ಕಾಫಿನಾಡಿಗೆ ಆನೆ ಬಿಡಾರ, ತನೂಡಿಗೆ ಆನೆ ಬಿಡಾರ ಬೇಡ: ಉಮೇಶ್
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಅರಣ್ಯ ಇಲಾಖೆ ವ್ಯಾಪ್ತಿಯ ಹಲಸೂರು ಸಾಮಾಜಿಕ ಅರಣ್ಯದ ತನೂಡಿ ಗ್ರಾಮದಲ್ಲಿ ಅರಣ್ಯ ಇಲಾಖೆ ಆನೆ ಬಿಡಾರ ಸ್ಥಾಪನೆ ಮಾಡಲು ಉದ್ದೇಶಿಸಿರುವುದು ಸಮಂಜಸವಲ್ಲ ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಟಿ.ಎಂ.ಉಮೇಶ್ ಕಲ್ಮಕ್ಕಿ ಹೇಳಿದ್ದಾರೆ.
ಮಲೆನಾಡಿನಲ್ಲಿ ಈಗಾಗಲೇ ಹಲವಾರು ಅರಣ್ಯ ಕಾಯ್ದೆಗಳು ಜಾರಿಯಲ್ಲಿದ್ದು, ಇದರೊಂದಿಗೆ ಆನೆ ಬಿಡಾರ ಸ್ಥಾಪನೆ ಮಾಡಿದರೆ ಮಲೆನಾಡಿನ ಜನ ಜೀವನದ ಮೇಲೆ ಸಾಕಷ್ಟು ಪರಿಣಾಮಗಳು ಬೀರಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆನೆ ಬಿಡಾರ ಸ್ಥಾಪನೆ ಮಾಡುವುದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದಂತಾಗಿ ಹೆಚ್ಚಿನ ಪ್ರವಾಸಿಗರು ಈ ಭಾಗಕ್ಕೆ ಭೇಟಿ ನೀಡಿ ವ್ಯಾಪಾರೋದ್ಯಮಗಳು ಹೆಚ್ಚಾಗಬಹುದು. ಅರಣ್ಯ ಇಲಾಖೆಗೆ ಆದಾಯವೂ ಆಗಬಹುದು. ಆದರೆ ಆನೆ ಬಿಡಾರ ಸ್ಥಾಪನೆ ಮಾಡುವುದರಿಂದ ಸ್ಥಳೀಯ ಜನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುವ ಸಾಧ್ಯತೆಯಿದೆ.
ಮಲೆನಾಡಿನ ರೈತರು, ಜನರು ಈಗಾಗಲೇ ಕಸ್ತೂರಿ ರಂಗನ್ ವರದಿ, ಹುಲಿ ಯೋಜನೆ, ಬಫರ್ ಜೋನ್ ಮುಂತಾದ ಮಾರಕ ಅರಣ್ಯ ಕಾಯ್ದೆಗಳಿಂದ ತತ್ತರಿಸಿದ್ದು, ಇದರೊಂದಿಗೆ ಆನೆ ಬಿಡಾರ ಸ್ಥಾಪನೆ ಮಾಡಿದಲ್ಲಿ ಸ್ಥಳೀಯರಿಗೆ ಹಲವು ತೊಂದರೆ ಆಗಬಹುದು ಎಂಬ ಆತಂಕ ಎದುರಾಗಿದೆ.
ಈ ಬಿಡಾರ ಸ್ಥಾಪನೆಯಿಂದ ಮಲೆನಾಡಿನ ಜನರಿಗೆ ಏನಾದರೂ ಉಪಯೋಗವಿದೆಯೇ? ಸ್ಥಳೀಯ ಗ್ರಾಪಂ, ಜನರ ಅಭಿಪ್ರಾಯಗಳನ್ನು ಅರಣ್ಯ ಇಲಾಖೆ ಸಂಗ್ರಹ ಮಾಡಿದೆಯೇ ಎಂಬುದನ್ನು ಬಹಿರಂಗಗೊಳಿಸಬೇಕು. ಇಲ್ಲಿ ಆನೆ ಬಿಡಾರ ಸ್ಥಾಪನೆ ಮಾಡಿದರೆ ಸ್ಥಳೀಯರಿಗೆ ಉದ್ಯೋಗವಕಾಶಗಳು ಅಥವಾ ಆರ್ಥಿಕ ಸ್ವಾವಲಂಬನೆ ದೊರೆಯಲಿದೆಯೆ ಎಂಬುದನ್ನು ತಿಳಿಸಬೇಕು. ಇಲ್ಲದಿದ್ದಲ್ಲಿ ಅರಣ್ಯ ಇಲಾಖೆ ಕೇವಲ ತನ್ನ ಆದಾಯ ಹಾಗೂ ಅಧಿಕಾರಿಗಳ ಜೇಬು ತುಂಬಿಸುವ ಯೋಜನೆಯಾಗಿ ಇದನ್ನು ಇಲ್ಲಿ ಆರಂಭಿಸುತ್ತಿದೆ ಎಂಬುದನ್ನು ಮಲೆನಾಡಿಗರು ತಿಳಿದುಕೊಳ್ಳಬೇಕಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.