ಜಿಲ್ಲಾ ಆಡಳಿತ ವೈಫಲ್ಯದಿಂದ ದಲಿತರ ಕೊಲೆಗಳು ವಿಧಾನಸೌಧಕ್ಕೆ ಮುತ್ತಿಗೆ; ಸೂಲಿಕುಂಟೆ ಆನಂದ್
(KOLARA): ಬಂಗಾರಪೇಟೆ : ಕೋಲಾರ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಿಂದ ದಲಿತರನ್ನೇ ಟಾರ್ಗೆಟ್ ಮಾಡಿ ಕೊಲೆ ಮಾಡಲಾಗುತ್ತಿದೆ. ಈಗಾಗಲೇ ಮಾಲೂರಿನಲ್ಲಿ ಎರಡು ಹಾಗೂ ನೆನ್ನೆ ಅಷ್ಟೇ ಶ್ರೀನಿವಾಸಪುರದ ಬಳಿ ಸಹ ಒಂದು ಕೊಲೆಯಾಗಿದೆ ಇದಕ್ಕೆಲ್ಲ ಕಾರಣ ಜಿಲ್ಲಾ ಆಡಳಿತ ವೈಫಲ್ಯ ಕಾರಣ ಎಂದು ಕರ್ನಾಟಕ ದಲಿತ ಸಮಾಜ ಸೇನೆಯ ಸಮಸ್ಥಾಪಕ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್ ಆರೋಪ ಮಾಡಿದರು.
ಪಟ್ಟಣದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಪುತ್ತಳಿ ಬಳಿ ಮಾತನಾಡುತ್ತಾ, ಕೋಲಾರ ಜಿಲ್ಲೆ ಹೋರಾಟಗಳ ತವರೂರು ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಇಡೀ ದೇಶದಲ್ಲಿ ಎಲ್ಲೇ ದಲಿತರ ಮೇಲೆ ದೌರ್ಜನ್ಯ,ದಬ್ಬಾಳಿಕೆ, ಹಲ್ಲೆ, ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆದರೆ ಹಾಗೂ ದಲಿತ ನಾಯಕರ ಕೊಲೆ ಆದರೆ ಹೋರಾಟವನ್ನು ಪ್ರಾರಂಭಿಸುವುದು ಕೋಲಾರ ಜಿಲ್ಲೆಯಲ್ಲಿ ಮಾತ್ರ ಎಂದರು.
ಹೋರಾಟಗಳ ತವರು ಜಿಲ್ಲೆಯಲ್ಲಿಯೇ ಬರಿ ದಲಿತರನ್ನೇ ಟಾರ್ಗೆಟ್ ಮಾಡಿ ಕುರಿಗಳನ್ನು ಬಲಿ ಕೊಟ್ಟ ಹಾಗೆ ದಲಿತರನ್ನು ಕೊಲೆ ಮಾಡಲಾಗುತ್ತಿದೆ. ದಲಿತ ನಾಯಕರನ್ನ ಹಾಗೂ ರಾಜಕೀಯ ನಾಯಕರನ್ನು ಟಾರ್ಗೆಟ್ ಮಾಡಿ ನೆನ್ನೆ ನಡೆದಂತಹ ಕೌಂಸ್ಲರ್ ಶ್ರೀನಿವಾಸರವರ ಕೊಲೆ ಇಡೀ ಜಿಲ್ಲೆ ತಲೆತಗ್ಗಿಸುವಂತಹ ಆಗಿದೆ. ಕಳೆದ ವಾರದಲ್ಲಿ ಚಿಂತಾಮಣಿಯಲ್ಲಿ ಪುರಸಭೆ ಸದಸ್ಯನ ಮೇಲೆಯೂ ಸಹ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಮೂರು ದಿನಗಳ ಹಿಂದೆ ಮಾಲೂರಿನಲ್ಲಿ ಸಹ ಗ್ರಾಮ ಪಂಚಾಯಿತಿಯ ಸದಸ್ಯನ ಮೇಲೆ ಕೊಲೆಯಾಗಿದೆ. ದಲಿತ ನಾಯಕರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ದಲಿತರ ಮೇಲೆ ದೌರ್ಜನ್ಯ ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಬಹಳ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೆಲ್ಲ ಗಮನಿಸಿದರೆ ಜಿಲ್ಲಾ ಆಡಳಿತ ಯಾವುದೇ ರೀತಿ ಕ್ರಮ ಕೈಗೊಳ್ಳದೆ ಇರುವುದೇ ಮುಖ್ಯ ಕಾರಣವಾಗಿದೆ. ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿದೆ, ಜಿಲ್ಲಾಡಳಿತ ಕೇವಲ ನೆಪಕ್ಕೆ ಮಾತ್ರ ಇದೆ, ಪೋಲಿಸ್ ಇಲಾಖೆ ಹೊರತುಪಡಿಸಿದರೆ. ಪೊಲೀಸ್ ಇಲಾಖೆ ಮಾತ್ರ ಎರಡು ತಿಂಗಳಿಗೆ ಹಾಗೂ ತಿಂಗಳಿಗೊಮ್ಮೆ ದಲಿತರ ಸಭೆಯನ್ನು ಮಾಡಲಾಗುತ್ತಿದೆ ಎಂದರು.
ಮೀಸಲಾತಿ ಅಡಿಯಲ್ಲಿ ಗೆದ್ದಂತಹ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಸರ್ಕಾರ ಇದುವರೆಗೂ ಯಾವುದೇ ಸಭೆಗಳನ್ನು ಮಾಡಿಲ್ಲ, ಜಿಲ್ಲಾ ಆಡಳಿತ ದಲಿತರನ್ನು ಕಡೆಗಣಿಸುತ್ತಿದೆ. ಕಾನೂನಿನಲ್ಲಿ ಜಿಲ್ಲಾ ಆಡಳಿತ, ತಾಲೂಕು ಆಡಳಿತ,ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮೂರು ತಿಂಗಳಿಗೊಮ್ಮೆ ದಲಿತರ ಸಭೆಯನ್ನು ಮಾಡಬೇಕೆಂದು ಇದೆ. ಆದರೆ ಜಿಲ್ಲಾಡಳಿತ ಇದುವರೆಗೂ ಎರಡು ವರ್ಷಗಳು ಕಳೆದರೂ ಸಹ ಒಂದು ಸಭೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೊನ್ನೆಯಷ್ಟೇ ಬಂಗಾರಪೇಟೆ ತಾಲೂಕಿನಲ್ಲೂ ಸಹ ದೊಡ್ಡವಲಗಮಾದಿ ಗ್ರಾಮದಲ್ಲಿ ಕೂಲಿ ಹಣ ಕೇಳಿದ್ದಕ್ಕೆ ಸವರ್ಣೀಯರ ಕುಟುಂಬದವರು ಕೂಲಿ ಕಾರ್ಮಿಕನನ್ನು ಮರಕ್ಕೆ ಕಟ್ಟಿ ಹಾಕಿ ಧನಕ್ಕೆ ಬಡದಂತೆ ಬಡದಿದ್ದಾರೆ.ಇಡೀ ಕೋಲಾರ ಜಿಲ್ಲೆಯಲ್ಲಿಯೇ ದಲಿತರ ಮೇಲೆ ಸುಮಾರು ದೌರ್ಜನ್ಯಗಳು ಪ್ರತಿದಿನ ನಡೆಯುತ್ತಲೇ ಇದೆ. ಜಿಲ್ಲಾ ಆಡಳಿತ ಇದರ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು ಇಲ್ಲವಾದ ಪಕ್ಷದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡ ಸಕ್ಕನಹಳ್ಳಿವೆಂಕಟೇಶ್, ಡಿಎಸ್ಎಸ್ ಮುಖಂಡ ನವೀನ್, ದಿಸಾಯಿ ರಾಜ್, ಆಟೋ ಕರ್ಣ, ಮಂಜು, ಭಾಗ್ಯರಾಜ್,ಪ್ರವೀಣ್ ಕುಮಾರ್,ಸುಧಾಕರ್,ಜಾನ್ ಮೊದಲಾದವರು ಇದ್ದರು.
ವರದಿ: ವಿಷ್ಣು ಕೋಲಾರ