ಖಾದಿ ಬಟ್ಟೆಯ ಹಿಂದೆ ಗಾಂಧಿಯವರ ಸತ್ಯ ನಿಷ್ಠೆ ಅಹಿಂಸೆ ನಂಬಿಕೆ ವಿಶ್ವಾಸಾರ್ಹತೆ ಅಡಗಿದೆ
(SHIVAMOGA): ಸಾಗರ ಖಾದಿ ಬಟ್ಟೆಯ ಹಿಂದೆ ಗಾಂಧಿಯವರ ಸತ್ಯ ನಿಷ್ಠೆ ಅಹಿಂಸೆ ನಂಬಿಕೆ ವಿಶ್ವಾಸಾರ್ಹತೆ ಅಡಗಿದೆ ಇದು ಅತ್ಯಮೂಲ್ಯ ಸಂಕೇತ ಎಂದು ಸಾಗರದ ಉಪವಿಭಾಗ ಅಧಿಕಾರಿಗಳಾದ ಆರ್ ಯತೀಶ್ ಅವರು ಅಭಿಪ್ರಾಯಪಟ್ಟರು. ಇವರು ಇಲ್ಲಿನ ಗಾಂಧಿ ನಗರ ವೃತ್ತದಲ್ಲಿರುವ ಡಿಜಿಟಲ್ ಮೀಡಿಯಾ ಪ್ರೆಸ್ ಕ್ಲಬ್ ಆವರಣದಲ್ಲಿ ಏರ್ಪಡಿಸಲಾಗಿದ್ದ ಖಾದಿ ಬಟ್ಟೆ, ಪುಸ್ತಕ ಮತ್ತು ಸ್ವದೇಶಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದರು. ಗಾಂಧಿಯವರೊಂದಿಗೆ ಹಲವರಿಗೆ ಹಲವು ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧಿ ನಾಯಕತ್ವವನ್ನು ಒಪ್ಪಿಕೊಂಡಿದ್ದರು. ಭಾರತದ ಸಂವಿಧಾನದಲ್ಲಿ ಸಾಕಷ್ಟು ಅಂಶಗಳು ಗಾಂಧಿಯವರ ಚಿಂತನೆ ಆಲೋಚನೆ ಆದರ್ಶಗಳು ಒಳಗೊಂಡಿದೆ. ಸ್ವದೇಶಿ ಚಳುವಳಿಗಳ ಮೂಲಕ ಬ್ರಿಟಿಷರನ್ನು ಹಿಮ್ಮೆಟ್ಟಿಸಿದ ಗಾಂಧೀಜಿ ಒಂದು ದೊಡ್ಡ ಶಕ್ತಿ. ಅವರಿಗಿದ್ದಂತಹ ನೈತಿಕ ಶಕ್ತಿಯಿಂದಾಗಿ ಸೂರ್ಯನು ಮುಳುಗದ ಸಾಮ್ರಾಜ್ಯವೆಂದು ಬೀಗುತ್ತಿದ್ದ ಬ್ರಿಟಿಷರು ಭಾರತ ಬಿಟ್ಟು ಹೋಗಬೇಕಾಯಿತು. ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲಾ ಜನ ವರ್ಗಗಳನ್ನು ಒಂದುಗೂಡಿಸುವ ಸಲುವಾಗಿ ವಿಶೇಷ ಪ್ರಯತ್ನ ಮಾಡಿದ ಗಾಂಧೀಜಿಯವರು ದೇಶದಲ್ಲಿ ಸಾಮಾಜಿಕ ಪರಿವರ್ತನೆಯಾಗದೆ ಸ್ವಾತಂತ್ರ್ಯ ಸಾಧ್ಯವಿಲ್ಲ ಎಂದು ಖಚಿತವಾಗಿ ನಂಬಿದ್ದರು.
ಗಾಂಧಿ ಜಯಂತಿ ಕೇವಲ ಒಂದು ದಿನ ಆಚರಿಸುವುದಲ್ಲ ಪ್ರತಿದಿನವೂ ಆಚರಿಸುವಂತದ್ದು. ಯುವಜನರಲ್ಲಿ, ಮಕ್ಕಳಲ್ಲಿ ಗಾಂಧಿಯ ಬಗ್ಗೆ ಖಾದಿ ಬಟ್ಟೆಯ ಬಗ್ಗೆ ಅಭಿರುಚಿ ಮೂಡಿಸುವಂತಹ ಕೆಲಸ ಆಗಬೇಕಾಗಿದೆ ಎಂದರು.
ಭಾರತದ ಸಂವಿಧಾನ ಪೀಠಿಕೆಯನ್ನು ವಾಚಿಸಿದ ಸಾಗರದ ನಗರಸಭೆ ಆಯುಕ್ತ ಎಚ್ .ನಾಗಪ್ಪ ಮಾತನಾಡಿ ಶಾಂತಿದೂತ ಗಾಂಧೀಜಿಯನ್ನು ಜಗತ್ತಿನ ಎಲ್ಲಾ ದೇಶಗಳು ವಿಶೇಷವಾಗಿ ಗಾಂಧೀಜಿಯವರನ್ನು ಗೌರವಿಸುತ್ತದೆ.
ಗಾಂಧೀಜಿಯವರು ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗದೆ ಇಡೀ ಭಾರತದ ಜನರ ಭಾಗವಾಗಿ ಅಹಿಂಸೆಯನ್ನು ಪ್ರತಿಪಾಧಿಸಿದ್ದರಿಂದ ಸ್ವಾತಂತ್ರ್ಯ ತಂದು ಕೊಡಲು ಗಾಂಧೀಜಿಗೆ ಸಾಧ್ಯವಾಯಿತು. ಶಾಂತಿ ಸಮಾನತೆ ಸಹಿಷ್ಣುತೆಯ ಮೂಲಕ ಸ್ವಾತಂತ್ರ್ಯ ಚಳುವಳಿಯನ್ನು ಕಟ್ಟಿದ ಗಾಂಧೀಜಿಇಡೀ ಜಗತ್ತಿಗೆ ಮಾದರಿಯಾದರು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯ ಸಾಗರದ ಯೋಜನಾಧಿಕಾರಿ ಶಾಂತ ನಾಯಕ್ ಮಾತನಾಡಿ ಗಾಂಧೀಜಿಯ ತತ್ವಗಳನ್ನು ಪಾಲಿಸುವುದು ಇಂದಿನ ಅನಿವಾರ್ಯತೆ .ನಮ್ಮ ಸಂಸ್ಥೆಯು ಗಾಂಧೀಜಿಯವರು ಹೇಳಿ ಕೊಟ್ಟ ಹಲವಾರು ತತ್ವಗಳನ್ನು ಅಳವಡಿಸಿಕೊಂಡು ಕೆಲಸ ಮಾಡುತ್ತಿದೆ. ನಾವು ಗ್ರಾಮಾಂತರ ಪ್ರದೇಶಗಳಲ್ಲಿ ಗಾಂಧಿಯವರ ಕನಸನ್ನ ನನಸು ಮಾಡುವ ಪ್ರಯತ್ನದಲ್ಲಿ ಕೆಲಸ ಮಾಡುತ್ತಿದ್ದೇವೆ. ಇಂದು ಡಿಎಂಪಿಸಿ ಸಂಸ್ಥೆಯವರು ನಡೆಸುತ್ತಿರುವ ಖಾದಿ ಬಟ್ಟೆಗಳು, ಸ್ವದೇಶಿ ವಸ್ತುಗಳು ,ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟದ ಕಾರ್ಯಕ್ರಮ ಸಮಾಜಕ್ಕೆ ನೀಡುತ್ತಿರುವ ಉತ್ತಮ ಸಂದೇಶವಾಗಿದೆ ಎಂದರು.
ಇನ್ನೋರ್ವ ಅತಿಥಿ ಭೀಮನ ಕೋಣೆಯ ಶೈಲಿ ಹ್ಯಾಂಡ್ಲೂಮ್ಸ್ ಸಂಸ್ಥೆಯ ಸಂಸ್ಥಾಪಕ ಸುಂದರ್ ಬಿಎಸ್ ಮಾತನಾಡಿ ಖಾದಿ ಬಟ್ಟೆಯ ಉತ್ಪಾದನೆ ಮತ್ತು ಮಾರಾಟ ವ್ಯವಹಾರಕ್ಕಾಗಿ ಅಲ್ಲ. ಬದುಕಿಗಾಗಿ ಎಂದರು. ಇಂದು ನೇಕಾರರ ಹೆಸರಲ್ಲಿ ಮಧ್ಯವರ್ತಿಗಳು ಸರ್ಕಾರದ ಯೋಜನೆಗಳನ್ನು ಅಪಹರಿಸುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕೆಲಸ ಮಾಡುತ್ತಿರುವ ನೆಕಾರರಿಗೆ ಕನಸುಗಳ ಇಲ್ಲದಂತಾಗಿದೆ. ದಲ್ಲಾಳಿಗಳಿಂದ ನೇಕಾರರನ್ನು ಕಾಪಾಡುವ ಕೆಲಸ ಆಗಬೇಕಾಗಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಡಿ ಎಂ ಪಿಸಿ ಅಧ್ಯಕ್ಷ ಹೆಚ್ ಬಿ ರಾಘವೇಂದ್ರ ಮಾತನಾಡಿ ಗಾಂಧೀಜಿಯವರು ಚರಕ ಮತ್ತು ಖಾದಿ ಬಟ್ಟೆಯನ್ನು ಮುನ್ನೆಲೆಗೆ ತಂದು ಬ್ರಿಟಿಷರ ಆರ್ಥಿಕ ಮೂಲಕ್ಕೆ ಕೊಡಲಿ ಪೆಟ್ಟು ಕೊಟ್ಟರು. ಹಾಗೆಯೇ ಭಾರತದಲ್ಲಿ ಉದ್ಯೋಗ ಸೃಷ್ಟಿಸಲು ಕಾರಣಕರ್ತರಾದರು. ಗಾಂಧೀಜಿಯವರ ಸ್ವದೇಶಿ ಕಲ್ಪನೆ ಸುಸ್ಥಿರ ಅಭಿವೃದ್ಧಿಯನ್ನು ಮಾಡುವುದಾಗಿದೆ. ಆಧುನಿಕತೆಯ ವಿಕಾರತೆಯನ್ನು ತಡೆಗಟ್ಟಲು ಸ್ವದೇಶಿ ಚಿಂತನೆಯ ವಸ್ತುಗಳ ಬಳಕೆ ಬಹಳ ಪ್ರಮುಖವಾದದ್ದು ಎಂದು ಖಚಿತವಾಗಿ ನಂಬಿ ಖಾದಿ ಚಳುವಳಿಯಲ್ಲಿ ಸಕ್ರಿಯರಾದರು. ಭಾರತ ದೇಶದಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಕೇವಲ ವ್ಯಕ್ತಿಯಾಗಿರದೆ ಅವರು ಒಂದು ವಿದ್ಯಮಾನವಾಗಿದ್ದಾರೆ ಗಾಂಧಿಯಿಂದ ಅಂಬೇಡ್ಕರ್ ,ಅಂಬೇಡ್ಕರ್ ಇಂದ ಗಾಂಧಿ ಪರಸ್ಪರ ಕಲಿತರು ಮತ್ತು ಅದನ್ನು ಸಮಾಜಕ್ಕೆ ನೀಡಿದರು. ಅವರ ಚಿಂತನೆಯ ನೆಲೆಗಟ್ಟಿನಲ್ಲಿ ಭಾರತ ಈ ಮಟ್ಟಿಗೆ ಅರಳಿದೆ. ಗಾಂಧೀಜಿಯವರು ತಮ್ಮ ಚಳುವಳಿಯ ಭಾಗವಾಗಿ ಪ್ರಮುಖವಾಗಿ ಚರಕ ಖಾದಿ ಮತ್ತು ಅಸ್ಪೃಶ್ಯತೆ ನಿವಾರಣೆ ಅಂತರ್ಜಾತಿ ವಿವಾಹಗಳ ನೀತಿಯನ್ನು ಪಾಲಿಸಿಕೊಂಡು ಬಂದರು.
ಗಾಂಧೀಜಿ ನಡೆಸಿದ ಸ್ವದೇಶಿ ಸತ್ಯಾಗ್ರಹ ಬ್ರಿಟಿಷರು ಕಂಗೆಡುವಂತೆ ಆಯಿತು.ಅವರ ನಿರಂತರವಾದಂತಹ ಶಾಂತಿಯುತ ಹೋರಾಟ ಹಿಂಸೆ ಇಲ್ಲದೆ ಭಾರತಕ್ಕೆ ಸ್ವಾತಂತ್ರ್ಯ ಬರಲು ಕಾರಣವಾಯಿತು ಎಂದರು.
ವಸಂತ್ ಕುಗ್ವೆ ಅವರು ಸ್ವಾಗತ ಗೀತೆ ಹಾಡಿದರು. ರಾಘವೇಂದ್ರ ತಾಳಗುಪ್ಪ ಸ್ವಾಗತಿಸಿದರು. ಸಂತೋಷ್ ಸದ್ಗುರು ಅವರು ಗಾಂಧೀಜಿಯವರು ಬರೆದ ನಾನೇಕೆ ಖಾದಿ ಬಟ್ಟೆ ಧರಿಸಿದೆ ಲೇಖನವನ್ನು ವಾಚಿಸಿದರು. ಡಿ ಎಂ ಪಿ ಸಿ ಸದಸ್ಯೆ ಸೌಮ್ಯ ವಂದಿಸಿದರು. ಈ ಸಂದರ್ಭ ದಲ್ಲಿ ಖಾದಿ ಬಟ್ಟೆಯ ಉತ್ಪನ್ನಗಳಲ್ಲಿ ಗಣನೀಯ ಸಾಧನೆ ಮಾಡಿದ ಶೈಲಿ ಹ್ಯಾಂಡ್ಲೂಮ್ ನ ಸುಂದರ್ ಬಿ ಎಸ್ ವಿಜಯಲಕ್ಷ್ಮಿ ಸುಂದರ್ ಇವರನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯರಾದ ಸಂದೀಪ್ ಕುಮಾರ್ ಅಣ್ಣಪ್ಪ ಕೆಳದಿಪುರ ಶಿವಕುಮಾರ್ ಕಾರ್ಗಲ್ ಮತ್ತಿತರರು ಹಾಜರಿದ್ದರು .
ವರದಿ: ರಾಘವೇಂದ್ರ ತಾಳಗುಪ್ಪ