ರೈತ ದಿನಾಚರಣೆ ಸರ್ಕಾರದ ಆದೇಶಕ್ಕೆ ಮಾತ್ರ ಸೀಮಿತವಾಗದೇ ಎಲ್ಲರೂ ಒಗ್ಗೂಡಿ ಆಚರಿಸಬೇಕು.
(SHIVAMOGA): ಸೊರಬ: ರೈತ ದಿನಾಚರಣೆ ಸರ್ಕಾರದ ಆದೇಶಕ್ಕೆ ಮಾತ್ರ ಸೀಮಿತವಾಗದೇ, ಎಲ್ಲಾ ರೈತರು ಒಗ್ಗೂಡಿ ಆಚರಿಸುವ ಹಬ್ಬದಂತಾಗಬೇಕು ಎಂದು ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದ ಗೌಡ ಹೇಳಿದರು.
ಪಟ್ಟಣದ ಪುರಸಭೆ ಮುಂಭಾಗದ ವೃತ್ತದಲ್ಲಿ ಸೋಮವಾರ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ, ಗೋ ಸಂರಕ್ಷಣಾ ಹೋರಾಟ ಸಮಿತಿ ಹಾಗೂ ತಾಲೂಕು ಕೃಷಿ ಸಮಾಜದ ವತಿಯಿಂದ ಹಮ್ಮಿಕೊಂಡ ರೈತ ದಿನಾಚರಣೆ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತ ದಿನಾಚರಣೆ ಸಂದರ್ಭದಲ್ಲಿ ರೈತ ಸಮುದಾಯಕ್ಕಾಗಿ ವಿಶೇಷ ಯೋಜನೆಗಳನ್ನು ಘೋಷಿಸಬೇಕು. ಈಗಾಗಲೇ ಅತಿವೃಷ್ಠಿ ಮತ್ತು ಅನಾವೃಷ್ಠಿಯಿಂದ ರೈತರು ನಲುಗಿ ಹೋಗಿದ್ದಾರೆ. ಸಮಿತಿಯ ವತಿಯಿಂದ ಕಳೆದ 16 ವರ್ಷಗಳಿಂದ ರೈತ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಯಾವುದೇ ಸರ್ಕಾರಗಳು ಆಡಳಿತಕ್ಕೆ ಬಂದರೂ ರೈತರ ಸಮಸ್ಯೆಗಳಿಗೆ ಇಂದಿಗೂ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದೆ. ಪಟ್ಟಣದ ಪುರಸಭೆ ಮುಂಭಾಗದ ವೃತ್ತಕ್ಕೆ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ರೈತ ವೃತ್ತ ಎಂದು ನಾಮಕರಣ ಮಾಡಬೇಕು ಎಂದು ಮನವಿ ಸಲ್ಲಿಸಿದರೂ ಈವರೆಗೂ ಬೇಡಿಕೆ ಈಡೇರಿಲ್ಲ ಎಂದರು.
ಜಿಪಂ ಮಾಜಿ ಸದಸ್ಯ, ತಾಲೂಕು ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಹಾಗೂ ಕೃಷಿ ಸಮಾಜದ ನಿರ್ದೇಶಕ ಗುರುಕುಮಾರ್ ಪಾಟೀಲ್ ಮಾತನಾಡಿ, ರೈತ ದಿನಾಚರಣೆ ಕೇವಲ ರೈತ ಸಮುದಾಯಕ್ಕೆ ಮಾತ್ರ ಸೀಮಿತ ಸಲ್ಲದು. ಎಲ್ಲ ವರ್ಗದವರೂ ಒಗ್ಗೂಡಿ ಆಚರಿಸುವಂತಾಗಬೇಕು. ರೈತನ ಬೆವರಿನಿಂದ ಅನ್ನ ಸೇವಿಸುವ ಪ್ರತಿಯೊಬ್ಬರು ಪಾಲ್ಗೊಳ್ಳುವಂತಾಗಬೇಕು. ಮುಂದಿನ ದಿನಗಳಲ್ಲಿ ಪಾರಂಪರಿಕ ಕೃಷಿಕರನ್ನು ಗೌರವಿಸುವ ಮತ್ತು ರೈತ ದಿನಾಚರಣೆಯು ಸಂಭ್ರಮದಿಂದ ಆಚರಿಸುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಆವರಣದಿಂದ ಎತ್ತಿನ ಗಾಡಿಯ ಜೊತೆಗೆ ಶ್ರೀ ರಂಗನಾಥ ಹಿಪ್ರಾ ಶಾಲೆಯ ಮಕ್ಕಳು ಹಾಗೂ ಹಾಗೂ ವಿವಿಧ ಸಂಘಟನೆಯವರಿಂದ ಮುಖ್ಯರಸ್ತೆ ಮಾರ್ಗವಾಗಿ ಪುರಸಭೆ ಮುಂಭಾಗದ ವೃತ್ತದವರೆಗೆ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಕೆ. ಪ್ರಭಾಕರ ರಾಯ್ಕರ್, ಗಣೇಶ್ ಓಂ ಪಿಕಲ್ಸ್, ಪ್ರಧಾನ ಕಾರ್ಯದರ್ಶಿ ವೀರೇಂದ್ರ ಗೌಡ, ಸಂಘಟನಾ ಕಾರ್ಯದರ್ಶಿ ಶರತ್ಸ್ವಾಮಿ, ಸೀಗೇಹಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್. ಕೆರಿಯಪ್ಪ, ಚಿಕ್ಕಶಕುನ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಮುದ್ದೆ ಬಸವರಾಜಪ್ಪ, ಬಂಗಾರಪ ಸೀಗೆಹಳ್ಳಿ, ಪ್ರಶಾಂತ್ ಕಾನುಗೋಡು, ರಾಮಪ್ಪ ಕರಡಿಗೆರಿ, ಕಾಂತಪ್ಪ ಚಿಕ್ಕಶಕುನ ನಾಗಪ್ಪ, ಮನೋಜ್, ಕೃಷ್ಣಪ್ಪ, ಕೃಷಿ ಸಮಾಜದ ನಿರ್ದೇಶಕರಾದ ನಾಗರಾಜ ಚಿಕ್ಕಸವಿ, ದಯಾನಂದಗೌಡ ಗುಡುವಿ, ಶಾಂತಮ್ಮ ಉಳವಿ, ಮಲ್ಲಿಕಾರ್ಜುನ ಗೌಡ ಹೆಗ್ಗೋಡು, ಉಮೇಶ ಪಾಟೀಲ್, ರೈತ ಸಂಘದ ಅಧ್ಯಕ್ಷ ಈಶ್ವರಪ್ಪ ಕೊಡಕಣಿ, ವಕೀಲ ಆಶೀಕ್ ನಾಗಪ್ಪ, ಕುಮಾರ್ ಜೇಡಗೇರಿ, ಶ್ರೀ ರಂಗನಾಥ ಹಿ.ಪ್ರಾ ಶಾಲೆಯ ಶಿಕ್ಷಕರಾದ ಮಾಲತೇಶ ಮಾಸ್ತರ್, ರುದ್ರಮುನಿ, ಎಸ್.ಕೆ. ರಮೇಶ್, ಪ್ರಮುಖರಾದ ನಾಗಪ್ಪ ಬಿದರಗೇರಿ ಸೇರಿದಂತೆ ಇತರರಿದ್ದರು.
ವರದಿ: ಮಧು ರಾಮ್ ಸೊರಬ