ಬಾಳೆಹೊನ್ನೂರು ದುರ್ಗಾದೇವಿ ನವರಾತ್ರಿ ಮಹೋತ್ಸವ ಸಂಪನ್ನ ಮೆರವಣಿಗೆಗೆ ಕಳೆಕಟ್ಟಿದ ಕಲಾತಂಡಗಳು| ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ
ಬಾಳೆಹೊನ್ನೂರು : ಇಲ್ಲಿನ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ದಸರಾ ಅಂಗವಾಗಿ ಪ್ರತಿಷ್ಠಾಪಿಸಿದ್ದ ದುರ್ಗಾದೇವಿ ವಿಗ್ರಹದ ಜಲಸ್ತಂಭನಾ ಶೋಭಾಯಾತ್ರೆಯು ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ಹತ್ತು ದಿನಗಳ ಪರ್ಯಂತ ದೇವಿ ಸನ್ನಿಧಿಯಲ್ಲಿ ಅರ್ಚಕರಿಂದ ತ್ರಿಕಾಲ ಪೂಜೆ, ಪೂಜಾ ಪಾರಾಯಣ, ಅಷ್ಟೋತ್ತರ ಕುಂಕುಮಾರ್ಚನೆ, ಸಹಸ್ರ ನಾಮಾರ್ಚನೆ, ಅಕ್ಷರಾಭ್ಯಾಸ, ಹೂವಿನಪೂಜೆ, ದುರ್ಗಾಹೋಮ, ಗಣಹೋಮಗಳು ಅರ್ಚಕ ಸುಬ್ರಹ್ಮಣ್ಯಭಟ್ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ನಡೆದಿತ್ತು. ಹತ್ತು ದಿನಗಳ ಕಾಲ ಪ್ರತಿನಿತ್ಯ ದುರ್ಗಾಮಂಟಪದಲ್ಲಿ ಮೂರು ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಅದಲ್ಲದೇ ಪ್ರತಿದಿನ ಸಂಜೆ ದುರ್ಗಾಮಂಟಪದಲ್ಲಿ ಆಯೋಜಿಸಿದ್ದ ಸುಗಮ ಸಂಗೀತ, ನೃತ್ಯ ರೂಪಕ, ಯಕ್ಷಗಾನ, ನಾಟಕ, ಜಾನಪದ ಸಂಗೀತ, ಭರತನಾಟ್ಯ, ಭಜನಾ ಸೇವೆ ಸೇರಿದಂತೆ ಮುಂತಾದ ಸಾಂಸ್ಕೃತಿಕ ಧರ್ಮಬಿಂಬಿತ ಕಾರ್ಯಕ್ರಮಗಳು ಭಕ್ತರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು. ಸಮಾರೋಪ ಸಮಾರಂಭದಲ್ಲಿ ಬಾಲಶಿವಯೋಗಿ ಸಿದ್ದಲಿಂಗ ದೇವರು ಅವರ ಆಶೀರ್ವಚನ ಭಕ್ತರ ಮನಃ ಪರಿವರ್ತನೆಗೆ ದಾರಿಯಾಯಿತು.
ಕಡೇ ದಿನವಾದ ಮಂಗಳವಾರ ಬೆಳಿಗ್ಗೆಯಿಂದಲೇ ದೇವಿ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ಸಂಪ್ರದಾಯಬದ್ಧವಾಗಿ ನಡೆದಿದ್ದು, ಮಧ್ಯಾಹ್ನ ಹದಿನೈದು ಸಾವಿರಕ್ಕೂ ಹೆಚ್ಚು ಜನ ಅನ್ನಸಂತರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತೃಪ್ತರಾದರು. ಬೆಳಿಗ್ಗೆ ಮೃತ್ಯಂಬಿಕ ಅಮ್ಮನವರ ವೇದಿಕೆಯಲ್ಲಿ ಹಿನ್ನೆಲೆ ಗಾಯಕರಾದ ಪುತ್ತೂರು ಜಗದೀಶ್ ಆಚಾರ್ಯ ನೇತೃತ್ವದಲ್ಲಿ ಸುಗಮ ಸಂಗೀತ ವೈಭವ ಕಾರ್ಯಕ್ರಮ ನಡೆಯಿತು.
ಮೆರವಣಿಗೆ ಮುಖ್ಯರಸ್ತೆಯಲ್ಲಿ ಸಾಗುತ್ತಿದ್ದಂತೆ ಅಂಗಡಿ ಮುಂಗಟ್ಟುಗಳ ಇಕ್ಕೆಲಗಳಲ್ಲಿ ನಿಂತು ಮೆರವಣಿಗೆಯ ಸವಿ ಸವಿದರು. ಶೋಭಾಯಾತ್ರೆಯಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಸಮಿತಿಯ ಪದಾಧಿಕಾರಿಗಳು ಬಿಳಿ ಪಂಚೆ, ಬಿಳಿ ಅಂಗಿ, ಕೇಸರಿ ಪೇಟ, ಶಾಲು ಹೊದ್ದು ಗಮನಸೆಳೆದರು. ಮೆರವಣಿಗೆಯಲ್ಲಿ 2೦ಕ್ಕೂ ಅಧಿಕ ಕಲಾ ತಂಡಗಳು ಭಾಗವಹಿಸಿ ಮೆರವಣಿಗೆಗೆ ಮೆರಗು ನೀಡಿದವು.
ಸಮಿತಿಯ ಅಧ್ಯಕ್ಷ ನಾಗೇಶ್ ಹೆಗ್ಡೆ, ಕಾರ್ಯಾಧ್ಯಕ್ಷ ವೈ.ಮೋಹನ್ಕುಮಾರ್, ಭಾಸ್ಕರ್ ವೆನಿಲ್ಲಾ, ಪ್ರಭಾಕರ್ ಪ್ರಣಸ್ವಿ, ಆರ್.ಡಿ.ಮಹೇಂದ್ರ, ಸೇರಿದಂತೆ ಸಮಿತಿಯ ಸದಸ್ಯರು ಮೆರವಣಿಗೆಯ ಮುಂಚೂಣಿಯಲ್ಲಿದ್ದರು. ಶೋಭಾ ಯಾತ್ರೆಯ ಬಳಿಕ ದುರ್ಗಾದೇವಿ ವಿಗ್ರವನ್ನು ಭದ್ರಾನದಿಯಲ್ಲಿ ವಿಸರ್ಜಿಸಲಾಯಿತು.
ಮೆರವಣಿಗೆ ಸುಸೂತ್ರವಾಗಿ ನಡೆಯಲಿ ಎಂಬ ಹಿನ್ನೆಲೆಯಲ್ಲಿ ಪಟ್ಟಣದ ವ್ಯಾಪ್ತಿಯಲ್ಲಿ ಮಂಗಳವಾರ ಮದ್ಯ ಮಾರಾಟ ನಿಷೇಧ ಮಾಡಲಾಗಿತ್ತು. ಮುಖ್ಯರಸ್ತೆಯಲ್ಲಿ ವಾಹನ ನಿಲುಗಡೆಗೆ ಬ್ರೇಕ್ ಹಾಕಲಾಗಿದ್ದು, ನೋ ಪಾರ್ಕಿಂಗ್ ಮಾಡಲಾಗಿತ್ತು. ಪಿಎಸ್ಐ ವಿ.ಟಿ.ದಿಲೀಪ್ಕುಮಾರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಆಯೋಜಿಸಲಾಗಿತ್ತು.
ಜಲಸ್ತಂಭನಾ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡ ತಂಡಗಳು
ಮಹಿಳೆಯರ ಮತ್ತು ಸ್ವ ಸಹಾಯ ಸಂಘಗಳ ಭಜನಾ ತಂಡ, ಛತ್ರಿ, ಚಾಮರ ತಂಡ, ಕೇರಳದ ಚಂಡೆ, ಹುಲಿ ವೇಷ, ಕೀಲುಕುದುರೆ ಗೊಂಬೆಗಳು, ಮಹಿಳೆಯರ, ಪುರುಷರ ಡೊಳ್ಳು, ಬೃಹತ್ ಶ್ರೀರಾಮನ ಮೂರ್ತಿ, ಶಿವ ಮತ್ತು ಅಘೋರಿಗಳು, ಮಹಿಳೆಯರ ಸಮೂಹ ಭಜನೆ, ಕೋಳಿ ನೃತ್ಯ. ನಂದಿಧ್ವಜ, ಮರಗೋಲು, ಹಲಗೆ ಓಲಗ ವಾದನ, ಕುಣಿತ ಭಜನೆ, ಗೂಳಿ ಮತ್ತು ಕಟ್ಟಪ್ಪ, ಕೇರಳದ ಭದ್ರ ಕಾಳಿ ನೃತ್ಯ, ಥೈಯ್ಯಂ ನೃತ್ಯ, ತಂಬೋಲ ನೃತ್ಯ, ನವಿಲು ನೃತ್ಯ, ಕಂಸಾಳೆ ಕುಣಿತ, ಕೊಂಬು ಕಹಳೆ.
ಮೃತ್ಯಂಬಿಕಾ ಅಮ್ಮನವರ ವಿಜಯ ದಶಮಿ ಉತ್ಸವ
ಬಾಳೆಹೊನ್ನೂರು : ಪಟ್ಟಣದ ಮೃತ್ಯಂಬಿಕಾ ಹಾಗೂ ಮಾರಿಕಾಂಬಾ ದೇವಸ್ಥಾನದ ವಿಜಯದಶಮಿ ಉತ್ಸವವು ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ವಿಜಯದಶಮಿ ಹಿನ್ನೆಲೆಯಲ್ಲಿ ಬೆಳಿಗ್ಗಿನಿಂದಲೇ ದೇವಾಲಯದಲ್ಲಿ ದೇವಿಗೆ ಹೂವಿನಪೂಜೆ, ಅಭಿಷೇಕ, ನೈವೇದ್ಯ, ಮಂಗಳಾರತಿ ಮತ್ತಿತರ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಬಳಿಕ ದೇವಾಲಯದಿಂದ ದೇವಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಮೂಲಕ ಪಟ್ಟಣದ ಮುಖ್ಯಬೀದಿಯಲ್ಲಿ ಕೊಂಡೊಯ್ದು ಭದ್ರಾನದಿಯಲ್ಲಿ ಗಂಗಾಪೂಜೆ, ಗಂಗಾಸ್ನಾನ ನೆರವೇರಿಸಲಾಯಿತು.
ಅಲ್ಲಿಂದ ಪುನಃ ಹೊರಟ ಉತ್ಸವ ದೇವಾಲಯದ ಆವರಣದಲ್ಲಿ ಸಮಾಪ್ತಿಗೊಂಡು ಅಂಬು ಹೊಡೆಯುವ ಸಾಂಪ್ರದಾಯಿಕ ಕಾರ್ಯಕ್ರಮ ನಡೆಯಿತು. ಬಳಿಕ ದೇವಾಲಯದ ಸುತ್ತಲೂ ದೇವರ ಉತ್ಸವ ಮೂರ್ತಿಗಳನ್ನು ವಿವಿಧ ವಾದ್ಯಗೋಷ್ಠಿಗಳೊಂದಿಗೆ ಪ್ರದಕ್ಷಿಣೆ ಹಾಕಿ ದೇವಸ್ಥಾನದ ಒಳ ಪ್ರವೇಶಿಸಿ ಪೂಜೆ ನೆರವೇರಿಸಲಾಯಿತು.
ಪ್ರಧಾನ ಅರ್ಚಕ ಕೆ.ಎಸ್.ಪ್ರಕಾಶ್ ಭಟ್ ಸಂಗಡಿಗರು ಧಾರ್ಮಿಕ ವಿಧಿಗಳ ನೇತೃತ್ವ ವಹಿಸಿದ್ದರು. ದೇವಸ್ಥಾನ ಸಮಿತಿಯ ಎಚ್.ಡಿ.ನಾಗೇಶ್ ಹೆಗ್ಡೆ, ಬಿ.ಕೆ.ಮಧುಸೂಧನ್, ಹಿರಿಯಣ್ಣ, ಮನುಕುಮಾರ್ ಸೇರಿದಂತೆ ದೊಡ್ಡಮನೆ ಕುಟುಂಬದವರು ಹಾಗೂ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಭಕ್ತರು ಭಾಗವಹಿಸಿದ್ದರು.