ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಗೆ ಪಿಕಪ್ ವಾಹನ ಡಿಕ್ಕಿ ಹಿಂಬದಿ ಸವಾರ ಸಾವು
(SHIVAMOGA ) ಸೊರಬ: ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಗೆ ಪಿಕಪ್ ವಾಹನ ಡಿಕ್ಕಿಹೊಡೆದ ಪರಿಣಾಮ ಬೈಕ್ನ ಹಿಂಬದಿ ಸವಾರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಸವಾರ ತೀವ್ರವಾಗಿ ಗಾಯಗೊಂಡ ಘಟನೆ ಶಿರಸಿ ತಾಲೂಕಿನ ಗಡಿಭಾಗ ಬನವಾಸಿ ಸಮೀಪದ ಕಪಗೇರಿ ಬಳಿ ಶುಕ್ರವಾರ ನಡೆದಿದೆ.
ತಾಲೂಕಿನ ಕೆರೆಹಳ್ಳಿ ಗ್ರಾಮದ ಯಶೋಧ ಮಹೇಶ್ ಆಚಾರ್ (35) ಮೃತ ಮಹಿಳೆ. ಸೊರಬದಿಂದ ಬನವಾಸಿ ಮಾರ್ಗವಾಗಿ ತೆರಳುತ್ತಿದ್ದ ಪಿಕಪ್ ವಾಹನ ಅದೇ ಮಾರ್ಗವಾಗಿ ರಸ್ತೆ ಬದಿ ನಿಂತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಮಹೇಶ್ ಆಚಾರ್ (45) ತೀವ್ರವಾಗಿ ಗಾಯಗೊಂಡಿದ್ದು, ಬನವಾಸಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಶಿರಸಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ನಲ್ಲಿ ಹಿಂಬದಿ ಕುಳಿತಿದ್ದ ಮಹೇಶ್ ಪತ್ನಿ ಯಶೋಧ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಎರಡು ವರ್ಷದ ಪುತ್ರಿ ಸಾಹಿತ್ಯ ಪವಾಡ ಸದೃಶ ರೀತಿಯಲ್ಲಿ ಬಚಾವ್ ಆಗಿದ್ದಾಳೆ.
ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಸಂದೀಪ್ ಯು ಎಲ್ ಸೊರಬ