‘ಶಾಲೆಯಲ್ಲಿ ಮಾಡೋ ಹಾಗೇ ಇಲ್ಲೂ ಮಾರ್ಕ್ಸ್ ಕಟ್ ಮಾಡಿದಿರಾ! ಹೇಗೆ ಸರ್?’
(ARTICAL): ಶಾಲೆಯಲ್ಲಿ ಎಲ್ಲಾ ಮಕ್ಕಳು ಪರೀಕ್ಷೆ ಮುಗಿಸಿ ಒಂದಿಷ್ಟು ಸಮಯ ರಜೆ ಎಂದು ಅದರಲ್ಲಿ ಮುಳುಗಿಹೋಗಿರುತ್ತಾರೆ. ಅಜ್ಜಿ ಮನೆ, ಟೂರ್, ಟ್ರಿಪ್, ಶಿಬಿರ ಹೀಗೇ ಒಂದಲ್ಲಾ ಒಂದು ರೀತಿಯಲ್ಲಿ ತೊಡಗಿಸಿಕೊಂಡು ಶಾಲೆ, ಶಿಕ್ಷಕರು ಎನ್ನುವ ಎಲ್ಲಾ ಸಂಗತಿಗಳನ್ನು ಮರೆತು ಖುಷಿಯಿಂದ ಕಾಲ ಕಳೆಯುವ ಸಮಯ. ಆದರೆ ಶಿಕ್ಷಕರುಗಳು ಮಕ್ಕಳು ಬರೆದ ಉತ್ತರ ಪತ್ರಿಕೆಗಳನ್ನು ಹಿಡಿದುಕೊಂಡು ಕೂರುವ ಸಮಯ.
ಸಾಮಾನ್ಯವಾಗಿ 8, 9ನೇ ತರಗತಿಯ ಪರೀಕ್ಷೆಗಳು ಮುಗಿದು ಅದರ ಮೌಲ್ಯಮಾಪನವೆಲ್ಲ ಮುಗಿದು ಫಲಿತಾಂಶ ನೀಡಲು ಸಿದ್ಧತೆ ಮಾಡಿಕೊಳ್ಳುವ ಸಮಯದಲ್ಲಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಮಕ್ಕಳಿಗೆ ಮೊದಲೇ ಮಾಹಿತಿ ತಿಳಿಸಿ ಮುಖ್ಯೋಪಾಧ್ಯಾಯರನ್ನು ಭೇಟಿ ಮಾಡಲು ಸೂಚನೆ ನೀಡಲಾಗಿರುತ್ತದೆ. ಮರುದಿನ ಫಲಿತಾಂಶ ನೀಡಿ ಅನುತ್ತೀರ್ಣರಾದ ಮಕ್ಕಳಿಗೆ ಒಂದಿಷ್ಟು ದಿನಗಳ ಕಾಲ ತರಗತಿ ನಡೆಸಿ ಮತ್ತೊಮ್ಮೆ ಪರೀಕ್ಷೆಯನ್ನು ಏರ್ಪಡಿಸಲಾಗುತ್ತಿತ್ತು.
ಇದೇ ಸಮಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯ ಮೌಲ್ಯಮಾಪನವು ಆರಂಭವಾಗುತ್ತಿತ್ತು. ಪ್ರಥಮ ಭಾಷೆ ಸಂಸ್ಕೃತ, ತೃತೀಯ ಭಾಷೆ ಕನ್ನಡದ ಮೌಲ್ಯಮಾಪನವು ಬೆಂಗಳೂರಿನಲ್ಲಿರುತ್ತಿತ್ತು. ನಾನು ಎಸ್.ಎಸ್.ಎಲ್.ಸಿ ಮಕ್ಕಳಿಗೆ ತೃತೀಯ ಭಾಷೆಯ ಪಾಠ ಮಾಡುತ್ತಿದ್ದುದರಿಂದ ಅದರ ಮೌಲ್ಯಮಾಪನಕ್ಕೆಂದು ಬೆಂಗಳೂರಿಗೆ ತೆರಳಬೇಕಿತ್ತು. ಬೆಂಗಳೂರಿನ ಜಯನಗರದ ‘ರಾಣಿ ಸರಳಾದೇವಿ ಕಾಲೇಜ್’ ನಲ್ಲಿ ಮೌಲ್ಯಮಾಪನವಿದ್ದುದರಿಂದ ಸಮೀಪದಲ್ಲಿ ಎಲ್ಲಿಯಾದರೂ ರೂಂ ಮಾಡಬಹುದಾ? ಎಂದು ಯೋಚಿಸಿದೆ. ಸಿಗುವುದು ವಿರಳ ಎನಿಸಿತು. ನಂತರ ಸಮೀಪದಲ್ಲಿರುವ ಯಾರಾದರೂ ಗೆಳೆಯರನ್ನು ಸಂಪರ್ಕಿಸಬಹುದು ಎಂದು ಆ ಪ್ರಯತ್ನವನ್ನೂ ಸಹ ಮಾಡತೊಡಗಿದೆ. ಆದರೆ ಸಮೀಪದಲ್ಲಿ ಯಾವುದೇ ಗೆಳೆಯರು ಇರಲಿಲ್ಲ. ಆಗ ನಮ್ಮ ಸ್ಕೌಟ್ ಬಳಗದ ಮಲ್ನಾಡ್ ಓಪನ್ ಗ್ರೂಪ್ನ ರೋವರ್ ಆಗಿದ್ದ ಕೀರ್ತಿ ಬೆಂಗಳೂರಿನ ಅಯ್ಯಪ್ಪನಗರದಲ್ಲಿದ್ದ ಈ ನಗರವು ನಾನು ತೆರಳಬೇಕಿದ್ದ ಪರೀಕ್ಷಾ ಕೇಂದ್ರದಿoದ ಬಹಳ ದೂರದಲ್ಲಿಯೇ ಇತ್ತು. ಬೈಯಪ್ಪನಹಳ್ಳಿ ಮೆಟ್ರೋದ ಮೂಲಕ ಜಯನಗರ ತಲುಪಬಹುದು ಎನಿಸಿತು. ಆತನ ಮನೆಯಲ್ಲಿ ಒಬ್ಬನೇ ಇದ್ದ ಕಾರಣ ಅಲ್ಲಿಯೇ ಇರಲು ತೀರ್ಮಾನಿಸಿದೆ.
ಬೆಳಗ್ಗೆ ಶಿವಮೊಗ್ಗದಿಂದ ರೈಲಿನಲ್ಲಿ ಹೊರಟು ಯಶವಂತಪುರದಿoದ ಗ್ರೀನ್ಲೇನ್ ಮೆಟ್ರೋ ಮೂಲಕ ಜಯನಗರ ತಲುಪಿ ಪರೀಕ್ಷಾ ಕೇಂದ್ರಕ್ಕೆ ತಡವಾಗುತ್ತಿದೆ ಎಂದು ಅವಸರದಿಂದಾಗಿ ಆಟೋ ಹಿಡಿದು ಪರೀಕ್ಷಾ ಕೇಂದ್ರಕ್ಕೆ ತೆರಳಿದರೆ, ಅಲ್ಲಿ ಇನ್ನೂ ಮಾಹಿತಿ ನೀಡುವವರೇ ಇರಲಿಲ್ಲ. ದ್ವಿತೀಯ ಭಾಷೆ ಕನ್ನಡದ ಮೌಲ್ಯಮಾಪಕರನ್ನು ಕರೆದು ಅವರ ತಂಡವನ್ನು ರಚಿಸಿ ಪೇಪರ್ಗಳನ್ನು ವಿತರಿಸುವ ಸಮಯಕ್ಕೆ ಮಧ್ಯಾಹ್ನವೇ ಆಗಿತ್ತು. ನನ್ನ ಪರಿಚಿತದವರು ಯಾರೂ ಇಲ್ಲದ ಕಾರಣ ವ್ಯವಸ್ಥಾಪಕರ ಬಳಿ ಯಾವುದಾದರೂ ತಂಡದಲ್ಲಿ ಸೇರಿಸಿಕೊಳ್ಳುವಂತೆ ತಿಳಿಸಿದೆ. ಅಂತೂ ಎಲ್ಲಾ ಅಪರಿಚಿತರ ತಂಡವೇ ದೊರಕಿತು. ಎಲ್ಲರೂ ಬೆಂಗಳೂರಿನವರೇ ಆಗಿದ್ದರು. ಎಲ್ಲರ ಪರಿಚಯ ಮಾಡಿಕೊಂಡಿದ್ದಾಯಿತು. ಅಂದು ಕೇವಲ ೧೦ ಪೇಪರ್ಗಳನ್ನು ನೀಡಿದ್ದರು. ಅವುಗಳ ಮೌಲ್ಯಮಾಪನ ಮಾಡಿ ತೆರಳಬೇಕಿತ್ತು. ಕೀರ್ತಿ ತಿಳಿಸಿದಂತೆ ಮೆಟ್ರೋದಲ್ಲಿ ಸಾಗಿ ಮೆಜೆಸ್ಟಿಕ್ನಲ್ಲಿ ಪಿಂಕ್ಲೇನ್ಗೆ ಮೆಟ್ರೋ ಬದಲಾಯಿಸಿ ಬರುವಂತೆ ತಿಳಿಸಿದ. ಎಲ್ಲೆಲ್ಲಿ ಹೋಗಬೇಕು ಎಂದು ತಿಳಿಯದಾದಾಗ ಜನರ ನಡುವೆ ನಿಂತಾಗ ಗುಂಪಲ್ಲಿ ಅವರೇ ಕರೆದುಕೊಂಡು ಹೋಗುವಂತೆ ತಳ್ಳಿಕೊಂಡು ಸಾಗುವುದು ಬೆಂಗಳೂರಿನಲ್ಲಿ ಸರ್ವೇ ಸಾಮಾನ್ಯವಾಗಿತ್ತು. ಅಲ್ಲಿಂದ ಕೊನೆಯ ನಿಲ್ದಾಣವಾದ ಬೈಯಪ್ಪನಹಳ್ಳಿಗೆ ಬಂದು ಅಲ್ಲಿಂದ ಕೆ.ಆರ್.ಪುರಂ ಮೂಲಕ ಸಾಗಿ ಅಯ್ಯಪ್ಪ ನಗರಕ್ಕೆ ಬಂದೆ. ಗೆಳೆಯ ಕೀರ್ತಿ ಅದಾಗಲೇ ಬಂದಿದ್ದ ಅವನ ಗಾಡಿಯಲ್ಲಿ ಕುಳಿತು ಮನೆಯ ದಾರಿ ಹಿಡಿದೆವು. ಅಲ್ಲಿಂದ ಒಂದೆರಡು ಕೀಲೋಮೀಟರ್ ಪ್ರಯಾಣದ ನಂತರ ಅವನಿದ್ದ ಅಪಾರ್ಟಮೆಂಟ್ಗೆ ಬಂದು ತಲುಪಿದೆವು. ಎಲ್ಲಿಂದ, ಎಲ್ಲಿಗೆ, ಹೇಗೆ ಸಾಗಬೇಕು. ಬರಬೇಕು ಎಂಬ ಎಲ್ಲಾ ಸಂಗತಿಗಳನ್ನು ಕುರಿತು ಕೀರ್ತಿ ತಿಳಿಸಿದ್ದು ಅನುಕೂಲವೇ ಆಗಿತ್ತು.
ಮರುದಿನ ಇಬ್ಬರೂ ಬಾಕ್ಸ್ಗೆ ತಿಂಡಿ ಹಾಕಿಕೊಂಡು ತೆರಳಿದೆವು. ಬೈಯಪ್ಪನಹಳ್ಳಿಯ ತನಕ ಅವನ ಗಾಡಿಯಲ್ಲಿಯೇ ಬಂದು ಬಿಟ್ಟನು. ಅಲ್ಲಿಂದ ಮೆಟ್ರೋ ಮೂಲಕ ಜಯನಗರದ ಮೆಟ್ರೋ ನಿಲ್ದಾಣದಿಂದ ನಡೆಯುತ್ತ ಸಾಗಿ ರಾಣಿ ಸರಳಾದೇವಿ ಕಾಲೇಜ್ ತಲುಪಿದೆ. ನಾನು ಬರುವ ಮುನ್ನವೇ ಅನೇಕ ಶಿಕ್ಷಕರು ಬಂದು ಅದಾಗಲೇ ಮೌಲ್ಯಮಾಪನ ಆರಂಭಿಸಿದ್ದರು. ನಾನು ನನ್ನ ಪಾಲಿಗೆ ಬಂದಿದ್ದ ಪೇಪರ್ಗಳನ್ನು ತೆಗೆದುಕೊಂಡು ಮೌಲ್ಯಮಾಪನ ಮಾಡತೊಡಗಿದೆ. ಮಧ್ಯಾಹ್ನದ ವೇಳೆಗೆ ಎಲ್ಲವನ್ನು ಮುಗಿಸಿ, ಕಂಪ್ಯೂಟರ್ನಲ್ಲಿ ಅಂಕಗಳನ್ನು ನಮೂದಿಸಿ ಅಂದಿನ ಕೆಲಸ ಮುಗಿಸಿದ್ದಾಯಿತು. ಕೀರ್ತಿ ಬರುವುದು ತಡ ಎಂದು ಮುಂಚಿತವಾಗಿ ತಿಳಿಸಿದ್ದ ಕಾರಣ ಮೆಟ್ರೋ, ಬಸ್, ಆಟೋ ಮಾರ್ಗಗಳ ಮೂಲಕ ಮನೆಯನ್ನು ತಲುಪಿದ್ದೆ. ಊಟಕ್ಕೆ ಸಾಂಬಾರ್ ಸಿದ್ಧವಾಗಿತ್ತು. ಅವನು ಬಂದ ನಂತರ ಅನ್ನವನ್ನು ಮಾಡಿಕೊಂಡು ಊಟ ಮಾಡಿ ಬಹಳಷ್ಟು ಸಮಯ ಮಾತನಾಡುತ್ತ ಕುಳಿತಿದ್ದೆವು.
ಮರುದಿನ ಅನಿವಾರ್ಯವಾಗಿ ಕೀರ್ತಿ ಶಿವಮೊಗ್ಗಕ್ಕೆ ಹೋಗಬೇಕಿತ್ತು. ಹಾಗಾಗಿ ಇಡೀ ಮನೆಯನ್ನೇ ನನಗೆ ಒಪ್ಪಿಸಿ ಎರಡು/ಮೂರು ದಿನಗಳ ಕಾಲದ ತನಕ ಮನೆಯನ್ನು ನೋಡಿಕೊಳ್ಳಲು ತಿಳಿಸಿದ. ಆ ದೊಡ್ಡ ಮನೆಯನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನದಾಗಿತ್ತು. ಎಂದಿನAತೆ ತಿಂಡಿಯನ್ನು ಮಾಡಿಕೊಂಡು ಬಾಕ್ಸ್ಗೆ ಹಾಕಿಕೊಂಡು ತೆರಳಿ ಮೌಲ್ಯಮಾಪನ ಮುಗಿಸಿದ್ದಾಯಿತು. ಎರಡು/ಮೂರು ದಿನಗಳ ಕಾಲ ಹೀಗೆಯೇ ಮುಂದುವರೆಯಿತು. ಈ ದಿನಗಳಲ್ಲಿ ದಿನಚರಿಯೆಲ್ಲಾ ಬದಲಾವಣೆಗಳಿಲ್ಲದೆ ಒಂದೇ ರೀತಿಯಲ್ಲಿದ್ದಿತು.
ಅಂದು ಶನಿವಾರ ಮೌಲ್ಯಮಾಪನ ಮುಗಿಸಿ ಮೆಟ್ರೋದಲ್ಲಿ ತೆರಳುತ್ತಿದ್ದ ಸಮಯ. ಮೆಜೆಸ್ಟಿಕ್ಗೆ ಬರುವಾಗ ಮನೆಗೆ ಪೋನ್ ಮಾಡಿ ಅಮ್ಮನೊಂದಿಗೆ ಮಾತನಾಡುತ್ತಿದ್ದೆ. ನಿಲ್ದಾಣ ಬರುತ್ತಿದ್ದಂತೆ ಮಾತನಾಡುತ್ತ ಇಳಿದು ಮುಂದೆ ಸಾಗುತ್ತಿದ್ದೆ. ಮಾತನಾಡಿ ಪೋನ್ ಇಡುವ ಸಮಯಕ್ಕೆ ಹಿಂದಿನಿoದ ಬಂದ ಒಬ್ಬ ಹುಡುಗಿ, ‘ಚೇತನ್ ಸರ್ ಅಲ್ವಾ…!? ಅನ್ಕೊಂಡೆ ಈ ಧ್ವನಿಯನ್ನು ಬಹಳ ಹತ್ತಿರದಿಂದ ಕೇಳಿದಿನಿ, ಇದು ನಮ್ಮ ಸರ್ ಧ್ವನಿ ಇದ್ದ ಹಾಗೇ ಇದೆ ಅಂತ ನೋಡಿದರೆ ನೀವೇ… ಹೇಗಿದಿರಿ ಸರ್? ನಾನು ಯಾರು ಅಂತ ಗೊತ್ತಾಯ್ತಾ ಸರ್?’ ಎಂದು ಒಂದೇ ಉಸಿರಲ್ಲಿ ನನಗೂ ಮಾತನಾಡಲು ಅವಕಾಶ ನೀಡದಂತೆ ಮಾತನಾಡುತ್ತಿದ್ದಳು. ನನಗೆ ಮಾತನಾಡಲು ಅವಕಾಶ ಸಿಕ್ಕಾಗ, ‘೮ ವರ್ಷದ ಹಿಂದೆ ನಮ್ಮ ಶಾಲೆಲಿ ಓದಿದ್ದು ಅಲ್ವಾ ಭಟ್ರೆ!? ನೀವು ಏನು ಇಲ್ಲಿ?’ ಎಂದಾಗ, ‘ಹೌದು ಸರ್. ಆದರೆ ಈಗಲೂ ನೆನಪಲ್ಲಿ ಇದೀವಾ ಅಂತಾ?’ ಅಂದಳು. ‘ನೆನಪಿಲ್ಲದೇ ಏನು ರಂಜನ ಭಟ್ ಅವರೇ… ಹೇಗಿದಿರಾ?’ ಅಂದೇ ಆಶ್ಚರ್ಯದಿಂದ ಕಣ್ಣರಳಿಸಿ ನಿಂತಳು. ‘ಇನ್ನೂ ನನ್ನ ಹೆಸರು ನೆನಪಿದೆಯಾ?’ ಎಂದಳು. ಆಕೆಯೂ ಟಿನ್ಫ್ಯಾಕ್ಟರಿಯಲ್ಲಿ ಇದ್ದುದರಿಂದ ಇಬ್ಬರೂ ಒಂದೇ ಮೆಟ್ರೋದಲ್ಲಿ ತೆರಳಬೇಕಿತ್ತು. ಮಾತನಾಡುತ್ತಾ ಸಾಗಿದೆವು. ಈಗ ಆಕೆ ಕೆಲಸಕ್ಕೆ ಸೇರಿದ್ದಾಳೆ, ದುಡಿಯುತ್ತಿದ್ದಾಳೆ. ‘ಇಂದು ಶನಿವಾರ ರಜೆ ಇದ್ದ ಕಾರಣ ಗೆಳತಿಯರೊಂದಿಗೆ ಶಾಪಿಂಗ್ಗಾಗಿ ಜಯನಗರಕ್ಕೆ ಬಂದಿದ್ದೆ’ ಎಂದಳು. ನಾನು ಎಸ್.ಎಸ್.ಎಲ್.ಸಿ ಮೌಲ್ಯಮಾಪನಕ್ಕೆ ಬಂದದ್ದಾಗಿ ತಿಳಿಸಿದೆ. ‘ಮಕ್ಕಳು ಹೇಗೆ ಬರೆದಿದ್ದಾರೆ ಸರ್? ನೀವು ಶಾಲೆಯಲ್ಲಿ ಮಾಡೋ ಹಾಗೇ ಇಲ್ಲೂ ಮಾರ್ಕ್ಸ್ ಕಟ್ ಮಾಡಿದಿರಾ ಹೇಗೆ?’ ಎಂದು ನಕ್ಕಳು. ಏಕೆಂದರೆ ಶಾಲೆಯಲ್ಲಿ ತಪ್ಪಾಗಿ ಬರೆದಿದ್ದ ಪ್ರತೀ ಅಕ್ಷರಕ್ಕೂ ಅಂಕ ತೆಗೆಯುತ್ತಿದ್ದೆ. ಅದನ್ನು ನೆನೆಸಿಕೊಂಡು, ‘ನಿಮ್ಮ ಹತ್ರ ಮಾರ್ಕ್ಸ್ ತಗೊಳೋಕೆ ಅದೆಷ್ಟು ಒದ್ದಾಡಬೇಕಿತ್ತು ಸರ್’ ಎಂದು ಹಳೆಯದನ್ನೆಲ್ಲ ನೆನಪಿಸಿಕೊಳ್ಳುತ್ತ ಆರಾಮಾವಾಗಿ ಮಾತನಾಡತೊಡಗಿದಳು. ‘ಶಾಲೆ ಹೇಗಿದೆ? ಎಲ್ಲಾ ಶಿಕ್ಷಕರು ಹೇಗಿದ್ದಾರೆ? ಎಲ್ಲವನ್ನು ತುಂಬಾ ಮಿಸ್ ಮಾಡಿಕೊಳ್ತಿದಿನಿ’ ಎಂದು ತಿಳಿಸಿದಳು. ಅಲ್ಲದೇ ಈಗ ಇರುವುದಕ್ಕಿಂತ ಶಾಲಾ ಜೀವನ ಬಹಳ ಚೆಂದ ಇತ್ತು. ಎಂದು ಆ ಹಳೆಯ ದಿನಗಳನ್ನು ಮೆಲುಕು ಹಾಕಿದಳು. ಚನ್ನೇಶ್ ಸರ್ ಬರೆಸಿದ್ದ ಭಲೇಬಿಂದು ಪಾಠದ ಹೋಂವರ್ಕ್, ಲೋಕೇಶ್ಸರ್ ತರಗತಿಯಲ್ಲಿ ಭಯದಿಂದ ಕೂರುತ್ತಿದ್ದದ್ದು, ಸ್ಕಂದಸರ್ ಹತ್ರ ಬೈಸಿಕೊಳ್ಳುತ್ತಿದ್ದದ್ದು, ವರ್ಮಾಸರ್ ತರಗತಿಯಲ್ಲಿದ್ದ ಮೌನ, ಮಂಜುಳಾಮೇಡo ತರಗತಿ ಶಿಕ್ಷಕರಾಗಿದ್ದು… ಹೀಗೆ ಹೇಳುತ್ತಲೇ ಇದ್ದಳು. ಶಾಲೆಯಲ್ಲಿ ನನ್ನೊಂದಿಗೆ ಕಡಿಮೆ ಮಾತನಾಡಿದ್ದ ಹುಡುಗಿ ಈಗ ಅದು-ಇದು ಎಂದು ನನಗೆ ಮಾತನಾಡಲು ಅವಕಾಶ ಕೊಡದಂತೆ ಅವಳೇ ಮಾತನಾಡುತ್ತಿದ್ದಳು. ಕಣ್ಣಮುಂದೆ ಅದೇ ಶಾಲಾ ಮಗುವಿನಂತೆಯೇ ಆಡುತ್ತಿದ್ದಳು. ‘ನಮ್ಮ ಬ್ಯಾಚ್ನವರು ಯಾರಾದರೂ ನಿಮ್ಮ ಕಾಂಟ್ಯಾಕ್ಟ್ಲಿ ಇದ್ದಾರಾ? ಯಾರ್ಯಾರು ಏನೇನು ಮಾಡುತ್ತಿದ್ದಾರೆ? ಎಂದು ಕೇಳಿದಳು. ಗೊತ್ತಿದ್ದ ಒಂದಿಷ್ಟು ಸಂಗತಿಗಳನ್ನು ಹಂಚಿಕೊoಡೆ. ಒಂದಿಷ್ಟು ಸಮಯ ಮಾತನಾಡಿ ಮುಗಿಸುವ ಹೊತ್ತಿಗೆ ಮೆಟ್ರೋ ಬಂದಿತು. ಗೆಳತಿಯರಿದ್ದ ಕಾರಣ ‘ಕೊನೆಯ ನಿಲ್ದಾಣದಲ್ಲಿ ಇಳಿದಾಗ ಸಿಗುತ್ತೇನೆ’ ಎಂದಳು. ಅದಾದ ನಂತರ ಮತ್ತೆ ಮೆಟ್ರೊ ಪ್ರಯಾಣ ಶುರುವಾಯಿತು.
ಬೈಯಪ್ಪನಹಳ್ಳಿ ನಿಲ್ದಾಣಕ್ಕೆ ಬಂದು ಇಳಿದು ಹೊರಟೆ. ಎಲ್ಲೂ ರಂಜನ ಸಿಗಲಿಲ್ಲ. ನಾನು ಮನೆಯ ಕಡೆಗೆ ಹೊರಟೆ. ಅಪರಿಚಿತವಾದ ಈ ಊರಿನಲ್ಲಿ ಪರಿಚಿತದರವರು ಸಿಗುವುದೇ ಇಲ್ಲ ಎಂದುಕೊoಡಿದ್ದೆ. ನಮ್ಮ ಶಾಲೆಯ ಹಿರಿಯ ವಿದ್ಯಾರ್ಥಿನಿಯೊಬ್ಬಳು ಸಿಕ್ಕು ಶಾಲೆಯ ಬಗೆಗಿನ ಅನುಭವಗಳನ್ನು ಹಂಚಿಕೊoಡಾಗ ನಮ್ಮೂರಲ್ಲೇ ಇದ್ದಂತೆ ಭಾಸವಾಗಿದ್ದಂತೂ ಸುಳ್ಳಲ್ಲ. ಅಲ್ಲದೇ ಶಾಲಾ ಜೀವನ ಮುಗಿಸಿ ಎಷ್ಟೋ ವರ್ಷಗಳಾದರೂ ಗುರುತಿಸಿ ಮಾತನಾಡಿಸಿದ ಕ್ಷಣ ಮರೆಯಲು ಸಾಧ್ಯವೇ ಇಲ್ಲ.
ಎದುರಿಗೆ ಕಂಡರೂ ಕಾಣದಂತೆ, ನೋಡಿದರೂ ನೋಡದಂತೆ ಇರುವ ಈಗಿನ ಹಲವು ಮಕ್ಕಳ ಮನಸ್ಥಿತಿಯನ್ನು ಕಂಡಾಗ, ರಂಜನಾಭಟ್ ತರದ ಕೆಲವು ವಿದ್ಯಾರ್ಥಿಗಳು ನೆನಪಾಗುತ್ತಾರೆ. ಕೆಲವೊಮ್ಮೆ ಶಾಲಾ ಜೀವನ ಮುಗಿಸಿಹೋಗಿರುವ, ಹೆಚ್ಚಿನ ವಿದ್ಯಾಭ್ಯಾಸ ಮಾಡುತ್ತಿರುವ, ಕೆಲಸ ಮಾಡುತ್ತಿರುವ, ತಮ್ಮ ಬದುಕನ್ನು ಕಟ್ಟಿಕೊಂಡು ಸಾಗುತ್ತಿರುವ ಅಥವಾ ಪೋಷಕರ ಬ್ಯುಜಿನೆಸ್ ಅನ್ನು ಜವಾಬ್ದಾರಿ ತೆಗೆದುಕೊಂಡು ತಾವು ಮುಂದುವರೆಸಿಕೊoಡು ಹೋಗುತ್ತಿರುವ ಕೆಲವು ಮಕ್ಕಳು ಹೀಗೆ ಸಿಕ್ಕು ಮಾತನಾಡಿಸಿದಾಗ ಶಿಕ್ಷಕರಾಗಿದ್ದಕ್ಕೆ ಸಾರ್ಥಕ ಎನಿಸುವಂತೆ ನಮ್ಮ ಬಳಿ ಅವರು ಮಾತನಾಡುವ, ಗೌರವ ಕೊಡುವುದನ್ನು ನೋಡಿದಾಗ ಅದೇನೋ ಒಂದು ತರದ ಸಂತೋಷದ ಭಾವ. ಹಳೆಯ ದಿನಗಳ ಮೆಲುಕು ಎಲ್ಲವನ್ನೂ ನೆನಪಿಸಿಕೊಂಡಾಗ ಅಂದಿನದಿನಗಳು ಹೇಗಿತ್ತೋ ಆಗ ತಿಳಿಯಲಿಲ್ಲ. ಆದರೆ ಅದರ ಮೌಲ್ಯ ಈಗ ಅರಿವಾಗುತ್ತಿದೆ ಎಂಬುದನ್ನು ಮೌಲ್ಯಮಾಪನಕ್ಕೆ ಬಂದಾಗ ಹಳೆಯ ವಿದ್ಯಾರ್ಥಿನಿಯಿಂದ ತಿಳಿಯುವಂತಾಯಿತು.
ಈಗಿನ ಮಕ್ಕಳನ್ನು ಕಂಡಾಗ ಜೀವನ, ಮೌಲ್ಯಗಳು, ಎನ್ನುವುದಕ್ಕಿಂತ ಮೊಬೈಲ್, ಟಿ.ವಿ ಇತರ ಆಕರ್ಷಣೆಗಳ ಹಿಂದೆ ಓಡುತ್ತ, ಪೋಷಕರ ಸಲುಗೆಯಿಂದ ದುಂದುವೆಚ್ಚದಲ್ಲಿ ಮುಳುಗಿರುವ, ಗುರುಗಳು-ಹಿರಿಯರು ಎಂದು ಗೌರವ ನೀಡದ ಕೆಲವು ಮಕ್ಕಳನ್ನು ಕಂಡಾಗ ಕೇವಲ ಧ್ವನಿಯನ್ನು ಕೇಳಿಸಿಕೊಂಡು ‘ಇದು ನಮ್ಮ ಸರ್ ಧ್ವನಿಯೆ ಆಗಿದೆ’ ಎಂದುಕೊoಡು ಹುಡುಕಿಕೊಂಡು ಬಂದು ಮಾತನಾಡಿಸಿದ ಮಗುವಿನ ಬಗ್ಗೆ ನಿಜಕ್ಕೂ ಹೆಮ್ಮೆ ಎನಿಸುತ್ತಿದೆ. ನಮಗಂತೂ ಈ ರೀತಿಯ ಗುಣದ ವಿದ್ಯಾರ್ಥಿಗಳೂ ಇದ್ದಾರಲ್ಲಾ ಎನ್ನುವುದೇ ಸಮಾಧಾನದ ಸಂಗತಿ. ಶಿಕ್ಷಕರಾಗಿದ್ದವರಿಗೆ ಎಲ್ಲಿಯಾದರೂ. ಯಾರಾದರೂ ಅಪರಿಚಿತವಾಗಿರುವವರು, ನಮಗಿಂತ ಸಣ್ಣವರು, ಮಾತನಾಡಿಸುತ್ತಿದ್ದಾರೆ ಎಂದರೆ ಅದರಲ್ಲಿ ಬಹುತೇಕ ನಮ್ಮ ಬಳಿಯಲ್ಲಿ ಪಾಠ ಕೇಳಿದ ವಿದ್ಯಾರ್ಥಿಗಳೇ ಆಗಿರುತ್ತಾರೆ ಎನಿಸುತ್ತದೆ. ಇಂತಹ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಲಿ ಎಂಬುದೊoದೇ ಸಣ್ಣ ಆಶಾಭಾವ.