ಜಿಲ್ಲೆನ್ಯೂಸ್

ಜವಾಬ್ಥಾರಿಯುತ ಪೋಷಕತ್ವ, ಪಾಲಕತ್ವ ಹೆಚ್ಚಿಸುವ ‘ಹಲೋ ಪೋಷಕರೇ’ ಕಾರ್ಯಕ್ರಮ.

ಜವಾಬ್ಥಾರಿಯುತ ಪೋಷಕತ್ವ, ಪಾಲಕತ್ವ ಹೆಚ್ಚಿಸುವ ‘ಹಲೋ ಪೋಷಕರೇ’ ಕಾರ್ಯಕ್ರಮ.


(KOPALA): ಕೊಪ್ಪಳ ನವೆಂಬರ್ 12 : ಮಕ್ಕಳ ಪೋಷಕರಿಗಾಗಿ “ಹಲೋ ಪೋಷಕರೇ” ಎಂಬ ವಿನೂತನ ತಂತ್ರ ಆಧಾರಿತ ಕಾರ್ಯಕ್ರಮಕ್ಕೆ ಬಿಸಿಲು ನಾಡು ಕೊಪ್ಪಳ ಜಿಲ್ಲೆ ಸಹ ಆಯ್ಕೆಯಾಗಿದೆ. ಹುಟ್ಟಿನಿಂದ 6 ವರ್ಷದವರೆಗಿನ ಮಕ್ಕಳ ಆರಂಭಿಕ ಕಲಿಕೆ, ಪೌಷ್ಠಿಕತೆ, ಆರೋಗ್ಯ ಮತ್ತು ಸುರಕ್ಷತೆ ಇತ್ಯಾದಿ ವಿಷಯಗಳಲ್ಲಿ ಜವಾಬ್ಥಾರಿಯುತ ಪೋಷಕತ್ವ ಮತ್ತು ಪಾಲಕತ್ವವನ್ನು ಹೆಚ್ಚಿಸುವ ಈ ಹಲೋ ಪೋಷಕರೇ ಪ್ರಾಯೋಗಿಕ ಕಾರ್ಯಕ್ರಮಕ್ಕೆ ಮೊದಲನೇಯದಾಗಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಶಾಲಾ ಪೂರ್ವ ಶಿಕ್ಷಣಕ್ಕೆ ಪೂರಕವಾಗಿ ಈ ಹಲೋ ಪೋಷಕರೇ ಎಂಬ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಕೊಪ್ಪಳ ಹಾಗೂ ಗಂಗಾವತಿ ತಾಲೂಕುಗಳನ್ನು ಆಯ್ಕೆ ಮಾಡಲಾಗಿದೆ.


ಯಾರು ಹೇಗೆ ಕೇಳಬಹುದು?: ನಿಮ್ಮ ಮೊಬೈಲ್‌ನಿಂದ 080-46838292ಗೆ ಸಂಖ್ಯೆಗೆ ಮಿಸ್ ಕಾಲ್ ಕೊಡಿ. ಬಳಿಕ ಹಲೋ ಪೋಷಕರೆ ಕಾರ್ಯಕ್ರಮದಿಂದ ನಿಮಗೆ ಒಂದು ಕರೆ ಬರುತ್ತದೆ. ಆ ಕರೆಯನ್ನು ಸ್ವೀಕರಿಸಿ ಅಲ್ಲಿ ಕೇಳುವ ಮೂರು ಪ್ರಶ್ನೆಗಳಿಗೆ ಮೊಬೈಲ್‌ನ ಸೂಕ್ತ ಬಟನ್ ಒತ್ತಿ ಉತ್ತರಿಸಿ. ಹೀಗೆ ಉತ್ತರಿಸಿದಾಗ ನೀವು ಹಲೋ ಪೋಷಕರೆ ಕಾರ್ಯಕ್ರಮದಿಂದ ಕರೆ ಸ್ವೀಕರಿಸಲು ಅನುಮತಿ ಸೂಚಿಸಿದಂತೆ. ಇಷ್ಟು ಮಾಡಿದರೆ ನೀವು ಮಾರನೆ ದಿನದಿಂದಲೇ ಹಲೋ ಪೋಷಕರೆ ಕಾರ್ಯಕ್ರಮ ಕೇಳಬಹುದು.


ಕಾರ್ಯಕ್ರಮ ಉದ್ದೇಶ ಏನು?: ಈ ಕಾರ್ಯಕ್ರಮದ ಮೂಲಕ ಮಗುವಿನ ಆರಂಭಿಕ ಬಾಲ್ಯ ಮತ್ತು ಪೋಷಣೆಗೆ ಸಂಬಂಧಿಸಿದ ಪ್ರಮುಖ ನಾಲ್ಕು ವಿಷಯಗಳಾದ ಆರಂಭಿಕ ಕಲಿಕೆ, ಪೌಷ್ಠಿಕತೆ, ಆರೋಗ್ಯ ಮತ್ತು ಸುರಕ್ಷತೆ ಕುರಿತು ಪೋಷಕರಿಗೆ 3 ನಿಮಿಷಗಳ ಆಡಿಯೋ ಕಳುಹಿಸುವ ಮೂಲಕ ವಾರಕ್ಕೆ 4 ದಿನಗಳಂತೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿರುತ್ತದೆ. ಮಕ್ಕಳ ಪೋಷಕರು 080-46838292 ಈ ದೂರವಾಣಿ ಸಂಖ್ಯೆಗೆ ಮಿಸ್ ಕಾಲ್ ಮಾಡಿ ಹೆಸರು ನೋಂದಾಯಿಸಿ ಕಾರ್ಯಕ್ರಮದ ಸದುಪಯೋಗ ಪಡೆಯಬಹುದಾಗಿದೆ.


ಕೊಪ್ಪಳ ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮತ್ತು ಕಲಿಕೆ ಟಾಟಾ ಟ್ರಸ್ಟ್ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಶಾಲಾ ಪೂರ್ವ ಶಿಕ್ಷಣ ಕಾರ್ಯಕ್ರಮದಿಂದ ಅಂಗನವಾಡಿ ಕೇಂದ್ರದಲ್ಲಿನ 3 ರಿಂದ 6 ವಯಸ್ಸಿನ ಮಕ್ಕಳ ಸರ್ವಾಂಗಿಣ ಬೆಳವಣಿಗೆಗೆ ಮತ್ತು ಕಲಿಕೆಯಲ್ಲಿ ಬದಲಾವಣೆ ಕಂಡುಬಂದಿದ್ದು “ಪೋಷಕರ ನಡೆ ಅಂಗನವಾಡಿ ಕಡೆ” ಕಾರ್ಯಕ್ರಮದಡಿ ಪೋಷಕರ ಸಭೆಗಳನ್ನು ನಡೆಸಿ ಮಾಹಿತಿ ನೀಡಲಾಗುತ್ತದೆ. ಅದರಂತೆ ಹಲೋ ಪೋಷಕರ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಪೋಷಕರ ವಾಟ್ಸಾಪ್ ಗುಂಪುಗಳನ್ನು ರಚನೆ ಮಾಡಲಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಸಮುದಾಯದ ಸಹ ಭಾಗಿತ್ವದಿಂದಾಗಿ ಅಂಗನವಾಡಿ ಕೇಂದ್ರಗಳಿಗೆ ಅಗತ್ಯ ರೀತಿಯ ಸಹಕಾರ ದೊರೆಯುತ್ತಿದೆ.


ಅಧಿಕಾರಿಗಳಿಂದ ಮೆಚ್ಚುಗೆ: ಕೊಪ್ಪಳ ಜಿಲ್ಲೆಯಲ್ಲಿನ ಅಂಗನವಾಡಿ ಕೇಂದ್ರಗಳಲ್ಲಿ ನಡೆಯುತ್ತಿರುವ ಇಂತಹ ಶಾಲಾ ಪೂರ್ವ ಶಿಕ್ಷಣ ಕಾರ್ಯಕ್ರಮಗಳ ವೀಕ್ಷಣೆಗಾಗಿ ಉತ್ತರಪ್ರದೇಶ, ಛತ್ತಿಸ್‌ಗರ್, ಆಂದ್ರಪ್ರದೇಶ ಹಾಗೂ ನಮ್ಮ ರಾಜ್ಯದ ಇತರೆ ಜಿಲ್ಲೆಗಳಿಂದ ಇಲಾಖೆಯ ಅಧಿಕಾರಿಗಳು ಹಾಗೂ ಎನ್.ಜಿ.ಓ ಸಂಸ್ಥೆಯ ಅಧಿಕಾರಿಗಳು ಈಗಾಗಲೇ ಭೇಟಿ ನೀಡಿ ಶಾಲಾ ಪೂರ್ವ ಶಿಕ್ಷಣ ಚಟುವಟಿಕೆಗಳನ್ನು ವೀಕ್ಷಣೆ ನಡೆಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


ಜಿಲ್ಲಾಧಿಕಾರಿಗಳಿಂದ ಚಾಲನೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮತ್ತು ಯುನಿಸೆಫ್ ಹಾಗೂ ಕಲಿಕೆ ಟಾಟಾ ಟ್ರಸ್ಟ್ ಸಹಯೋಗದಲ್ಲಿ ಮಕ್ಕಳ ಪೋಷಕರಿಗಾಗಿ ಇತ್ತೀಚೆಗೆ ನಡೆದ ಈ ಪ್ರಾಯೋಗಿಕ ಕಾರ್ಯಕ್ರಮಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ನಿರ್ದೇಶಕರಾದ ಎಂ.ಎಸ್‌ಅರ್ಚನಾ ಅವರು ಆನ್‌ಲೈನ್ ಮೂಲಕ ಚಾಲನೆ ನೀಡಿದರು. ಕೊಪ್ಪಳ ಜಿಲ್ಲಾ ಪಂಚಾಯತ್‌ನ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ, ಹಲೋ ಪೋಷಕರೇ ಕಾರ್ಯಕ್ರಮದ ಬಗೆಗೆ ಸಮಗ್ರ ಮಾಹಿತಿ ನೀಡುವ ಕರಪತ್ರ, ಪೋಸ್ಟರ್ ಬಿಡುಗಡೆ ಮೂಲಕ ಜಿಲ್ಲಾಮಟ್ಟದಲ್ಲಿ ಈ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಚಾಲನೆ ನೀಡಿದರು. ಈ ವೇಳೆ ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ತಿಪ್ಪಣ್ಣ ಸಿರಸಗಿ, ಜಿಲ್ಲಾ ಕಾರ್ಯಕ್ರಮ ನಿರೂಪಣಾಧಿಕಾರಿ ಗಂಗಪ್ಪ, ಕಲಿಕೆ ಟಾಟಾ ಟ್ರಸ್ಟ್ನ ಜಿಲ್ಲಾ ವ್ಯವಸ್ಥಾಪಕ ಅಶೋಕ ಹಾಗೂ ಇತರರು ಇದ್ದರು.


ಅಧಿಕಾರಿಗಳಿಂದ ಮಾಹಿತಿ: ಈ ಕಾರ್ಯಕ್ರಮದ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಕೊಪ್ಪಳ ಜಿಲ್ಲೆಯ ವಿವಿಧ ಅಂಗನವಾಡಿಗಳ ಮೇಲ್ವಿಚಾರಕಿಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಕಾರ್ಯಕ್ರಮದಲ್ಲಿ ಹಲವಾರು ಮಾಹಿತಿ ನೀಡಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ತಿಪ್ಪಣ್ಣ ಸಿರಸಗಿ, ಜಿಲ್ಲಾ ಕಾರ್ಯಕ್ರಮ ನಿರೂಪಣಾಧಿಕಾರಿ ಗಂಗಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಜಯಶ್ರಿ ರಾಜಪುರೋಹಿತ, ಯಲ್ಲಮ್ಮ ಹಂಡಿ ಸೇರಿದಂತೆ ಇತರರು ಮಾತನಾಡಿ ಹಲೋ ಪೋಷಕರೆ ಕಾರ್ಯಕ್ರಮದ ಪರಿಕಲ್ಪನೆ ಮತ್ತು ಕಾರ್ಯಕ್ರಮದ ಬಗ್ಗೆ ತಿಳಿಸಿದರು.

ವರದಿ: ಅಂಬಳಿ ವೀರೇಂದ್ರ

Leave a Reply

Your email address will not be published. Required fields are marked *

Scan the code