ಮೋಸದ ದಾಖಲಾತಿಯಿಂದ ಗ್ರಾಮ ಪಂಚಾಯಿತಿಗೆ ಆಯ್ಕೆ : 7 ವರ್ಷ ಜೈಲು ವಾಸ .
(HAVERI): ಹಾವೇರಿ ಜಿಲ್ಲೆಯ ಗುತ್ತಲ ಗ್ರಾಮದಲ್ಲಿ ಮುಕ್ತಾಬಾಯಿ ರಂಗಪ್ಪ ಬೇಸೆ ಎಂಬುವವರು ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ವಂಚನೆಯಿಂದ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದು ಗ್ರಾ.ಪಂ.ಗೆ ಆಯ್ಕೆಯಾಗಿದ್ದಾರೆ . ತನಿಖೆಯ ನಂತರ ಮುಕ್ತಾಬಾಯಿ ರಂಗಪ್ಪ ಬೇಸೆ ಹಾಗು ಇವರಿಗೆ ಸಹಾಯ ಮಾಡಿದ ಬರಡಿ ಗ್ರಾಮದ ಮಾರುತಿ ಹನುಮಂತಪ್ಪ ಕಿಳ್ಳಿಕ್ಯಾತರ ಅವರಿಗೆ 37 ಸಾವಿರ ದಂಡ ಹಾಗೂ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಗುತ್ತಲ ಗ್ರಾಮದ ಆರೋಪಿ ಮುಕ್ತಾಬಾಯಿಯು ಹಿಂದೂ ಗೊಂದಳಿ (ಪ್ರವರ್ಗ-01)ಕ್ಕೆ ಸೇರಿದ್ದರೂ ಕಳ್ಳಪ್ಪ ದೊಡ್ಡರಾಮಪ್ಪ ತಳವಾರ ಹಾಗೂ ಮಾರುತಿ ಹನುಮಂತಪ್ಪ ಕಿಳ್ಳಿಕ್ಯಾತರ ಅವರ ಸಹಕಾರ ಪಡೆದು ಸುಳ್ಳು ವ್ಯಾಸಂಗ ಪ್ರಮಾಣಪತ್ರ ಹಾಗೂ ಇತರೆ ದಾಖಲಾತಿಗಳನ್ನು ಸೃಷ್ಟಿಸಿ: ಪ.ಜಾ, ಪ್ರಮಾಣಪತ್ರ ಪಡೆದಿದ್ದಳು, 2010ರಲ್ಲಿ ಗುತ್ತಲ ಪಂಚಾಯಿತಿ ವಾರ್ಡ್ ನಂ 10ರ ಪ.ಜಾ. ಮೀಸಲು ಸ್ಥಾನಕ್ಕೆ ಸ್ಪರ್ಧಿಸಿ ಆಯ್ಕೆಯಾಗಿದ್ದಳು, ಈ ಕುರಿತಂತೆ ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ತನಿಖಾಧಿಕಾರಿ ಬೆಳಗಾವಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪಿ.ಐ. ಎ.ಬಿ. ಹಪ್ಪಳಿ ಅವರು ಪ್ರಕರಣದ ತನಿಖೆ ನಡೆಸಿ ದೋಷಾರೋಪಣಾ ಪತ್ರವನ್ನು , ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ವಿವಾದಗಳ ಪರಿಶೀಲನೆಯ ನಂತರ ಹಾವೇರಿಯ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜೆ.ಎಲ್.ಲಕ್ಷ್ಮೀನಾರಾಯಣ ರವರು ಆಪಾದನೆಗಳು ರುಜುವಾತಾದ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಶಿಕ್ಷೆ ಹಾಗೂ ದಂಡ ವಿಧಿಸುವಂತೆ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕ: ಸರೋಜಾ ಜಿ.ಕೂಡಲಗಿಮಠ ಅವರು ವಾದ ಮಂಡಿಸಿದ್ದರು.