ಪರಿಸರವನ್ನೇ ದೇವರನ್ನಾಗಿ ಆರಾಧಿಸಬೇಕು…ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು.
ಅತಿಶಯ ಶ್ರೀ ಸಿದ್ದಗಿರಿ ಕ್ಷೇತ್ರ ವಡನ್ ಬೈಲ್ ನಲ್ಲಿ ಪಂಚಕಲ್ಯಾಣ ಮಹಾಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ
ಜೋಗ/ಕಾರ್ಗಲ್ : ಜೀವ ಜಗತ್ತಿಗೆ ಸದಾ ಉಸಿರಾಗಿರುವ ಪ್ರಕೃತಿಯನ್ನೇ ದೇವರನ್ನಾಗಿ ಆರಾಧಿಸಬೇಕು ಎಂದು ಆನಂದಪುರ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮಿಗಳು ಹೇಳಿದರು. ಅವರು ಇಲ್ಲಿಗೆ ಸಮೀಪದ ಅತಿಶಯ ಶ್ರೀ ಸಿದ್ಧಗಿರಿ ಕ್ಷೇತ್ರ ವಡನಬೈಲಿನಲ್ಲಿ ಮಾರ್ಚ್ 1ರಿಂದ 6ರ ವರಗೆ ಆಯೋಜಿಸಿರುವ ಭಗವಾನ್ ಶ್ರೀ ಪಾಶ್ರ್ವನಾಥಸ್ವಾಮಿ ಪಂಚಕಲ್ಯಾಣ ಮಹಾಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಆರ್ಶಿವಚನ ನೀಡಿ ಜಗತ್ತನ್ನು ಜಯಿಸುವುದು ಮುಖ್ಯವಲ್ಲ ತನ್ನನ್ನು ತಾನು ಜಯಿಸಬೇಕು ಮೊದಲು ಮನಸ್ಸನ್ನು ಗೆಲ್ಲಬೇಕು. ಪರೋಪಕಾರಕ್ಕಾಗಿ ತನ್ನನ್ನು ತಾನು ತ್ಯಾಗ ಮಾಡುವುದು ಶ್ರೇಷ್ಠವಾಗಿದೆ, ಜೈನ ಧರ್ಮದಲ್ಲಿ ಮುನಿ ಧರ್ಮವನ್ನು ಗಮನಿಸಿದರೆ ತ್ಯಾಗ ಧರ್ಮಕ್ಕೆ ಎಷ್ಟೊಂದು ಮಹತ್ವವಿದೆ ಎಂದು ಈಗಲೂ ಗಮನಿಸಬಹುದಾಗಿದೆ. ವಿಶ್ವಕ್ಕೆ ಜೈನ ಧರ್ಮ ನೀಡಿದ ಕೊಡುಗೆ ಅಪಾರವಾಗಿದೆ.
ಜೀವನ ಸಾರ್ಥಕವಾಗುವುದೇ ಆತ್ಮ ಸಾಕ್ಷಾತ್ಕಾರದಿಂದ. ಎಲ್ಲ ಜೀವಿಗಳಿಗೂ ಒಳ್ಳೆಯದನ್ನು ಬಯಸುವ ಧರ್ಮವೇ ಶ್ರೇಷ್ಠ ಧರ್ಮವಾಗಿದೆ. ಒಂದೊಂದು ಸ್ಥಳಕ್ಕೂ ತನ್ನದೇ ಆದ ವಿಶಿಷ್ಠವಾದ ಶಕ್ತಿ ಇರುತ್ತದೆ ಇಂತಹಾ ಕ್ಷೇತ್ರಗಳಲ್ಲಿ ವಿಶ್ವವಿಖ್ಯಾತ ಜೋಗ ಜಲಪಾತ ಸಮೀಪದ ವಡನಬೈಲು ಸಹ ಒಂದಾಗಿದೆ ಇದೊಂದು ಸುಂದರವಾದ ಹಾಗು ಆಕರ್ಶಕ ಧಾರ್ಮಿಕ ಕೇಂದ್ರವಾಗಿದ್ದು ಇಂತಹ ಕ್ಷೇತ್ರವನ್ನು ಮಾದರಿಯಾಗಿ ಕಟ್ಟಿ ಜನಸೇವೆಗೆ ನಿಂತಿರುವ ಎಚ್.ಎಂ. ವೀರರಾಜಯ್ಯ ಜೈನ್ ಅವರ ಶ್ರಮ ಮತ್ತು ಬದುಕು ಸಾರ್ಥಕವಾಗಿದೆ. ಮನುಷ್ಯರಾಗಿ ಬದುಕುವಂತಾಗಬೇಕು, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಂತಾಗಬೇಕಾಗಿದೆ. ಒಳ್ಳೆಯ ಮನಸ್ಸಿದ್ದರೆ ಒಳ್ಳೆಯ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ. ಸದಾ ಜಗತ್ತಿಗೆ ಒಳ್ಳೆಯದನ್ನು ಬಯಸುವ ಮನೋಧರ್ಮ ಪ್ರತಿಯೋಬ್ಬರಲ್ಲೂ ಬರಬೇಕಾಗಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ್ದ ಪುಣ್ಯಸಾಗರ ಮುನಿಗಳು ಆರ್ಶಿವಚನ ನೀಡಿ ಬದುಕಿನಲ್ಲಿ ನಿರಂತರವಾಗಿ ಧರ್ಮ ಕಾರ್ಯವನ್ನು ಮಾಡಬೇಕು, ದ್ವೇಷ, ಅಸೂಯೆ, ಮಾನ, ಕಷಾಯ, ಕ್ರೋಧಗಳನ್ನು ನಾಶ ಮಾಡಿದರೆ ಮಾತ್ರ ಮೋಕ್ಷದಡಿಗೆ ಸಾಗಲು ಸಾಧ್ಯ. ಬದುಕಿನಲ್ಲಿ ಸದಾ ಸಂತಸದಾಯಕವಾಗಿ ಇರಬೇಕು, ಯಾರನ್ನು ದ್ವೇಷ ಮಾಡಬಾರದು. ಅಹಿಂಸೆಯನ್ನು ಉಸಿರಾಗಿಸಿಕೊಂಡು ಜೀವನವನ್ನು ಸಾಗಿಸಬೇಕು, ಬರೀ ಗಳಿಸುವುದೇ ಬದುಕಲ್ಲಾ ಧರ್ಮ ಮಾರ್ಗದಲ್ಲಿ ಸಾಗುವುದು ಅತಿ ಮುಖ್ಯವಾಗಿದೆ ಧರ್ಮ ಕಾರ್ಯಕ್ಕಾಗಿ ತಮ್ಮ ಒಂದಿಷ್ಟು ಸಮಯವನ್ನು ಮೀಸಲಾಗಿಡುವ ಕೆಲಸ ಆಗಬೇಕಾಗಿದೆ. ಜೈನ ಧರ್ಮವು ಜಗತ್ತಿಗೆ ಅಹಿಂಸಾ ಸಂದೇಶವನ್ನು ನೀಡಿದೆ. ಇಂತಹಾ ಧರ್ಮದ ತತ್ವ ಸಿದ್ಧಾಂತಗಳು ಸದಾ ಜೀವಂತವಾಗಿವೆ ಇವುಗಳನ್ನು ಪ್ರತಿಯೋಬ್ಬರು ಪಾಲಿಸಿದಲ್ಲಿ ಜಗತ್ತು ಶಾಂತಿ ಇಂದ ಇರಲು ಸಾಧ್ಯವಾಗಿತ್ತದೆ ಎಂದವರು ಹೇಳಿದರು.
ಆರತಿಪುರ ಜೈನ ಮಠದ ಸ್ವಸ್ತಿಶ್ರೀ ಸಿದ್ಧಾಂತಕೀರ್ತಿ ಭಟ್ಟಾರಕ ಸ್ವಾಮಿಗಳು ಮಾತನಾಡಿ ಜೀವಜಗತ್ತಿನಲ್ಲಿ ಪ್ರತಿಯೊಬ್ಬರು ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕಬೇಕಾಗಿದೆ, ಮನುಷ್ಯರನ್ನು ಮನುಷ್ಯರಾಗಿ ಕಾಣುವ ಕೆಲಸ ಆಗಬೇಕಾಗಿದೆ. ಧರ್ಮವನ್ನು ಸರಿಯಾಗಿ ಅರ್ಥಮಾಡಿಕೊಂಡಲ್ಲಿ ಮಾತ್ರ ಮೋಕ್ಷ ಮಾರ್ಗಕ್ಕೆ ಹೋಗಲು ಸಾಧ್ಯವಾಗುತ್ತದೆ. ನಿರಂತರ ಸ್ವಾದ್ಯಾಯ, ಸಂಯಮವನ್ನು ಕಾಪಾಡಿಕೊಳ್ಳುವ ಕೆಲಸ ಆಗಬೇಕಾಗಿದೆ ಎಂದರು.
ಸೋಂಧಾ ಜೈನ ಮಠದ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಸಾನಿಧ್ಯವನ್ನು ವಹಿಸಿದ್ದರು.
ವಡನಬೈಲಿನ ಧರ್ಮದರ್ಶಿ ಎಚ್.ಎಂ.ವೀರರಾಜಯ್ಯ ಜೈನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು ವೇದಿಕೆಯಲ್ಲಿ ಪ್ರಮುಖರಾದ ಸವಿತಾ ದೇವರಾಜ್, ಎಸ್.ಆರ್, ನಾಗರಾಜ್, ಪದ್ಮನಾಭಯ್ಯ ಹಾರಿಗೆ, ಪ್ರೇಮ್ ಕುಮಾರ್ ಕಾರ್ಗಲ್, ಸುರೇಂದ್ರ ಮಹಲೇ, ಕೆ.ಟಿ.ನೇಮಯ್ಯಾ, ರಾಜು ಪಂಡಿತ್ ಮೊದಲಾದವರು ಉಪಸ್ಥಿತರಿದ್ದರು. ಆರಂಭದಲ್ಲಿ ಪೂಜಾ ಸಂಗಡಿಗರು ಪ್ರಾರ್ಥಿಸಿ, ಬಬಿತಾ ಸ್ವಾಗತಿಸಿ, ದೇವರಾಜ್ ವಂದಿಸಿ, ಕುಮುದಾ ನಾಗಭೂಷಣ್ ನಿರೂಪಿಸಿದರು. ರಾತ್ರಿ ವಿದ್ವಾನ್ ಗೋಪಾಲ್ ಮತ್ತು ತಂಡದವರಿಂದ ಸಾಂಸ್ಕøತಿಕ ವೈವಿಧ್ಯ ಕಾರ್ಯಕ್ರಮಗಳು ನೆರವೇರಿದವು.
ಬೆಳಗ್ಗೆ ಸುಪ್ರಭಾತ ಧರ್ಮಾಚಾರ್ಯರ ಆಮಂತ್ರಣ, ಇಂದ್ರ ಪ್ರತಿಷ್ಠೆ, ಕಂಕಣ ಬಂಧನ, ಧ್ವಜಾರೋಹಣ, ಕಳಶ ಯಾತ್ರ ಮಹೋತ್ಸವ, ನಿತ್ಯಾಭಿಷೇಕ, ಮಂಟಪ ಉದ್ಘಾಟನೆ, ನಾಂದಿ ಕಳಶ ಸ್ಥಾಪನೆ, ಸಭಾ ಮಂಟಪದಲ್ಲಿ, ಅಖಂಡ ದೀಪ ಪ್ರಜ್ವಲನೆ, ವಾಸ್ತು ಶಾಂತಿ, ವಿಮಾನ ಶುದ್ಧಿ, ಮೊದಲಾದ ಶಾಂತಿ ಚಕ್ರ ಆರಾಧನೆ ಧಾರ್ಮಿಕ ಪೂಜಾ ವಿಧಾನಗಳನ್ನು ನೆರವೇರಿಸಲಾಯಿತು.