ಕಸ ವಿಲೇವಾರಿ ವೈಫಲ್ಯ: ಲೋಕಾಯುಕ್ತ ಇಲಾಖೆಗೆ ದೂರು
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು:ಬಿ ಕಣಬೂರು ಗ್ರಾ.ಪಂ ಯಲ್ಲಿ ಕಸವಿಲೇವರಿ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಬಳಕೆದಾರರ ವೇದಿಕೆ ಆರೋಪಿಸಿದೆ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. ಕಸವಿಲೇವರಿ ಜಾಗ ಒತ್ತುವರಿಯಾದ ಸಂದರ್ಭದಲ್ಲಿ ಲೋಕಾಯುಕ್ತಕ್ಕೆ ದೂರು ನೀಡಿ ತೆರವು ಮಾಡಿಸಿಕೊಡಲಾಗಿತ್ತು. ಒತ್ತುವರಿದಾರರ ಒತ್ತಡಕ್ಕೆ ಮಣಿದು ಒತ್ತುವರಿಯಾದ ಜಾಗವನ್ನು ತೆರವು ಮಾಡಿಸದೆ ನದಿ ದಂಡೆಗೆ ಲಗತ್ತಿಸಿ ಅಳತೆ ಮಾಡಿಸಿ ಕೊಟ್ಟಿದ್ದನ್ನು ನೋಡಲು ತಾ.ಪಂ Eo ಸ್ಥಳ ಪರಿಶೀಲನೆಗೆ ಬಂದಾಗ ಪತ್ರಕರ್ತರು ಸ್ಥಳಕ್ಕೆ ಭೇಟಿ ನೀಡಿದ್ದು ಹಾಗೂ ಗ್ರಾಮಸ್ಥರೊಂದಿಗೂ ಭೇಟಿ ನೀಡಲಾಗಿತ್ತು. ಮೀನು ಮಾರ್ಕೆಟ್ ರಸ್ತೆಯಲ್ಲಿ ಕೊಳೆತ ಮೀನು ರಸ್ತೆ ಬದಿಗೆ ಹಾಕಿದ ಸಂದರ್ಭದಲ್ಲಿ ಗ್ರಾಮಸ್ಥರು ತಿಳಿಸಿದ ಹಿನ್ನಲೆಯಲ್ಲಿ ಸ್ಥಳ ಪರಿಶೀಲಿಸಿ ವರದಿ ಮಾಡಲಾಗಿತ್ತು.
ಪ್ರಮುಖವಾಗಿ ಬಾಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣಕ್ಕೆ ಅಕ್ರಮ ಲೇಔಟ್ನ ಕೊಳಚೆ ನೀರು ಹರಿದುಬಂದು ಸೊಳ್ಳೆ ಉತ್ಪಾದನೆ ಕೇಂದ್ರವಾಗಿದ್ದು ಈ ಸಂಬಂಧ ವೈದ್ಯರು ಪತ್ರಿಕೆಗೆ ತಿಳಿಸಿದಾಗ ಸ್ಥಳ ಪರಿಶೀಲಿಸಿ ವರದಿ ಮಾಡಲಾಗಿತ್ತು ಹಾಗೂ ಜಿ.ಪಂ ಸಿಇಒರವರನ್ನು ಖುದ್ದು ಭೇಟಿ ಆಗಿ ಸಮಸ್ಯೆಯ ತೀವ್ರತೆಯನ್ನು ತಿಳಿಸಿದ್ದು ಸಿಇಒರವರು ಸ್ಥಳ ಪರಿಶೀಲಿಸಲು ಬರುವುದಾಗಿ ತಿಳಿಸಿ 6 ತಿಂಗಳು ಕಳೆದರೂ ಜಿ.ಪಂ ಸಿಇಒ ಬರಲೇ ಇಲ್ಲ. ಸೊಳ್ಳೆ ಉತ್ಪಾದನೆ ಕೇಂದ್ರವಾಗಿರುವ ಪ್ರದೇಶದಲ್ಲಿ ಸಂಚರಿಸಿದ ಹಿನ್ನಲೆಯಲ್ಲಿ ಪತ್ರಕರ್ತರಿಗೆ ಡೆಂಗ್ಯೂ ಪಾಸಿಟಿವ್ ಬಂದು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲಾಗಿದೆ. ನಿರ್ಮಲ ಗ್ರಾಮ ಪ್ರಶಸ್ತಿ ಪುರಸ್ಕೃತ ಪಂಚಾಯಿತಿ ಕಾರ್ಯ ವೈಖರಿಯ ಬಗ್ಗೆ ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ದು ಇದೇ ರೀತಿ ಮುಂದುವರಿದಲ್ಲಿ ಪಂಚಾಯಿತಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಬಳಕೆದಾರರ ವೇದಿಕೆ ಎಚ್ಚರಿಸಿದೆ. ಕಳೆದ 10 ವರ್ಷಗಳಿಂದ ಕಸವಿಲೇವರಿ ಹಾಗೂ ಆಸ್ಪತ್ರೆ ಆವರಣದ ಸಮಸ್ಯೆಯ ಬಗ್ಗೆ ಪತ್ರಿಕೆಯಲ್ಲಿ ವರದಿ ಬರುತ್ತಲೇ ಇದ್ದು ಇದನ್ನು ಜಿಲ್ಲಾಡಳಿತ ನೋಡುವುದಿಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದೆ.