ನೃತ್ಯ ಚಟುವಟಿಕೆ ದೈಹಿಕ ಬೆಳವಣಿಗೆಗೆ ಪೂರಕ
(CHIKKAMAGALURU): ನೃತ್ಯ ಚಟುವಟಿಕೆಗಳಿಂದ ದೈಹಿಕ ಚಟುವಟಿಕೆಗೆ ಪೂರಕವಾಗಲಿದೆ ಎಂದು ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯ ಕಾರ್ಯಾಧ್ಯಕ್ಷ ಬಿ.ಚನ್ನಕೇಶವ ಬರಗಲ್ ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಪಟ್ಟಣದ ಶ್ರೀ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯು ಆಯೋಜಿಸಿರುವ ಹದಿನೈದನೇ ವರ್ಷದ ದುರ್ಗಾ ಮಹೋತ್ಸವದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಹೆಜ್ಜೆನಾದ ತಂಡದ ಗಾನ ನಾಟ್ಯ ವೈಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೃತ್ಯಾಭ್ಯಾಸ ಆರಂಭವಾಗುವುದೇ ಒಂದು ಸರಳ ಯೋಗಾಭ್ಯಾಸದ ಮೂಲಕವಾಗಿದ್ದು, ಶಾಸ್ತ್ರೀಯತೆಯ ಅಂಶವನ್ನು ಒಳಗೊಂಡ ಒಂದು ಕ್ರೀಡೆಯೂ ಆಗಿದೆ. ದೇಹದ ಎಲ್ಲಾ ಅಂಗಗಳನ್ನು ಸಕ್ರಿಯಗೊಳಿಸಿ ಚುರುಕುಗೊಳಿಸುವ ವಿಧಾನವಾಗಿದೆ.
ಭಾರತೀಯ ಸಾಂಪ್ರದಾಯಿಕ ಸಂಸ್ಕೃತಿಯ ಪ್ರತೀಕವಾಗಿರುವುದು ನೃತ್ಯವಾಗಿದ್ದು, ಈ ಕಲೆಯನ್ನು ಪ್ರತಿಯೊಬ್ಬರೂ ಉಳಿಸಿ ಬೆಳೆಸಬೇಕಾಗಿದೆ ಎಂದರು.
ಹೆಜ್ಜೆನಾದ ತಂಡದ ವಿದುಷಿ ಜ್ಞಾನ ಐತಾಳ್ ನೇತೃತ್ವದಲ್ಲಿ ವಿವಿಧ ನೃತ್ಯಗಳು ಮನಮೋಹಕವಾಗಿ ಮೂಡಿಬಂದು ನೋಡುಗರ ಗಮನಸೆಳೆಯಿತು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಖಜಾಂಚಿ ಭಾಸ್ಕರ್ ವೆನಿಲ್ಲಾ, ಜಂಟಿ ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಸಹ ಖಜಾಂಚಿ ಚೈತನ್ಯ ವೆಂಕಿ, ಉಪಾಧ್ಯಕ್ಷ ಎಚ್.ಡಿ.ಸತೀಶ್, ಶಿವರಾಮಶೆಟ್ಟಿ, ಶ್ರೀಕಾಂತ್ ನಾಯರ್, ಗಿರೀಶ್ ಬಂದಿಯಡ್ಕ, ನಾರಾಯಣಶೆಟ್ಟಿ, ಜಗದೀಶ್ಚಂದ್ರ, ನಟರಾಜ್ಶೆಟ್ಟಿ, ಈಶ್ವರ್ ಇಟ್ಟಿಗೆ, ಸುಂದರ್ ಇಟ್ಟಿಗೆ, ರಾ.ವೆಂಕಟೇಶ್ ಮತ್ತಿತರರು ಹಾಜರಿದ್ದರು.
ನಾಳೆ ಅಕ್ಷರಾಭ್ಯಾಸ
ಬಾಳೆಹೊನ್ನೂರು ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯ ನವರಾತ್ರಿ ಮಹೋತ್ಸವದ ಅಂಗವಾಗಿ ಅ.8ರ ಮಂಗಳವಾರ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಕರವಾಹಿನಿ, ವಾರುಣೀ ರೂಪಿಣಿ ಪೂಜಾ ಪಾರಾಯಣ, ಸರಸ್ವತೀ ಪೂಜಾ ಹಾಗೂ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯಲಿದೆ.
ಸಂಜೆ 6 ರಿಂದ 7.45ರವರೆಗೆ ಭಕ್ತಾಧಿಗಳಿಂದ ಪೂಜಾ ಸೇವೆ, ಮಹಾ ಮಂಗಳಾರತಿ ನಡೆಯಲಿದೆ. ರಾತ್ರಿ ೮ರಿಂದ ದಿವಾಕರ್ ಕಟೀಲು ನಿರ್ದೇಶನದಲ್ಲಿ ಮಟ್ಟು ಕಟಪಾಡಿಯ ಎಂಕಲ್ನ ಕಲಾವಿದರಿಂದ ಮಹಿಮೆಯ ಮಹಾಶಕ್ತಿ ಎಂಬ ಕನ್ನಡ ಭಕ್ತಿಪ್ರಧಾನ ನಾಟಕ ನಡೆಯಲಿದೆ.