ಭದ್ರಾ ನದಿಯ ತೀರದಲ್ಲಿ ವಿಶೇಷವಾಗಿ ಭದ್ರಾರತಿ.
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಪಟ್ಟಣದ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯು ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಶನಿವಾರ ರಾತ್ರಿ ಭದ್ರಾ ನದಿ ತಟದಲ್ಲಿ ಆಯೋಜಿಸಿದ್ದ ಭದ್ರಾರತಿ ಧಾರ್ಮಿಕ ಕಾರ್ಯಕ್ರಮವು ವೈಭವದಿಂದ ನಡೆಯಿತು.
ಇದೇ ಪ್ರಥಮ ಬಾರಿಗೆ ಭದ್ರಾ ನದಿಗೆ ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಪೂಜೆ ಸಲ್ಲಿಸಿ ಕಳಶ ರೂಪದಲ್ಲಿ ಗಂಗೆಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಬಳಿಕ ಕಾಶಿ, ಹರಿದ್ವಾರ, ಋಷಿಕೇಶದಲ್ಲಿ ನಡೆಯುವ ಗಂಗಾರತಿ ಮಾದರಿಯಲ್ಲಿ ತುಂಬಿ ಹರಿಯುವ ಭದ್ರಾ ನದಿಗೆ ಪಂಚ ಅರ್ಚಕರ ಸಮ್ಮುಖದಲ್ಲಿ ದೂಪಾರತಿ ನೆರವೇರಿಸಿ ವಿಶೇಷವಾಗಿ ಅಲಂಕೃತವಾದ ಪಂಚಲೋಹದ ಆರತಿ ತಟ್ಟೆಯಲ್ಲಿ ಭದ್ರೆಗೆ ಆರತಿ ಬೆಳಗಲಾಯಿತು.
ನಂತರ ಶಂಖ, ಜಾಗಟೆ, ಡಮರುಗ, ಚಾಮರದ ಸೇವೆ ನೆರವೇರಿಸಲಾಯಿತು. ಬಳಿಕ ಅರ್ಚಕರಾದಿಯಾಗಿ ನೆರೆದಿದ್ದ ಸಾವಿರಾರು ಜನರು ಭದ್ರಾನದಿಯ ಒಡಲಿಗೆ ವಿವಿಧ ಪುಷ್ಪಗಳನ್ನು ಅರ್ಪಿಸಿ ಧನ್ಯತೆ ಪಡೆದರು.
ಅರ್ಚಕರಾದ ಸುಬ್ರಹ್ಮಣ್ಯ ಭಟ್, ಪ್ರಶಾಂತ್ ಭಟ್, ನಂದನ್ ಭಟ್ ಉತ್ತಮೇಶ್ವರ, ಪ್ರಸನ್ನಭಟ್, ಅಭಿಷೇಕ್ ಭಟ್ ಭದ್ರಾರತಿಯ ಧಾರ್ಮಿಕ ವಿಧಿ ವಿಧಾನಗಳು ನೆರವೇರಿಸಿದರು.
ಸಮಿತಿಯ ಕೋಶಾಧಿಕಾರಿ ಭಾಸ್ಕರ್ ವೆನಿಲ್ಲಾ ಮಾತನಾಡಿ, ಪಟ್ಟಣದಲ್ಲಿ ನವರಾತ್ರಿ ಸಂದರ್ಭದಲ್ಲಿ ವಿಶೇಷ ಭದ್ರಾರತಿಯ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದ್ದು, ಇದು ಇದೇ ಮೊದಲ ಬಾರಿಯಾಗಿದೆ. ದುರ್ಗಾ ಸಮಿತಿಯು ವಿಶೇಷ ಕಲ್ಪನೆಗಳೊಂದಿಗೆ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರ ಮನಗೆಲ್ಲುವ ಕಾರ್ಯ ಮಾಡುತ್ತಿದೆ ಎಂದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಮಾತನಾಡಿ, ಮಲೆನಾಡು ಮತ್ತು ಬಯಲು ಸೀಮೆಯ ರೈತರ ಜೀವನಾಡಿಯಾದ ಭದ್ರಾ ನದಿಗೆ ಈ ಬಾರಿ ಗಂಗಾರತಿ ಮಾದರಿಯಲ್ಲಿ ಭದ್ರಾರತಿ ಕಾರ್ಯಕ್ರಮವನ್ನು ಧಾರ್ಮಿಕ ವಿಧಾನಗಳನ್ನು ನೆರವೇರಿಸಿದ್ದು, ಸಮಸ್ತ ರೈತರು, ನದಿ ನೀರು ಬಳಕೆದಾರರಿಗೆ ಒಳಿತಾಗಲಿ ಎಂಬ ಆಶಯವನ್ನು ಸಮಿತಿ ಹೊಂದಿದೆ.
ಈ ಭದ್ರಾರತಿ ಧಾರ್ಮಿಕ ಕಾರ್ಯದಿಂದ ಭದ್ರಾ ನದಿಯು ಪ್ರಸನ್ನತೆಯನ್ನು ಹೊಂದಿ ಜನರಿಗೆ ಸದಾ ಕಾಲ ಕಾಲಕ್ಕೆ ನೀರನ್ನು ಒದಗಿಸುತ್ತಾಳೆ. ರೈತರಿಗೆ ಉತ್ತಮ ಬೆಳೆ, ಬೆಲೆ ದೊರೆಯುತ್ತದೆ ಎಂಬ ನಂಬಿಕೆಯಿದೆ. ಮುಂದಿನ ವರ್ಷ ಇನ್ನಷ್ಟು ವೈಭವಯುತವಾಗಿ ಭದ್ರಾರತಿ ನೆರವೇರಿಸಲಾಗುವುದು. ಈ ಬಾರಿಯ ಭದ್ರಾರತಿ ಯಶಸ್ವಿಯೂ ಆಗಿದೆ. ನವರಾತ್ರಿಯ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರು ಸಂಪೂರ್ಣ ಸಹಕಾರ ನೀಡಿದ್ದರಿಂದ ಕಾರ್ಯಕ್ರಮಗಳು ಯಶಸ್ವಿಯಾಗಗಲು ಕಾರಣವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮಂಜು ಹೊಳೆಬಾಗಿಲು ನೇತೃತ್ವದಲ್ಲಿ ಉಕ್ಕಡದ ಮೂಲಕ ತುಂಬಿ ಹರಿಯುವ ಭದ್ರಾ ನದಿಯಲ್ಲಿ ವಿವಿಧ ಮಾದರಿಯ ಪಟಾಕಿಗಳನ್ನು ಪ್ರದರ್ಶನ ಮಾಡಿದ್ದು ನೋಡುಗರ ಗಮನಸೆಳೆಯಿತು.
ಸಮಿತಿಯ ಕಾರ್ಯಾಧ್ಯಕ್ಷ ಬಿ.ಚನ್ನಕೇಶವ, ಜಂಟಿ ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಉಪಾಧ್ಯಕ್ಷ ಶಿವರಾಮಶೆಟ್ಟಿ, ಎಚ್.ಡಿ.ಸತೀಶ್, ಚೈತನ್ಯ ವೆಂಕಿ, ರೆನ್ನಿ ದೇವಯ್ಯ, ನಾರಾಯಣ ಶೆಟ್ಟಿ, ಸುಧಾಕರ್ ದಿಡಿಗೆಮನೆ, ನಾಗರಾಜ್ ಬರಗಲ್ ಮತ್ತಿತರರು ಹಾಜರಿದ್ದರು