ನಾರಿಯ ಸಬಲೀಕರಣ-ದೇಶದ ಉನ್ನತಿಕರಣ”- ಬಿ.ವೈ ರಾಘವೇಂದ್ರ
(SHIVAMOGA): ಸೊರಬ: ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಆನವಟ್ಟಿ, ಮೂಡಿ, ಉದ್ರಿ, ಜಡೆ ಮಹಾ ಶಕ್ತಿಕೇಂದ್ರ ವತಿಯಿಂದ ಭಾರತೀಯ ಜನತಾ ಪಕ್ಷ ಸೊರಬ ಮಂಡಲದ ವತಿಯಿಂದ ಆನವಟ್ಟಿಯ ವೀರಶೈವ ಕಲ್ಯಾಣ ಮಂದಿರದಲ್ಲಿ ಗುರುವಾರ ಬೃಹತ್ “ಮಹಿಳಾ ಸಮಾವೇಶ” ನಡೆಯಿತು.
ನೆರೆದಿದ್ದ ಅಪಾರ ಸಂಖ್ಯೆಯ ಮಹಿಳಾ ಕಾರ್ಯಕರ್ತರನ್ನು ಉದ್ದೇಶಿಸಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಮಾತನಾಡಿ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಮಹಿಳಾ ವಲಯಕ್ಕೆ ವಿಶೇಷ ಪ್ರಾಧ್ಯಾನತೆ ನೀಡುತ್ತಾ ಬಂದಿದೆ. ಮಹಿಳಾ ಸಶಕ್ತಿಕರಣ ಹಾಗೂ ಆರ್ಥಿಕ ಉನ್ನತಿಕರಣಕ್ಕೆ ಮತ್ತು ಗ್ರಾಮ ಮಟ್ಟದಲ್ಲಿ ಸ್ವಸಹಾಯ ಸಂಘಗಳ ಬಲವರ್ಧನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ.
ಭೇಟಿ ಬಚಾವೋ ಭೇಟಿ ಪಡಾವೋ, ಉಜ್ವಲ, ನಾರಿ ಶಕ್ತಿ ವಂದನ ಅಧಿನಿಯಮ, ಲಕ್ಪತಿ ದೀದಿ, ಮಾತೃ ವಂದನಾ, ಮಾತೃತ್ವ ರಜೆ, ಸುಕನ್ಯಾ ಸಮೃದ್ಧಿ ಯೋಜನೆ ಸೇರಿದಂತೆ ಇನ್ನೂ ಅನೇಕ ಐತಿಹಾಸಿಕ ಯೋಜನೆಗಳನ್ನು ಜಾರಿಗೆ ತಂದು ಸ್ವಾತಂತ್ರ ಭಾರತದ ಇತಿಹಾಸದಲ್ಲಿ ಮಹಿಳಾ ಸಬಲೀಕರಣಕ್ಕೆ ಕೇಂದ್ರದ ಮೋದಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಿ ಈಗಾಗಲೇ ಯಶಸ್ಸು ಕಂಡಿದೆ.
ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳು ಅಂತ್ಯೋದಯ ಪರಿಕಲ್ಪನೆಯಡಿ ಪ್ರತಿಯೊಂದು ಬೂತ್ ಗಳಲ್ಲಿ ವಾಸವಿರುವ ಪ್ರತಿ ಮನೆಯ ಹೆಣ್ಣು ಮಕ್ಕಳಿಗೆ ಈಗಾಗಲೇ ತಲುಪಿದ್ದು, ಅರ್ಹ ಫಲಾನುಭವಿಗಳನ್ನು ಖುದ್ದು ಭೇಟಿ ಮಾಡಿ ಯೋಜನೆಯಿಂದ ಆಗಿರುವ ಪ್ರಯೋಜನಗಳ ಬಗ್ಗೆ ಸವಿಸ್ತಾರವಾಗಿ ಚರ್ಚೆ ನಡೆಸಿ ಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಬೆಂಬಲ ನೀಡುವ ಮೂಲಕ ಮೋದಿ ಅವರ ಕೈಯನ್ನ ಬಲಪಡಿಸುವ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಹರತಾಳು ಹಾಲಪ್ಪ, ಪ್ರಕಾಶ್ ತಲಕಾಲಕೊಪ್ಪ, ಗಾಯತ್ರಿ ಮಲ್ಲಪ್ಪ ಹೊಳಿಯಮ್ಮ ಸೇರಿದಂತೆ ಬೂತ್, ಶಕ್ತಿ ಕೇಂದ್ರ, ಮಹಾ ಶಕ್ತಿಕೇಂದ್ರ ಹಾಗೂ ಮಂಡಲದ ಅನೇಕ ಮುಖಂಡರು ಉಪಸ್ಥಿತರಿದ್ದರು.
ವರದಿ: ಸಂದೀಪ ಯು.ಎಲ್. ಸೊರಬ