ಉಜ್ಜಯಿನಿಯಲ್ಲಿ ದೀಪೋತ್ಸವ ಸಂಭ್ರಮ
(CHIKKAMAGALURU): ಬಾಳೆಹೊನ್ನೂರು ಸಮೀಪದ ಖಾಂಡ್ಯ ಹೋಬಳಿಯ ಉಜ್ಜಯಿನಿ ಆದಿಶಕ್ತಿ ಬನ್ನಿಮಹಾಂಕಾಳಿ, ಮಲ್ಲಿಕಾರ್ಜುನಸ್ವಾಮಿ, ಕಾಲಬೈರವೇಶ್ವರ ಮತ್ತು ಪರಿವಾರ ದೇವರ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.
ದೀಪೋತ್ಸವದ ಅಂಗವಾಗಿ ಆದಿಶಕ್ತಿ ಬನ್ನಿಮಹಾಂಕಾಳಿ ಮತ್ತು ಶ್ರೀ ಮಲ್ಲಿಕಾರ್ಜುನಸ್ವಾಮಿಗೆ ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಸುತ್ತಲೂ ಇರಿಸಿದ್ದ ದೀಪವನ್ನು ಭಕ್ತರು ಭಕ್ತಿಯಿಂದ ಬೆಳಗಿಸಿ ಸಂಭ್ರಮಿಸಿದರು. ದೀಪೋತ್ಸವದ ಹಿನ್ನೆಲೆಯಲ್ಲಿ ಹಲಗೆ, ವಾದ್ಯ ಮತ್ತು ಆಕರ್ಷಕ ಸಿಡಿಮದ್ದು ಪ್ರದರ್ಶನದೊಂದಿಗೆ ಶ್ರೀದೇವರ ಉತ್ಸವ ಮೂರ್ತಿಯನ್ನು ಹೊತ್ತು ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ನಡೆಸಲಾಯಿತು.
ಭಕ್ತರು ಸಂಪ್ರದಾಯಬದ್ಧವಾಗಿ ಗ್ರಾಮೀಣ ಹಲಗೆ, ವಾದ್ಯಕ್ಕೆ ನರ್ತಿಸಿ ಸಂಭ್ರಮಿಸಿದರು. ದೇವಸ್ಥಾನದ ಧರ್ಮಾಧಿಕಾರಿ ಯು.ಸಿ.ಗೋಪಾಲಗೌಡ ಈ ಸಂದರ್ಭದಲ್ಲಿ ಮಾತನಾಡಿ, ಬೆಳಕು ಬೆಳಗುವ ಸಂಸ್ಕೃತಿ, ತಾನೂ ಬೆಳಗುವ ಜೊತೆಗೆ ಇತರರನ್ನೂ ಬೆಳಕಿನೆಡೆಗೆ ನಡೆಯುವಂತೆ ಪ್ರೇರೇಪಿಸುವ ಸಂಸ್ಕೃತಿಯಾಗಿದೆ. ನಮ್ಮ ಸಂಸ್ಕೃತಿ ಪರಂಪರೆ, ಹಬ್ಬದ ಆಚರಣೆಗಳಿಗೆ ತನ್ನದೇ ಆದ ಮಹತ್ವವಿದ್ದು ಅದನ್ನು ಆಚರಿಸುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರಕಲಿದೆ. ನಮ್ಮ ಧಾರ್ಮಿಕ ಪರಂಪರೆಯನ್ನು ಗಟ್ಟಿಗೊಳಿಸಿ ಮುಂದಿನ ಪೀಳಿಗೆಗೆ ಕೊಡುಗೆ ನೀಡುವ ಕೆಲಸವಾಗಬೇಕು ಎಂದರು.