ಕಾನೂನಿನ ಅರಿವು ಪ್ರತಿಯೊಬ್ಬರಲ್ಲೂ ಇರಬೇಕು
ನ್ಯಾಯಾಧೀಶರಾದ ಶ್ರೀಶೈಲ ಭೀಮಸೇನಬಾಗಡಿ
(SHIVAMOGGA): ಸಾಗರ:ಕಾನೂನಿನ ಅರಿವು ಪ್ರತಿಯೊಬ್ಬರಲ್ಲೂ ಇರಬೇಕಾಗಿದೆ ಎಂದು ಸಾಗರ ಜೆ.ಎಂ.ಎಫ್ ಸಿ ಯು ಹಿರಿಯ ನ್ಯಾಯಾಧೀಶರಾದ ಶ್ರೀಶೈಲ ಭೀಮಸೇನ ಬಾಗಡಿ ಅವರು ಹೇಳಿದರು
ಅವರು ಇಲ್ಲಿನ ಸೇವಾಸಾಗರ ಶಾಲೆಯ ಅಜಿತ್ ಸಭಾಂಗಣದಲ್ಲಿ ಕಾನೂನು ಸೇವಾ ಪ್ರಾಧಿಕಾರ ವಕೀಲರ ಸಂಘ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಇವರು ಆಯೋಜಿಸಿದ್ದ ಗ್ರಾಹಕರದಿನ,ಕಾನೂನು ಅರಿವು ನೆರವು ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರ ಆಡಳಿತಾತ್ಮಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ ಕಾನೂನನ್ನು ಸರಿಯಾದ ರೀತಿಯಲ್ಲಿ ತಿಳಿದುಕೊಳ್ಳಬೇಕು, ಕಾನೂನಿನ ಅರಿವು ಅತಿಮುಖ್ಯವಾಗಿದೆ, ಅದರಲ್ಲೂ ಜನ ಸಾಮಾನ್ಯರ ನಡುವೆ ಇರುವ ಶಿಕ್ಷಕರು ಮೂಲ ಭೂತ ಕಾನೂನಿನ ತಿಳುವಳಿಕೆ ಅತಿ ಮುಖ್ಯವಾಗಿದೆ, ಸರ್ಕಾರಿ ಶಾಲಾ ಮಕ್ಕಳ ಕಲಿಕೆ ಅತ್ಯಂತ ಕರಾರುವಾಕ್ಕಾಗಿ ನಡೆಯುತ್ತಿರುವುದರಿಂದ ಶೈಕ್ಷಣಿಕ ಪ್ರಗತಿ ಉತ್ತಮವಾಗಿದೆ, ಪ್ರತಿಯೊಂದು ಕ್ಷೇತ್ರದಲ್ಲೂ ಸರ್ಕಾರಿ ಮಕ್ಕಳು ಗುರುತಿಸಿಕೊಂಡಿದ್ದು ವಿಶೇಷವಾಗಿದೆ, ಗ್ರಾಹಕರ ಹಿತರಕ್ಷಣೆ ಮುಖ್ಯವಾಗಿದೆ, ಪ್ರತಿಯೊಂದು ಕ್ಷೇತ್ರಗಳ ಬಗ್ಗೆ ಸಾಮಾನ್ಯ ಮಾಹಿತಿಯನ್ನು ತಿಳಿದುಕೊಳ್ಳಬೇಕಾಗಿದೆ. ಸಂವಿಧಾನಬದ್ಧ ದೇಶದಲ್ಲಿ ಕಾನೂನಿನ ತಿಳುವಳಿಕೆ ತುಂಬಾ ಅಗತ್ಯವಾಗಿದೆ ಎಂದವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಈ.ಪರಶುರಾಮಪ್ಪ ಮಾತನಾಡಿ ಶಾಲಾ ಮುಖ್ಯ ಶಿಕ್ಷಕರು ತಮ್ಮ ಕಲ್ಪನೆಯ ಶಾಲೆಯನ್ನು ರೂಪಿಸಬೇಕಿದೆ, ಸಮುದಾಯದ ಸಹಭಾಗಿತ್ವವನ್ನು ಪಡೆಯುವ ಮೂಲಕ ಶಾಲೆಯ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಬೇಕಿದೆ, ಉತ್ತಮವಾದ ಶೈಕ್ಷಣಿಕ ಪರಿಸರವನ್ನು ನಿರ್ಮಾಣ ಮಾಡುವಲ್ಲಿ ಮುಖ್ಯ ಶಿಕ್ಷಕರ ಪಾತ್ರ ಅತಿ ಮುಖ್ಯವಾಗಿದೆ, ನಿರಂತರ ಪರಿಶ್ರಮದಿಂದ ಮಾತ್ರ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಬೇಕು ಆಡಳಿತಾತ್ಮಕವಾಗಿ ಕರಾರುವಾಕ್ಕಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದವರು ಹೇಳಿದರು
ಕಾರ್ಯಕ್ರಮದಲ್ಲಿ ಸರ್ಕಾರಿ ಸಹಾಯಕ ಅಭಿಯೋಜಕರಾದ ರಂಜಿತ್ ನಾಯ್ಕ್, ವಕೀಲರ ಸಂಘದ ಕಾರ್ಯದರ್ಶಿ ರಮೇಶ್ ಶಿರವಾಳ, ವಕೀಲರಾದ ಪ್ರವೀಣ್ ಕುಮಾರ್, ಟಿಪಿಇಓ ಗುರುರಾಜ್ ವಿ.ಟಿ.ಸ್ವಾಮಿ ಉಪಸ್ಥಿತರಿದ್ದರು
ಸಂಪನ್ಮೂಲ ವ್ಯಕ್ತಿಗಳಾಗಿ ದತ್ತಾತ್ರೇಯ ಭಟ್, ಡಾ.ಅನ್ನಪೂರ್ಣ, ಪ್ರಸನ್ನ, ಶೇಖರಪ್ಪ, ಚಂದ್ರಪ್ಪ ಮೊದಲಾದವರು ಹಾಜರಿದ್ದರು