10 ಎಚ್ಪಿ ಒಳಗಿನ ವಿದ್ಯುತ್ ಬಿಲ್ ಪಾವತಿಗೆ ಒತ್ತಾಯ: ಆರೋಪ.
(CHIKKAMAGALURU): ಹಿಂದಿನ ಬಿಜೆಪಿ ಸರ್ಕಾರ ಕಾಫಿ ಬೆಳೆಗಾರರ 10 ಎಚ್ಪಿವರೆಗಿನ ಪಂಪ್ಸೆಟ್ನ ವಿದ್ಯುತ್ ಬಿಲ್ ಉಚಿತ ಎಂದು ಘೋಷಿಸಿದ್ದರೂ ಸಹ ಪ್ರಸ್ತುತ ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಬೆಳೆಗಾರರಿಗೆ ವಿದ್ಯುತ್ ಬಿಲ್ ಪಾವತಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಟಿ.ಎಂ.ಉಮೇಶ್ ಕಲ್ಮಕ್ಕಿ ಆರೋಪಿಸಿದ್ದಾರೆ.
ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕಾಫಿ ಬೆಳೆಗಾರರಿಗೆ 10 ಎಚ್ಪಿವರೆಗಿನ ಪಂಪ್ಸೆಟ್ ಬಳಕೆಯ ವಿದ್ಯುತ್ನ ಬಿಲ್ ಸಂಪೂರ್ಣ ಉಚಿತ ಎಂದು ಘೋಷಿಸಿದ್ದರು. ಯೋಜನೆಯೂ ಜಾರಿಗೆ ಬಂದಿತ್ತು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬೆಳೆಗಾರರಿಗೆ ಉಚಿತ ವಿದ್ಯುತ್ ಎಂಬ ಘೋಷಣೆ ಹಿನ್ನೆಲೆಯಲ್ಲಿ ಕಾಫಿ ಕೊಯ್ಲಿನ ಬಳಿಕ ಕಾಫಿ ತೋಟಗಳಿಗೆ ನೀರು ಹಾಯಿಸಲು ಸಾಕಷ್ಟು ಅನುಕೂಲವಾಗಿತ್ತು. ಕಳೆದ ಎರಡು ವರ್ಷಗಳಿಂದ ಬೆಳೆಗಾರರು ಈ ಯೋಜನೆಯಿಂದಾಗಿ ನಿರಾಳವಾಗಿದ್ದರು.
ಆದರೆ ಇದೀಗ ಮೆಸ್ಕಾಂನ ಅಧಿಕಾರಿಗಳು 5,10 ಎಚ್ಪಿವರೆಗಿನ ಪಂಪ್ಸೆಟ್ನ ಹಾಗೂ ಸಣ್ಣ ಬೆಳೆಗಾರರ ಪಂಪ್ಸೆಟ್ನ ವಿದ್ಯುತ್ ಬಿಲ್ಗಳನ್ನು ಲಕ್ಷಾಂತರ ರೂಪಾಯಿ ಬಾಕಿ ಎಂದು ತೋರಿಸಿ ಕಟ್ಟಲು ಒತ್ತಡ ಹಾಕುತ್ತಿದ್ದಾರೆ. ಹಲವು ಬೆಳೆಗಾರರ ತೋಟದ ವಿದ್ಯುತ್ ಸಂಪರ್ಕವನ್ನು ಸಹ ಈಗಾಗಲೇ ಮೆಸ್ಕಾಂ ಸಿಬ್ಬಂದಿ ಕಡಿತಗೊಳಿಸಿದ್ದಾರೆ.
ಕಾಫಿ ಬೆಳೆಗಾರರು ವಾರ್ಷಿಕವಾಗಿ ಒಂದೆರಡು ತಿಂಗಳುಗಳ ಕಾಲ ಮಾತ್ರ ಕಾಫಿ ತೋಟಕ್ಕೆ ನೀರು ಹಾಯಿಸಲು ವಿದ್ಯುತ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಉಳಿದಂತೆ ತೋಟಗಳಿಗೆ ವಿದ್ಯುತ್ ಬಳಕೆಯ ಅವಶ್ಯಕತೆಯಿರುವುದಿಲ್ಲ. ಆದರೆ ಇದೀಗ ಅಧಿಕಾರಿಗಳು ಹಳೆಯ ವಿದ್ಯುತ್ ಬಿಲ್ಲನ್ನು ಸಂಪೂರ್ಣವಾಗಿ ಪಾವತಿಸುವಂತೆ ಒತ್ತಡ ಹೇರುತ್ತಿರುವುದು ಖಂಡನೀಯವಾಗಿದೆ.
ಉಚಿತ ಎಂದು ಹೇಳಿದ್ದ ವಿದ್ಯುತ್ ಬಿಲ್ಲನ್ನು ದಿಢೀರಾಗಿ ಪಾವತಿಸಿ ಎಂದರೆ ಬೆಳೆಗಾರರು ಲಕ್ಷಾಂತರ ರೂಪಾಯಿಗಳನ್ನು ತರುವುದಾದರೂ ಎಲ್ಲಿಂದ ಎಂಬ ಪ್ರಶ್ನೆ ಉದ್ಭವಿಸಿದೆ. ರಾಜ್ಯ ಸರ್ಕಾರ ವಿವಿಧ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದಂತೆ ಬೆಳೆಗಾರರಿಗೂ ಸಹ ಈ ಹಿಂದೆ ಮಾಡಿದ್ದ ಘೋಷಣೆಯನ್ನು ಮುಂದುವರೆಸಿಕೊಂಡು ಹೋಗಬೇಕು.
ಮಲೆನಾಡು ಭಾಗದಲ್ಲಿ ಈ ಬಾರಿ ವಾಡಿಕೆಗಿಂತಲೂ ಅಧಿಕವಾದ ಮಳೆ ಬಿದ್ದ ಪರಿಣಾಮ ಸಾಕಷ್ಟು ಬೆಳೆಗಾರರ ತೋಟಗಳಲ್ಲಿ ಕೊಳೆ ರೋಗ ಆವರಿಸಿ ಫಸಲು ನಷ್ಟವಾಗಿದೆ. ಈ ಬಾರಿ ಬೆಲೆ ಅಧಿಕವಿದ್ದರೂ ಫಸಲು ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಬೆಳೆಗಾರರಿಗೆ ವಿದ್ಯುತ್ ಬಿಲ್ ಪಾವತಿಗೆ ಒತ್ತಾಯಿಸದೇ ಹಿಂದಿನ ಬಿಜೆಪಿ ಸರ್ಕಾರ ಘೋಷಿಸಿದಂತೆ 10 ಎಚ್ಪಿವರೆಗೆ ಉಚಿತ ವಿದ್ಯುತ್ ನೀಡಲು ಕ್ರಮಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಬೆಳೆಗಾರರ ಆಕ್ರೋಶಕ್ಕೆ ಸರ್ಕಾರ, ಮೆಸ್ಕಾಂ ಇಲಾಖೆ ತುತ್ತಾಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.