ಪರಿಸರ ರಕ್ಷಣೆ ಎಲ್ಲರ ಹೊಣೆ,ಪರಿಸರವೂ ಸಾಕಷ್ಟು ಕಲುಷಿತವಾಗಿರುವುದು.
(CHIKKAMAGALURU): ಸಕಲ ಜೀವ ಜಗತ್ತಿಗೆ ಆಧಾರವಾಗಿರುವ ಪರಿಸರ ರಕ್ಷಣೆ ಎಲ್ಲರ ಹೊಣೆಯಾಗಿದೆ ಎಂದು ಜೇಸಿ ಅಧ್ಯಕ್ಷ ಎನ್.ಶಶಿಧರ್ ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಪಟ್ಟಣದ ಜೇಸಿ ಕ್ಲಾಸಿಕ್ ಸಂಸ್ಥೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬುಧವಾರ ಸಮೀಪದ ಮುದುಗುಣಿಯ ಶಿವಗಂಗಾಮಠದ ಶ್ರೀ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಕಲ್ಪವೃಕ್ಷದ ಸಸಿಗಳನ್ನು ನೆಟ್ಟು ಅವರು ಮಾತನಾಡಿದರು.
ವಿಶ್ವದಲ್ಲಿ ಪರಿಸರವು ಮಾನವ, ಪ್ರಾಣಿ, ಪಕ್ಷಿಗಳಿಗೆ ಆಧಾರ ಸ್ತಂಭವಾಗಿದೆ. ಇದನ್ನು ನಾವೆಲ್ಲರೂ ಸದ್ಬಳಕೆ ಮಾಡುವುದರೊಂದಿಗೆ ಮುಂದಿನ ಪೀಳಿಗೆಗೂ ಉಳಿಸಿಕೊಳ್ಳಬೇಕಾಗಿದೆ. ಇಂದಿನ ದಿನದಲ್ಲಿ ಅತಿಯಾದ ರಾಸಾಯನಿಕಗಳ ಬಳಕೆಯಿಂದ ಸಮೃದ್ಧವಾದ ಭೂಮಿಯು ತನ್ನ ಸತ್ವವನ್ನು ಕಳೆದುಕೊಳ್ಳುತ್ತಿದೆ.
ರಾಸಾಯನಿಕಯುಕ್ತ ಭೂಮಿಯಿಂದ ಉತ್ತಮ ಆಹಾರ ಬೆಳೆಗಳು ನಮಗೆ ದೊರೆಯದೆ ವಿಷಪೂರಿತ ಆಹಾರವನ್ನೇ ನಾವು ಸೇವಿಸುವಂತಾಗಿದೆ. ಇದರಿಂದಾಗಿ ಮಾನವನ ಆರೋಗ್ಯದ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ. ಪರಿಸರವೂ ಸಾಕಷ್ಟು ಕಲುಷಿತವಾಗುತ್ತದೆ.
ಈ ಹಿನ್ನೆಲೆಯಲ್ಲಿ ನಾವುಗಳು ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡುವ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕಿದೆ. ಶುದ್ಧ ನೀರು, ಗಾಳಿ, ಪರಿಸರವನ್ನು ರಕ್ಷಿಸುವ ಮೂಲಕ ಪರಿಸರ ಕಾಳಜಿಯನ್ನು ಮೆರೆಯಬೇಕಿದೆ ಎಂದರು
ಸಿದ್ದೇಶ್ವರ ದೇಗುಲದ ಅಧ್ಯಕ್ಷ ಕೆ.ಎನ್.ಮರಿಗೌಡ (ರುದ್ರಪ್ಪಗೌಡ) ಮಾತನಾಡಿ, ಮನುಷ್ಯನ ಅತಿಯಾದ ಆಸೆಯಿಂದ ಇಂದು ಪರಿಸರವು ಅವನತಿ ಹೊಂದುತ್ತಿದ್ದು, ಇದರ ರಕ್ಷಣೆ ಮಾಡಬೇಕಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ನಮ್ಮೆಲ್ಲರನ್ನು ಹೊತ್ತು ರಕ್ಷಣೆ ಮಾಡುತ್ತಿರುವ ಭೂಮಿ, ಪ್ರಕೃತಿ ಮಾತೆಗೆ ಪ್ರತಿದಿನವೂ ನಮಿಸಿ ನಮ್ಮ ನಿತ್ಯದ ಕಾರ್ಯಗಳನ್ನು ಆರಂಭಿಸುವುದರಿoದ ನಮಗೆ ಶ್ರೇಯಸ್ಸು ಲಭಿಸಲಿದೆ ಎಂದರು.
ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಸದಾಶಿವ ಆಚಾರ್ಯ, ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಡಿ.ಶಿವರಾಮ್, ಜೇಸಿ ಪೂರ್ವಾಧ್ಯಕ್ಷ ಚೈತನ್ಯ ವೆಂಕಿ, ಸುಧಾಕರ್, ಸಿ.ಪಿ.ರಮೇಶ್, ರಿಚರ್ಡ್ ಮಥಾಯಿಸ್, ಹಿರಿಯ ಕ್ರೀಡಾಪಟು ಓ.ಡಿ.ಸ್ಟೀಫನ್, ಜೇಸಿ ಕಾರ್ಯದರ್ಶಿ ಶೃಜಿತ್ ಹುಯಿಗೆರೆ, ಸದಸ್ಯರಾದ ಪ್ರಕಾಶ್ ಮುದುಗುಣಿ, ನಿಖಿಲೇಶ್, ಎಸ್.ಕೆ.ರಫೀ, ಶಾಹಿದ್, ಸುನೀಲ್ ಮತ್ತಿತರರು ಹಾಜರಿದ್ದರು.