ಅ.3 ರಿಂದ ದುರ್ಗಾದೇವಿ ನವರಾತ್ರಿ ಪೂಜಾ ಮಹೋತ್ಸವ
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ಬಾಳೆಹೊನ್ನೂರಿನಲ್ಲಿ ಹತ್ತು ದಿನಗಳ ಪರ್ಯಂತ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ| ಉಡುಪಿ ಪೇಜಾವರ ಶ್ರೀ ಆಶೀರ್ವಚನ,
ಬಾಳೆಹೊನ್ನೂರು ಪಟ್ಟಣದ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ವತಿಯಿಂದ ಮಾರ್ಕಾಂಡೇಶ್ವರ ದೇಗುಲದ ಆವರಣದ ದುರ್ಗಾಮಂಟಪದಲ್ಲಿ 15ನೇ ವರ್ಷದ ನವರಾತ್ರಿ ಮಹೋತ್ಸವವನ್ನು ಅ.3ರಿಂದ 12ರವರೆಗೆ ಆಯೋಜಿಸಲಾಗಿದೆ ಎಂದು ಸಮಿತಿಯ ಕಾರ್ಯಾಧ್ಯಕ್ಷ ಬಿ.ಚನ್ನಕೇಶವ ಬರಗಲ್ ತಿಳಿಸಿದರು.
ಪಟ್ಟಣದ ಜೇಸಿ ವೃತ್ತದ ಗಣಪತಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಆಹ್ವಾನ ಪತ್ರಿಕೆ, ಕರಪತ್ರಗಳನ್ನು ಭಾನುವಾರ ಬಿಡುಗಡೆಗೊಳಿಸಿ ಮಾಹಿತಿ ನೀಡಿದ ನೀಡಿರುವ ಅವರು, ಕಳೆದ ಹದಿನಾಲ್ಕು ವರ್ಷಗಳಿಂದ ನಡೆಯುತ್ತಿರುವ ದುರ್ಗಾ ಮಹೋತ್ಸವವು ಈ ವರ್ಷ ಹದಿನೈದನೇ ವರ್ಷಕ್ಕೆ ಪಾದರ್ಪಣೆ ಮಾಡಿದ್ದು, ಈ ವರ್ಷದ ಕಾರ್ಯಕ್ರಮಗಳನ್ನು ವೈಶಿಷ್ಟ್ಯವಾಗಿ ಹಮ್ಮಿಕೊಳ್ಳಲಾಗಿದೆ. ಹತ್ತು ದಿನಗಳ ಪರ್ಯಂತ ಲೋಕಕಲ್ಯಾಣಾರ್ಥ ಶ್ರೀದೇವಿಗೆ ತ್ರಿಕಾಲ ಪೂಜೆ, ಸಪ್ತಶತೀ ಪಾರಾಯಣ ನೆರವೇರಿಸಲಾಗುವುದು. ಪ್ರತಿನಿತ್ಯ ರಾತ್ರಿ ಮೃತ್ಯಂಬಿಕಾ ಅಮ್ಮನವರ ವೇದಿಕೆಯಲ್ಲಿ ಧರ್ಮಾವಲಂಬಿತವಾದ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಪ್ರತಿನಿತ್ಯ ಮಧ್ಯಾಹ್ನ ಎರಡು ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಗುವುದು. ವಿಜಯದಶಮಿಯ ದಿನ ಹದಿನೈದು ಸಾವಿರ ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಲು ಸಮಿತಿ ಸಿದ್ಧತೆ ಮಾಡಿಕೊಂಡಿದೆ.
ಅ.3ರಂದು ಬೆಳಿಗ್ಗೆ ದುರ್ಗಾದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಿದ್ದು, ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಟ್ರಸ್ಟಿ ಜಿ.ರಾಜಗೋಪಾಲ ಜೋಷಿ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.
ಅ.11ರಂದು ಜನಜಾಗೃತಿ ಧರ್ಮಸಭೆ ನಡೆಯಲಿದ್ದು, ಉಡುಪಿ ಪೇಜಾವರ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಬೆಂಗಳೂರಿನ ಯುವ ವಾಗ್ಮಿ ಹಾರಿಕಾ ಮಂಜುನಾಥ್ ಧರ್ಮ ಸಂರಕ್ಷಣೆ ಕುರಿತು ಮಾತನಾಡಲಿದ್ದಾರೆ.
ಅ.12ರಂದು ಬೆಳಿಗ್ಗೆ ದುರ್ಗಾಹೋಮ, ಮಧ್ಯಾಹ್ನ ದುರ್ಗಾದೇವಿ ಶೋಭಾಯಾತ್ರೆಯು ವಿವಿಧ ಕಲಾತಂಡಗಳೊಂದಿಗೆ ನಡೆದು ಭದ್ರಾನದಿಯಲ್ಲಿ ದುರ್ಗಾ ವಿಗ್ರಹ ಜಲಸ್ತಂಭನಗೊಳಿಸಲಾಗುವುದು ಎಂದು ತಿಳಿಸಿದರು.
ಸಮಿತಿಯ ಕೋಶಾಧಿಕಾರಿ ಭಾಸ್ಕರ್ ವೆನಿಲ್ಲಾ ಮಾತನಾಡಿ, ಧರ್ಮ, ಸಂಸ್ಕೃತಿ, ಸಂಸ್ಕಾರವನ್ನು ಉಳಿಸುವ ಉದ್ದೇಶದಿಂದ ನವರಾತ್ರಿ ಮಹೋತ್ಸವವನ್ನು ವಿಶಿಷ್ಟವಾಗಿ ಪ್ರತೀ ವರ್ಷ ಆಚರಿಸುತ್ತಿದ್ದು, ಸನಾತನ ಹಿಂದೂ ಧರ್ಮವನ್ನು ಬೆಳೆಸುವ ಧರ್ಮ ಜಾಗೃತಿಯನ್ನು ಭಕ್ತರಲ್ಲಿ ಸಮಿತಿ ಮೂಡಿಸುತ್ತಿದೆ.
ನವರಾತ್ರಿ ಮಹೋತ್ಸವದಲ್ಲಿ ವಿಶೇಷವಾಗಿ ಹೂವಿನ ಪೂಜೆ, ಪಾರಾಯಣ, ಅಷ್ಟೋತ್ತರ, ಅಕ್ಷರಾಭ್ಯಾಸ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿದೆ.
ಈ ಬಾರಿ ನಿತ್ಯ ರಾತ್ರಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿಶೇಷ ನಾಮಕರಣ ಮಾಡಿ ಕಲೆಯನ್ನು ಹೆಚ್ಚು ಬಿಂಬಿಸುವ ಪ್ರಯತ್ನ ಮಾಡಲಾಗಿದೆ. ಕಡೆಯ ದಿನದ ಶೋಭಾಯಾತ್ರೆಯಲ್ಲಿ ರಾಜ್ಯ, ಹೊರ ರಾಜ್ಯದ ವಿವಿಧೆಡೆಯ ಕಲೆ, ಸಂಸ್ಸೃತಿಯನ್ನು ಬಿಂಬಿಸುವ ೨೦ಕ್ಕೂ ಅಧಿಕ ವಿವಿಧ ಕಲಾತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು.
ಸಮಿತಿಯ ಪದಾಧಿಕಾರಿಗಳಾದ ಚೈತನ್ಯ ವೆಂಕಿ, ಎಚ್.ಎಚ್.ಕೃಷ್ಣಮೂರ್ತಿ, ಡಿ.ಎನ್.ಸುಧಾಕರ್, ಎಚ್.ಡಿ.ಸತೀಶ್, ಕೆ.ಪ್ರಶಾಂತ್ ಕುಮಾರ್, ಬಿ.ನಾಗರಾಜ್, ಎಂ.ನಾರಾಯಣ, ಈಶ್ವರ್ ಇಟ್ಟಿಗೆ, ಗಿರೀಶ್, ನಟರಾಜ್ಶೆಟ್ಟಿ, ನಾರಾಯಣಶೆಟ್ಟಿ, ಚಂದ್ರಣ್ಣ, ಶ್ರೀಕೃಷ್ಣಭಟ್, ಮಣಿಕಂಠ, ಗೋಪಾಲ, ಅನಂತಭಟ್ ಮತ್ತಿತರರು ಹಾಜರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮಗಳು
ಅ.3 – ಸ್ಥಳೀಯ ಕಲಾವಿದರು, ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ
ಅ.4 – ಧೀರಜ್ ರೈ ಸಂಪಾಜೆ ನೇತೃತ್ವದಲ್ಲಿ ಯಕ್ಷ ಹಾಸ್ಯ ವೈಭವ
ಅ.5 – ವಿಟ್ಲ ಕೇಶವರಾಜ್ ತಂಡದಿಂದ ಸುಗಮ ಸಂಗೀತ
ಅ.6 – ವಿದುಷಿ ಜ್ಞಾನ ಐತಾಳ್ ತಂಡದಿಂದ ಗಾನ-ನಾಟ್ಯ ವೈಭವ
ಅ.7 – ಕೊಪ್ಪದ ಸಾಯಿಶಿವ ಕಲಾಲಯ ತಂಡದಿಂದ ಭರತನಾಟ್ಯ, ನೃತ್ಯ ಸಂಭ್ರಮ
ಅ.8 – ಎಂ.ಕೆ.ಬಾಲರಾಜ್ ತಂಡದಿಂದ ಮಹಿಮೆಯ ಮಹಾಶಕ್ತಿ ಕನ್ನಡ ಪೌರಾಣಿಕ ನಾಟಕ.
ಅ.9 – ಕಿಶೋರ್ಶೆಟ್ಟಿ ನಿರ್ದೇಶನದಲ್ಲಿ ಗರುಡ ಪಂಚಮಿ ತುಳು ನಾಟಕ
ಅ,10 – ಬಿ.ಜಗದೀಶ್ಚಂದ್ರ ನಿರ್ದೇಶನದಲ್ಲಿ ಜೈ ಶ್ರೀರಾಮ್ ಕನ್ನಡ ನಗೆ ನಾಟಕ
ಅ.11 – ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಲಾ ವೈಭವ
ಅ.12 – ಹಿನ್ನೆಲೆ ಗಾಯಕ ಪ್ರಕಾಶ್ ಮಹಾದೇವನ್ ತಂಡದಿಂದ ಸುಗಮ ಸಂಗೀತ.