ಪರಿಸರ ನಮಗೆ ದೈವದತ್ತ ಕೊಡುಗೆ
(SHIVAMOGA): ಪರಿಸರ ನಾಶಕ್ಕೆ ಮಾನವನ ದುರಾಸೆಯ ಜೊತೆಗೆ, ನಮ್ಮ ಜೀವನಶೈಲಿಯ ಬದಲಾವಣೆಯೂ ಕಾರಣ. ಪ್ಲಾಸ್ಟಿಕ್ ಸಂಸ್ಕೃತಿಗೆ ನಾವು ಹೊಂದಿಕೊಂಡಿರುವ ಕಾರಣ ಇಂದು ಜಲಕ್ಷಾಮದ ಜೊತೆಗೆ ಹಲವು ಸಾಂಕ್ರಾಮಿಕ ರೋಗಗಳನ್ನು ನಾವಾಗಿಯೆ ಆಹ್ವಾನಿಸಿಕೊಂಡಿದ್ದೇವೆ ಎಂದು ಇತಿಹಾಸ ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಅಮರ ಜ್ಯೋತಿ ಪಿಯೂ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಚಂದ್ರಗುತ್ತಿ ಐತಿಹಾಸಿಕ ಕೋಟೆಯೊಳಗಿನ ಮರಗಿಡ, ಸಸ್ಯಗಳ ಮಹತ್ವ, ಸಂರಕ್ಷಣೆಯ ಅವಶ್ಯಕತೆ ಕುರಿತಂತೆ ನಡೆದ ಅಂತರಕ್ರಿಯಾ ಚಟುವಟಿಕೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಭೂಮಿಯ ಮೊದಲ ಅತಿಥಿಗಳಾದ ಸಸ್ಯ ಜೀವಿಗಳ ಉಳಿವು ಸಂರಕ್ಷಣೆ ತೀರಾ ಅಗತ್ಯವಿದೆ. ಪರಿಸರ ಎಂಬುದು ನಮಗೆ ದೈವದತ್ತವಾಗಿ ಸಿಕ್ಕ ಕೊಡುಗೆ. ಅದನ್ನು ಉಳಿಸಿಕೊಂಡು ಹೋಗುವ ಕರ್ತವ್ಯ ಪ್ರತಿಯೊಬ್ಬರ ಮೇಲಿದೆ. ವೈಜ್ಞಾನಿಕ ವಿವೇಚನೆಯ ಜೊತೆಗೆ ಅವುಗಳನ್ನು ಸಂರಕ್ಷಿಸುವ ಜವಾಬ್ಧಾರಿ ವಿದ್ಯಾರ್ಥಿಗಳದ್ದೂ ಆಗಿದೆ ಎಂದ ಅವರು ಸಸ್ಯ ಸಂರಕ್ಷಣೆ ನಮ್ಮ ಹೊಣೆ ಎಂಬ ಸಂಕಲ್ಪವನ್ನು ಮಕ್ಕಳಿಂದ ಹೇಳಿಸಿ, ಮಳೆ ಸಾಕಷ್ಟು ಬಿದ್ದಾಗ್ಯೂ ನೀರಿಂಗುವಿಕೆಯ ಕ್ಷೀಣತೆಗೆ ಈ ಪ್ಲಾಸ್ಟಿಕ್ ತ್ಯಾಜ್ಯ ಕಾರಣವಾಗಿದೆ. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟು ಪ್ಲಾಸ್ಟಿಕನ್ನು ಪರಿಸರಕ್ಕೆ ವಿಶೇಷವಾಗಿ ಅರಣ್ಯಕ್ಕೆ ಸೇರಿಸದಂತೆ ನೋಡಿಕೊಳ್ಳಬೇಕು ಎಂದರು.
ನಿವೃತ್ತ ಶಿಕ್ಷಕ ಯಶವಂತಪ್ಪ ಮಾತನಾಡಿ, ನಮ್ಮ ಸುತ್ತಲಿನ ನೈಸರ್ಗಿಕ ಪರಿಸರದ ಮೌಲ್ಯಗಳ ಕುರಿತು ಶಾಲಾ ವಿದ್ಯಾರ್ಥಿಗಳಿಗೆ ಪರಿಚಯಿಸಿ ಮಾಹಿತಿ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ನಮ್ಮ ಬದುಕಿನ ನೈಜತೆಗೆ ಮಹತ್ವನೀಡಿ ಶಿಕ್ಷಣದ ಜೊತೆಗೆ ಮನೆಯ ಸದಸ್ಯರೊಂದಿಗೆ ಬೆರೆತು ಜೀವನದ ಸೊಗಡನ್ನು ಅನುಭವಿಸಬೇಕು ಎಂದರು.
ಗಸ್ತು ಅರಣ್ಯ ಪಾಲಕ ಮೌನೇಶ್ ಕೋಟೆಯಲ್ಲಿ ಕಾಣಸಿಗುವ ವೃಕ್ಷ ಪ್ರಬೇಧಗಳನ್ನು ಪರಿಚಯಿಸಿ, ಅರಣ್ಯ ಕಾನೂನು, ಸಂರಕ್ಷಣೆಗಳ ಔಚಿತ್ಯತೆ ಕುರಿತು ಮಾಹಿತಿ ನೀಡಿದರು.
ಅಮರಜ್ಯೋತಿ ಪಿಯೂ ಕಾಲೇಜು ಉಪನ್ಯಾಸಕರಾದ ಪ್ರಜ್ವಲ್ ಚಂದ್ರಗುತ್ತಿ, ಸಚಿನ್ ಪಾಟೀಲ್, ಅಶ್ವಿನಿ, ಸುಪ್ರಿಯಾ ಹಾಗೂ ಪತ್ರಕರ್ತ ಪುರುಷೋತ್ತಮ ಎನ್. ಗದ್ದೆಮನೆ, ಅರಣ್ಯ ಇಲಾಖೆ ಸಿಬ್ಬಂದಿ ಪ್ರಶಾಂತ್, ಚಿದಾನಂದ, ಹಾಗೂ ವಿದ್ಯಾರ್ಥಿಗಳು ಅಂತರಕ್ರಿಯಾ ಚಟುವಟಿಕೆಯಲ್ಲಿ ಪಾಲ್ಗೊಂಡರು.
ವರದಿ: ಮಧು ರಾಮ್ ಸೊರಬ