ಟಿಪ್ಪರ್ ಲಾರಿ ಹರಿದು ಮೃತಪಟ್ಟ ಯುವಕರ ಕುಟುಂಬಗಳಿಗೆ ಧನಸಹಾಯ: ಶಾಸಕರ ವಿರುದ್ಧವೂ ವಾಗ್ದಾಳಿ.
(KOLARA): ಶ್ರೀ ರೇಣುಕಾ ಯಲ್ಲಮ್ಮ ಬಳಗದ ಜಿಲ್ಲಾಧ್ಯಕ್ಷರಿಂದ ತಲಾ 25 ಸಾವಿರ ವಿತರಣೆ, ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸುವ ಜವಾಬ್ದಾರಿ ನನ್ನದು – ಡಾ.ಬಂಡೂರು ನಾರಾಯಣಸ್ವಾಮಿ
ಟೇಕಲ್: ಟಿಪ್ಪರ್ ಲಾರಿ ಹರಿದು ದುರ್ಮರಣಕ್ಕೀಡಾದ ಮಿಟ್ಟಗಾನಹಳ್ಳಿ ಗ್ರಾಮದ ಸಂದೀಪ್ ಹಾಗೂ ಸುಮನ್ ಕುಟುಂಬಗಳಿಗೆ ಶ್ರೀ ರೇಣುಕಾ ಯಲ್ಲಮ್ಮ ಬಳಗದ ಕೋಲಾರ ಜಿಲ್ಲಾಧ್ಯಕ್ಷರಾದ ಡಾ.ಬಂಡೂರು ನಾರಾಯಯಣಸ್ವಾಮಿ ರವರು ಮೃತರ ಎರಡೂ ಕುಟುಂಬಳಿಗೆ ತಲಾ 25 ಸಾವಿರ ನಗದ ಹಣ ವಿತರಣೆ ಮಾಡಿದರು.
ಇದೇ ತಿಂಗಳು ಮಾರ್ಚ್ 6ನೇ ತಾರೀಖಿನಂದು ರಾತ್ರಿ 7-30ರ ವೇಳೆಯಲ್ಲಿ ಟೇಕಲ್ ಹೋಬಳಿ ಭುವನಹಳ್ಳಿ ಗೇಟ್ ಬಳಿ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದ ಮಿಟ್ಟಗಾನಹಳ್ಳಿ ಗ್ರಾಮದ ಪೈಂಟರ್ ಕೆಲಸ ಮಾಡುತ್ತಿದ್ದ ಸಂದೀಪ್(26) ಹಾಗೂ ಪಿಪ್ಕಾರ್ಟ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಮನ್(27) ಎಂಬ ಯುವಕರ ಮೇಲೆ ಜಲ್ಲಿ ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಹರಿದ ಪರಿಣಾಮ ಅವಿವಾಹಿತ ಇಬ್ಬರೂ ಯುವಕರು ಗಂಭೀರವಾಗಿ ಗಾಯಗೊಂಡ ಸ್ಥಳದಲ್ಲೇ ಮೃತಪಟ್ಟಿದ್ದರು.
ಮೌನಾಚರಣೆ: ಈ ಸಂಬoಧ ಮಿಟ್ಟಗಾನಹಳ್ಳಿ ಗ್ರಾಮದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಸೇರಿದ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು, ನೊಂದ ಕುಟುಂಬಸ್ಥರು ಒಂದು ನಿಮಿಷ ಮೌನಾಚರಣೆ ನಡೆಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು.
ಶೋಕಸಭೆ: ಶೋಕಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ರೇಣುಕಾ ಯಲ್ಲಮ್ಮ ಬಳಗದ ಕೋಲಾರ ಜಿಲ್ಲಾಧ್ಯಕ್ಷರಾದ ಡಾ.ಬಂಡೂರು ನಾರಾಯಣಸ್ವಾಮಿ ರವರು, ಬದುಕಿ ಬಾಳಬೇಕಾದ ಗ್ರಾಮದ ಅವಿವಾಹಿತ ಯುವಕರು ಟಿಪ್ಪರ್ ಲಾರಿಗೆ ಸಿಲುಕಿ ಅಸುನೀಗಿರುವುದು ತುಂಬಾ ದುಃಖದ ವಿಚಾರ. ಈ ಸಾವಿಗೆ ನೆರಹೊಣೆಯನ್ನು ಜಲ್ಲಿ ಕ್ರಷರ್ ಮಾಲಿಕರೇ ಹೊಣೆ ಎಂದು ದೂರಿ, ಮೃತ ಸಂದೀಪ್ ತಂದೆ ರಾಮಕೃಷ್ಣಪ್ಪ ಹಾಗೂ ಸುಮನ್ ತಂದೆ ದೇವಕುಮಾರ್ ರವರುಗಳಿಗೆ ತಲಾ 25 ಸಾವಿರ ನಗದು ಹಣ ವಿತರಿಸಿದರು.
ಶಾಸಕರ ವಿರುದ್ಧವೂ ವಾಗ್ದಾಳಿ: ಇಬ್ಬರು ಯುವಕರ ಪ್ರಾಣ ಪಕ್ಷಿಗಳು ಹಾರಿ ಹೋಗಿದ್ದರೂ ಸಹ ಶಾಸಕ ಕೆ.ವೈ.ನಂಜೇಗೌಡರಿಗೆ ಆ ಪಕ್ಷದ ಸಚಿವರ ಕಾರ್ಯಕ್ರಮವೇ ಪ್ರಥಮ ಪ್ರಾಶಸ್ತ್ಯ ಆಗಿತ್ತು. ಸುಮಾರು ಗಂಟೆಗಳ ಕಾಲ ಪಾರ್ಥಿವ ಶರೀರಗಳನ್ನು ಇರಿಸಿ ನ್ಯಾಯಕ್ಕಾಗಿ ಆಗ್ರಹಿಸಿ, ಪ್ರತಿಭಟಿಸಿದರೂ ಸಹ ತಾಲ್ಲೂಕು ಆಡಳಿತವಾಗಲೀ, ಶಾಸಕರಿಂದಾಗಲೀ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಸಾಂತ್ವಾನದ ಮಾತಿಲ್ಲ. ಮೃತ ಕುಟುಂಬಗಳಿಗೆ ಧೈರ್ಯ ತುಂಬುವ ಮನಸ್ಸನ್ನು ಯಾರು ಮಾಡಿಲ್ಲ. ಜನಸಾಗರಕ್ಕೆ ಬೆಚ್ಚಿಬಿದ್ದ ಶಾಸಕರು ಅಂತಿಮವಾಗಿ ಸ್ಥಳಕ್ಕೆ ಭೇಟಿನೀಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿ, ಕಾಲ್ಕಿತ್ತಿದ್ದಾರೆ. ಆ ಕೆಲಸ ಪ್ರಾರಂಭದಲ್ಲೇ ಯಾಕೆ ಮಾಡಲಿಲ್ಲ ಎಂದು ಶಾಸಕರ ವಿರುದ್ಧವೂ ಪ್ರಹಾರ ನಡೆಸಿದರು.
ಹೋರಾಟ ನಿರಂತರ: ನೊಂದ ಕುಟುಂಬಗಳಿಗೆ ನ್ಯಾಯ ಸಿಗುವವರೆಗೂ ನನ್ನ ಹೋರಾಟ ನಿರಂತರ. ಯಾರದ್ದೇ ಪ್ರಭಾವಕ್ಕೆ, ಒತ್ತಡಕ್ಕೆ ಹಿಂಜರಿಯುವ, ಮಣಿಯುವ ಮಾತೇ ಇಲ್ಲ. ಮೃತರ ಕುಟುಂಬಳಿಗೆ ಎಷ್ಟೇ ಧನ ಸಹಾಯ ಮಾಡಬಹುದು. ಆದರೆ ಯುವಕರ ಪ್ರಾಣ ಮರಳಿ ಬರುವುದೇ ಎಂದು ಪ್ರಶ್ನೆ ಮಾಡಿದ ಅವರು, ನೊಂದ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ಸಿಗುವವರೆಗೂ ನನ್ನದು ನಿರಂತರ ಹೋರಾಟ ಎಂದು ಹೇಳಿದರು.
ಕ್ರಷರ್ಗಳಿಂದ ಪರಿಸರ ಹಾನಿ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೂತನವಾಗಿ ಜಲ್ಲಿ ಕ್ರಷರ್ ಆರಂಭಿಸಬೇಕಾದರೆ ಅನೇಕ ನಿಬಂಧನೆಗಳನ್ನು ನೀಡಿ, ಪರವಾನಿಗೆ ನೀಡುತ್ತೆ. ಆ ನಿಯಮಗಳನ್ನು ಜಲ್ಲಿ ಕ್ರಷರ್ ಮಾಲೀಕರು ಅನುಸರಿಸುತ್ತಿದ್ದಾರೆಯೇ ಎಂಬುದೀಗ ನಮ್ಮ ಪ್ರಶ್ನೆಯಾಗಿದೆ. ನುರಿತ ಚಾಲಕರನ್ನು ನೇಮಕ ಮಾಡಿದ್ದಾರೆಯೇ, ವಾಹನಕ್ಕೆ ಇನ್ಸುರೆನ್ಸ್ ಇದೆಯಾ, ಚಾಲಕನಿಗೆ ವಾಹನ ಲೈಸನ್ಸ್ ಇದೆಯಾ ಈ ಎಲ್ಲಾ ನಿಯಮಗಳನ್ನು ಗಾಳಿ ತೂರಿ, ಕ್ರಷರ್ ನಡೆಸುತ್ತಿದ್ದಾರೆ ಎಂಬ ಗುಮಾನಿ ಇಂತಹ ಸಾವುಗಳಿಗೆ ಸಾಬೀತಾಗಿದೆ. ನಿರಂತರವಾಗಿ ಚಲಿಸುವ ಟಿಪ್ಪರ್ ಲಾರಿಗಳಿಂದ ಬರುವ ದೂಳು ಶ್ರೀಕಂಠಪುರ ಕೆರೆ ನೀರನ್ನು ಕಲುಷಿತ ಮಾಡಿದೆ. ವಾತಾವರಣ ಹದಗೆಟ್ಟಿದೆ. ಕರ್ಕಶ ಶಬ್ಧ ಮನೆಮಂದಿಯನ್ನು ಬಿಚ್ಚಿಬೀಳಿಸುವಂತಾಗಿದೆ. ಅಧಿಕ ಲೋಡ್ ಮಾಡುವುದರಿಂದ ರಸ್ತೆ ಹದಗೆಡುವುದಲ್ಲದೆ, ಗಾಳಿಯಲ್ಲಿ ಎಂಸಾAಡ್ ಸೇರಿ ಮಾನವ ಅನೇಕ ಖಾಯಿಲೆಗಳಿಗೆ ತುತ್ತಾಗಬೇಕಾದ ದುಸ್ಥಿತಿ ಉಲ್ಭಣಗೊಂಡಿದೆ. ಹಾಗಾಗಿ ಜಲ್ಲಿ ಕ್ರಷರ್ ಮಾಲೀಕರು ನಿಯಮಗಳನ್ನು ಪಾಲನೆ ಮಾಡದಿದ್ದರೆ ನಾವು ಒಗ್ಗಟ್ಟಿನಿಂದ ಪ್ರತಿಭಟಿಸುವ ಎಚ್ಚರಿಕೆ ನೀಡಿದರು.
ನಾಲ್ಕು ಮನವಿಗಳು: ಇದೇ ವಿಚಾರವಾಗಿ ನ್ಯಾಯಕ್ಕಾಗಿ ಆಗ್ರಹಿಸಿ, ಕೋಲಾರ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ, ಆರ್.ಟಿ.ಓ ಅಧಿಕಾರಿಗಳಿಗೆ, ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿ, ಇಂತಹ ಪ್ರಕರಣಗಳು ಮರುಕಳಿಸಬಾರದು, ಒಂದು ವೇಳೆ ನಡೆದರೆ ತಪ್ಪಿತಸ್ಥತ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸದ್ಯದಲ್ಲೇ ಮನವಿ ಸಲ್ಲಿಸಲಾಗುವುದು ಎಂದು ಅವರು, ಆರ್.ಟಿ.ಓ ಅಧಿಕಾರಿಗಳ ಪಾತ್ರವೂ ತುಂಬಾ ಅಡಗಿದೆ. ಈ ಭಾಗದಲ್ಲಿ ಆರ್.ಟಿ.ಓ ಸಂಬoಧಿಸಿದ ಅಧಿಕಾರಿಗಳು ಪ್ರತಿದಿನ ಲಾರಿಗಳ, ಚಾಲಕರ ವಿರುದ್ಧ ಕ್ರಮ ಕೈಗೊಂಡಿದ್ದರೆ ಇಂತಹ ಅನಾಹುತ ಸಂಭವಿಸುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಲ್ಲಿ ಕ್ರಷರ್ಗಳು ಬಂದ್ಮಾಡಿ: ಈ ವೇಳೆ ರೊಚ್ಚಿಗೆದ್ದ ಮಹಿಳೆಯರು ಜಲ್ಲಿ ಕ್ರಷರ್ಗಳಿಂದ ರಾತ್ರಿ ವೇಳೆ ನಿದ್ದೆ ಬರಲ್ಲ. ರಾತ್ರಿ ಇಡೀ ವಾಹನಗಳ ಓಡಾಟದಿಂದ ತೊಂದರೆ, ಬೆಟ್ಟಗಳನ್ನು ಬ್ಲಾಸ್ಟ್ ಮಾಡುವ ಶಬ್ದದಿಂದ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ದೂಳು ಉಸಿರಾಟದಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಆದ್ದರಿಂದ ಈ ಭಾಗದಲ್ಲಿ ಜಲ್ಲಿ ಕ್ರಷರ್ಗಳನ್ನು ಬಂದ್ ಮಾಡಬೇಕು ಎಂದು ಗೋಗರೆದರು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರು, ನಿವೃತ್ತ ನೌಕರರಾದ ಹುಣಸನಹಳ್ಳಿ ವೆಂಕಟೇಶಯ್ಯ, ಮುಖಂಡರುಗಳಾದ ಟೇಕಲ್ ಕೃಷ್ಣಪ್ಪ, ಶ್ರೀಕಂಠಪುರ ಮಂಜುನಾಥ್, ಬೆಟ್ಟಹಳ್ಳಿ ಆನಂದ್,
ಮಿಟ್ಟಗಾನಹಳ್ಳಿ ಗ್ರಾಮದ ಯಲ್ಲಪ್ಪ, ರವಿಕುಮಾರ್, ಶಿವಣ್ಣ, ವಿಲ್ಸನ್, ಆನಂದದ, ಶ್ರೀಕಾಂತ್, ನಾರಾಯಣಸ್ವಾಮಿ, ರಾಮಕೃಷ್ಣ, ದೇವಕುಮಾರ್, ಯುವಕರಾದ ಮುರಳಿ, ರಘು, ಸುಧಾಕರ್, ರವಿ, ಉದಯ್, ಸುನಿಲ್, ಸ್ಟೀವನ್ ಸೇರಿದಂತೆ ಮಹಿಳೆಯರು ಇದ್ದರು.
ವರದಿ: ವಿಷ್ಣು ಕೋಲಾರ