ದೀಪಗಳ ಹಬ್ಬ ದೀಪಾವಳಿ, ಅಂದು ಇಂದು…!
(ARTICLE): ಕಾರ್ತಿಕ ಮಾಸದಲ್ಲಿ ಬರುವ ಈ ಹಬ್ಬ ಮಲೆನಾಡಿನಲ್ಲಿ ದೊಡ್ಡ ಹಬ್ಬ ಎಂದೇ ಕರೆಸಿಕೊಳ್ಳುತ್ತದೆ. ದೀಪಾವಳಿ ಎಂದರೆ ಅದೇನೋ ಸಂಭ್ರಮ, ಬದುಕ ಬೆಳಗುವ ಹಬ್ಬ, ಅಂಧಕಾರದಿಂದ ಬೆಳಕಿನೆಡೆಗೆ ಕರೆದೊಯ್ಯುವ ವರ್ಷದ ಹಬ್ಬ. ಎಲ್ಲೆಡೆ ಬೆಳಕು ಹಸಿರಾದ ತೋಟ ಗದ್ದೆಗಳು, ನೋಡಲು ಕಂಗಳು ಸಾಲದು.
ಅಂದಿನ ದೀಪಾವಳಿ ಎಂದರೆ ಯಾರಿಗೆ ನೆನಪಿಲ್ಲ, ಹಳ್ಳಿಯ ಹಬ್ಬಕ್ಕೂ ನಗರದ ಹಬ್ಬಕ್ಕೂ ವ್ಯತ್ಯಾಸವಿದೆ. ನಾನೀಗ ಹಳ್ಳಿಯ ಅಂದಿನ ದೀಪಾವಳಿ ಬಗ್ಗೆ ಸ್ವಲ್ಪ ವಿವರಿಸುತ್ತೇನೆ. ದೀಪಾವಳಿ ಬರುವ ಎರಡು ಮೂರು ವಾರಗಳ ಮುಂಚೆಯೇ ತಯಾರಿ ಪ್ರಾರಭವಾಗುತ್ತಿತ್ತು. ಮನೆಯನ್ನು ಶುಭ್ರಗೊಳಿಸುವುದು, ಬಟ್ಟೆ ಪಾತ್ರೆಗಳನ್ನು ಶುಚಿಗೊಳಿಸುವುದು. ಹೀಗೆ ಕೆಲಸಗಳು ಆರಂಭ. ಮನೆಯಲ್ಲಿ ಸಂತೋಷದ ವಾತಾವರಣ. ಹಬ್ಬ ಹತ್ತಿರ ಸಮೀಪಿಸುತ್ತಿದ್ದಂತೆ ಮನೆಯ ಹೆಂಗಳೆಯರಿಗೆ ಅಡುಗೆ ಮನೆಯಲ್ಲಿ ಪುರುಸೊತ್ತಿಲ್ಲದ ಕೆಲಸ. ಹಬ್ಬಕ್ಕೆ ಸಿಹಿ ಮಾಡುವುದು, ಬಗೆ ಬಗೆಯ ಖಾದ್ಯ ತಯಾರಿಸುವುದು. ಅಂದು ಮನೆ ಎಂದರೆ ಮನೆಗೊಂದೇ ಮಾಡುವ ಸಿಹಿ, ಖಾದ್ಯಗಳಲ್ಲ! ಮನೆಯ ಹೆಣ್ಣು ಮಕ್ಕಳು ಬಂದಾಗ ಅವರಿಗೆ ಕೊಡಲು, ನೆಂಟರ ಮನೆಗೆ ಕೊಡಲು, ತವರು ಮನೆಗೆ ಹೋಗುವಾಗ ಅಲ್ಲಿಗೆ ತೆಗೆದುಕೊಂಡು ಹೋಗುವುದು ಹೀಗೆ ಸಾಕಷ್ಟು….. ಹಾಗಾಗಿ ಜಾಸ್ತಿ ಮಾಡುವುದು ಅನಿವಾರ್ಯ. ಜಾಸ್ತಿ ಮಾಡುವುದು ಸಂಭ್ರಮವೂ ಹೌದು, ತುಂಬು ಕುಟುಂಬದಲ್ಲಿ ಕೈ ಜೋಡಿಸಿದರೆ ೧೦ ಕೈಗಳು ಇರುತ್ತಿದ್ದವು. ಮಾಡಲು ಬೇಸರವಿಲ್ಲದೆ ಮಾಡುತ್ತಿದ್ದರು. ಗಂಡಸರಿಗೆ ಆಯುಧ ಪೂಜೆಯ ಸಂಭ್ರಮ, ಕೃಷಿ ಸಂಬಂಧಿತ ಆಯುಧಗಳು, ಹಾಗೆಯೇ ಕಾರು, ಬೈಕುಗಳು, ಉಗ್ರಾಣ ಹೀಗೆ ಇವೆಲ್ಲವನ್ನೂ ಶುಚಿಗೊಳಿಸಿ ಪೂಜೆಗೆ ತಯಾರಿ ಮಾಡಿಕೊಳ್ಳುವುದು. ಮಕ್ಕಳು ಮನೆಯಲ್ಲಿ ಓಡಾಡಿಕೊಂಡು ಎಲ್ಲೆಡೆ ಲವಲವಿಕೆಯಿಂದ ಇರುವುದು ಹಬ್ಬದ ಸಂಭ್ರಮಕ್ಕೆ ಸೇರುವ ಸಂತೋಷದ ವಾತಾವರಣ.
ದೀಪಾವಳಿ ಹಬ್ಬ ಒಂದೇ ದಿನವಲ್ಲ. ಮೂರು ದಿನಗಳ ಮಹಾ ಹಬ್ಬ. ಅಮವಾಸ್ಯೆಯ ಲಕ್ಷ್ಮೀ ಪೂಜೆಯಿಂದ ಶುರುವಾಗಿ, ಗಂಗೆ ಪೂಜೆ, ಬಲೀಂದ್ರನ ಪೂಜೆ, ಗೋಪೂಜೆ, ಆಯುಧ ಪೂಜೆ, ಸುತ್ತು ಪೂಜೆ, ದೀಪಗಳ ಸಂಭ್ರಮದ ದೀಪಾವಳಿ. ಗೋಪೂಜೆ ಎಂದರೆ ಕೊಟ್ಟಿಗೆಗೆ ಬಣ್ಣ ಬಳಿದು ದನ ಕರುಗಳಿಗೆ ಸ್ನಾನ ಮಾಡಿಸಿ ಬಣ್ಣ ಬಳಿದು ಅವುಗಳಿಗೆ ಹೊಸ ಗಗ್ರ ಕಟ್ಟಿ ಹೀಗೆ ಒಂದಾ ಎರಡಾ!
ಗಂಗೆ ಪೂಜೆ, ಬಲೀಂದ್ರನ ಕೂರಿಸುವುದು, ಹಾಗೆಯೇ ಹಲವು ಪೂಜೆಗಳು, ಗೋಪೂಜೆ, ದನಗಳನ್ನು ಬಿಡುವುದು, ಊರಲ್ಲಿ ಸಂಭ್ರಮದ ವಾತಾವರಣ, ಎಲ್ಲೆಲ್ಲೂ ಹಬ್ಬದ ಕಳೆ, ನಮ್ಮೂರಿನಲ್ಲಿ ಹಬ್ಬದ ದಿನ ಗೋಪೂಜೆಯ ನಂತರ ಗದ್ದೆಗಳಿಗೆ ಹೋಗಿ ಭತ್ತದ ತೆನೆಗಳನ್ನು ತಂದು ದೇವಸ್ಥಾನಕ್ಕೆ ಹೋಗಿ ಪೂಜೆ ಹಣ್ಣು ಕಾಯಿ ಮಾಡಿಸಿಕೊಂಡು, ಮನೆಗೆ ಬಂದು ಸುತ್ತು ಪೂಜೆ ( ಆಯುಧ ಪೂಜಾ) ಮಾಡಿ ಹಬ್ಬದೂಟ ಸವಿಯುವುದು. ಹಾಗೆಯೇ ಸಂಜೆ ಬಲೀಂದ್ರನ ಬಿಡುವುದು ಜೊತೆಗೆ ದೊಂದಿಗಳನ್ನು ಹಚ್ಚಿ ತೋಟದಲ್ಲಿ ಬೆಳಗುವುದು ಹಾಗೆಯೇ ಮನೆಗಳಲ್ಲಿ ದೀಪಗಳನ್ನು ಬೆಳಗಿ ಬದುಕ ಬೆಳಗುವ ಹಬ್ಬದ ಸಾರ್ಥಕತೆಗೆ ಸಾಕ್ಷಿಯಾಗುವುದು. ಆಕಾಶಬುಟ್ಟಿಗಳು ದೀಪಾವಳಿಯ ವಿಶೇಷ ಆಕರ್ಷಣೆಗಳು, ನಮ್ಮ ಊರಿನಲ್ಲಿ ದೀಪಾವಳಿಯ ದಿನದಿಂದ ಆರಂಭವಾಗಿ ಚಂಪಾ ಷಷ್ಠಿ ವರೆಗೂ ದೇವಸ್ಥಾನದಲ್ಲಿ ದಿನಾ ಸಾಯಂಕಾಲ ಪ್ರತೀ ಮನೆಯ ಕಾರ್ತಿಕ ದೀಪೋತ್ಸವ. ಅಕ್ಕ ಪಕ್ಕದ ಮನೆಯ ಪೂಜೆ, ಕೇರಿಯ ಎಲ್ಲರೂ ಅವರವರ ಮನೆಯ ಪೂಜೆಯ ದಿನ ಊರನ್ನೇ ಕರೆದಿದ್ದೂ ಉಂಟು. ದೇವಸ್ಥಾನದಲ್ಲಿ ದೀಪಗಳನ್ನು ಬೆಳಗಿ, ಪೂಜೆ ಮಾಡಿ, ಪ್ರಸಾದವಾಗಿ ಪಂಚ ಕಜ್ಜಾಯ, ಹುಸುಳಿ, ಕೋಸಂಬರಿ ಹೀಗೆ ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ಪ್ರಸಾದ. ಇಂಥಹ ಸಂಭ್ರಮಗಳು ಒಂದೋ ಎರಡೋ. ಒಟ್ಟಿನಲ್ಲಿ ಹಬ್ಬ ಎಂದರೆ ಅಷ್ಟು ಹುರುಪು.
ಹಬ್ಬದ ಮರುದಿನ ಊರ ಮಕ್ಕಳೆಲ್ಲಾ ಸೇರಿ ಹತ್ತು ಹಲವು ಆಟಗಳನ್ನು ಆಡುವುದು. ಊರ ತುಂಬಾ ಮಕ್ಕಳು, ಗುರಿಗಾಯಿ, ಕ್ರಿಕೆಟ್ ಇತ್ಯಾದಿ ಆಟಗಳನ್ನು ಆಡುವುದು ಹಬ್ಬದ ಮೆರುಗನ್ನು ಹೆಚ್ಚಿಸುತ್ತಿತ್ತು.
ಇಂದಿನ ಹಬ್ಬದ ಬಗ್ಗೆ ಹೇಳುವುದಾದರೆ ಹಬ್ಬ ಎನ್ನುವ ಸಂಭ್ರಮ ಇದ್ದೇ ಇದೆ. ಆದರೆ ಆಧುನಿಕತೆಯ ಸ್ಪರ್ಶ ಹಬ್ಬಕ್ಕೂ ತಟ್ಟಿದೆ ಎಂದರೆ ತಪ್ಪಿಲ್ಲ. ಊರಿನ ಪ್ರತೀ ಮನೆಯ ಮಕ್ಕಳೂ ಮಹಾನಗರಗಳಲ್ಲಿ ಓದು, ಕೆಲಸ ಮಾಡುವುದರಿಂದ ಮಕ್ಕಳು ಹಬ್ಬಕ್ಕೆ ಬಂದರೇ ಹೆಚ್ಚು ಅನ್ನುವ ಹಾಗಾಗಿದೆ. ಅದರ ಮಧ್ಯೆ ಈ ಬಸ್ಸುಗಳ ಸಮಸ್ಯೆ, ಹಬ್ಬದ ಸಂದರ್ಭದಲ್ಲಿ ಈಗ ಅವರು ಹೇಳಿದ್ದೇ ರೇಟು. ಅದರ ಸಲುವಾಗಿ ಹಲವರು ಬರದೇ ಇರುವುದೂ ಉಂಟು. ಜೊತೆಗೆ ಕೆಲಸ, ಕಾಲೇಜಿನಲ್ಲಿ ರಜೆ ಇಲ್ಲದಿರುವುದು ಇತ್ಯಾದಿ ಕಾರಣಗಳು. ದೊಡ್ಡ ಹಬ್ಬ ಈಗ ಬೇರೆ ಆಯಾಮ ಪಡೆದುಕೊಳ್ಳುತ್ತಾ ಇದೆ. ಅವರವರ ಅನುಕೂಲಕ್ಕೆ ತಕ್ಕಂತೆ ಆಚರಿಸಲ್ಪಡುತ್ತಿದೆ. ಮನೆಯಲ್ಲಿ ಮಾಡುವ ಹೋಳಿಗೆಗಳು ಈಗ ಅಂಗಡಿಯ ಹೋಳಿಗೆಗಳಾಗಿ ಮಾರ್ಪಟ್ಟಿದೆ, ಯಾಕೆಂದರೆ ತುಂಬು ಕುಟುಂಬ ಈಗ ಚಿಕ್ಕ ಚಿಕ್ಕ ಕುಟುಂಬಗಳಾಗಿದೆ. ಹಲವು ಕಡೆ ಗೋಪೂಜೆಯು ಗೋವಿನ ಮೂರ್ತಿಯ ಪೂಜೆಯಾಗಿ ಪೂಜಿಸಲ್ಪಡುತ್ತಿದೆ. ಬೆಳಗುವ ಹಣತೆಗಳು ಎಲೆಕ್ಟ್ರಿಕ್ ದೀಪಗಳಾಗಿ ಎಲ್ಲವನ್ನೂ ಸುಲಭ ಮಾಡುವ ಸಾಧನವಾಗಿದೆ. ಹಬ್ಬದ ದಿನ ಮನೆ ಮನೆಗೆ ಹೋಗಿ ಸಂಭ್ರಮಿಸುವುದು ಇಂದು ವಾಟ್ಸಾಪ್ ಫೇಸ್ಬುಕ್ ಗಳಲ್ಲಿ ಪೋಸ್ಟ್ ರೀತಿ ಒಬ್ಬರಿಂದ ಇನ್ನೊಬ್ಬರಿಗೆ ತಲುಪುತ್ತಿದೆ. ಹಿಂದೆ ಹಬ್ಬದ ಮರುದಿನ ಹೆಣ್ಣು ಮಕ್ಕಳು ಮನೆಗೆ ಬರುವ ಪದ್ಧತಿ ಇತ್ತು. ಅದೆಲ್ಲಾ ಈಗ ಅನುಕೂಲಕ್ಕೆ ತಕ್ಕಂತೆ ಆಗಿ ಹೋಗಿದೆ. ಹಬ್ಬದ ದಿನವೇ ಹೊರಡುವ ಮಕ್ಕಳು, ಹೋಳಿಗೆಯ ರುಚಿಯನ್ನು ಯಾಂತ್ರಿಕ ಜೀವನದಲ್ಲಿ ಸವಿಯುವ ಹಾಗೆ ಆಗಿದೆ. ಯಾವುದೂ ತಪ್ಪಲ್ಲ. ಹಬ್ಬದ ಸಂಭ್ರಮ ಇದ್ದೇ ಇದೆ. ಬದಲಾವಣೆ ಜಗದ ನಿಯಮ, ಅಲ್ಪ ಸ್ವಲ್ಪ ಬದಲಾವಣೆಯನ್ನು ಒಪ್ಪಿಕೊಂಡು ನಮ್ಮ ಸಂಪ್ರದಾಯ ಬಿಡದೇ, ಹಬ್ಬ ಹರಿದಿನಗಳನ್ನು ಮಾಡಿದರೆ ಹಿರಿಯರಿಂದ ಬಂದ ಈ ಸಂಸ್ಕಾರ ಉಳಿಯುತ್ತದೆ. ಎಲ್ಲಾ ಆಚರಣೆಗಳಿಗೆ ಅದರದೇ ಆದ ಅರ್ಥಗಳಿದೆ. ಅದನ್ನು ಅರಿತು ಬಾಳಿದರೆ ಬದುಕು ಬಂಗಾರವಾಗುತ್ತದೆ. ಹಬ್ಬಗಳು ನಮ್ಮ ಸಂಪ್ರದಾಯ ಉಳಿಸುವ ದ್ಯೋತಕಗಳು. ಈಗ ಬರುವ ದೀಪಾವಳಿ ನಮ್ಮೆಲ್ಲರ ಬದುಕನ್ನು ಬೆಳಗಲಿ. ದೀಪಗಳ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.
ಗುರುದತ್ ಬಿ ಎಂ: ಬೆಳೆಯೂರು