ಒಕ್ಕಲಿಗರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
ರುದ್ರಪ್ಪಗೌಡ ಅಧ್ಯಕ್ಷ, ದಿವಿನ್ ರಾಜ್ ಕಾರ್ಯಾಧ್ಯಕ್ಷ
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು ಪಟ್ಟಣದ ಒಕ್ಕಲಿಗರ ಸಂಘದ 2024-25 ಹಾಗೂ 2025-26ನೇ ಸಾಲಿಗೆ ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು. ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಕೆ.ಎನ್.ರುದ್ರಪ್ಪಗೌಡ, ಕಾರ್ಯಾಧ್ಯಕ್ಷರಾಗಿ ಎ.ಜಿ.ದಿವಿನ್ರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇನ್ನುಳಿದಂತೆ ಎಂ.ಕೆ.ಸುಂದರೇಶ್ (ಕಾರ್ಯದರ್ಶಿ), ಕೆ.ಎಸ್.ಚನ್ನಗಿರಿ (ಜಂಟಿ ಕಾರ್ಯದರ್ಶಿ), ಎಂ.ಎಸ್.ರಮೇಶ್ (ಖಜಾಂಚಿ), ಶಾಸಕ ಟಿ.ಡಿ.ರಾಜೇಗೌಡ, ಎಚ್.ಬಿ.ರಾಜಗೋಪಾಲ್, ಬಿ.ಸಿ.ಗೀತಾ (ವಿಶೇಷ ಆಹ್ವಾನಿತ ಸದಸ್ಯರು), ಟಿ.ಎಂ.ಉಮೇಶ್ ಕಲ್ಮಕ್ಕಿ, ಎಚ್.ಎಸ್.ಕೃಷ್ಣೇಗೌಡ ಹುಯಿಗೆರೆ, ಎ.ಸಿ.ಸಂದೇಶ್ ನಾಯ್ಕ್ ಅರೆನೂರು, ಬಿ.ಎಂ.ಜಯರಾಮ್ ಬನ್ನೂರು, ಬಿ.ಎಸ್.ಅರುಣ್ ಮಕ್ಕಿಮನೆ, ಚನ್ನಪ್ಪಗೌಡ ಕೊಳಲೆ, ಎಂ.ಡಿ.ಶಿವರಾಮ್ ಮುದುಗುಣಿ, ಎಸ್.ಕಿರಣ್ ಸಾರಗೋಡು, ಪಿ.ಎಂ.ವಿಕ್ರಮ್ ಪುರ, ಕೆ.ಮಂಚಿತ್ ಕುಕ್ಕುಡಿಗೆ (ನಿರ್ದೇಶಕ) ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.
ಒಕ್ಕಲಿಗರ ಸಂಘಕ್ಕೆ ಕಾಯಕಲ್ಪ: ನೂತನವಾಗಿ ಆಯ್ಕೆಗೊಂಡಿರುವ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಎರಡು ವರ್ಷಗಳ ಅವಧಿಯಲ್ಲಿ ಒಕ್ಕಲಿಗರ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಸಂಕಲ್ಪ ಕೈಗೊಂಡಿದ್ದಾರೆ ಎಂದು ನೂತನ ಅಧ್ಯಕ್ಷ ಕೆ.ಎನ್.ರುದ್ರಪ್ಪಗೌಡ ಹಾಗೂ ಕಾರ್ಯಾಧ್ಯಕ್ಷ ಎ.ಜಿ.ದಿವಿನ್ರಾಜ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಮಾಜಿ ಸಚಿವ ಎಚ್.ಜಿ.ಗೋವಿಂದೇಗೌಡರ ಅವಧಿಯಲ್ಲಿ ಸಂಘಕ್ಕೆ ನಿವೇಶನ ಮಂಜೂರಾಗಿದ್ದು, ಕೆಲ ವರ್ಷಗಳ ಹಿಂದೆ ಸಂಘದ ನೂತನ ಕಟ್ಟಡ ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಲಾಗಿತ್ತು.
ಇದೀಗ ಒಕ್ಕಲಿಗರ ಸಮುದಾಯ ಭವನದ ಕಟ್ಟಡವನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ಕಾರ್ಯಯೋಜನೆ ಹಮ್ಮಿಕೊಳ್ಳಲಾಗಿದೆ. ಎರಡು ವರ್ಷಗಳ ಅವಧಿಯಲ್ಲಿ ಹಲವು ಚಟುವಟಿಕೆಗಳನ್ನು ಮಾಡಿ ಸಂಘವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವುದರೊಂದಿಗೆ, ಒಕ್ಕಲಿಗ ಸಮಾಜದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ತಿಳಿಸಿದ್ದಾರೆ.