ಗಣೇಶೋತ್ಸವ ಭಾವೈಕ್ಯತೆ ಬೆಸೆಯುವ ವೇದಿಕೆ
(CHIKKAMAGALURU): ಗಣೇಶೋತ್ಸವಗಳು ಭಾವೈಕ್ಯತೆ ಮತ್ತು ಭಕ್ತಿ, ಭಾವವನ್ನು ಬೆಸೆಯುವ ವೇದಿಕೆಯಾಗಿ ಪರಿವರ್ತನೆಗೊಂಡಿದೆ ಎಂದು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಚೈತನ್ಯ ವೆಂಕಿ ಹೇಳಿದರು.
ಸಮೀಪದ ಅರಳೀಕೊಪ್ಪದ ಸಭಾ ಗಣಪತಿ ಸೇವಾ ಸಮಿತಿ ಆಯೋಜಿಸಿದ್ದ ಗಣೇಶೋತ್ಸವದಲ್ಲಿ ಮಲೆನಾಡಿನ ಒಳ್ಳೆಯ ಮನಸ್ಸುಗಳ ಒಕ್ಕೂಟ ಇತ್ತೀಚೆಗೆ ಆಯೋಜಿಸಿದ್ದ ಮಂದಹಾಸ ಶೀರ್ಷಿಕೆ ವಿವಿಧ ಮನೋರಂಜನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲೋಕಮಾನ್ಯ ಬಾಲಗಂಗಾಧರ ತಿಲಕರು ಈ ಹಿಂದೆ ಗ್ರಾಮೀಣ ಭಾಗದ ಜನರು ಒಗ್ಗೂಡಲಿ ಎಂಬ ಉದ್ದೇಶದಿಂದ ಸಾರ್ವಜನಿಕ ಗಣೇಶೋತ್ಸವವನ್ನು ಆಚರಣೆಗೆ ತಂದಿದ್ದು, ಇಂದು ಇಂದು ದೇಶವ್ಯಾಪಿಯಾಗಿ ಜನರನ್ನು ಒಗ್ಗೂಡಿಸಿದೆ.
ಗಣೇಶೋತ್ಸವದಲ್ಲಿ ಭಕ್ತಿ, ಭಾವ ಮೇಳೈಸುವುದರೊಂದಿಗೆ ವಿವಿಧ ವಿಶೇಷ ಪ್ರತಿಭೆಗಳಿಗೆ ವೇದಿಕೆಗಳಾಗಿ, ಕಲೆಗಳನ್ನು ಗುರುತಿಸುವ ವೇದಿಕೆಯಾಗಿದೆ. ಇದು ಇಂದು ರಾಷ್ಟ್ರೀಯ ಹಬ್ಬವಾಗಿ ಆಚರಣೆಗಳಾಗಬೇಕಾಗಿದೆ ಎಂದರು.
ಸಭಾ ಗಣಪತಿ ಸಮಿತಿ ಅಧ್ಯಕ್ಷ ಎಂ.ಎಸ್.ಪ್ರವೀಣ್ಕುಮಾರ್ ಮಾತನಾಡಿ, ಗ್ರಾಮೀಣ ಭಾಗದ ಜನರು ಒಗ್ಗೂಡಿ ಸೇವಾ ಮನೋಭಾವ, ನಿಸ್ವಾರ್ಥ ಹಾಗೂ ಧನ್ಯತೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸಾರ್ವಜನಿಕ ಗಣೇಶೋತ್ಸವಗಳು ಯಶಸ್ವಿಯಾಗಲು ಸಾಧ್ಯವಿದೆ.
ಅರಳೀಕೊಪ್ಪ ಗ್ರಾಮದಲ್ಲಿ ಕಳೆದ ಹಲವಾರು ವರ್ಷಗಳಿಂದ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸುತ್ತಿದ್ದು, ಇದು ಇಲ್ಲಿನ ಗ್ರಾಮಸ್ಥರ ಸಹಕಾರದಿಂದ ಕಾರಣವಾಗಿದೆ ಎಂದರು.
ಗಣೇಶೋತ್ಸವದ ಅಂಗವಾಗಿ ಭರತನಾಟ್ಯ ಕಲಾವಿದೆ ಮಿಷ, ಮಿಷಿಕಾ, ಕೀಬೋರ್ಡ್ ವಾದಕ ಅದ್ವಿತ್, ದೈವಿಕ್, ಗಾಯಕರಾದ ಕಿಶೋರ್ ಆಚಾರ್ಯ, ಪ್ರಮೋದ್ ಬೊಗಸೆ, ರೋಶನ್, ಗಾಂಧರ್ವ ವಿದ್ಯೆಯ ಕಲಾವಿದ ವರುಣ್, ಮನೋಜ್ ಅವರಿಂದ ವಿವಿಧ ಮನೋರಂಜನೆಗಳು ನಡೆದವು.
ಸಭಾ ಗಣಪತಿ ಸಮಿತಿ ಕಾರ್ಯದರ್ಶಿ ಜಗದೀಶ್ ಅರಳೀಕೊಪ್ಪ, ಖಜಾಂಚಿ ಪ್ರಜ್ವಲ್, ಮಾಜಿ ಅಧ್ಯಕ್ಷ ಸತೀಶ್ ಅರಳೀಕೊಪ್ಪ ಮತ್ತಿತರರು ಹಾಜರಿದ್ದರು.