ಜಾನಪದವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು: ಡಿ.ಮಂಜುನಾಥ
(SHIVAMOGA) ಸಾಗರ: ಜಾನಪದವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ಆಗಬೇಕಾಗಿದೆ ಎಂದು ಕಸಾಪ,ಕಜಾಪ ಹಾಗೂ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಹೇಳಿದರು
ಅವರು ಕರ್ನಾಟಕ ಜಾನಪದ ಪರಿಷತ್ತು ಸಾಗರ ಶಾಖೆಯಿಂದ ಇಲ್ಲಿನ ವಿನೋಬಾನಗರದ ಸತ್ಯನಾರಾಯಣ ಸಿರಿವಂತೆ ಇವರ ಅನುಗ್ರಹ ಮನೆಯಂಗಳದಲ್ಲಿ ಆಯೋಜಿಸಿದ್ದ ಮನೆಯಂಗಳದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮವನ್ನು ಡೊಳ್ಳು ಭಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಜಾನಪದಕ್ಕೆ ವಿಶಿಷ್ಟವಾದ ಶಕ್ತಿ ಇದೆ, ಜನರ ಬದುಕಿಗೆ ಸ್ಪೂರ್ತಿ ಹಾಗೂ ಪ್ರೇರಣೆಯಾಗಿದೆ. ಸಾಗರ ಸಾಹಿತ್ಯ ಸಾಂಸ್ಕೃತಿಕವಾಗಿ ಶ್ರೀಮಂತಿಕೆಯಿಂದ ಕೂಡಿದೆ, ಇಲ್ಲಿ ಅನೇಕ ಸಾಹಿತಿಗಳು, ಕಲಾವಿದರು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಅತಿ ಹೆಚ್ಚು ಗುರುತಿಸಿ ಕೊಂಡವರು ಸಾಗರದವರು, ಕಲೆ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕು, ಪ್ರೋತ್ಸಾಹಿಸುವ ಕೆಲಸ ಆಗಬೇಕಾಗಿದೆ ನಿರಂತರವಾಗಿ ತೊಡಗಿಸಿಕೊಳ್ಳುವ ಮೂಲಕ ಕಟ್ಟುವ ಕೆಲಸ ಮಾಡಬೇಕಾಗಿದೆ, ಮನೆ ಮನಗಳಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುವಂತಾಗಲಿ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶೃಂಗೇರಿ ಶಂಕರ ಮಠದ ಧರ್ಮದರ್ಶಿ ಅಶ್ವಿನಿ ಕುಮಾರ್ ಮಾತನಾಡಿ ಮನಸ್ಸಿಗೆ ಹತ್ತಿರವಾಗಿರುವುದೇ ಜಾನಪದ ವಾಗಿದೆ, ಕಲೆ ಸಾಹಿತ್ಯವನ್ನು ಗ್ರಾಮೀಣ ಭಾಗಕ್ಕೆ ಕೊಂಡೊಯ್ಯುವ ಕೆಲಸ ಆಗಬೇಕಾಗಿದೆ ಇಂತಹ ಮನಸು ಮನಸುಗಳನ್ನು ಬೆಸೆಯುವ ಕೆಲಸ ಆಗಲಿ ಎಂದವರು ಹೇಳಿದರು. ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಇದೆ ಸಂದರ್ಭದಲ್ಲಿ ಕನಕಶ್ರೀ ಪ್ರಶಸ್ತಿ ಪುರಸ್ಕೃತರಾದ ಪ್ರಭಾವತಿ ಇವರನ್ನು ಸನ್ಮಾನಿಸಲಾಯಿತು. ಕಜಾಪ ಅಧ್ಯಕ್ಷರಾದ ಸತ್ಯನಾರಾಯಣ ಸಿರಿವಂತೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ನಗರಸಭೆ ಸದಸ್ಯ ಗಣೇಶ್ ಪ್ರಸಾದ್, ಅಕ್ಷಯ ಸೌಹಾರ್ದ ಸಂಸ್ಥೆಯ ಅಧ್ಯಕ್ಷರಾದ ದಿನೇಶ್ ಬರದವಳ್ಳಿ, ಸಮನ್ವಯಾಧಿಕಾರಿ ಡಾ.ಅನ್ನಪೂರ್ಣ, ಶಿಕ್ಷಕರ ಸಂಘದ ಅಧ್ಯಕ್ಷರಾದ ಕೆ.ಜಗನ್ನಾಥ, ಶಿಕ್ಷಕರ ಸಹಕಾರ ಸಂಘದ ಅಧ್ಯಕ್ಷರಾದ ಮನೋಹರಪ್ಪ, ಕಜಾಪ ಉಪಾಧ್ಯಕ್ಷೆ ಭಾಗೀರಥಿ ಚರಕ, ಕಸಾಪ ಜಿಲ್ಲಾ ಕಾರ್ಯದರ್ಶಿ ಎಂ.ಎಂ.ಸ್ವಾಮಿ ಉಪಸ್ಥಿತರಿದ್ದರು ಆರಂಭದಲ್ಲಿ ಜಾನಪದ ಪರಿಷತ್ತು ಕಲಾ ಬಳಗ ಪ್ರಾರ್ಥಿಸಿ ಉಮೇಶ್ ಹಿರೇನೆಲ್ಲೂರು ಸ್ವಾಗತಿಸಿ ಎಸ್.ಬಸವರಾಜ್ ವಂದಿಸಿ.ಡಾ.ಪ್ರಸನ್ನ ನಿರೂಪಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಕಲಾ ಬಳಗ, ಶಿಕ್ಷಕರ ಸಾಂಸ್ಕೃತಿಕ ವೇದಿಕೆ ಕಲಾಸಿಂಚನ, ವಿನಾಯಕ ಮಹಿಳಾ ಮಂಡಳಿ,ಕಲಾಮೃತಾ ಮಹಿಳಾ ಮಂಡಳಿ ಇವರು ಜಾನಪದ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ವರದಿ: ರಾಘವೇಂದ್ರ ತಾಳಗುಪ್ಪ