ಡಾ.ಅಂಬೇಡ್ಕರ್ ರವರು ಬಡವ, ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಏಳಿಗೆಗಾಗಿ ಸಂವಿಧಾನವನ್ನು ರಚಿಸಿದ್ದಾರೆ.
(KOLARA): ಬಂಗಾರಪೇಟೆ :ಡಾ.ಬಾಬಾ ಸಾಹೇಬ ಅಂಬೇಡ್ಕರ್ ರವರು ಬಡವ, ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಏಳಿಗೆಗಾಗಿ ಮತ್ತು ಸಮಾನತೆಗಾಗಿ ಸಂವಿಧಾನವನ್ನು ರಚಿಸಿದ್ದಾರೆ, ಇದರ ಸೌಲಭ್ಯವನ್ನು ಪಡೆದ ಬಹುತೇಕರು ಸಮಾಜದ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ, ಇದರಿಂದ ಜಾತಿ ವ್ಯವಸ್ಥೆ ಮತ್ತು ಅಸಮಾನತೆ ಹಂತ ಹಂತವಾಗಿ ಕಣ್ಮರೆಯಾಗುತ್ತಿವೆ ಎಂದು ಶಾಸಕ ಎಸ್.ಎನ್ ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ಆಯೋಜಿಸಲಾಗಿದ್ದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಾ.ಬಿ ಆರ್ ಅಂಬೇಡ್ಕರ್ ರವರು ರಚಿಸಿದಂತಹ ಬೃಹತ್ ಲಿಖಿತ ಸಂವಿದಾನದಲ್ಲಿ ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಲೋಕತಾಂತ್ರಿಕ ಗಣತಂತ್ರವನ್ನಾಗಿ ರೂಪಿಸಿದ್ದಾರೆ, ಹಾಗೂ ನಮ್ಮ ಮೂಲಭೂತ ಹಕ್ಕುಗಳಾದಂತಹ ಸ್ವಾತಂತ್ರ್ಯ, ಸಾಮಾಜಿಕ ಸಾಮರಸ್ಯ ನೀಡುವುದರ ಮೂಲಕ ಇಡೀ ವಿಶ್ವದಲ್ಲೇ ದೇಶದ ಘನತೆಯನ್ನು ಹೆಚ್ಚಿಸಿದ್ದಾರೆ, ಹಾಗೂ ಜಾತಿ -ಧರ್ಮ ರಹಿತವಾಗಿ ಜೀವನದ ಬೆಸುಗೆಗೆ ಆದ್ಯತೆಯನ್ನು ನೀಡಿದ್ದಾರೆ, ಈ ನೆಲೆಗಟ್ಟಿನಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯು ಸಾಮರಸ್ಯದಿಂದ ಜೀವಿಸುವಂತಹಾಗಬೇಕು ಎಂದರು.
ದೇಶದ ಪ್ರಗತಿಗೆ ಕಾಂಗ್ರೆಸ್ ಸರ್ಕಾರದ ಕೊಡುಗೆ ಅನನ್ಯವಾದುದ್ದು:
ದಿವಾಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ರವರು ಗರೀಬಿ ಹಠಾವ್ ಹಾಗೂ 20 ಅಂಶಗಳ ಕಾರ್ಯಕ್ರಮವನ್ನು ಜಾರಿಗೆ ತಂದು ಬಡವರ ದಲಿತರ ರೈತರ ಪಾಲಿಗೆ ಆಸರೆಯಾದರು. ಹಾಗೂ ಇಂದು ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಪ್ರಕಾಶಮಾನವಾಗಿ ಬೆಳಗಳು ದಿವಂಗತ ರಾಜೀವ್ ಗಾಂಧಿ ಕೊಡುಗೆ ಅವಿಸ್ಮರಣಯ, ಅವರ ದೂರದೃಷ್ಟಿಯ ಪರಿಕಲ್ಪನೆಯಿಂದಾಗಿ ಗಣಕಯಂತ್ರ ಬಳಕೆ ಹಾಗೂ 2ಜಿ 3ಜಿ ಗಳಂತಹ ಅಂತರ್ಜಾಲ ವ್ಯವಸ್ಥೆಯಲ್ಲಿ ಮುನ್ನುಗ್ಗುತ್ತಿವೆ ಹಾಗೂ ನಿಕಟಪೂರ್ವ ಪ್ರಧಾನಿಯಾದ ಮನಮೋಹನ್ ಸಿಂಗ್ ರವರು ಬಡ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಆರ್. ಟಿ. ಇ.ಯೋಜನೆಯನ್ನು ಜಾರಿಗೆ ತಂದು ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ.ಹಾಗೂ ರೈತರಿಗೆ 73ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದರು, ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಐದು ಗ್ಯಾರೆಂಟಿ ಯೋಜನೆಗಳನ್ನು ತಂದು ರಾಜ್ಯವನ್ನು ಪ್ರಗತಿಯತ್ತ ಸಾಗುವಂತೆ ಮಾಡಿದ್ದಾರೆ ಎಂದರು.
ಶಿಕ್ಷಣ ಮತ್ತು ಆರೋಗ್ಯ ದೇಶದ ಪ್ರಗತಿಗೆ ನಾಂದಿ:
ಉತ್ತಮ ಆರೋಗ್ಯದಿಂದ ಸದೃಢ ಮಾನವ ಸಂಪನ್ಮೂಲ ಕ್ರೂಡೀಕರಣವಾಗುತ್ತದೆ ಮತ್ತು ಶಿಕ್ಷಣದಿಂದ ಉತ್ತಮ ವ್ಯಕ್ತಿತ್ವದೊಂದಿಗೆ ದೇಶ ಸಾಮಾಜಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಪ್ರಗತಿಪಥದಲ್ಲಿ ಸಾಗಲು ಸಹಕಾರಿಯಾಗಿದೆ, ಈ ಹಿನ್ನೆಲೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು ದೇಶದ ಅಭಿವೃದ್ಧಿಗೆ ನಾಂದಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕ್ಷೇತ್ರದ ಜನರ ಋಣ ತೀರಿಸಲು ಬದ್ಧ:
ಕ್ಷೇತ್ರದ ಜನರ ಆಶೀರ್ವಾದದಿಂದ 4 ಬಾರಿ ಪುರಸಭೆ ಸದಸ್ಯನಾಗಿ , ಅಧ್ಯಕ್ಷನಾಗಿ ಹಾಗೂ 3 ಭಾರಿ ಶಾಸಕನಾಗಿ ಕ್ಷೇತ್ರದ ಜನತೆಯ ಋಣ ತೀರಿಸುವ ನಿಟ್ಟಿನಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿದ್ದೇನೆ ಅತೀ ಶೀಘ್ರದಲ್ಲಿ ಬಿ.ಇ,ಓ, ರೆಷ್ಮೇ, ಹಾಗೂ ಕೃಷಿ ಇಲಾಖೆಗೆ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗುವುದು, ಕಾಮಸಮುದ್ರ ಮತ್ತು ತೊಪ್ಪನಹಳ್ಳಿ ಗ್ರಾಮದಲ್ಲಿ ವಸತಿ ನಿಲಯ, ಪಟ್ಟಣದಲ್ಲಿ ಬಸ್ಸ್ ನಿಲ್ದಾಣ, ಒಳಾಂಗಣ ಕ್ರೀಡಾಂಗಣವನ್ನು 6 ತಿಂಗಳ ಒಳಗಾಗಿ ಪೂರ್ಣಗೊಳಿಸಲಾಗುವುದು, 20 ಕೋಟಿ ವೆಚ್ಚದಲ್ಲಿ ಯರಗೋಳ್ ಜಲಾಶಯದ ಮೂಲಕ ದಿನದ 24 ಗಂಟೆ ನೀರು ಸರಬರಾಜು ಮಾಡಲು ಪೈಪ್ ಲೈನ್ ಕಾಮಗಾರಿ ನಡೆಯುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ ಉತ್ತಮ ಸಾಧನೆ ಮಾಡಿದ ಪತ್ರಕರ್ತರಾದ ವಿಷ್ಣು ಕುಮಾರ್.ವಿ ,ಪಿ,ಎಸ್,ಐ ಸುನೀಲ್, ಹೆಡ್ ಕಾನ್ಸ್ಟೇಬಲ್ ಸೀತಾರಾಮ ಸಿಂಗ್,ತೋಟಗಾರಿಗೆ ಇಲಾಖೆ ನಿರ್ದೇಶಕ ಶಿವಾರೆಡ್ಡಿ, ಸಮಾಜಕಲ್ಯಾಣ ಇಲಾಖೆ ಬಾನು, ಸಮಾಜ ಸೇವಕ ಬಾಬು, ರಫೀಕ್ ಇನ್ನಿತರರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಹಸೀಲ್ದಾರ್ ವೆಂಕಟೇಶಪ್ಪ, ಗ್ರೇಡ್ 2 ತಹಸೀಲ್ದಾರ್ ಗಾಯಿತ್ರಿ, ಪುರಸಭಾ ಅಧ್ಯಕ್ಷ ಗೋವಿಂದ ,ಉಪಾಧ್ಯಕ್ಷೆ ಚಂದ್ರವೇಣಿ ಮಂಜುನಾಥ್, ಇಓ ರವಿಕುಮಾರ್, ಕೃಷಿ ಇಲಾಖೆ ಅಧಿಕಾರಿ ಪ್ರತಿಭಾ, ತೋಟಗಾರಿಕೆ ಇಲಾಖೆ ಅಧಿಕಾರಿ ಶಿವಾರೆಡ್ಡಿ, ಸಿಡಿಪಿಓ ಮುನಿರಾಜು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅಂಜಲಿ ದೇವಿ, ಪೊಲೀಸ್ ಇನ್ಸ್ಪೆಕ್ಟರ್ ದಯಾನಂದ್, ಸಿ ಇ ಓ ಸತ್ಯನಾರಾಯಣ, ಬಿಇಓ ಗುರುಮೂರ್ತಿ, ಕೆಡಿಎ ಅಧ್ಯಕ್ಷ ಗೋಪಾಲರೆಡ್ಡಿ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ರಘುನಾಥ್, ಮೊದಲಾದವರು ಇದ್ದರು.
ವರದಿ: ವಿಷ್ಣು ಕೋಲಾರ