ಕೋಲಾರನ್ಯೂಸ್

ಯಾವುದೇ ಕಾರಣಕ್ಕೂ ಬಡ ಮಕ್ಕಳಿಗೆ ಅನ್ಯಾಯ ಮಾಡಬೇಡಿ.

ಯಾವುದೇ ಕಾರಣಕ್ಕೂ ಬಡ ಮಕ್ಕಳಿಗೆ ಅನ್ಯಾಯ ಮಾಡಬೇಡಿ.

(KOLARA): ಕೆಜಿಎಫ್-ಯಾವುದೇ ಕಾರಣಕ್ಕೂ ಬಡ ಮಕ್ಕಳಿಗೆ ಅನ್ಯಾಯ ಮಾಡಬೇಡಿ, ಮಕ್ಕಳಲ್ಲಿ ಭಿನ್ನಾಭಿಪ್ರಾಯವನ್ನು ಮೂಡಿಸಬೇಡಿ, ಎಲ್ಲ ಮಕ್ಕಳನ್ನು ಒಂದಾಗಿ ಕಾಣಬೇಕು ಎಂದು ಶಾಸಕಿ ರೂಪಕಲಾ ಶಶಿಧರ್ ನಗರದ ಮೊರಾರ್ಜಿ ದೇಸಾಯಿ ವಸತಿ ನಿಲಯದ ಶಿಕ್ಷಕರಿಗೆ ಖಡಕ್ ಸೂಚನೆ ನೀಡಿದರು.
ಮಾಲೂರು ತಾಲೂಕಿನ ಯಲುವಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶೌಚ ಗುಂಡಿ ಸ್ವಚ್ಚತೆಗೆ ಶಾಲಾ ಮಕ್ಕಳನ್ನು ಬಳಸಿದ ಘಟನೆ ಬೆನ್ನಲ್ಲೇ ನಗರದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಮಕ್ಕಳ ಯೋಗಕ್ಷೇಮ ವಿಚಾರಿಸಿದ ಬಳಿಕ ಪ್ರತ್ಯೇಕವಾಗಿ ಶಿಕ್ಷಕರ ಸಭೆಯನ್ನು ನಡೆಸಿದರು.


ಮಕ್ಕಳ ಬಳಿ ಸೌಜನ್ಯದಿಂದ ವರ್ತಿಸಿ, ಮಕ್ಕಳ ಮೇಲೆ ದಬ್ಬಾಳಿಕೆ ಮಾಡಬೇಡಿ, ಮಕ್ಕಳ ವ್ಯಾಸಂಗಕ್ಕೆ ಉತ್ತಮ ಪರಿಸರವನ್ನು ನಿರ್ಮಾಣ ಮಾಡಿ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಾಗಿರುವುದರಿಂದ ಮತ್ತು ಭಾವೀ ಭಾರತ ನಿರ್ಮಾತೃಗಳಾಗಿರುವುದರಿಂದ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಶ್ರಮವಹಿಸಿಬೇಕೆಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಸಿಬ್ಬಂದಿಗಳ ಬಿನ್ನಾಭಿಪ್ರಾಯಗಳು ಮಕ್ಕಳ ಮೇಲೆ ಪರಿಣಾಮ ಬೀರಲಿವೆ, ಸಿಬ್ಬಂದಿಗಳು ಇದಕ್ಕೆ ಅವಕಾಶ ಮಾಡಿಕೊಡಬಾರದು. ಇದರಿಂದ ಶಾಲಾ ಕಾಲೇಜಿನ ವಾತಾವರಣ ಕೆಡಲಿದೆ, ಬಡ ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆಯೂ ಗಮನವನ್ನು ಹರಿಸಬೇಕು. ಏನೇ ಸಮಸ್ಯೆಗಳು ಇದ್ದರೂ ನಮ್ಮ ಗಮನಕ್ಕೆ ತರಬೇಕೆಂದು ಪ್ರಾಂಶುಪಾಲ ನಾಗರಾಜ್ ಅವರಿಗೆ ಸೂಚನೆ ನೀಡಿದರು.
ವಸತಿ ನಿಲಯದಲ್ಲಿನ ಮಕ್ಕಳ ಜೊತೆ ಸಂವಾದ ನಡೆಸಿ, ಊಟವನ್ನು ಕಾಲ ಕಾಲಕ್ಕೆ ಕೊಡುತ್ತಿದ್ದಾರಾ, ಕೊಡುವ ಆಹಾರ ಗುಣಮಟ್ಟದಿಂದ ಕೂಡಿದೆಯೇ, ಶುದ್ದ ಕುಡಿಯುವ ನೀರಿನ ಲಭ್ಯತೆ ಇದೆಯೇ, ಪುಸ್ತಕ, ಲೇಖನಿ ಸಾಮಗ್ರಿಗಳನ್ನು ನೀಡಿದ್ದಾರೆಯೇ, ಅಗತ್ಯವಿರುವ ಸಮವಸ್ತ್ರ, ವಸತಿ ನಿಲಯದಲ್ಲಿ ಸ್ವಚ್ಚತೆ, ಮಕ್ಕಳಿಗೆ ನೀಡುವ ಹಾಸಿಗೆ ಹೊದಿಕೆ ಇತ್ಯಾದಿಗಳ ಬಗ್ಗೆ ವಿಚಾರಿಸಿದರು. ಅಲ್ಲದೇ ಹೆಣ್ಣು ಮಕ್ಕಳ ಬಳಿ ತೆರಳಿ ವಸತಿ ನಿಲಯದಲ್ಲಿ ಹೆಣ್ಣು ಮಕ್ಕಳಿಗೆ ಅಗತ್ಯವಿರುವ ಪ್ಯಾಡ್ ನೀಡಲಾಗುತ್ತಿದ್ದೆಯೇ ಇಲ್ಲವೆ ಎಂದು ಸೌಲಭ್ಯಗಳು ಕುರಿತು ಮಾಹಿತಿಯನ್ನು ಪಡೆದುಕೊಂಡರು.

ಶಾಸಕರು ವಸತಿ ಶಾಲೆಗೆ ಭೇಟಿ ನೀಡಿ ಮಕ್ಕಳನ್ನು ವಿಚಾರಣೆ ಮಾಡಿದ ವೇಳೆ ಮಕ್ಕಳಿಂದ ವಸತಿ ನಿಲಯದ ಬಗ್ಗೆ ಉತ್ತಮ ಪ್ರತಿಕ್ರಿಯೆ ಕೇಳಿ ಬಂತು. ಊಟದ ವಿಚಾರದಲ್ಲಿ ವಸತಿ ನಿಲಯದ ಮೆನು ಪ್ರಕಾರ ಊಟವನ್ನು ನೀಡುತ್ತಿರುವುದಾಗಿ ವಿದ್ಯಾರ್ಥಿಗಳು ತಿಳಿಸಿದರು.
ವಸತಿ ನಿಲಯದ ಸ್ವಚ್ಚತೆ ಮತ್ತು ಉಪನ್ಯಾಸಕರ ಪಾಠಗಳ ಬಗ್ಗೆಯೂ ವಿದ್ಯಾರ್ಥಿಗಳು ಉತ್ತಮ ಪ್ರತಿಕ್ರಿಯೆ ನೀಡಿದರು, 2022-23 ನೇ ಸಾಲಿನ 10 ನೇ ತರಗತಿಯ ಫಲಿತಾಂಶ ಶೇ.100 ರಷ್ಟು ಬಂದಿರುವುದಾಗಿ ತಿಳಿಸಿದರು, 2023-24 ನೇ ಸಾಲಿನಲ್ಲಿ ಒಟ್ಟು ವಸತಿ ಶಾಲೆಯಲ್ಲಿ 400 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈ ಬಾರಿಯೂ ಶೇಕಡಾ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆಯಲು ಎಲ್ಲ ರೀತಿಯ ಕ್ರಮಗಳನ್ನು ವಹಿಸಿರುವುದಾಗಿ ಶಿಕ್ಷಕರು ತಿಳಿಸಿದರು.
ಪೌರಾಯುಕ್ತ ಪವನ್‌ಕುಮಾರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code