ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಯಿಂದ ಸಾಗರದ ಶಾರದಾಂಬಾ ದೇವಸ್ಥಾನಕ್ಕೆ ಡಿ.ಡಿ.ವಿತರಣೆ.
(SHIVAMOGA): ಸಾಗರ ಪಟ್ಟಣದ ಚಾರೋಡಿ/ ಕೊಂಕಣಿ ಆಚಾರ್ ಸಮಾಜದವರ ಶ್ರೀ ಶಾರದಾಂಬಾ ದೇವಸ್ಥಾನದಲ್ಲಿ ಶೃಂಗೇರಿಯ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ನೇತೃತ್ವದಲ್ಲಿ ಜೂ. 23, 24ರಂದು ನಡೆಯಲಿರುವ ಪುನರ್ ಪ್ರತಿಷ್ಠಾಪನ ಮಹೋತ್ಸವ ಸೇರಿದಂತೆ ಹಲವು ಧಾರ್ಮಿಕ ಕಾರ್ಯಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಘಟಕದ ವತಿಯಿಂದ ಎರಡು ಲಕ್ಷ ರೂ.ಗಳ ಆರ್ಥಿಕ ಸಹಾಕಾರವನ್ನು ಮಂಗಳವಾರ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ತಾಲೂಕು ಯೋಜನಾಧಿಕಾರಿ ಶಾಂತಾ ನಾಯ್ಕ, ಕೆಲವೇ ದಿನದಲ್ಲಿ ಪಟ್ಟಣದ ಶಾರದಾಂಬಾ ದೇವಸ್ಥಾನದ ಅಮ್ಮನವರ ಪುನಃ ಪ್ರತಿಷ್ಟಾಪನೆ, ಕುಂಬಾಭಿಷೇಕ, ಸಹಸ್ರ ಮೋದಕ ಗಣಹವನ, ಮೊದಲಾದ ಧಾರ್ಮಿಕ ಕಾರ್ಯಗಳು ಅದ್ಧೂರಿಯಾಗಿ ಜರುಗಲಿದೆ. ಜತೆಯಲ್ಲಿ ಪ್ರಸಾದ ಕೊಠಡಿ, ಅರ್ಚಕರ ನಿವಾಸ, ಆಡಳಿತ ಕಚೇರಿ ಮತ್ತು ಶ್ರೀ ಶಾರದಾಂಬಾ ವಾಣಿಜ್ಯ ಸಂಕೀರ್ಣಗಳು ಲೋಕಾರ್ಪಣೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಸಂಘದ ವತಿಯಿಂದ ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುತ್ತಿರುವ ಈ ದೇವಸ್ಥಾನಕ್ಕೆ ಆರ್ಥಿಕ ಸಹಕಾರ ನೀಡಿದ್ದೇವೆ. ಜತೆಯಲ್ಲಿ ಕಾರ್ಯಕ್ರಮದಲ್ಲೂ ನಮ್ಮ ಕೈಲಾದ ಸಹಾಯವನ್ನು ಮಾಡುತ್ತೇವೆ ಎಂದು ಹೇಳಿದರು.
ಸಂಘದ ತಾಲೂಕು ಯೋಜನಾಧಿಕಾರಿ ಶಾಂತಾ ನಾಯ್ಕ ಹಾಗೂ ಹಲವು ಪದಾಧಿಕಾರಿಗಳು ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಿಗೆ ಎರಡು ಲಕ್ಷ ರೂ ಗಳ ಡಿ.ಡಿ. ಹಸ್ತಾಂತರಿಸಿದರು. ದೇವಸ್ಥಾನ ಆಡಳಿತದ ಮಂಡಳಿ ಅಧ್ಯಕ್ಷ ಕೆ.ವಿ.ಜಯರಾಮ್, ಪ್ರಮುಖರಾದ ಚಂದ್ರಶೇಖರ್, ರಾಘವೇಂದ್ರ ವಿ, ಕೆ. ಹರೀಶ್, ಕೃಷ್ಣಮೂರ್ತಿ, ಕುಮಾರ್, ಮಹೇಶ್ ಮೊದಲಾದ ಪದಾಧಿಕಾರಿಗಳು, ಧಮಸ್ಥಳ ಸಂಘದ ಹಲವು ಅಧಿಕಾರಿಗಳು ಹಾಜರಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ