ದೆಹಲಿ ಫಲಿತಾಂಶ: ಬಿಜೆಪಿಗೆ ಮತ್ತಷ್ಟು ಬಲ
(CHIKKAMAGALURU): ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶವು ಇಡೀ ದೇಶದ ಎಲ್ಲಾ ಚುನಾವಣೆಗಳಿಗೆ ದಿಕ್ಸೂಚಿಯಾಗಿದ್ದು, ಬಿಜೆಪಿಗೆ ಮತ್ತಷ್ಟು ಬಲ ನೀಡಿದೆ ಎಂದು ಬಿಜೆಪಿ ಮುಖಂಡ ಟಿ.ಎಂ.ಉಮೇಶ್ ಕಲ್ಮಕ್ಕಿ ಹೇಳಿದ್ದಾರೆ.
ದೆಹಲಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಕಾರ್ಯನಿರ್ವಹಿಸಿದ ಆಮ್ ಆದ್ಮಿ ಪಕ್ಷವು ಜನರ ಆಶೋತ್ತರಗಳನ್ನು ಪೂರೈಸುವಲ್ಲಿ ವಿಫಲವಾಗಿದ್ದು, ಅಲ್ಲಿನ ಸರ್ಕಾರದ ವಿರುದ್ಧ ಜನಾಕ್ರೋಶದ ತೀರ್ಪು ಇದೀಗ ಚುನಾವಣೆಯ ಮೂಲಕ ಪ್ರಕಟಗೊಂಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದೆಹಲಿಯಲ್ಲಿ ಜನರು ಬಿಜೆಪಿ ಸರ್ಕಾರಕ್ಕೆ ಸ್ಪಷ್ಟ ಬಹುಮತವನ್ನು ನೀಡಿದ್ದು, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್ಡಿಎ ಸರ್ಕಾರದ ಜನಪರ ಕೆಲಸ ಕಾರ್ಯಗಳನ್ನು ಮೆಚ್ಚಿ ರಾಜ್ಯ, ಕೇಂದ್ರದಲ್ಲಿ ಡಬಲ್ ಎಂಜಿನ್ ಸರ್ಕಾರ ಇರಬೇಕು ಎಂಬ ಉದ್ದೇಶದಿಂದ ಅಭಿವೃದ್ಧಿ ಕಾರ್ಯಗಳಿಗಾಗಿ ಬಿಜೆಪಿ ಜನತೆ ಮತ ನೀಡಿದ್ದಾರೆ.
ದೆಹಲಿಯಲ್ಲಿ ಎಲ್ಲ ಮುಖಂಡರುಗಳು ಕೂಡ ಒಗ್ಗೂಡಿ ಚುನಾವಣಾ ಕಾರ್ಯನಿರ್ವಹಿಸಿದ ಕಾರಣ ಅಭೂತಪೂರ್ವ ಯಶಸ್ಸು ದೊರೆತಿದ್ದು, ರಾಜ್ಯದಲ್ಲೂ ಕೂಡ ಎಲ್ಲಾ ನಾಯಕರು ಒಗ್ಗೂಡಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಿದೆ.
ಪ್ರಸ್ತುತ ಕರ್ನಾಟಕದ ರಾಜ್ಯ ಸರ್ಕಾರದ ಶೂನ್ಯ ಅಭಿವೃದ್ಧಿ ಕೆಲಸಗಳಿಂದ ಬೇಸತ್ತಿರುವ ಜನರು ಅಭಿವೃದ್ಧಿ ಪಕ್ಷವಾದ ಬಿಜೆಪಿಗೆ ಬಲ ತುಂಬುವ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಈಗಿನಿಂದಲೇ ಬಿಜೆಪಿ ನಾಯಕರು ಒಗ್ಗೂಡಿಗೆ ಪಕ್ಷದ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಿ ರಾಜ್ಯದಲ್ಲಿ ಪುನಃ ಬಿಜೆಪಿಯನ್ನು ಅಧಿಕಾರದ ಗದ್ದುಗೆಗೆ ಏರಿಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.