ಕೋಲಾರನ್ಯೂಸ್ರಾಜಕೀಯ

ಗ್ಯಾರೆಂಟಿ ಯೋಜನೆಗಳ ಪ್ರಣಾಳಿಕೆಯ ಘೋಷಣೆ ಮಾಡಿ ಹಗಲುಗನಸು ಕಾಣುತ್ತಿರುವ ಕಾಂಗ್ರೆಸ್ ನವರು.

ಗ್ಯಾರೆಂಟಿ ಯೋಜನೆಗಳ ಪ್ರಣಾಳಿಕೆಯ ಘೋಷಣೆ ಮಾಡಿ ಹಗಲುಗನಸು ಕಾಣುತ್ತಿರುವ ಕಾಂಗ್ರೆಸ್ ನವರು.

(KOLARA): ಬಂಗಾರಪೇಟೆ ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಮತದಾರರ ಮನ ಗೆದ್ದಂತೆ ಲೋಕ ಸಮರದಲ್ಲಿಯೂ ಅದೇ ಫಾರ್ಮುಲ ಬಳಕೆ ಮಾಡಿದರೆ ಗೆಲ್ಲಬಹುದು ಎಂದು ಹಗಲು ಕನಸು ಕಾಣುತ್ತಾ ಮತ್ತೆ ಗ್ಯಾರಂಟಿ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದಾರೆ. ಆದರೆ ಈ ಬಾರಿ ಗ್ಯಾರಂಟಿಗಳಿಗೆ ಮತದಾರರು ಮರುಳಾಗದೆ ದೇಶಕ್ಕಾಗಿ ಬಿಜೆಪಿಗೆ ಬೆಂಬಲವಾಗಿ ನಿಲ್ಲಲಿದ್ದಾರೆಂದು ಚಿತ್ರ ನಟಿ ಶೃತಿ ಹೇಳಿದರು.

ಪಟ್ಟಣದ ಆ‌ರ್.ಆರ್.ಕಲ್ಯಾಣ ಮಂಟಪದಲ್ಲಿ ಬಿಜೆಪಿ,ಜೆಡಿಎಸ್ ಕಾರ್ಯಕರ್ತರ ಸಮನ್ವಯ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈಗಾಗಲೇ ರಾಜ್ಯದ ಜನರು ಒಂದು ಬಾರಿ ಗ್ಯಾರಂಟಿ ಯೋಜನೆಗಳನ್ನು ನಂಬಿ ಮೋಸ ಹೋಗಿದ್ದಾರೆ ಮತ್ತೊಮ್ಮೆ ಮೋಸ ಹೋಗಲು ಸಿದ್ಧರಿಲ್ಲ, ಇಷ್ಟಕ್ಕೂ ಕಾಂಗ್ರೆಸ್ ನವರು ಗ್ಯಾರಂಟಿಗಳನ್ನು ಅವರ ಸ್ವಂತ ಹಣದಿಂದ ನೀಡಿಲ್ಲ ನಮ್ಮ ತೆರಿಗೆ ಹಣವನ್ನು ಮನಗೇ ನೀಡಿದ್ದಾರೆಂದು ಟೀಕಿಸಿದರು.


ದೇಶದ ಸುಭದ್ರೆಯ ದೃಷ್ಟಿಯಿಂದ ದೇಶದ ಜನರು ಮೂರನೇ ಬಾರಿ ಮೋದಿರನ್ನು ಪ್ರಧಾನಿ ಮಾಡಲು ಈಗಾಗಲೇ ಸಂಕಲ್ಪ ಮಾಡಿ ಆಗಿದೆ. ಈ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್‌ ಪಕ್ಷ ಲೋಕ ಗೆಲ್ಲಲು ಬೆಂಬಲವಾಗಿ ನಿಂತಿರುವುದು ಆನೆ ಬಲ ಬಂದಿದೆ ಎಂದರು.

ಈ ಲೋಕ ಸಮರ ಈ ಬಾರಿ ದೇಶ ಪರ ಹಾಗೂ ವಿರೋಧ ಪರ ನಡೆಯುತ್ತಿದೆ, ಅಂತಿಮವಾಗಿ ದೇಶಪರ ಗೆಲುವು ಗ್ಯಾರಂಟಿ ಎಂದರು. ಎಲ್ಲೋ ಇದ್ದ ಭಾರತ ದೇಶವನ್ನು ವಿಶ್ವದ ಬಲಿಷ್ಟ ರಾಷ್ಟ್ರಗಳಲ್ಲಿ ಒಂದಾಗಿ ಪ್ರಧಾನಿ ಮೋದಿ ನಿಲ್ಲಿಸಿದ್ದಾರೆ. ಪಾಕಿಸ್ತಾನ ದೇಶವೇ ಮೋದಿರಂತ ನಾಯಕರು ನಮಗೆ ಬೇಕು ಎಂದು ಹೊಗಳುವಾಗ ಕೋಲಾರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ಎಸ್.ಮುನಿಸ್ವಾಮಿ ನಡುವೆ ಅಂತರವಿದೆ ಎಂದು ತಿಳಿದು ಬಂದಿದ್ದು ಪ್ರಧಾನಿಗಾಗಿ ಈ ಅಂತರವನ್ನು ಸಂಸದರು ಮುರಿಯಬೇಕೆಂದು ಸಲಹೆ ನೀಡಿದರು.

ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶಬಾಬು ಮಾತನಾಡಿ ಕ್ಷೇತ್ರದ ೮ವಿಧಾನಸಭೆ ಕ್ಷೇತ್ರಗಳಲ್ಲಿಯೂ ಈ ಬಾರಿ ಮೈತ್ರಿ ಅಭ್ಯರ್ಥಿಯಾದ ನನಗೆ ಅಪಾರ ಬೆಂಬಲವನ್ನು ಬಿಜೆಪಿ ಕಾರ್ಯಕರ್ತರು ನೀಡುತ್ತಿರುವುದನ್ನು ಗಮನಿಸಿದರೆ ಎನ್‌ಡಿಎ ಅಭ್ಯರ್ಥಿ ಗೆಲುವು ಗ್ಯಾರಂಟಿ. ಈಗಾಗಲೇ ನಾನು ಎರಡು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ನೋವು ಕಾರ್ಯಕರ್ತರನ್ನು ಕಾಡುತ್ತಿದೆ. ಆ ನೋವು ಈ ಚುನಾವಣೆಯಲ್ಲಿ ನ್ಯಾಯ ಕೊಡಿಸಲು ಮುಂದಾಗಿದ್ದಾರೆ ಎಂದರು.


ಹಾಲಿ ಸಂಸದ ಎಸ್‌.ಮುನಿಸ್ವಾಮಿ ಮಾತನಾಡಿ ಕೆಲವರಿಗೆ ಟಿಕೆಟ್ ಕೈ ತಪ್ಪಿದಾಗ ಭಂಡಾಯ ಎದ್ದು ರಾದ್ಧಾಂತ ಮಾಡಿದ್ದಾರೆ. ಆದರೆ ನಾನು ಹಾಗೆ ಮಾಡದೆ ಟಿಕೆಟ್ ತಪ್ಪಿದರೂ ಮೈತ್ರಿ ಅಭ್ಯರ್ಥಿ ಮಲ್ಲೇಶಬಾಬು ಪರ ನಿಂತು ಅವರ ಗೆಲುವಿಗೆ ಶ್ರಮಿಸುತ್ತಿರುವೆ. ಕಳೆದ ಬಾರಿ ನನಗೆ ನೀಡಿದ ಮತಗಳಿಗಿಂತಲೂ ಹೆಚ್ಚಿನ ಮತಗಳನ್ನು ಮೈತ್ರಿ ಅಭ್ಯರ್ಥಿಗೆ ತಂದು ಕೊಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಎಂಎಲ್‌ಸಿಗಳಾದ ಇಂಚರ ಗೋವಿಂದರಾಜು, ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ಎಂ.ನಾರಾಯಣಸ್ವಾಮಿ, ವೈ.ಸಂಪಂಗಿ, ಬಿಜೆಪಿ ಮುಖಂಡರಾದ ಕೆ.ಚಂದ್ರಾರೆಡ್ಡಿ, ಬಿ.ವಿ,ಮಹೇಶ್‌, ಜೆಡಿಎಸ್‌ ತಾಲೂಕು ಅಧ್ಯಕ್ಷ ಮುನಿರಾಜು, ಪುರಸಭೆ ಸದಸ್ಯ ಕಪಾಲಿಶಂಕರ್, ಜೆಡಿಎಸ್ ಮುಖಂಡ ವಿಶ್ವನಾಥ್‌, ವಡಗೂರು ಹರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ:ವೇಣುಗೋಪಾಲ್, ತಾಲೂಕು ಅಧ್ಯಕ್ಷ ಸಂಪಂಗಿರೆಡ್ಡಿ, ವಿ.ಶೇಷು, ಶಿವಕುಮಾರ್, ಹನುಮಂತು, ಮತ್ತಿತರರು ಇದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code