Entertainmentಮನರಂಜನೆ

ಖಾಲಿಬೆಂಚ್ ಗಳು ಕಥೆಗಳನ್ನು ಹೇಳುತ್ತವೆ, ಮಕ್ಕಳನ್ನು ನೆನಪಿಸುತ್ತವೆ…

ಖಾಲಿಬೆಂಚ್ ಗಳು ಕಥೆಗಳನ್ನು ಹೇಳುತ್ತವೆ, ಮಕ್ಕಳನ್ನು ನೆನಪಿಸುತ್ತವೆ…

(ARTICAL): ಮಕ್ಕಳು ಶಾಲೆಗೆ ಯವಾಗ ರಜೆ ಸಿಗತ್ತೆ ಅಂತ ಕಾಯುವ ಸಮಯವೇ ಸುಂದರ ಎನಿಸುತ್ತದೆ. ಅದೆಷ್ಟೋ ಬಾರಿ ಎಲ್ಲಾ ಮಕ್ಕಳು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಅನಿರೀಕ್ಷಿತವಾಗಿ ಏನಾದರೂ ಒಂದೆರಡು ದಿನ ರಜೆ ಸಿಕ್ಕರಂತೂ ಸಂತೋಷಕ್ಕೆ ಪಾರವೇ ಇಲ್ಲವೆಂಬಂತೆ ಸಂಭ್ರಮಿಸುತ್ತಾರೆ. ಅಪ್ಪೀತಪ್ಪೀ ವಾರಗಟ್ಟಲೆ ಏನಾದರೂ ರಜೆ ಸಿಕ್ಕರಂತೂ ಮುಗಿಯಿತು. ಕೆಲವರಿಗೆ ಸಂಭ್ರಮ, ಇನ್ನೂ ಕೆಲವರಿಗೆ ಸಂಕಟ.

ಅನಿವಾರ್ಯವಾಗಿ ಒಂದು ಅಥವಾ ಎರಡು ದಿನ ಹಬ್ಬ, ಜಾತ್ರೆ, ಇನ್ನಾವುದೋ ಬೇರೆ ಯಾವುದಾದರೂ ಕಾರಣದಿಂದ ರಜೆ ಸಿಕ್ಕರೆ ಮಕ್ಕಳು-ಶಿಕ್ಷಕರಾದಿಯಾಗಿ ಆ ರಜೆಯನ್ನು ಕಳೆಯಲು ಬೇರೆಬೇರೆ ರೀತಿಯ ಯೋಜನೆಗಳಂತೂ ಹಾಕಿಕೊಳ್ಳುವುದು ಗೊತ್ತಿರುವ ವಿಚಾರ. ಜಾತ್ರೆ-ಉತ್ಸವಗಳಿದ್ದರೆ ಅಲ್ಲಲ್ಲಿ ಮಕ್ಕಳು ತಮ್ಮ ಪೋಷಕರೊಂದಿಗೆ ಇರುವುದನ್ನು ಕಾಣುತ್ತಿದ್ದೆವು. ಕೆಲವರು ಬಂದು ಮಾತನಾಡಿಸುತ್ತಿದ್ದರು. ಇನ್ನೂ ಕೆಲವರು ‘ಯಾಕೆ ಬೇಕು ಇವರ ಸಹವಾಸ? ಅಪ್ಪೀತಪ್ಪೀ ಇಬ್ಬರೂ ಸೇರಿದರೆ ಈ ಜಾತ್ರೆಲಿ ನಾನೇ ಬಲಿ’ ಎಂದು ಕಂಡರೂ ಕಾಣದಂತೆ ಓಡಾಡಿದ್ದಾರೆ. ಕೆಲವೊಮ್ಮೆ ಪೋಷಕರೇ ಸಿಕ್ಕು ಮಾತನಾಡಿಸಿದಾಗ, ‘ಮುಗೀತು ನಮ್ಮ ಕಥೆ’ ಅಂದುಕೊಂಡವರೂ ಇದ್ದಾರೆ. ಅಲ್ಲಿ ಸಿಕ್ಕಾಗ ಉಭಯಕುಶಲೋಪರಿ ಮಾತನಾಡಿದ್ದೇವೆ ಹೊರತು, ಪರೀಕ್ಷೆ, ಓದು ಇದಾವುದರ ಬಗ್ಗೆಯೂ ಮಾತನಾಡಿಲ್ಲ ಎಂಬುದೇ ಮಕ್ಕಳಿಗೆ ಸಂತೋಷದ ಸಂಗತಿ.

ಒಂದಿಷ್ಟು ವರ್ಷಗಳ ಹಿಂದೆ ಶಿವಮೊಗ್ಗದಲ್ಲಿ ಧಾರಾಕಾರ ಮಳೆ ಎಂದು ರಜೆ ಘೋಷಿಸಿದರು. ಮೊದಲೆರಡು ದಿನ ಮಕ್ಕಳು, ‘ಸರ್ ನಾಳೆ ಶಾಲೆ ಇದೆಯೋ? ಅಥವಾ ರಜೆನೋ?’ ಎಂದು ಕೇಳುತ್ತಿದ್ದರು. ‘ಅಧಿಕೃತವಾಗಿ ಇನ್ನೂ ಗೊತ್ತಾಗಿಲ್ಲ. ಗೊತ್ತಾದ ತಕ್ಷಣ ಮೆಸೆಜ್ ಹಾಕುತ್ತೇವೆ’ ಎನ್ನುತ್ತಿದ್ದೆ. ಅಧಿಕೃತ ಆದೇಶ ಬಂದಾಗ ಅದನ್ನು ಗ್ರೂಪ್ ಗೆ ಕಳಿಸುತ್ತಿದ್ದೆವು. ನಂತರದ ದಿನಗಳಲ್ಲೂ ಮಳೆಯು ಜೋರಾದ ಕಾರಣ ರಜೆಯು ಮುಂದುವರೆಯುತ್ತಿತ್ತು. ಮಕ್ಕಳೇ ‘ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಜಿಲ್ಲಾಧಿಕಾರಿಗಳ ಆದೇಶ’ ಎಂಬ ಮೆಸೆಜ್ ಅನ್ನು ಕಳಿಸುತ್ತಿದ್ದರು. ನೆನಪಿರುವಂತೆ ಆಗಸ್ಟ್ ತಿಂಗಳ ಆರಂಭದಲ್ಲಿಯೇ ಮಳೆಯು ಹೆಚ್ಚಾಗಿತ್ತು. ವಾರಗಟ್ಟಲೆ ಮಳೆ ಬಿಡದೇ ಸುರಿದಿತ್ತು. ಕಾವ್ಯಶ್ರೀ ಕಾಲ್ ಮಾಡಿ, ‘ಸರ್ ರಜೆ ಸಾಕಾಗಿದೆ. ಶಾಲೆಗೆ ಬರ್ತಿವಿ. ಪ್ಲೀಸ್ ಶಾಲೆ ಆರಂಭ ಮಾಡೋಕೆ ಹೇಳಿ’ ಎಂದಳು. ‘ರಜೆ ಬೇಕು ಅಂತ ಹೇಳ್ತಾ ಇದ್ರಿ. ಈಗ ಸಿಕ್ಕಿದೆಯಲ್ಲ ಖುಷಿಯಿಂದ ಅನುಭವನಿಸಿ’ ಎಂದರೆ, ‘ಸರ್ ಮಳೆಲಿ ಎಲ್ಲೂ ಹೋಗೋ ಹಾಗಿಲ್ಲ, ಮನೇಲೆ ಇರಬೇಕು. ತುಂಬಾ ಬೋರ್ ಆಗ್ತಾ ಇದೆ. ಅಲ್ಲದೇ ಈ ಸಲ ಎಸ್.ಎಸ್.ಎಲ್.ಸಿ ಬೇರೆ, ರಜೆ ಹೆಚ್ಚಾದರೆ ಪಾಠಗಳ ಬಗ್ಗೆ, ಶಾಲಾ ಜೀವನ ಮುಗಿಯುತ್ತಲ್ಲ ಅನ್ನೋ ಯೋಚನೆ. ಹಾಗಾಗಿ ಇರೋ ಸ್ವಲ್ಪ ದಿನಗಳನ್ನೇ ಶಾಲೆಲಿ ಚೆನ್ನಾಗಿ ಕಳೆಯಬೇಕು ಅಂತ. ಹಾಗಾಗಿ…’ ಎಂದು ಮನಸ್ಸಿನ ಮಾತನ್ನು ಹೇಳಿದಳು. ಆ ಮಾತಲ್ಲಿ ರಜೆ ಸಾಕು ಎನಿಸುವಂತಾಗಿತ್ತು. ಶಾಲೆಯೇ ಬೇಡ ಎನ್ನುವ ಬೆರಳಣಿಕೆಯ ವಿದ್ಯಾರ್ಥಿಗಳ ನಡುವೆ ಶಾಲೆ ಆರಂಭವಾದರೆ ಸಾಕು, ಶಾಲೆಯಲ್ಲಿ ಇರಬೇಕು ಎನ್ನುವ ಮಕ್ಕಳು ಎಲ್ಲರ ನೆನಪಲ್ಲಿ ಸದಾ ಇರುತ್ತಾರೆ. ಅಂತೂ ಎರಡು ವಾರಗಳ ನಂತರ ಶಾಲೆ ಆರಂಭವಾಯಿತು. ಆಗಸ್ಟ್-೧೫ರ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಮರಳಿ ಶಾಲೆಗೆ ಬಂದದ್ದಾಯಿತು. ಅಂದು ಕೂಡ ಮಳೆಯು ಹೆಚ್ಚಾಗಿತ್ತು ಮಕ್ಕಳು ಬರಲೇಬೇಕು ಎಂದೇನು ಇರದ ಕಾರಣ ಬಹಳಷ್ಟು ಮಕ್ಕಳು ಅವತ್ತು ಗೈರುಹಾಜರಾಗಿದ್ದರು. ಮರುದಿನದಿಂದ ಯಥಾಪ್ರಕಾರ ಶಾಲೆ ಆರಂಭವಾಗಿದ್ದು ಸಂತೋಷದ ಸಂಗತಿಯಾಗಿತ್ತು.

ಇತ್ತೀಚೆಗೆ ಮಳೆಯ ಕಾರಣದಿಂದ ಶಾಲೆಗೆ ವಾರಗಟ್ಟಲೆ ರಜೆ ಸಿಕ್ಕಾಗ ಕೆಲವು ಮಕ್ಕಳು ಖುಷಿಯಾಗಿದ್ದರೆ ಇನ್ನೂ ಕೆಲವು ಮಕ್ಕಳು, ‘ಸರ್ ಈ ವಾರ ರಜೆ ಏನೋ ಸಿಕ್ತು. ಮುಂದಿನವಾರದಲ್ಲಿ ಶನಿವಾರ, ಭಾನುವಾರ  ಏನಾದರೂ ಪೂರ್ತಿ ಶಾಲೆ ಇರತ್ತಾ!? ಎಂದು ಅನುಮಾನದಲ್ಲಿ ಕೇಳಿದರು. ‘ನಿಮ್ಮ ಆಸೆಯಂತೆ ಆಗಬಹುದು. ಅಲ್ಲಿಯ ತನಕ ಕಾಯುತ್ತಿರಿ’ ಎಂದರೆ, ‘ಸಾರ್… ತಮಾಷೆ ಅಲ್ಲ, ನಿಜವಾಗಿ ಆಗತ್ತಾ? ಹೇಳಿ’ ಎಂದು ಗೋಗರೆದಿದ್ದಾರೆ. ಹಾಗಾಗದಿದ್ದರೂ ಒಂದಿಷ್ಟು ಶನಿವಾರಗಳು ಪೂರ್ತಿದಿನ ಶಾಲೆ ನಡೆಯಿತು. ಈಗ ಏನಾದರೂ ಸರ್ಕಾರಿ ರಜಾದಿನಗಳನ್ನು ಹೊರತುಪಡಿಸಿ ಬೇರೆ ಇನ್ನಾವುದೋ ಕಾರಣಗಳಿಗೆ ರಜೆ ನೀಡಿದರೆ. ‘ಈ ರಜಾದಿನವನ್ನು ಭರಿಸಲು ಮತ್ತೆ ಎಂದು ಶಾಲೆ ನಡೆಯುವುದೋ? ಏನೋ? ಈ ರಜೆನೂ ಬೇಡ, ಬೇರೆ ದಿನಗಳಲ್ಲಿ ಶಾಲೆನೂ ಬೇಡ’ ಎಂಬುದು ಎಲ್ಲಾ ಮಕ್ಕಳ ಅಭಿಪ್ರಾಯ.

ಅದೆಷ್ಟೋ ಬಾರಿ ಮಕ್ಕಳು ರಜೆ ಬೇಕು ಎಂದು ಕೊಳ್ಳುತ್ತಾರೆ. ರಜೆಯ ಅವಧಿ ಹೆಚ್ಚಾದರೆ, ಈ ರೀತಿಯಲ್ಲಿ ರಜೆ ಸಿಕ್ಕರೆ ಎಲ್ಲೂ ಹೊರಗೆ ಹೋಗಲು ಅವಕಾಶವಿಲ್ಲದ ಕಾರಣ ‘ಶಾಲೆ ಇದ್ದಿದ್ದರೆ ಚೆನ್ನಾಗಿ ಇರೋದು’ ಅಂತ ಅನ್ನಿಸ್ತಿರತ್ತೆ. ಇದರ ಮಧ್ಯೆ ಈ ರೀತಿಯ ರಜೆ ಕೊಟ್ಟರೆ ಶಿಕ್ಷಕರು ಮಕ್ಕಳಿಗೆ ಮನೆಯಲ್ಲಿ ಇರುವುದರಿಂದ ಒಂದಿಷ್ಟು ಹೋಂವರ್ಕ್ ಬರೆಯಿರಿ ಎಂದು ಕಳಿಸುತ್ತಾರೆ. ಹಾಗಾಗಿ ಶಾಲೆ ಇದ್ದರೆ ಒಳ್ಳೆಯದು ಎನ್ನುವ ಅಭಿಪ್ರಾಯ ಬಹುತೇಕ ಮಕ್ಕಳಲ್ಲಿ. ಇನ್ನೂ ಕೆಲವರು ‘ಹೇಗಿದ್ದರೂ ಮಳೆ ಜೋರಾಗಿ ಬರ್ತಾ ಇದೆ. ನಾಳೆಯೂ ರಜೆ ಕೊಡ್ತಾರೆ. ಹೆಚ್ಚು ತಲೆ ಕೆಡಿಸಿಕೊಳ್ಳೋದು ಬೇಡ’. ಎಂದು ಸುಮ್ಮನಾಗುತ್ತಿದ್ದರು. ಮರುದಿನ ಶಾಲೆ ಇದ್ದರೆ, ಹೇಳಿದ್ದ ಹೋಂವರ್ಕ್ ಮಾಡಿಕೊಂಡು ಬರದೇ ಇರುವವರನ್ನು ವಿಚಾರಿಸುತ್ತಿದ್ದರೆ, ‘ಇವತ್ತೂ ರಜೆ ಕೊಡಬಹುದು ಅಂತ ಬರೆದುಕೊಂಡು ಬಂದಿಲ್ಲ, ನಾಳೆ ಬರೆದುಕೊಂಡು ಬರುತ್ತೇನೆ’ ಎಂದು ರಜೆ ಮಿಸ್ ಆಯ್ತಲ್ಲ ಎಂದು ದುಃಖದಿಂದಲೇ ಹೇಳುತ್ತಿದ್ದರು. ಒಟ್ಟಾರೆಯಾಗಿ ರಜೆ ಎಂಬುದು ಬರುವುದು, ಹೋಗುವುದು ಮಾಡುತ್ತಲೇ ಇದ್ದಿತು. ಪರೀಕ್ಷೆಯ ಸಮಯದಲ್ಲಿ ಮಕ್ಕಳಿಗೆ ಓದಲೆಂದು ರಜೆ ಕೊಟ್ಟಾಗ ಶಾಲೆಯಲ್ಲಿ ಮಕ್ಕಳು ಇಲ್ಲದೇ ಬಿಕೋ ಎನ್ನುವಾಗ ‘ಶಾಲೆಯಲ್ಲಿ ಮಕ್ಕಳಿದ್ದರೇನೇ ಚೆಂದ ಅನಿಸದೇ ಇರದು’ ಸಮಯ ಓಡುವುದೇ ಇಲ್ಲ ಎನಿಸುತ್ತದೆ.  ಖಾಲಿಬೆಂಚ್ ಗಳು, ಬಣಗುಡುವ ಆಟದ ಮೈದಾನಗಳು, ಶಾಂತವಾಗಿರುವ ಶಾಲಾ ಆವರಣ ಎಲ್ಲವೂ ಮಕ್ಕಳನ್ನು ನೆನಪಿಸುತ್ತದೆ.

ಪರೀಕ್ಷೆಗಳು ಮುಗಿದ ನಂತರದ ದಿನಗಳಲ್ಲಿ ಕೇವಲ ಶಿಕ್ಷಕರು ಮಾತ್ರ ಶಾಲೆಗೆ ಬರುವುದು, ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವುದು, ಈ ಸಮಯದಲ್ಲಿ ಯಾವುದಾದರೂ ತರಗತಿಯ ಒಳಗೆ ಕೂತು ಮೌಲ್ಯಮಾಪನ ಮಾಡುತ್ತಿದ್ದರೆ, ಮಕ್ಕಳು ಕೊನೆಯ ಪರೀಕ್ಷೆಯ ನೋಟ್ಸ್, ಬುಕ್ಸ್, ವಾಟರ್ ಬಾಟಲ್ ಇನ್ನೂ ಕೆಲವರು ಊಟದ ಡಬ್ಬಿಯನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಆ ರೂಂನಲ್ಲಿ ಮಕ್ಕಳಿಲ್ಲದೇ ಉತ್ತರಪತ್ರಿಕೆಗಳನ್ನು ನೋಡುತ್ತ, ಸಮಯ ಸಾಗುತ್ತಿಲ್ಲ ಎನ್ನುವುದು, ಆಗಾಗ ಸಣ್ಣ ನಿದ್ದೆ. ಎಂದು ಹೊತ್ತು ಕಳೆಯುವುದೇ ಕಷ್ಟ ಎನಿಸುತ್ತದೆ. ಆ ಸಮಯದಲ್ಲಿ ಮಕ್ಕಳ ಅನುಪಸ್ಥಿತಿ ಕಾಡುತ್ತದೆ. ಮಕ್ಕಳು ಶಾಲೆಯಲ್ಲಿ ಇದ್ದಾಗ ಖುಷಿಯಿಂದ ಹೇಳಿಕೊಡುವುದೋ, ಪೆಟ್ಟು ನೀಡುವುದೋ? ಬೈಯುವುದೋ, ಜೊತೆಗೆ ಆಡುವುದನ್ನೋ ಮಾಡುತ್ತ ಸಮಯ ಎಷ್ಟು ವೇಗವಾಗಿ ಓಡುತ್ತಿದೆಯಲ್ಲ ಎನಿಸುತ್ತದೆ.

ಏನೂ ಬರೆಯದೇ ಖಾಲಿ ಇರುವ ಬೋರ್ಡ್, ಖಾಲಿಬೆಂಚ್ ಗಳು, ಸುತ್ತಿಟ್ಟಿರುವ ಮಕ್ಕಳು ಬರೆದಿರುವ ಚಾರ್ಟ್, ಚಾಕ್ ಪೀಸ್, ಡಸ್ಟರ್,  ಎಲ್ಲವೂ ಇದ್ದಲ್ಲಿಯೇ ಇರುವುದು, ಮಕ್ಕಳಿದ್ದರೆ ಬ್ಯಾಗ್, ಬುಕ್ಸ್, ನೋಟ್ಸ್, ಬೋರ್ಡ್ ತುಂಬಾ ಒಂದಿಷ್ಟು ಬರಹ, ಮಕ್ಕಳ ವಟವಟ ಎನ್ನುವ ಮಾತುಗಳು ಎಲ್ಲವನ್ನು ಈ ರಜೆಯ ಸಮಯದಲ್ಲಿ ಶಾಲಾ ಕೊಠಡಿಯಲ್ಲಿ ನಾವು ಮಿಸ್ ಮಾಡಿಕೊಳ್ಳುತ್ತಿರುವುದಂತೂ ನಿಜ.

ಶಾಲೆಗೆ ರಜೆ ಎಂದಾಗ ಎಲ್ಲರಿಗೂ ಖುಷಿಯೇ ಸರಿ ಆದರೆ ರಜೆಯ ಅವಧಿ ದೀರ್ಘವಾದರೆ ಒಮ್ಮೆಯಾದರೂ ಶಾಲೆ ಇರಬಾರದಿತ್ತೇ? ಎನಿಸದೇ ಇರದು. ಸದಾ ಗುಜುಗುಜು ಶಬ್ಧ ಕೇಳಿ ಬರುತ್ತಿದ್ದ ತರಗತಿಗಳು. ಯಾರಾದರೂ ಶಿಕ್ಷಕರು ಆ ತರಗತಿಗೆ ಬಂದ ತಕ್ಷಣ ಗಪ್ ಚುಪ್ ಎನ್ನುವಂತೆ ಶಾಂತ ವಾತಾವರಣಕ್ಕೆ ತಿರುಗುವುದು. ತರಗತಿ ಮುಗಿಸಿ ಶಿಕ್ಷಕರು ತರಗತಿಯಿಂದ ಹೊರ ಹೋದ ತಕ್ಷಣಕ್ಕೆ ಮತ್ತೆ ಮಾರ್ಕೇಟ್ ರೀತಿಯಲ್ಲಿ ಗಲಾಟೆ ಶುರುವಾಗುತ್ತಿತ್ತು. ಪರೀಕ್ಷೆಗಳು ಮುಗಿಸಿ ತರಗತಿಯಲ್ಲಿ ಮಕ್ಕಳಿಗೆ ಉತ್ತರ ಪತ್ರಿಕೆಗಳನ್ನು ಕೊಡುವಾಗ ನೀರವ ಮೌನ ಆವರಿಸುತ್ತದೆ. ಅದೇ ರೀತಿಯ ಮೌನ ಪರೀಕ್ಷೆ ಮುಗಿದು ಮಕ್ಕಳು ಬಾರದೇ ಶಾಲೆಯಲ್ಲಿ ಇರುವಾಗ ಅನಿಸುತ್ತದೆ.

ಖಾಲಿಬೆಂಚ್ ಗಳನ್ನು ನೋಡಲು ಅಷ್ಟು ಖುಷಿ ಅನಿಸುವುದೇ ಇಲ್ಲ. ಈಗಲೂ ಪರೀಕ್ಷೆಗಳನ್ನು ಮುಗಿಸಿ ಮಕ್ಕಳು ರಜೆಯಲ್ಲಿದ್ದಾರೆ. ಈಗಲೂ ಶಾಲೆಯಲ್ಲಿ ಅದೇ ಖಾಲಿಬೆಂಚ್ ಗಳು ಕಾಣುತ್ತಿವೆ. ಆದಷ್ಟು ಬೇಗ ರಜೆ ಮುಗಿಸಿ ಎಲ್ಲರೂ ಮರಳಿ ಶಾಲೆಗೆ ಬರುವಂತಾಗಲಿ ಅನಿಸುತ್ತದೆ. ‘ಮಕ್ಕಳಿರಲವ್ವ ಮನೆತುಂಬ’ ಎಂಬ ಹಿರಿಯರ ಮಾತಿನಂತೆ ಶಾಲೆಯಲ್ಲಿ ಮಕ್ಕಳಿದ್ದರೆ ಅದಕ್ಕೊಂದು ಶೋಭೆ ಮಕ್ಕಳೇ ಇಲ್ಲದೇ ಖಾಲಿಖಾಲಿ ಇದ್ದರೆ ಆ ವಾತಾವರಣದಲ್ಲಿ ಶಿಕ್ಷಕರಿದ್ದರೆ ಒಂದೆರಡು ದಿನಗಳ ತನಕ ಪರವಾಗಿಲ್ಲ ಎನಿಸುತ್ತದೆ. ಆದರೆ, ದಿನಕಳೆದಂತೆ ಬರೀ ಶಿಕ್ಷಕರೇ ಶಾಲೆಯಲ್ಲಿರುವಾಗ ಆ ವಾತಾವರಣದಲ್ಲಿ ಮಕ್ಕಳ ಅನುಪಸ್ಥಿತಿ ಕಾಡುತ್ತದೆ.

ಶಾಲಾ ಸಮಯದಲ್ಲಿ ಮಕ್ಕಳ ಗಲಾಟೆ, ವಿಪರೀತ ಮಾತು ಸಹಿಸಿಕೊಳ್ಳದೇ ಅದಕ್ಕೆ ತಕ್ಕ ಸಿಹಿಯಾದ ಶಿಕ್ಷೆಯನ್ನು ಕೊಟ್ಟಿರುತ್ತೇವೆ. ಒಮ್ಮೊಮ್ಮೆ ಬಿ.ಪಿ ಹೆಚ್ಚಿಸಿಕೊಂಡು ರೇಗಿರುತ್ತೇವೆ. ಆದರೆ ಈ ರಜೆಯ ಸಮಯದಲ್ಲಿ ಖಾಲಿ ಕೊಠಡಿಯಲ್ಲಿ ಮಕ್ಕಳಿಲ್ಲವಲ್ಲ ಎಂದು ಕಾಡುತ್ತದೆ. ಮಕ್ಕಳಿದ್ದರೇನೇ ಶಾಲೆ, ಅವರಿದ್ದರೇನೇ ಶಿಕ್ಷಕರು. ಶಿಕ್ಷಕರು ಮಕ್ಕಳ ಮೇಲೆ ಎಷ್ಟೇ ಕೂಗಾಡಿದರೂ ರೇಗಾಡಿದರೂ ಎರಡು ದಿನಗಳ ರಜೆ ನಂತರ ಎಲ್ಲಾ ಶಿಕ್ಷಕರಿಗೆ ಶಾಲೆಗೆ ಹೋಗಬೇಕು ಅನಿಸುತ್ತದೆ. ಬರೀ ಮಕ್ಕಳಿಗೆ ಮಾತ್ರ ರಜೆ ಕೊಟ್ಟಲ್ಲಿ , ಖಾಲಿ ಕೊಠಡಿಗಳಿಗಿಂತ ಮಕ್ಕಳು ತರಗತಿಯಲ್ಲಿರಬೇಕು, ಮಕ್ಕಳು ಶಾಲೆಯ ತುಂಬಾ ಓಡಾಡಬೇಕು. ಮಾತುಮಾತು ಎಂದು ಮಾತಾಡುತ್ತಿರಬೇಕು. ಶಿಕ್ಷಕರು ಒಂದಿಷ್ಟು ಅವರ ಮೇಲೆ ಗದರಬೇಕು. ಆಗಲೇ ಎಲ್ಲಾ ಶಿಕ್ಷಕರು ‘ನಾರ್ಮಲ್’ ಆಗಿರುತ್ತಾರೆ. ಖಾಲಿಬೆಂಚ್ ಗಳು ಕಥೆಗಳನ್ನು ಹೇಳುತ್ತವೆ, ಮಕ್ಕಳನ್ನು ನೆನಪಿಸುತ್ತವೆ…

Leave a Reply

Your email address will not be published. Required fields are marked *

Scan the code