ಪರಿಹಾರ ಹಣ ನೀಡಲು ಲಂಚದ ಬೇಡಿಕೆ, ಲಂಚ ಸ್ವೀಕರಿಸಿದ್ದ ವೇಳೆ ಲೋಕಾಯುಕ್ತ ಬೆಲೆಗೆ.
(KOLARA): ಬಂಗಾರಪೇಟೆ: ಮಳೆಯಿಂದ ಕುಸಿತಗೊಂಡಿದ್ದ ಮನೆಯ ಪರಿಹಾರದ ಹಣ ನೀಡಲು ಲಂಚದ ಬೇಡಿಕೆ ಇಟ್ಟಿದ್ದ ಪ್ರಥಮ ದರ್ಜೆ ಸಹಾಯಕ ತೇಜಸ್ ಭೂಷಣ್ ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಬಂಗಾರಪೇಟೆ ತಾಲ್ಲೂಕಿನ ಗೊಲ್ಲಹಳ್ಳಿಯ ನಾರಾಯಣಸ್ವಾಮಿ ಎಂಬುವವರ ತಾಯಿಗೆ ಸೇರಿದಂತಹ ಮನೆ 2022 ರಲ್ಲಿ ಸುರಿದ ಭಾರಿ ಮಳೆಗೆ ಮನೆ ಕುಸಿತಗೊಂಡಿತ್ತು. ಮನೆ ಕಳೆದುಕೊಂಡಂತಹ ನಾರಾಯಣಸ್ವಾಮಿ ಅವರ ತಾಯಿಯ ಮೂಲಕ ರಾಜೀವ್ ಗಾಂಧಿ ವಸತಿ ನಿಗಮದಿಂದ ಪ್ರವಾಹ ಸಂಕಷ್ಟ ಪರಿಹಾರ ಯೋಜನೆಯಿಂದ 3 ಲಕ್ಷ ಪರಿಹಾರ ನೀಡಲು ಅರ್ಜಿಯನ್ನು ಸಲ್ಲಿಸಿದ್ದರು.
ಅದರಂತೆ ಸರ್ಕಾರ ಮೊದಲ ಕಂತಿನಲ್ಲಿ 95000 ಸಾವಿರ ರೂಗಳನ್ನು ಬಿಡುಗಡೆಗೆ ಮಾಡಿತ್ತು. ಈ ಹಣವನ್ನು ಅರ್ಜಿದಾರರಿಗೆ ವರ್ಗಾವಣೆ ಮಾಡಲು ಸೆಕ್ಷನ್ ಆಫೀಸರ್ ಆಗಿರುವ ತೇಜಸ್ ಭೂಷಣ್ ಖಾತೆ ಬ್ಲಾಕ್ ಆಗಿದೆ ಅದನ್ನು ಅನ್ ಬ್ಲಾಕ್ ಮಾಡಲು 5 ಸಾವಿರ ಲಂಚ ಕೊಡಬೇಕು ಎಂಬ ಬೇಡಿಕೆ ಇಟ್ಟಿದ್ದರು ಅದರಂತೆ 2000 ರೂಗಳನ್ನು ಫಲಾನುಭವಿ ನೀಡಿದ್ದರು. ಲಂಚ ನೀಡಿ ಒಂದು ವರ್ಷ ಕಳೆದರೂ ಹಣ ಮಾತ್ರ ಫಲಾನುಭವಿಗೆ ದೊರಕಲಿಲ್ಲ. ಜೂ 21ರಂದು ಮತ್ತೊಮ್ಮೆ ತೇಜಸ್ ಭೂಷಣ್ ಭೇಟಿ ಮಾಡಿದ ನಾರಾಯಣಸ್ವಾಮಿ ಪರಿಹಾರದ ಹಣ ನೀಡುವಂತೆ ಮನವಿ ಮಾಡಿದ್ದರು. ಆಗ ಮತ್ತೊಮ್ಮೆ 2000 ರೂ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಇದರಿಂದ ಬೇಸರಗೊಂಡಂತಹ ನಾರಾಯಣಸ್ವಾಮಿ ಲೋಕಾಯುಕ್ತ ಅಧಿಕಾರಿಗಳ ಮೊರೆ ಹೋಗಿದ್ದಾರೆ. ಅದರಂತೆ ಲೋಕಾಯುಕ್ತ ಅಧಿಕಾರಿಗಳು ಸೋಮವಾರ ತಾಲ್ಲೂಕು ಕಚೇರಿಯಲ್ಲಿ ಲಂಚ ನೀಡಿ ಬಲೆ ಬೀಸಲು ಖೆಡ್ಡಾ ತೋಡಿದ್ದಾರೆ.
ನಾರಾಯಣಸ್ವಾಮಿಯಿಂದ ಹಣ ಪಡೆಯುವಾಗ ಕೋಲಾರ ಲೋಕಾಯುಕ್ತ ಎಸ್ಪಿ ಉಮೇಶ್ ನೇತೃತ್ವದಲ್ಲಿ ದಾಳಿ ಮಾಡಿ ತೇಜಸ್ ಭೂಷಣ್ ಬಲೆಗೆ ಬೀಳಿಸಿದ್ದಾರೆ. ಆರೋಪಿಯ ವಿರುದ್ದ ಪ್ರಕರಣ ದಾಖಲಿಸಿಕೊಂಡು ಲೋಕಾಯುಕ್ತ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ವರದಿ: ವಿಷ್ಣು ಕೋಲಾರ