ಕೋಲಾರನ್ಯೂಸ್

ಕನ್ನಡ ಸಂಘವನ್ನು ತನ್ನ ಸ್ವಾರ್ಥಕ್ಕಾಗಿ ಮತ್ತು ವ್ಯವಹಾರಕ್ಕಾಗಿ ದುರುಪಯೋಗ ಮಾಡುತ್ತಿದ್ದಾರೆ…! ಪಟ್ಟಣದಲ್ಲಿ ಶಾಸಕ ಎಸ್ ಎನ್ ನಾರಾಯಣ ಸ್ವಾಮಿ ಆರೋಪ

ಕನ್ನಡ ಸಂಘವನ್ನು ತನ್ನ ಸ್ವಾರ್ಥಕ್ಕಾಗಿ ಮತ್ತು ವ್ಯವಹಾರಕ್ಕಾಗಿ ದುರುಪಯೋಗ ಮಾಡುತ್ತಿದ್ದಾರೆ…! ಪಟ್ಟಣದಲ್ಲಿ ಶಾಸಕ ಎಸ್ ಎನ್ ನಾರಾಯಣ ಸ್ವಾಮಿ ಆರೋಪ

(KOLARA): ಬಂಗಾರಪೇಟೆ:ಯಾರೇ ಆಗಲಿ ತಮ್ಮ ಸ್ವರ್ಥಕ್ಕಾಗಿ ಕನ್ನಡ ಸಂಘವನ್ನು ಬಳಸಿಕೊಳ್ಳಬಾರದು, ನಾಡು, ನುಡಿಯ ವಿಚಾರದಲ್ಲಿ ನಿಜವಾದ ಕನ್ನಡಿಗರಾಗಿರಬೇಕು, ತಮ್ಮ ವ್ಯಾಪಾರ, ವ್ಯವಹಾರಕ್ಕಾಗಿ, ಕನ್ನಡ ಸಂಘವನ್ನು ಬಳಸಿಕೊಂಡು ದುರುಪಯೋಗಪಡಿಸಿಕೊಂಡಿದ್ದರಿoದಲೇ ಇಂದಿಗೂ ಪಟ್ಟಣದಲ್ಲಿ ಕನ್ನಡ ಭವನವನ್ನು ಕಟ್ಟಲು ಆಗಿಲ್ಲ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿವತಿಯಿಂದ ಹಮ್ಮಿಕೊಂಡಿದ್ದ 68ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಕೇವಲ ಪ್ರಚಾರಕ್ಕೋಸ್ಕರ ಇದುವರೆಗೆ ಕನ್ನಡ ಸಂಘದ ಕಟ್ಟಡ ನಿರ್ಮಾಣಕ್ಕೆ ಐದಕ್ಕಿಂತ ಹೆಚ್ಚು ಬಾರಿ ಗುದ್ಧಲಿ ಪೂಜೆಯನ್ನ ಮಾಡಿದ್ದಾರೆ.

ಸುಮಾರು 45 ವರ್ಷಗಳ ಹಿಂದೆ ನಂದ ಅವರು ಕನ್ನಡ ಸಂಘದ ಅಧ್ಯಕ್ಷರಾಗಿದ್ದ ಕಾಲದಲ್ಲಿ ಕನ್ನಡ ಭವನ ಕಟ್ಟಬೇಕು ಎಂದು ಪುರಸಭೆಯಿಂದ 100*50 ಸ್ಧಳವನ್ನು ನಗರದ ಹೃದಯ ಭಾಗದಲ್ಲಿ ಮಂಜೂರು ಮಾಡಲಾಗಿತ್ತು. ಆದರೆ ಅನೇಕ ಮಹನೀಯರು ಕನ್ನಡ ಸಂಘದ ಕಟ್ಟಡವನ್ನು ಕಟ್ಟುತ್ತೇವೆ, ನೀಲಿ ನಕ್ಷೆ ಸಿದ್ದವಿದೆ ಎಂದು ದಶಕಗಳಿಂದ ಜನರನ್ನು ಯಾಮಾರಿಸಿಕೊಂಡು ಬಂದಿದ್ದು, ಇದುವರೆಗೆ ಇನ್ನೂ ಕನ್ನಡ ಸಂಘದ ಕಟ್ಟಡವನ್ನು ನಿರ್ಮಿಸದೇ ಇರುವುದು ನಮ್ಮ ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದರು.

ಪುರಸಭೆಯ ಕಾನೂನಿನಂತೆ ಯಾವ ಉದ್ದೇಶಕ್ಕಾಗಿ ಭೂಮಿಯನ್ನು ನೀಡಲಾಗಿದೆಯೋ ಅದಕ್ಕೆ ಮಾತ್ರ ಉಪಯೋಗಿಸಬೇಕು. ಒಂದು ವೇಳೆ ಉಪಯೋಗಿಸದಿದ್ದಲ್ಲಿ ಆ ಸ್ಧಳವನ್ನ ಪುರಸಭೆ ವಾಪಸ್ ಪಡೆದು ಯಾವ ಉದ್ದೇಶಕ್ಕೆ ಮೀಸಲು ಇಟ್ಟಿತ್ತೋ ಅದೇ ಉದ್ದೇಶಕ್ಕೆ ಸರ್ಕಾರದಿಂದ ಕನ್ನಡ ಭವನ ಕಟ್ಟಲಿಕ್ಕೆ ಶುರು ಮಾಡುತ್ತೇವೆ.
ಪುರಸಭೆಗೆ ಹೊಸ ಅಧ್ಯಕ್ಷರು ಚುನಾಯಿತರಾದ ಮೇಲೆ ಈ ವಿಷಯವನ್ನು ಸಭೆಯಲ್ಲಿಟ್ಟು ಕನ್ನಡ ಭವನಕ್ಕಾಗಿ ಸರ್ಕಾರದಿಂದ 50 ಲಕ್ಷ ರೂಗಳನ್ನು ಮಂಜೂರು ಮಾಡಿಸುತ್ತೇನೆ. ವೈಯಕ್ತಿಕವಾಗಿ ಹತ್ತು ಲಕ್ಷಗಳನ್ನು ಭವನಕ್ಕೆ ಕೊಡುತ್ತೇನೆ. ನನ್ನ ಗುರಿ ಒಂದೇ ಬಂಗಾರಪೇಟೆಯನ್ನು ಎಲ್ಲ ವಿಧದಲ್ಲೂ ರಾಜ್ಯಮಟ್ಟದಲ್ಲಿ ನಂಬರ್ ಒನ್ ಮಾಡಬೇಕು ಎಂಬುದಾಗಿದ್ದು, ನನ್ನ ಆಸೆಗೆ ನಿಮ್ಮಗಳ ಬೆಂಬಲ ಅಗತ್ಯ ಇದೆ ಎಂದರು.

ಭಾರತ ದೇಶವು ಸ್ವತಂತ್ರಗೊಂಡ ನಂತರ ಭಾಷಾವಾರು ಪ್ರಾಂತ್ಯಗಳು ಆದ ಮೇಲೆ 1956ನವೆಂಬರ್ 1ರಂದು ಕನ್ನಡಿಗರಿಗೆ ಕನ್ನಡನಾಡು ದೊರೆತ ಪುಣ್ಯದ ವರ್ಷ. ಇದಾದ ಮೇಲೆ 1973ರಲ್ಲಿ ಅಂದಿನ ಮುಖ್ಯಮಂತ್ರಿಗಳಾದ ದೇವರಾಜ ಅರಸು ಕಾಲದಲ್ಲಿ ಕರ್ನಾಟಕ ಎಂದು ನಾಮಕರಣವಾಯ್ತು. ನಾಮಕರಣವಾಗಿ 50 ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದ್ದೇವೆ ಎಂದರು.
ಕನ್ನಡನಾಡು ಇಡೀ ಭಾರತ ದೇಶವನ್ನ ಆಕರ್ಷಣೆ ಮಾಡುವಂತ ಶಕ್ತಿಯನ್ನು ಹೊಂದಿದೆ. ಇಲ್ಲಿ ನೆಲೆ ನಿಂತಿರುವ ಎಲ್ಲ ಜಾತಿ, ಧರ್ಮಗಳ ಜನರು ಸುಭಿಕ್ಷವಾಗಿ ವಾಸ ಮಾಡುತ್ತಿದ್ದಾರೆ. ಕಾರಣ ಕನ್ನಡಿಗರು ಬಹಳ ಸಹೃದಯಿಗಳು. ಅನೇಕ ಸಂತರು ಜನ್ಮತಾಳಿದ ಪುಣ್ಯ ನೆಲ. ಈ ಕನ್ನಡದ ಮಣ್ಣು, ನಮ್ಮ ಜಿಲ್ಲೆಯ ಹೆಮ್ಮೆಯ ಕವಿಗಳಾದ ಮಾಸ್ತಿವೆಂಕಟೇಶ್ ಐಯಾಂಗಾರ್ ಅವರ ಮಾತೃಭಾಷೆ ತಮಿಳು, ಆದರು ಅವರು ಕನ್ನಡದ ಕವಿಯಾಗಿ ಹೆಸರಾದರು ಉಸಿರಾದರು. ಈ ನೆಲ ನಮಗೆ ಎಲ್ಲವನ್ನು ಕಲಿಸಿಕೊಡುತ್ತದೆ ಹಾಗಾಗಿ ನಾವು ಕನ್ನಡವನ್ನು ಹೆಚ್ಚಾಗಿ ಪ್ರೀತಿಸುತ್ತೇವೆ ಎಂದರು.

ನಾಡಿನಲ್ಲಿ ಕನ್ನಡದ ಉಳಿವಿಗಾಗಿ ಗೋಕಾಕ್ ಚಳುವಳಿ ಪ್ರಾರಂಭವಾದಾಗ ರಂಗರಾಮಯ್ಯ, ಬೇಕರಿ ಶ್ರೀನಿವಾಸ್ ಅವರುಗಳು ಚಳುವಳಿಯಲ್ಲಿ ಭಾಗವಹಿಸಿದ್ದನ್ನು ನಾವು ನೆನೆಯಬೇಕು. ಬಂಗಾರಪೇಟೆಯಲ್ಲಿ ಆಗುವಂತಹ ಕನ್ನಡ ಕಾರ್ಯಕ್ರಮಗಳು ಇಡೀ ಕೋಲಾರ ಜಿಲ್ಲೆಯಲ್ಲಿ ಯಾವ ತಾಲ್ಲೂಕುಗಳಲ್ಲೂ ಆಗುವುದಿಲ್ಲ. ಇದು ಗಡಿ ಭಾಗವಾಗಿರುವುದರಿಂದ ಭಾಷೆಯ ರಕ್ಷಣೆಗೆ ಅನೇಕ ಹೋರಾಟಗಾರು ಬೆಂಬಲವಾಗಿ ಶಕ್ತಿಯನ್ನು ತುಂಬುತ್ತ ಬರುತ್ತಿದ್ದಾರೆ.
ನಿಮ್ಮ ಮನೆಗಳಲ್ಲಿ ನಿಮ್ಮ ಭಾಷೆಯನ್ನು ಮಾತನಾಡಿಕೊಳ್ಳಿ. ಆದರೆ ಮನೆಯಿಂದ ಹೊರಗೆ ಬಂದ ಮೇಲೆ ನೀವುಗಳು ಕನ್ನಡವನ್ನು ಕಲಿಯಬೇಕು ಮತ್ತು ಕನ್ನಡ ಬಾರದವರಿಗೆ ಕನ್ನಡವನ್ನು ಕಲಿಸಬೇಕು. ಆಗ ಮಾತ್ರ ಭಾಷೆ ಉಳಿಯಲು ಮತ್ತು ಬೆಳೆಸಲು ಸಹಾಯವಾಗುತ್ತದೆ.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಗೋವಿಂದರಾಜು, ತಹಶೀಲ್ದಾರ್ ರಶ್ಮಿ, ಬಿಇಒ ಸುಕನ್ಯ, ಮುಖ್ಯಾಧಿಕಾರಿ ವೀನಾಕ್ಷಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಅಪ್ಪಯ್ಯಗೌಡ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಆಂಜನೇಯಗೌಡ, ವೃತ್ತ ನಿರೀಕ್ಷಕ ನಂಜಪ್ಪ, ಇಂಜಿನಿಯರ್ ರವಿ,ಪುರಸಭೆ ಸದಸ್ಯರುಗಳಾದ ರೇಣುಕ, ಎಸ್.ವೆಂಕಟೇಶ್, ಪ್ರಶಾಂತ್, ಸುನೀಲ್ ಕುಮಾರ್, ರಫೀಕ್, ಸಾಧಿಕ್, ಮಂಜುನಾಥ್, ಷಫಿ, ಯುವರಾಜ್ ಮೊದಲಾದವರು ಇದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code