ಮನರಂಜನೆ

‘ಈ ಬೇಕರಿಯನ್ನ ನೀವೇ ಉದ್ದಾರ ಮಾಡ್ತಾ ಇದೀರಿ ಅಂತ ಅನ್ಕೊಂಡಿರೋ ಹಾಗಿದೆ?’

‘ಈ ಬೇಕರಿಯನ್ನ ನೀವೇ ಉದ್ದಾರ ಮಾಡ್ತಾ ಇದೀರಿ ಅಂತ ಅನ್ಕೊಂಡಿರೋ ಹಾಗಿದೆ?’


‘ಪಥಸಂಚಲನ’ ಅನ್ನುವ ಪದ ನಮ್ಮ ಶಾಲಾ ಮಕ್ಕಳಲ್ಲಿ ಕೆಲವರಿಗೆ ಅದೇನೋ ಉತ್ಸಾಹ, ಆಸಕ್ತಿ. ಎಂದು ಶುರುವಾಗುವುದೋ? ಎಂಬ ಕುತೂಹಲ ಇದ್ದೇ ಇರುತಿತ್ತು. ಈ ಬಾರಿಯ ಗಣರಾಜ್ಯೋತ್ಸವ ದಿನಕ್ಕಾಗಿ ಸಿದ್ಧತೆ ನಡೆಸುವ ಸಲುವಾಗಿ ಮಾತನಾಡುತ್ತಿದ್ದಾಗ ಮಕ್ಕಳೇ ಬಂದು ಕೇಳುತ್ತಿದ್ದರು, ‘ಸರ್ ಯವಾಗ ಮಾರ್ಚ್ಫಾಸ್ಟ್ನ ಶುರು ಮಾಡೋದು?’ ಎಂದಾಗ ‘ಹೇಳ್ತಿನಿ’ ಎಂದು ನಕ್ಕು ಹೋಗುತ್ತಿದ್ದೆ. ‘ಕಳೆದ ಬಾರಿ ಎಷ್ಟು ಬೇಗ ಶುರು ಮಾಡಿದ್ರಿ, ಈ ಸಲ ಇನ್ನೂ ಅಭ್ಯಾಸ ಶುರು ಆಗಿಲ್ಲ, ಬೇಗ ಆರಂಭಿಸಿದರೆ ಒಳ್ಳೆಯದು’ ಎಂದು ಮಕ್ಕಳೇ ಹೇಳತೊಡಗಿದರು.


ಅಂತೂ ಜನವರಿಯ ಆರಂಭದಲ್ಲಿ ಮಕ್ಕಳಿಗೆ ‘ಮಧ್ಯಾಹ್ನ ಬೇಗ ಊಟ ಮುಗಿಸಿ ಅಭ್ಯಾಸಕ್ಕೆ ಬನ್ನಿ’ ಎಂದದ್ದೇ ತಡ. ಕಳೆದ ಬಾರಿ ಪಥಸಂಚಲನದಲ್ಲಿ ಭಾಗವಹಿಸಿದ್ದ ಮಕ್ಕಳು ಬಹುಬೇಗ ಊಟ ಮುಗಿಸಿ ತಯಾರಾಗಿ ಬಂದಿದ್ದರು. ಇನ್ನೂ ನಾನೇ ಊಟ ಮಾಡಿರಲಿಲ್ಲ. ಮಕ್ಕಳಿಗೆ ಅಭ್ಯಾಸಕ್ಕೆ ಸಿದ್ಧರಾಗಿರಿ ಎರಡು ನಿಮಿಷ ಬಂದೆ ಎಂದು ಹೇಳಿ ಬೇಗ ಹೊರಟೆ. ಸಂಖ್ಯೆ ಕಡಿಮೆಯಿತ್ತು. ಕಾರಣ ಎಸ್.ಎಸ್.ಎಲ್.ಸಿ ಓದುತ್ತಿರುವ ಮಕ್ಕಳು ಪರೀಕ್ಷೆ ಕಾರಣದಿಂದಾಗಿ ಬಂದಿರಲಿಲ್ಲ. 9ನೇ ತರಗತಿಯ ಮಕ್ಕಳಲ್ಲಿ ಕೆಲವರು, 8ನೇ ತರಗತಿಯಲ್ಲಿ ಕಳೆದಬಾರಿ ಭಾಗವಹಿಸಿದ್ದ ಮಕ್ಕಳಲ್ಲಿ ಕೆಲವರು ಬಂದಿದ್ದರು. ಇನ್ನೂ ಕೆಲವು ಮಕ್ಕಳು ಬಂದಿಲ್ಲವಲ್ಲ? ಎನಿಸಿತು. ಅದಕ್ಕೆ ನಿತ್ಯಶ್ರಿ, ‘ಕೆಲವರು ಕೋಚಿಂಗ್‌ಕ್ಲಾಸ್‌ಲಿ ಇದಾರೆ ಹಾಗಾಗಿ ಬಂದಿಲ್ಲ’ ಅಂದಳು.
ಒoದು ಪಥಸಂಚಲನದ ತಂಡಕ್ಕೆ ಬೇಕಾದಷ್ಟು ಅಗತ್ಯವಾದಷ್ಟು ಮಕ್ಕಳು ಇರಲಿಲ್ಲ. ಮರುದಿನದ ಅಭ್ಯಾಸದ ಸಮಯಕ್ಕೆ ಒಂದಿಷ್ಟು ಮಕ್ಕಳ ಸಂಖ್ಯೆ ಹೆಚ್ಚಾಯಿತು. 8ನೇ ತರಗತಿಯ ಕೆಲವು ಮಕ್ಕಳು ಇವರ ಅಭ್ಯಾಸವನ್ನು ನೋಡಿ ‘ನಾವು ಸೇರಿಕೊಳ್ಳಬಹುದಾ ಸರ್?’ ಎಂದು ಕೇಳಿ ಹಲವು ಮಕ್ಕಳು ಬಂದು ಸೇರಿಕೊಂಡರು. ಪ್ರತಿದಿನ ಮಧ್ಯಾಹ್ನ ಊಟದ ನಂತರದಲ್ಲಿ ಅಭ್ಯಾಸ ಮತ್ತು ಸಂಜೆ ಎಲ್ಲಾ ತರಗತಿ ಮುಗಿದಮೇಲೆ ಕೋಚಿಂಗ್ ತರಗತಿಯ ಸಮಯದಲ್ಲೂ ಅಭ್ಯಾಸ ಶುರುವಾಗುತ್ತಿತ್ತು.


ಮೂರು ದಿನ ಬೆಳಗ್ಗೆ 7.೦೦ಕ್ಕೆ ಡಿ.ಎ.ಆರ್ ಮೈದಾನದಲ್ಲಿ ಅಭ್ಯಾಸ ಇರುತ್ತದೆ ಎಂದು ತಿಳಿಸಿದೆವು. ಅದು 22 ಜನವರಿ ಅಂದು ಅಯೋಧ್ಯೆಯಲ್ಲಿ ‘ಶ್ರೀರಾಮನ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮ’ ಅಂದು ಶಾಲೆ ಇರಲಿ, ಇಲ್ಲದಿರಲಿ ಬೆಳಗ್ಗೆ ಅಭ್ಯಾಸವಂತೂ ಇದ್ದೇ ಇರುತ್ತದೆ. ಹಾಗಾಗಿ ತಪ್ಪದೇ ಬನ್ನಿ ಎಂದು ತಿಳಿಸಿದೆವು.
ಅಂದು ಬೆಳಗ್ಗೆ ಮಕ್ಕಳು ನಿಗಧಿತ ಸಮಯಕ್ಕೆ ಸರಿಯಾಗಿ ಬಂದಿದ್ದರು. ದಟ್ಟವಾದ ಮಂಜು ಆವರಿಸಿತ್ತು. ನಮನ, ‘ಸರ್ ಒಂದು ಫೋಟೋ ತೆಗೆದುಕೊಳ್ಳೋಣವಾ? ಮಂಜು ಹೇಗಿದೆ ಅಂತ’ ತನ್ನ ಫೋಟೋ ತೆಗೆದುಕೊಳ್ಳುವ ಆಸೆಯನ್ನು ತಿಳಿಸಿದಳು. ಒಂದೆರಡು ಫೋಟೋ ತೆಗೆದುಕೊಂಡರು. ಅಭ್ಯಾಸ ಆರಂಭವಾಗುವುದು ತಡ ಎಂದು ತಿಳಿಸಿದರು. ಅಲ್ಲೇ ಕಾಂಪೌoಡ್ ಪಕ್ಕದಲ್ಲಿ ಮಕ್ಕಳಿಗೆಂದು ವಿವಿಧ ಆಟಿಕೆಗಳಿದ್ದವು. ಅನನ್ಯ (ಆಚಿ) ‘ಸರ್ ಸ್ವಲ್ಪ ಸಮಯ ಆಟ ಆಡಿಕೊಂಡು ಬರುತ್ತೇವೆ’ ಎಂದಳು. ಸರಿ ಎಂದದ್ದೇ ತಡ ನಮ್ಮ ಶಾಲೆಯ ಬಹಳಷ್ಟು ಮಕ್ಕಳು ಆಡಲು ಮುಗಿಬಿದ್ದರು. ಇವರುಗಳು ಕಾಲಿಟ್ಟದ್ದೇ ತಡ ವಿವಿಧ ಶಾಲಾ ಮಕ್ಕಳು ಆಡಲು ಬರತೊಡಗಿದರು. ‘ಆಡಿದ್ದು ಸಾಕು ಬನ್ನಿ’ ಎಂದು ಎಲ್ಲರನ್ನು ಕರೆದಾಗ ಎಲ್ಲರೂ ಬಂದರು ಪಥಸಂಚಲನಕ್ಕೆ ಮುಂದಾದೆವು.

ಅಂತೂ ಅಭ್ಯಾಸ ಚೆನ್ನಾಗಿ ಆಯಿತು. ಒಳ್ಳೆಯ ತಿಂಡಿಯ ವ್ಯವಸ್ಥೆಯೂ ಇತ್ತು. ಎಲ್ಲರೂ ಚೆನ್ನಾಗಿ ತಿಂಡಿತಿoದು ಶಾಲಾ ಬಸ್‌ಗೆ ಕಾಯಲೆಂದು ಮುಖ್ಯರಸ್ತೆಯ ಬಳಿಗೆ ಬಂದೆವು. ‘ಒನ್‌ವೇ ರಸ್ತೆ’ ಆದ್ದರಿಂದ ಕೆಲವು ಹೆಜ್ಜೆ ಮುನ್ನಡೆದರೆ ಬಸ್ ಅಲ್ಲಿಗೆ ಬರಲು ಅನುಕೂಲವಾಗುತ್ತದೆ ಎಂದು ಮುಂದಕ್ಕೆ ಹೋದೆವು. ಸಮೀಪದ ಕಾಂಪೌoಡ್ ಮೇಲೆ ಬ್ಯಾಗ್ ಇಟ್ಟು ನಿಂತರು, ಕುಳಿತುಕೊಂಡರು. ಅಲ್ಲೇ ಸಮೀಪದಲ್ಲೇ ಇದ್ದ ‘ಬೇಕರಿ’ ಈ ಮಕ್ಕಳ ಕಣ್ಣಿಗೆ ಕಾಣಿಸಿತು. ಇಷ್ಟು ಸಾಕಲ್ಲವೇ? ಚಾಕೊಲೇಟ್, ಚಿಪ್ಸ್ ಅದು ಇದು ತೆಗೆದುಕೊಳ್ಳಬಹುದಾ ಸರ್? ಎಂದರು. ಇನ್ನೂ ಬಸ್ ಬರಲು ಸಮಯವಿದ್ದುದರಿಂದ ಸರಿ ಅಂದದ್ದೇ ತಡ ಬೇಕರಿಯನ್ನೇ ಮುತ್ತಿದರು. ಅದೇನೇನೋ ತೆಗೆದುಕೊಂಡರು. ಕೆಲವರಂತೂ ನನಗೂ ತಿನ್ನಲು, ಜ್ಯೂಸ್ ಕುಡಿಯಲು ಕೊಡ ತೊಡಗಿದರು. ಕೆಲವಂತೂ ತೆಗೆದುಕೊಳ್ಳಲಿಲ್ಲ. ಚಿಪ್ಸ್ ತೆಗೆದುಕೊಂಡ ಮಕ್ಕಳು ‘ಇದರಲ್ಲಿ ಚಿಪ್ಸ್ ಇರೋದೇ ಕಡಿಮೆ ನೋಡಿ ಸರ್’ ಅಂದರು. ‘ಅರ್ಧ ದುಡ್ಡು ಗಾಳಿಗೆ ಕೊಟ್ಟಿದ್ದೀರಿ ಬಿಡಿ’ ಎಂದೆ. ಮಾನ್ಯತ, ‘ಸರ್ 1೦ರೂಪಾಯಿ ಇದ್ದರೆ ಕೊಡಿ ನಾನು ಏನಾದರೂ ತೆಗೆದುಕೊಳ್ತಿನಿ’ ಅಂದಳು. ‘ಅಲ್ಲ ಕಂದ ಆಗಲೇ ತಿಂಡಿನ ಚೆನಾಗಿ ತಿಂದಿದಿಯ, ಮತ್ತೆ ಇಲ್ಲೂ ತಿನ್ನಬೇಕಾ?’ ಎಂದೆ. ‘ಎಲ್ಲಾರೂ ತಿನ್ನೋದು ನೋಡಿದರೆ ಹಾಗೆ ಅನ್ನಿಸ್ತಿದೆ’ ಅಂದಳು. ಹೋಗಲಿ ಎಂದು ಕೊಟ್ಟು ಕಳಿಸಿದೆ ಜೆಮ್ಸ್ ತೆಗೆದುಕೊಂಡು ಬಂದಳು. ಅದರಲ್ಲಿ ನನಗೂ ಒಂದು ನೀಡಿದಳು. ಅಷ್ಟರಲ್ಲಿ ರಾಮನ ಮೂರ್ತಿಯನ್ನು ಸಿಂಗರಿಸಿದ್ದ ಗಾಡಿಯೊಂದು ಬಂದಿತು. ಸಹನ, ಅರ್ಚನ, ಮಿತು ಇನ್ನೂ ಕೆಲವರು ಅದನ್ನು ಕಂಡು ‘ಜೈಶ್ರೀರಾಮ್’ ಎಂದರು. ಗಾಡಿಯಲ್ಲಿದ್ದವರು ಜೈಶ್ರೀರಾಮ್ ಎಂದರು. ಅಲ್ಲಿದ್ದ ನಮ್ಮ ಮಕ್ಕಳೆಲ್ಲ ಸೇರಿ ಜೋರಾಗಿ ಜೈಕಾರ ಹಾಕಿದರು. ಅಷ್ಟರಲ್ಲಿ ಶಾಲಾ ಬಸ್ ಬಂದಿತು. ಎಲ್ಲರನ್ನೂ ಬಸ್‌ಗೆ ಕಳಿಸಿದೆ ಮಾರ್ಗ ಮಧ್ಯೆ ಹಾಡು ಹೇಳಿಕೊಂಡು, ಕೂಗಾಡಿಕೊಂಡು ಬಂದರು ಎಂದು ಡ್ರೈವರ್ ಗಾಡ್ವಿನ್ ಹೇಳಿದ ಮಾತು.


ಮರುದಿನ ಬೆಳಗ್ಗೆ ಅಭ್ಯಾಸ ಮುಗಿಸಿ, ಪಲಾವ್ ತಿಂಡಿಯನ್ನು ತಿಂದು ಮತ್ತದೇ ಬೇಕರಿ ಬಳಿಗೆ ಬಂದೆವು. ಆ ಬೇಕರಿಯವರು ನಾವು ಬರುವುದನ್ನು ನಿರೀಕ್ಷಿಸಿದ್ದರೇನೋ ಎನಿಸಿತು. ಏಕೆಂದರೆ ನೆನ್ನೆಯಿದ್ದ ತಿನಿಸು, ಜ್ಯೂಸ್‌ಗಳು ಹೆಚ್ಚಾಗಿದ್ದವು. ಮಕ್ಕಳು ನನ್ನತ್ತ ನೋಡಿ ‘ಸಾರ್…’ ಎಂದು ಒಂದೇ ರಾಗದಲ್ಲಿ ಕೂಗಿದರು. ಬೇಕರಿಗೆ ಹೋಗಬೇಕೆಂದು ಅರ್ಥ ಆಯಿತು. ಏನಾದರೂ ಮಾಡ್ಕೊಳ್ಳಿ, ಬಸ್ ಬಂದರೆ ಹೊರಡ್ತಾ ಇರಬೇಕು ಎಂದದ್ದೇ ತಡ ಬೇಕರಿಗೆ ಧಾಳಿ ನಡೆಸುವಂತೆ ಹೋದರು. ಸೃಜನ್ ಜ್ಯೂಸ್ ತಂದು, ‘ಸರ್ ನಿಮಗೆ ಅಂದನು’ ಸ್ವಲ್ಪ ತೆಗೆದುಕೊಂಡು ವಾಪಸ್ ಕೊಟ್ಟೆ ಇದರ ಮಧ್ಯೆ ನಮನ, ಮಾನ್ಯತಾ, ರಿಯಾ ಸೇರಿ ಚುಪಾಚುಪ್ ಅಂತ ಅದೇನೋ ಚಾಕೊಲೇಟ್ ಬಲವಂತ ಮಾಡಿಕೊಟ್ಟರು. ಬಾಯಿಗೆ ಇಟ್ಟದ್ದೆ ತಡ ಭಯಂಕರ ಹುಳಿ ಎನಿಸಿತು, ಮುಖ ಕಿವಿಚಿಕೊಂಡೆ. ಇವರು ಅದನ್ನೇ ನಿರೀಕ್ಷಿಸುತ್ತಿದ್ದರೇನೋ ‘ಸರ್ ಮೊದಲು ಹುಳಿ ಅನ್ಸತ್ತೆ ಆಮೇಲೆ ಸಿಹಿ ಇರತ್ತೆ ಎಂದು ಆ ಚಾಕೋಲೇಟ್ ಬಗ್ಗೆ ನನಗೆ ಪಾಠ ಹೇಳಿದರು.


ಆ ಬೇಕರಿಯಲ್ಲಿ ಬೇರೆ ಗಿರಾಕಿಗಳೇ ಇಲ್ಲ, ಬರೀ ನಮ್ಮ ಶಾಲೆ ಮಕ್ಕಳೇ ಕಾಣ್ತಾ ಇದ್ದರು. ಹುಡುಗರಂತೂ ಒಟ್ಟಿಗೆ ಸೇರಿ ಜ್ಯೂಸ್ ತೆಗೆದುಕ್ಕೊಂಡು ಅದಕ್ಕಾಗಿ ಕಿತ್ತಾಟ ಮಾಡುವಂತೆ ಕಾಣತೊಡಗಿದರು. ಕೆಲವೊಮ್ಮೆ ನನಗೇ ಅನುಮಾನ ಬರತೊಡಗಿತು. ನಿಜವಾಗಿಯೂ ದುಡ್ಡುಕೊಟ್ಟು ತೆಗೆದುಕೊಳ್ಳುತ್ತಿದ್ದಾರೋ? ಅಥವಾ ಬೇಕರಿಯವರಿಗೆ ಯಾಮಾರಿಸುತ್ತಿದ್ದಾರೋ? ಎಂದು ಆ ಮಟ್ಟಿಗೆ ವ್ಯಾಪಾರ ಶುರುಮಾಡಿದ್ದರು. ಕೆಲವರಂತೂ ಅಲ್ಲೂ ‘ಸರ್ ನೆನಪಿಗಾಗಿ ಒಂದು ಫೋಟೋ’ ಎಂದರು ಅಷ್ಟರಲ್ಲಿ ಶಾಲಾ ಬಸ್ ಬಂತು. ಹೊರಟೆವು.
ಸಂಜೆ ಶಾಲೆಯಲ್ಲಿ ಅಭ್ಯಾಸದ ಸಮಯದಲ್ಲಿ ಎಲ್ಲಾ ಮಕ್ಕಳು ಕೇಳುತ್ತಿದ್ದದ್ದು, ‘ಸರ್ ನಾಳೆಯೂ ಬೇಕರಿಯ ಬಳಿಯಲ್ಲೇ ಬಸ್‌ಗಾಗಿ ಕಾಯಬೇಕಿದೆ ಅಲ್ವಾ?’ ಎಂದು ಕೆಲವರಂತೂ ಅದಕ್ಕೆಂದೆ ಪೋಷಕರ ಬಳಿಯಲ್ಲಿ ಹಣವನ್ನು ಕೇಳಿ ಪಡೆದುಕೊಂಡು ಬರಲು ತಯಾರಾಗಿದ್ದರು. ಒಟ್ಟಾರೆ ಅಭ್ಯಾಸಕ್ಕಿಂತ ‘ಬೇಕರಿ’ ಬಳಿಗೆ ಹೋಗುವುದೇ ಹೆಚ್ಚು ಖುಷಿಕೊಡುವಂತೆ ಕಾಣುತ್ತಿತ್ತು.


ಇದರ ಮಧ್ಯೆ ಶರಣ್ಯ 1೦ ರೂಪಾಯಿ ಎಂದು ತಿಳಿದುಕೊಂಡು 5೦೦ ರೂಪಾಯಿಯನ್ನು ತಂದಿದ್ದಳು. ಜೋಪಾನವಾಗಿ ಇಟ್ಟುಕೊಳ್ಳುವಂತೆ ತಿಳಿಸಿದೆ. ಕೊನೆಯ ದಿನದ ಪಥಸಂಚಲನದ ಅಭ್ಯಾಸವನ್ನು ಮುಗಿಸಿ ಯಥಾಪ್ರಕಾರ ಬೇಕರಿಯ ಬಳಿಗೆ ಬಂದಾಗ ನಮಗಾಗಿಯೇ ಕಾಯುತ್ತಿದ್ದಂತೆ ಇದ್ದ ಬೇಕರಿಯವರು ಖುಷಿಯಿಂದ ಮಕ್ಕಳನ್ನು ಮಾತನಾಡಿಸತೊಡಗಿದರು. ‘ಅಲ್ಲಿಗೇ ಸರಿಹೋಯಿತು ಬಿಡಿ’ ಎಂದು ಕೊಂಡೆ. ಅಂದು ಕಾಫಿ ಬೇರೆ ಮಾಡಿದ್ದರು. ಇದನ್ನೇ ನೆಪ ಮಾಡಿಕೊಂಡು ಅನೂಪ್ ಎರಡು ಲೋಟ ಕಾಫಿ ತಂದ ‘ಸರ್ ಕೈ ಸುಡುತ್ತಿದೆ ಹಿಡಿದುಕೊಳ್ಳಿ’ ಎಂದು ಲೋಟ ಕಾಫಿ ನೀಡಿದ. ಆಮೇಲೆ ‘ಅದನ್ನು ನಿಮಗೆ ತಂದಿದ್ದು’ ಎಂದ. ‘ಇಷ್ಟೆಲ್ಲ ತಂದುಕೊಟ್ಟರೂ ನಾನು ಮಾತ್ರ ನಿನ್ನ ಲೀಡರ್ ಮಾಡಲ್ಲ’ ಎಂದಾಗ ಎಲ್ಲರೂ ನಕ್ಕರು. ‘ನಾಳೆ ನಾವು ಈ ಮೈದಾನಕ್ಕೆ ಅಭ್ಯಾಸಕ್ಕೆ ಅಂತ ಬರೋದಿಲ್ಲ, ಈ ಬೇಕರಿಗೂ ಅಷ್ಟೇ ನಾಳೆ ಶಾಲೆಲೇ ಅಭ್ಯಾಸ ಅಪ್ಪೀತಪ್ಪೀ ಯಾರಾದರೂ ಬೆಳಗ್ಗೆ ಎಂದಿನoತೆ ಇಲ್ಲಿಗೇ ಬಂದೀರಿ…’ ಎನ್ನತೊಡಗಿದೆ. ‘ಆದರೂ ಬೇಕರಿಗಾದರೂ ಬರಬೇಕಿತ್ತು ಅಂತ ಅನ್ಸತ್ತೆ’ ಎಂದು ಕೆಲವು ಮಕ್ಕಳು ಹೇಳಿದಾಗ ‘ಹೌದೌದು ಬೇಕರಿಯನ್ನ ನೀವೇ ಉದ್ದಾರ ಮಾಡ್ತಾ ಇದೀರಿ ಅಂತ ಅನ್ಕೊಂಡಿರೋ ಹಾಗಿದೆ, ಅದೆಲ್ಲ ಸಾಕು’ ಎನ್ನುವಷ್ಟರಲ್ಲಿ ಶಾಲಾ ಬಸ್ ಪ್ರತ್ಯಕ್ಷವಾಯಿತು.


ಪಥಸಂಚಲನದ ಅಭ್ಯಾಸದ ಸಮಯವು ಬೇರೆಬೇರೆ ರೀತಿಯ ಅನುಭವಗಳನ್ನು ಕೊಡುತ್ತದೆ. ಈ ಬಾರಿ ವಿಶೇಷವಾಗಿ ‘ಬೇಕರಿ’ ಎನ್ನುವುದು ಮಕ್ಕಳಿಗೆ ಆತ್ಮೀಯವಾಗಿತ್ತು. ಈ ಮೂರು ದಿನಗಳ ಕೆಲವೇ ಕೆಲವು ಸಮಯ ಮಕ್ಕಳ ವ್ಯಾಪಾರ, ತಿನ್ನುವಿಕೆ, ಇತರರ ಜೊತೆಗೆ ಹಂಚಿಕೊಳ್ಳುವ ಗುಣ ಎಲ್ಲವೂ ಕೆಲವು ಸಮಯ ಆಶ್ಚರ್ಯಗೊಳ್ಳುವಂತೆ ಮಾಡಿದ್ದಂತೂ ಸುಳ್ಳಲ್ಲ. ಅದೆಷ್ಟು ವಿಧದ ಜ್ಯೂಸ್, ಚಾಕೊಲೇಟ್, ಚಿಪ್ಸ್ಗಳು ಇವೆಯೆಂದು ಈ ಮಕ್ಕಳಿಂದಲೇ ಗೊತ್ತಾಯಿತು. ನಾನು ತಿಳಿಯದೇ ಇರುವ ತಿನಿಸುಗಳು ಬಹಳಷ್ಟಿವೆ ಎಂಬ ಅರಿವೂ ಸಹ ಆಯಿತು. ಇವೆಲ್ಲ ತಿನ್ನುವುದು ತರವೇ? ಎಂದರೆ ‘ದಿನ ಏನು ತಿನ್ನಲ್ಲವಲ್ಲ ಸರ್, ನಾಳೆಯಿಂದ ನಾವು ಯಾರೂ ಬರಲ್ಲ ಅಲ್ವಾ?’ ಹೌದು ಎನಿಸಿತು. ಆದರೂ ಮೂರೇ ದಿನಕ್ಕೆ ಅಭ್ಯಾಸ ಮುಗಿಯಿತಲ್ಲ ಎಂಬ ಬೇಸರ ಕೆಲ ಮಕ್ಕಳಿಗೆ. ಅಭ್ಯಾಸಕ್ಕಿಂತ ಹೆಚ್ಚಾಗಿ ‘ಬೇಕರಿ’ ಕಡೆಗೆ ಹೀಗೆ ಎಲ್ಲಾ ವಿದ್ಯಾರ್ಥಿಗಳು ಹೋಗುವ ಅವಕಾಶವೂ ಮುಗಿಯಿತಲ್ಲ ಎನ್ನುವಂತಾಯಿತು. ಆದರೂ ಈ ಬೇಕರಿ ಈ ಮೂರು ದಿನಗಳಲ್ಲಿ ನೂರಾರು ನೆನಪುಗಳನ್ನು ಹುಟ್ಟುಹಾಕಿದ್ದಂತೂ ನಿಜ…

Leave a Reply

Your email address will not be published. Required fields are marked *

Scan the code