ಹಸುಗಳ ಕೆಚ್ಚಲು ಕೊಯ್ದು, ವಿಕೃತಿ ಮೆರೆದವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲು ಆಗ್ರಹ
(SHIVAMOGA): ಸೊರಬ: ಹಸುಗಳ ಕೆಚ್ಚಲು ಕೊಯ್ದು, ಹಲ್ಲೆ ನಡೆಸಿ ವಿಕೃತಿ ಮೆರೆದವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಂಚಾಲಕ ಕಾಳಿಂಗ ರಾಜ್ ಆಗ್ರಹಿಸಿದರು.
ಪಟ್ಟಣದ ತಾಲೂಕು ಕಚೇರಿ ಮುಂಭಾಗ ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣಾ ವೇದಿಕೆ, ಗೋ ಸಂರಕ್ಷಣಾ ಹೋರಾಟ ಸಮಿತಿ, ಸೇರಿದಂತೆ ವಿವಿಧ ಸಂಘಟನೆಗಳ ವತಿಯಿಂದ ಹಮ್ಮಿಕೊಂಡ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಅತ್ಯಂತ ಪೂಜ್ಯನೀಯ ಸ್ಥಾನವಿದೆ. ಹಿಂದೂಧರ್ಮದಲ್ಲಿ ಬಹು ಸಂಖ್ಯಾತರು ಗೋವನ್ನು ತಾಯಿ ಎಂದು ಆರಾಧಿಸುತ್ತಾರೆ. ಇಂತಹ ಪರಂಪರೆಯ ನಡುವೆ, ಬೆಂಗಳೂರಿನಲ್ಲಿ ಹಸುವಿನ ಕೆಚ್ಚಲು ಕೋಯ್ದ ಘಟನೆ ಹೀನ ಕೃತ್ಯವಾಗಿದೆ. ಈ ಘಟನೆ ಮಾತ್ರವಲ್ಲ, ಹೊನ್ನವರ ತಾಲೂಕಿನ ಸಲ್ಕೋಡು ಗ್ರಾಮದಲ್ಲಿಯೂ ಇಂತಹದೇ ಘಟನೆ ಮರುಕಳಿಸಿರುವುದು ಸಮಾಜದ ನಾಗರಿಕತೆಗೆ ತೀವ್ರ ಹಿನ್ನಡೆಯಾಗಿದೆ. ಇಂತಹ ಕೃತ್ಯಗಳು ಸಮಾಜದಲ್ಲಿ ಭಿನ್ನಾಭಿಪ್ರಾಯ ಮತ್ತು ಅಶಾಂತಿಯನ್ನು ಉಂಟುಮಾಡುತ್ತವೆ. ಸರ್ಕಾರ ಯಾವುದೇ ಪಕ್ಷಪಾತವಿಲ್ಲದೇ, ಇಂತಹ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಗೋ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದ ಗೌಡ ಮಾತನಾಡಿ, ಹುಟ್ಟಿದ ಮಗು ಒಂಬತ್ತು ತಿಂಗಳು ತಾಯಿಯ ಹಾಲು ಕುಡಿದರೆ, ಬದುಕಿರುವ ತನಕ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಎಲ್ಲಾ ಧರ್ಮದವರು ಗೋ ಮಾತೆಯ ಹಾಲನ್ನು ಕುಡಿಯುತ್ತೇವೆ. ಇಂತಹ ಗೋವಿನ ಮೇಲೆ ವಿದ್ವಂಸಕ ಕೃತ್ಯ ಎಸಗಿದವರು ಮನುಷ್ಯರಾಗಿರಲು ಸಾಧ್ಯವೇ ಇಲ್ಲ. ಅಂತಹ ಕಿಡಿಗೇಡಿಗಳಿಗೆ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು. ಹಿಂದೂ ಧರ್ಮಕ್ಕೆ ಅಪಮಾನ ಎಸಗಿದವರಿಗೆ ನಿರ್ದಾಕ್ಷಿಣ್ಯ ಕ್ರಮ ತಗೆದುಕೊಳ್ಳಬೇಕೆಂದರು.
ನಂತರ ತಹಶೀಲ್ದಾರ್ ಮಂಜುಳಾ ಹೆಗಡಾಳ್ ಅವರ ಮುಖೇನ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಹಿಂದೂಪರ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಸಾರ್ವಜನಿಕರು ಭಾಗವಹಿಸಿದರು.
ವರದಿ: ಮಧು ರಾಮ್ ಸೊರಬ