ಪಟಾಕಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವುದರಿಂದ ಪರಿಸರ ನಾಶವಾಗುತ್ತಿದೆ.
(KOLARA): ಬಂಗಾರಪೇಟೆ: ಪರಿಸರ ಸ್ನೇಹಿಯಾದ ಹಸಿರು ಪಟಾಕಿ ಹೊರತಾಗಿ ಪರಿಸರಕ್ಕೆ ಹಾನಿ ತರುವಂತಹ ಇತರೆ ಯಾವುದೇ ಪಟಾಕಿಗಳನ್ನು ಗ್ರಾಹಕರಿಗೆ ಮಾರಾಟ ಮಾಡಿದರೆ ಅಂತಹವರ ಪರವಾನಗಿಯನ್ನು ರದ್ದು ಮಾಡುವುದರ ಜೊತೆಗೆ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಹಸೀಲ್ದಾರ್ ವೆಂಕಟೇಶಪ್ಪ ಹೇಳಿದರು.
ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ತೆರೆದಿರುವ ಪಟಾಕಿ ಅಂಗಡಿಗಳನ್ನು ಸೋಮವಾರ ಪರಿಶೀಲನೆ ನಡೆಸಿ ಮಾತನಾಡಿ ಅವರ ಪರಿಸರ ಮಾಲಿನ್ಯ ಇರುವಂತಹ ಪಟಾಕಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವುದರಿಂದ ಪರಿಸರ ನಾಶವಾಗುತ್ತಿದೆ. ಆದ್ದರಿಂದ ಸರ್ಕಾರದ ಆದೇಶದಂತೆ ಕೇವಲ ಹಸಿರು ಪಟಾಕಿ ಮಾರಾಟ ಮಾಡಲಿಕ್ಕೆ ಪರವಾನಗಿಯನ್ನು ವ್ಯಾಪಾರಸ್ಥರಿಗೆ ನೀಡಲಾಗಿದೆ. ಹಸಿರು ಪಟಾಕಿ ಹೊರತಾಗಿ ಯಾವುದೇ ಅಂಗಡಿಗಳಲ್ಲಿ ಇತರೆ ಯಾವುದೇ ಪಟಾಕಿಗಳನ್ನು ಮಾರಾಟ ಮಾಡಬಾರದು. ಜೊತೆಗೆ ಪಟಾಕಿಗಳನ್ನು ಗೋಡಾನ್, ಮನೆ ಸೇರಿದಂತೆ ಇತರೆ ಕಡೆಗಳಲ್ಲಿ ದಾಸ್ತಾನು ಮಾಡುವಂತಿಲ್ಲ. ಕಾನೂನು ಬಾಹಿರವಾಗಿ ದಾಸ್ತಾನು ಮಾಡಿರುವುದು ಕಂಡು ಬಂದರೆ ಪರವಾನಗಿ ರದ್ದು ಮಾಡಿ, ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನು ವ್ಯಾಪಾರಸ್ಥರಿಗೆ ನೀಡಿದರು.
ಅಂಗಡಿಯಿಂದ ಅಂಗಡಿಯ ಮಧ್ಯೆ 6 ಅಡಿಗಳ ಅಂತರವನ್ನು ಕಾಪಾಡಬೇಕು. ಯಾವುದೇ ಅಗ್ನಿ ಅವಘಡ ನಡೆದರೆ ಅದನ್ನು ನಿಯಂತ್ರಿಸಲು ಹಾಗೂ ಮುಂಜಾಗ್ರತೆ ಕ್ರಮವಾಗಿ ಅಗ್ನಿ ನಿರೋಧಕ ಪರಿಕರಗಳನ್ನು ಪ್ರತಿಯೊಂದು ಅಂಗಡಿಗಳಲ್ಲಿ ಇಟ್ಟುಕೊಳ್ಳಬೇಕು. ಅಂಗಡಿಗಳ ಮಾಲೀಕರು ಅಥವಾ ಕಾರ್ಮಿಕರು ಯಾರೂ ಸಹ ರಾತ್ರಿ ವೇಳೆ ಅಂಗಡಿಗಳಲ್ಲಿ ಮಲಗುವಂತಿಲ್ಲ. ಅಂಗಡಿಯ ಒಳಗೆ ಬೆಂಕಿಪೊಟ್ಟಣ ಮತ್ತು ಅಗ್ನಿ ಉತ್ಪಾದನೆ ಮಾಡುವಂತಹ ವಸ್ತುಗಳನ್ನು ವ್ಯಾಪಾರಸ್ಥರು ಬಳಸುವಂತಿಲ್ಲ. ಇದರ ಜೊತೆಗೆ ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಗಳಿಂದ ಪ್ರತ್ಯೇಕವಾಗಿ ಅಭಿಪ್ರಾಯವನ್ನು ಪಡೆದಿರಬೇಕು.
ಅಂಗಡಿಗೆ ಬರುವಂತಹ ಗ್ರಾಹಕರಿಗೆ ಪರಿಸರಕ್ಕೆ ಮಾರಕವಾಗುವಂತಹ ಪ್ಲಾಸ್ಟಿಕ್ ಅನ್ನು ನೀಡಬಾರದು. ಅಂಗಡಿಗಳಲ್ಲಿ ನಿತ್ಯ ಉತ್ಪತ್ತಿಯಾಗು ತ್ಯಾಜ್ಯ ವಸ್ತುವನ್ನು ಅಂಗಡಿ ಮಾಲೀಕರೆ ತೆರವು ಮಾಡಿ ಸರಿಯಾದ ರೀತಿಯಲ್ಲಿ ವಿಲೇವಾರು ಮಾಡಬೇಕು. ಅಂಗಡಿಗಳಲ್ಲಿ 18 ವರ್ಷಕ್ಕಿಂತ ಕೆಳ ವಯಸ್ಸಿನವರನ್ನು ಕೆಲಸಕ್ಕೆ ಇಟ್ಟುಕೊಳ್ಳಬಾರದು ಇಟ್ಟುಕೊಂಡಿರುವುದು ಕಂಡು ಬಂದರೆ ಕ್ರಮ ಜರುಗಿಸಲಾಗುತ್ತದೆ. ವಿದ್ಯುತ್ ಶಾರ್ಟ್ ಸರ್ಕೂಟ್ ಆಗುವುದನ್ನು ತಪ್ಪಿಸಲು ಸರಿಯಾದ ರೀತಿಯಲ್ಲಿ ನುರಿತ ವ್ಯಕ್ತಿಗಳಿಂದ ಹಾಗೂ ಬೆಸ್ಕಾಂ ಇಲಾಖೆಯಿಂದ ಅನುಮತಿಯೊಂದಿಗೆ ವಿದ್ಯುತ್ ಸಂಪರ್ಕ ಪಡೆಯಬೇಕು ಎಂದು ವ್ಯಾಪಾರಸ್ಥರಿಗೆ ತಿಳಿಸಿದರು.
ದೀಪಾವಳಿ ಎಂದರೆ ದೀಪಗಳ ಹಬ್ಬವಾಗಿದ್ದು, ಜನರು ಪಟಾಕಿಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸಿ ದೀಪಗಳನ್ನು ಹಚ್ಚಿ ಹಬ್ಬವನ್ನು ಆಚರಿಸುವ ಮೂಲಕ ಪರಿಸರವನ್ನು ಕಾಪಾಡಬೇಕು. ಪಟಾಕಿಗಳನ್ನು ಸಿಡಿಸುವಾಗ ಪ್ರತಿಯೊಬ್ಬರೂ ಸಹ ಎಚ್ಚರಿಕೆಯಿಂದ ಇರಬೇಕು. ಪ್ರತಿಯೊಂದು ದೀಪಾವಳಿಯಲ್ಲಿಯೂ ಬಹಳಷ್ಟು ಜನರು ಕಣ್ಣುಗಳಿಗೆ ಹಾನಿಯನ್ನು ತಂದುಕೊಳ್ಳುತ್ತಿದ್ದಾರೆ. ಆದ್ದರಿಂದ ಹೆಚ್ಚು ಸದ್ದು ಹಾಗೂ ಕಣ್ಣಿಗೆ ಸಮಸ್ಯೆ ತರುವಂತಹ ಪಟಾಕಿಗಳನ್ನು ಬಳಕೆ ಮಾಡಬಾರದು. ಮಕ್ಕಳು ಪಟಾಕಿ ಹೊಡೆಯುವಾಗ ಪೋಷಕರು ಜೊತೆಯಲ್ಲಿ ಇದ್ದು ಪಟಾಕಿಯನ್ನು ಸಿಡಿಸಬೇಕು. ರಾತ್ರಿಯ ವೇಳೆ ಇತರರಿಗೆ ಸಮಸ್ಯೆ ಆಗದಂತೆ ನಿಗದಿತ ಸಮಯದಲ್ಲಿ ಮಾತ್ರ ಪಟಾಕಿಗಳನ್ನು ಸಿಡಿಸಬೇಕು ಎಂಬ ಸಾರ್ವಜನಿಕರಿಗೆ ಸಲಹೆ ನೀಡಿದರು.
ಈ ವೇಳೆ ರಾಜಸ್ವ ನಿರೀಕ್ಷ ಅಜಯ್ ಕುಮಾರ್, ಆಡಳಿತ ಅಧಿಕಾರಿ ಯೋಗೇಶ್, ಪುರಸಭೆ ಅಧಿಕಾರಿ ಮಹೇಶ್ ಸೇರಿದಂತೆ ಪೊಲೀಸ್ ಮತ್ತು ಬೆಸ್ಕಾಂ ಅಧಿಕಾರಿಗಳು ಹಾಜರಿದ್ದರು.
ವರದಿ: ವಿಷ್ಣು ಕೋಲಾರ