ನ್ಯೂಸ್ರಾಜಕೀಯಶಿವಮೊಗ್ಗ

ಲೋಕಸಭಾ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್ ಅಡ್ರೆಸ್‌ಗೆ ಇರುವುದಿಲ್ಲ:ಬಿ.ಎಸ್.ಯಡಿಯೂರಪ್ಪ

ಲೋಕಸಭಾ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್ ಅಡ್ರೆಸ್‌ಗೆ ಇರುವುದಿಲ್ಲ:ಬಿ.ಎಸ್.ಯಡಿಯೂರಪ್ಪ

(SHIVAMOGA): ಸೊರಬ:ಲೋಕಸಭಾ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್‌ಗೆ ಅಡ್ರೆಸ್ ಇರುವುದಿಲ್ಲ. ಈ ಚುನಾವಣೆಯಲ್ಲಿ 400ಕ್ಕೂ ಹೆಚ್ಚಿನ ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ. ಇದು ನನ್ನ ಸುದೀರ್ಘ ರಾಜಕೀಯ ಬದುಕಿನ ಅನುಭವದ ರಾಜಕೀಯ ಭವಿಷ್ಯ ಎಂದು ಮಾಜಿ ಮುಖ್ಯಮಂತ್ರಿ ರಾಜ್ಯ ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಖಡಕ್ ಭವಿಷ್ಯ ನುಡಿದಿದ್ದಾರೆ.

ಸೊರಬ ಪಟ್ಟಣದ ಬಸ್ ಸ್ಟ್ಯಾಂಡ್ ಆವರಣದಲ್ಲಿ ಶನಿವಾರ ರಾತ್ರಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಬಹಿರಂಗ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರ ಮತಯಾಚಿಸಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.
28 ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಈ ಚುನಾವಣೆಯಲ್ಲಿ ಗೆಲ್ಲಲ್ಲಿದೆ.400ಕ್ಕೂ ಹೆಚ್ಚಿನ ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲ್ಲಿದೆ.ಎಲ್ಲಾ ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಗೆದ್ದರೆ ಕಾಂಗ್ರೆಸ್ ಪಕ್ಷವಾಗಲೀ ಅವರ ಸರ್ಕಾರವಾಗಲೀ ಎಲ್ಲಿ ಉಳಿಯುತ್ತದೆ? ಎಂದು ಮಾರ್ಮಿಕವಾಗಿ ಹೇಳಿದ ಯಡಿಯೂರಪ್ಪ,ಚುನಾವಣೆಯ ಫಲಿತಾಂಶ ಬರಲಿ. ಆಮೇಲೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇಬ್ಬರ ಬಂಡವಾಳದ ಕಥೆ ಏನು ಎನ್ನುವುದು ತಿಳಿಯುತ್ತದೆ.ಇದು ಸೂರ್ಯಚಂದ್ರ ಇರುವಷ್ಟೇ ಸತ್ಯ.


ದೇಶದ ಸ್ವಾತಂತ್ರಕ್ಕಾಗಿ ಸಂಘಟನೆಯ ಭಾಗವಾಗಿ ಕಾಂಗ್ರೆಸ್ ಅನ್ನು ಹುಟ್ಟುಹಾಕಿದ್ದೇವೆ.ಸ್ವಾತಂತ್ರ ತಂದುಕೊಟ್ಟ ಇದೇ ಸಂಘಟನೆಯಿoದ ಮುಂದೆ ದೇಶವೇ ಏನಾಗುತ್ತದೆ ಎಂಬ ಭಯವಿದೆ. ಹಾಗಾಗಿ ಕಾಂಗ್ರೆಸ್ ಅನ್ನು ವಿಸರ್ಜಿಸಿ ಎಂದು ಅಂದೇ ಮಹಾತ್ಮಾಗಾಂಧೀಜಿಯೇ ಹೇಳಿದ್ದರು.ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಸರಿಸಮಾನವಾಗಿರುವ ವ್ಯಕ್ತಿ ಕಾಂಗ್ರೆಸ್‌ನಲ್ಲಿ ಇಲ್ಲ.ಮೋದಿಯ ವ್ಯಕ್ತಿತ್ವದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ.ಯೋಗ್ಯತೆಯೂ ಇಲ್ಲ.ಮೋದಿಯ ಬಗ್ಗೆ ಸಿದ್ದರಾಮಯ್ಯ,ಡಿಕೆಶಿ ಹಗುರವಾಗಿ ಮಾತನಾಡಿದ್ದ ಮಾತ್ರಕ್ಕೆ ಅವರ ಯೋಗ್ಯತೆ ಏನೂ ಕಡಿಮೆಯಾಗುವುದಿಲ್ಲ.
25ಸಾವಿರಕ್ಕಿಂತ ಹೆಚ್ಚಿನ ಲೀಡ್‌ಗಳನ್ನು ಶಿವಮೊಗ್ಗದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರರಿಗೆ ಸೊರಬ ವಿಧಾನಸಭಾ ಕ್ಷೇತ್ರದಿಂದ ನೀಡಬೇಕು. ಕುಮಾರಬಂಗಾರಪ್ಪಗೆ ಒಳ್ಳೆಯ ರಾಜಕೀಯ ಭವಿಷ್ಯ ಇದೆ. ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಈ ಚುನಾವಣೆಯನ್ನು ಎದುರಿಸುತ್ತಿದ್ದೇವೆ.ಮೋದಿ ಹಾಗೂ ದೇವೇಗೌಡರ ಸಂಬoಧ ಹೇಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.
ಪುಕ್ಕಟ್ಟೆ ಯೋಜನೆಗಳಿಗೆ ಕಿಸಾನ್ ಸಮ್ಮಾನ್ ಯೋಜನೆ,ಭಾಗ್ಯಲಕ್ಷ್ಮೀ ಯೋಜನೆಗಳನ್ನು ಈ ಸರ್ಕಾರ ನಿಲ್ಲಿಸಿರುವುದೇ ಈ ಕಾಂಗ್ರೆಸ್ ಸರ್ಕಾರದ ಖಜಾನೆ ಖಾಲಿಯಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ರಾಜ್ಯದ ರೈತ ಸಂಕಟದಲ್ಲಿದ್ದಾನೆ,ದುಡಿಯುವ ಕೈಗೆ ಕೆಲಸ ಇಲ್ಲ,ಬರತಾಂಡವ ಆಡುತ್ತಿದೆ,ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ.ಜನ ಬದುಕುವುದು ಹೇಗೆ?ಸರ್ಕಾರ ದಿವಾಳಿಯಾಗಿದೆ ಎಂದು  ಆಕ್ರೋಶ ವ್ಯಕ್ತಪಡಿಸಿದರು.

ಜನರ ತೆರಿಗೆ ಎಲ್ಲಿಹೋಗುತ್ತಿದೆ? ವಿದ್ಯುತ್ ದರ ಹೆಚ್ಚು ಮಾಡಲಾಗಿದೆ.ಹಗಲುರಾತ್ರಿ ದುಡಿದ ವ್ಯಕ್ತಿ ಒಂದು ಬಾಟಲ್ ಹಾಕಲು ಹೋದರೆ ಅದರ ಬೆಲೆಯನ್ನು ಮೂರ್ನಾಲ್ಕು ಪಟ್ಟು ಹೆಚ್ಚಿಸಿದ್ದೀರಿ .ಆ ಹಣ ಎಲ್ಲಿ ಹೋಗುತ್ತಿದೆ ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ರಾಜ್ಯ ಸರ್ಕಾರ ಮದ್ಯದ ಬೆಲೆ ಏರಿಕೆ ಮಾಡಿದ್ದರ ಬಗ್ಗೆ ಕಿಡಿಕಾರಿದರು.
ಮಾಜಿ ಸಚಿವ ಜೀವರಾಜ್ ಮಾತನಾಡಿ ರಾಘವೇಂದ್ರ ಅವರು ಶಿವಮೊಗ್ಗವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವ ಮೂಲಕ ಚಿತ್ರಣವನ್ನೇ ಬದಲಿಸಿದ್ದಾರೆ. ನುಡಿದಂತೆ ನಡೆದಿದ್ದೇವೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯನವರು ಜನರನ್ನು ಮೋಸ ಮಾಡಿ ಮರಳು ಮಾಡಿದ್ದಾರೆ. ಇದಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ. ದೇಶದಲ್ಲಿ ಸಿವಿಲ್ ಕೋಡ್ ಜಾರಿಯಾಗಲು ನರೇಂದ್ರ ಮೋದಿಯ ಅವಶ್ಯಕತೆ ಇದೆ ಎಂದರು.
ವಿಧಾನ ಪರಿಷತ್ ಸದಸ್ಯ ಭಾರತಿ ಶೆಟ್ಟಿ ಮಾತನಾಡಿ, ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಆದ ನಂತರದಲ್ಲಿ ದೇಶದ ಚಿತ್ರಣವೇ ಬದಲಾಗಿದೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ದೇಶದ ಆರ್ಥಿಕ ಸ್ಥಿತಿ ಐದನೇ ಸ್ಥಾನಕ್ಕೆ ಏರಿದೆ ಎಂದರು.


ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಮಾತನಾಡಿ, ಜಾತಿ ಆಧಾರದ ಮೇಲೆ ಅಭಿವೃದ್ಧಿಯ ಆಧಾರದ ಮೇಲೆ ಮತವನ್ನು ಕೇಳಬೇಕು, ಇದನ್ನು ಬಿಟ್ಟು ವಿರೋಧ ಪಕ್ಷದವರು ಜಾತಿ ಆಧಾರದ ಮೇಲೆ ಮತ ಕೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಈ ತರಹದ ಕುತಂತ್ರದ ರಾಜಕಾರಣವನ್ನು ಖಂಡಿಸುತ್ತೇವೆ. ಯಡಿಯೂರಪ್ಪನವರು ಎಲ್ಲ ಜಾತಿ ಜನಾಂಗದ ನಾಯಕರಾಗಿದ್ದಾರೆ. ಈಡಿಗ ಸಮಾಜದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಯಾವುದೇ ರಾಗ ದ್ವೇಷ ಗಳಿಲ್ಲದೆ ರಾಘವೇಂದ್ರ ಅವರು ಸಹ ಈ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬಿ.ವೈ ರಾಘವೇಂದ್ರ ಅವರನ್ನು ಮತ್ತೊಮ್ಮೆ ಬಹುಮತಗಳ ಅಂತರದಿoದ ಗೆಲ್ಲಿಸುವಂತೆ ಮನವಿ ಮಾಡಿದರು.
ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ಜನರಿಗೆ ಮಂಕುಬೂದಿ ಎರಚುತ್ತಿದೆ. ಗ್ಯಾರಂಟಿ ಅನುಷ್ಠಾನ ಮಾಡಿದ್ದೇವೆ ಎಂದು ಹೇಳುತ್ತಾ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯವನ್ನೇ ಮರೆತಿದ್ದಾರೆ. ಕಳೆದ ಅವಧಿಯಲ್ಲಿ ಬಾಕಿ ಉಳಿದಿರುವ ಕೈಗೆತ್ತಿಕೊಳ್ಳಬೇಕಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮತ್ತೊಮ್ಮೆ ತಮ್ಮನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ಮಾಜಿ ಸಚಿವ ಎಸ್ ಕುಮಾರ್ ಬಂಗಾರಪ್ಪ ವಿಧಾನ ಪರಿಷತ್ ಸದಸ್ಯರಾದ ಭಾರತಿ ಶೆಟ್ಟಿ, ಡಿ.ಎಸ್ ಅರುಣ್, ಮೈಸೂರು ಶಾಸಕ ಶ್ರೀವತ್ಸ, ಬಿಜೆಪಿ ಮಂಡಲ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ, ಮಾಜಿ ಸಚಿವ ಜೀವರಾಜ್, ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ತಾಲೂಕು ಅಧ್ಯಕ್ಷ ಗಣಪತಿ ಟಿ.ಜಿ ಕೊಪ್ಪ, ಪ್ರಮುಖರಾದ ಪುಣ್ಯಪಾಲ್, ದತ್ತಾತ್ರಿ, ಶಿವಕುಮಾರ್ ಕಡಸೂರು, ಪಾಣಿರಾಜಪ್ಪ, ಗುರುಕುಮಾರ್ ಪಾಟೀಲ್, ಎಂ.ಆರ್ ಪಾಟೀಲ್, ಎಂ. ನಾಗಪ್ಪ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.

ವರದಿ: ಸಂದೀಪ ಯು.ಎಲ್., ಸೊರಬ

Leave a Reply

Your email address will not be published. Required fields are marked *

Scan the code