾಗೂ ಪ್ರತಿಭಾವಂತರಾಗಿ ಬೆಳೆಯಲು ಸಹಕಾರಿಯಾಗಿದೆ ಎಂದರು.
ಸಿ ಆರ್ ಪಿ ವೆಂಕಟೇಶ ಮಾತನಾಡಿ, ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಕ್ಕಳು ಸ್ವಯಂ ಪ್ರೇರಣೆಯಿಂದ ಭಾಗವಹಿಸಬೇಕು ಹಾಗೂ ಮಕ್ಕಳಿಗಾಗಿ ಕಂಠಪಾಠ, ಧಾರ್ಮಿಕ ಪಠಣ, ಲಘು ಸಂಗೀತ, ಕಥೆ ಹೇಳುವಿಕೆ, ಅಭಿನಯ ಗೀತೆ, ಭಕ್ತಿ ಗೀತೆ, ಕವ್ವಾಲಿ, ಛದ್ಮವೇಷ, ಆಶುಭಾಷಣ, ದೇಶಭಕ್ತಿಗೀತೆ, ಜಾನಪದ ನೃತ್ಯ, ಕೋಲಾಟ, ರಸಪ್ರಶ್ನೆ, ಭಾಷಣ, ಮಿಮಿಕ್ರಿ, ಭರತನಾಟ್ಯ, ಚರ್ಚಾ ಸ್ಪರ್ಧೆ, ರಂಗೋಲಿ, ಚಿತ್ರಕಲೆ, ಡೊಳ್ಳುಕುಣಿತ ಸೇರಿ ಮೊದಲಾದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಅಹಿಂದ ಜಿಲ್ಲಾಧ್ಯಕ್ಷ ಎಸ್ ಕೆ ಜಯಣ್ಣ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವೆಂಕಟೇಶಪ್ಪ, ಮುಖ್ಯ ಶಿಕ್ಷಕರಾದ ಮುನಿಸ್ವಾಮಿ, ಶಿಕ್ಷಕರಾದ ಬಿ ವೆಂಕಟೇಶ, ಉಷಾ ,ಗಜೇಂದ್ರ, ಕೃಷ್ಣಾರೆಡ್ಡಿ, ಡಿಜಿ ಶ್ರೀನಿವಾಸ್ ಮೂರ್ತಿ, ಅತಿಥಿ ಶಿಕ್ಷಕರಾದ ಸುಬ್ರಮಣೆ ಅಮರಾವತಿ ಮಮತ ವಿ, ರಾಜೇಶ್ವರಿ, ಹಾಜರಿದ್ದರು
ವರದಿ: ವಿಷ್ಣು ಕೋಲಾರ