ಕೋಲಾರನ್ಯೂಸ್

ರೋಟರಿ ಕ್ಲಬ್ ಕಲ್ಪವೃಕ್ಷ ಯೋಜನೆಯಡಿ ರೈತರಿಗೆ 200 ತೆಂಗಿನ ಸಸಿ ವಿತರಣೆ

ರೋಟರಿ ಕ್ಲಬ್ ಕಲ್ಪವೃಕ್ಷ ಯೋಜನೆಯಡಿ ರೈತರಿಗೆ 200 ತೆಂಗಿನ ಸಸಿ ವಿತರಣೆ



(KOLARA): ಬಂಗಾರಪೇಟೆ : ಮಾನವ ಜನ್ಮ ಪಡೆಯುವುದೇ ಪುಣ್ಯವಾಗಿರುವಾಗ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು ಧನ್ಯತೆ ಭಾವ ಪಡೆದುಕೊಳ್ಳಬೇಕು ಎಂದು ರೋಟರಿ ಜೋನ್ ಗವರ್ನರ್ ಎಚ್.ರಾಮಚಂದ್ರಪ್ಪ ತಿಳಿಸಿದರು. ತಾಲೂಕಿನ ಬೀರಾಂಡಹಳ್ಳಿ ಸತ್ಯಸಾಯಿ ವೃದ್ದಾಶ್ರಮದಲ್ಲಿ ಬುಧವಾರ ನಡೆದ ಕೋಲಾರ ರೋಟರಿ ಕ್ಲಬ್ ಹಾಗೂ ಶ್ರೀ ಗಂಗಾನೀಕೇತನ ಫೌಂಡೇಶನ್, ಸಿರಿಗನ್ನಡ ವೇದಿಕೆ ಸಂಯುಕ್ತಾಶ್ರಯದಲ್ಲಿ ರೋಟರಿ ಕಲ್ಪವೃಕ್ಷ ಯೋಜನೆಯಡಿ ರೈತರಿಗೆ 200 ತೆಂಗಿನಕಾಯಿ ಸಸಿ ವಿತರಣೆ, ಸತ್ಯಸಾಯಿ ವೃದ್ದಾಶ್ರಮಕ್ಕೆ ಅಗತ್ಯ ವಸ್ತುಗಳ ವಿತರಣೆ, ವಿವಿಧ ಕ್ಷೇತ್ರದ ಸಾಧಕರನ್ನು ಹಾಗೂ ಪ್ರಗತಿಪರ ರೈತರನ್ನು ಸನ್ಮಾನಿಸಿ ಮಾತನಾಡಿದ ಅವರು, ಉಳ್ಳವರು ದಾನಮಾಡುವ ರೂಢಿಯನ್ನು ಬೆಳೆಸಿಕೊಂಡು ಸಮಸಮಾಜ ನಿರ್ಮಾಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಜನ್ಮ ಪಾವನ ಮಾಡಿಕೊಳ್ಳಬೇಕು ಎಂದು ಹೇಳಿದರು.
ರೋಟರಿ ಸಂಸ್ಥೆ ವತಿಯಿಂದ ಹಲವಾರು ರೀತಿ ಸಮಾಜಕ್ಕೆ ಸಹಾಯ ಮಾಡುತ್ತಿದ್ದು, ಸೇವಾ ಕಾರ್ಯವನ್ನು ಮುಂದುವರೆಸಿಕೊಂಡು ಹೋಗಲು ಎಲ್ಲರ ಬೆಂಬಲ, ಸಹಕಾರ ಅತ್ಯವಶ್ಯಕ. ಮನುಷ್ಯರಿಗೆ ಬೇಕಾದ ಸವಲತ್ತುಗಳನ್ನು ತಲಪಿಸುವುದೇ ರೋಟರಿ ಸಂಸ್ಥೆಯ ಗುರಿಯಾಗಿದ್ದು, ನಮ್ಮೊಂದಿಗೆ ಎಲ್ಲರೂ ಕೈಜೋಡಿಸಿ ಎಂದು ಮನವಿ ಮಾಡಿದರು.


ಕೋಲಾರ ರೋಟರಿ ಸಂಸ್ಥೆಯ ಕಾರ್ಯದರ್ಶಿ ನಾಗಾನಂದ ಕೆಂಪರಾಜ್ ಮಾತನಾಡಿ, ಸೇವೆ ಮಾಡುವ ಗುಣವು ಚಿಕ್ಕವಯಸ್ಸಿನಿಂದಲೇ ಬೆಳಸಿಕೊಂಡು ಕಟ್ಟಕಡೆಯ ವ್ಯಕ್ತಿಯನ್ನು ಸಹ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು. ಜನನಾಯಕನೆಂದು ಬಿಂಬಿಸಿ ಕೊಳ್ಳದೆ ಸಹಾಯ ಮಾಡುವುದೇ ಮಾನವ ಧರ್ಮವೆಂದು ಹೇಳಿದರು.


ರೋಟರಿಯನ್ ಸುಧಾಕರ್ ಮಾತನಾಡಿ, ರೋಟರಿ ಕ್ಲಬ್ ವತಿಯಿಂದ ಎಲ್ಲಾ ವರ್ಗದ ಜನರಿಗೆ ಸೌಲಭ್ಯ ತಲುಪಿಸುವ ಕಾರ್ಯ ನಡೆಯುತ್ತಿದೆ. ಇದರ ಪರಿಣಾಮವಾಗಿ ಸಮಾಜದಲ್ಲಿ ಜೀವನ ನಡೆಸಲು ಅವಕಾಶ ಸಿಕ್ಕಂತಾಗಿದೆ ಎಂದರು.ಈ ವೇಳೆ ಗಣ್ಯರು ಸತ್ಯಸಾಯಿ ವೃದ್ದಾಶ್ರಮದ ಸದಸ್ಯರೊಂದಿಗೆ ರೋಟರಿ ಜೋನ್ ಗವರ್ನರ್ ಎಚ್.ರಾಮಚಂದ್ರಪ್ಪ ಅವರ ಜನ್ಮದಿನವನ್ನು ಆಚರಿಸಿ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಶಿಕ್ಷಣ ಜ್ಞಾನ ಪತ್ರಿಕೆ ಸಂಪಾದಕ ಎಸ್.ವಿ.ನಾಗರಾಜ್, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಕೋಲಾರ ರೋಟರಿ ಕ್ಲಬ್ ಅಧ್ಯಕ್ಷ ರಾಮಚಂದ್ರಗೌಡ, ಸತ್ಯಸಾಯಿ ವೃದ್ದಾಶ್ರಮ ವ್ಯವಸ್ಥಾಪಕಿ ಸುಲೋಚನಾ, ರೋಟರಿಯನ್ ಅಶ್ವಥ್, ಚಕ್ರವರ್ತಿ, ರೋಟರಿ ಕಾರ್ಯದರ್ಶಿ ಸುರೇಶ್, ಜೋಷನ್, ರೋಟರಿ ಬಂಗಾರಪೇಟೆ ಜೋನ್ ಅಧ್ಯಕ್ಷ ಎಲ್.ರಾಮಕೃಷ್ಣ, ಕೆಜಿಎಫ್ ರೋಟರಿ ಪ್ರೈಮ್ ಅಧ್ಯಕ್ಷ ಶೌಕತ್‌ವುಲ್ಲಾಖಾನ್, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code