ಇವಾಗಿನ ಸರ್ಕಾರ ಯೂ- ಟ್ರನ್ ಸರ್ಕಾರ :ಬಿಜೆಪಿ ನಗರ ಅಧ್ಯಕ್ಷ ಗಣೇಶ್ ಪ್ರಸಾದ್ ಹೇಳಿಕೆ.
(SHIVAMOGA): ಸಾಗರ ವಕ್ಫ್ ಮಂಡಳಿಯು ರಾಜ್ಯದ ಹಲವೆಡೆ ರೈತರು ಸಾಗುವಳಿ ಮಾಡುತ್ತಿರುವ ಭೂಮಿ ತನ್ನದೆಂದು ನಿರ್ಣಯ ತೆಗೆದುಕೊಂಡು, ಅವರಿಗೆ ನೋಟೀಸ್ ನೀಡುತ್ತಿರುವುದನ್ನು ಖಂಡಿಸಿ ಮತ್ತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹಮದ್ರನ್ನು ಸಂಪುಟದಿoದ ಕೈಬಿಡುವಂತೆ ಆಗ್ರಹಿಸಿ ಉಪವಿಭಾಗಾಧಿಕಾರಿ ಕಚೇರಿ ಎದುರು ಬಿಜೆಪಿ ತಾಲೂಕು ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಉಪ ವಿಭಾಗಾಧಿಕಾರಿಗಳು ಆರ್. ಯತೀಶ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಒ.ಬಿ.ಸಿ ಜಿಲ್ಲಾ ಪ್ರಭಾರಿ ಪ್ರಶಾಂತ್ ಶಿವಪ್ಪ, ನಾವು ನಿಂತಿರುವ ಉಪವಿಭಾಗಅಧಿಕಾರಿಗಳ ಕಚೇರಿ ಜಾಗವನ್ನೂ ವಕ್ಫ್ ಮಂಡಳಿ ತನ್ನದೆಂದು ಹೇಳುವ ಸ್ಥಿತಿ ರಾಜ್ಯದಲ್ಲಿ ಎದುರಾಗಿದೆ, ತಾಲೂಕು ಪಂಚಾಯತಿ, ತಹಶೀಲ್ದಾರರ ಕಟ್ಟಡ, ಶಿಕ್ಷಣ ಇಲಾಖೆ, ನಗರಸಭೆ, ಸೇರಿದಂತೆ ಇನ್ನು ಇಲ್ಲಿರುವ ಹತ್ತಾರು ಸರಕಾರಿ ಕಚೇರಿಗಳೂ ಮುಂದಿನ ದಿನದಲ್ಲಿ ವಕ್ಫ್ ಆಸ್ತಿ ಎಂದು ಹೇಳಿ ನೋಟೀಸ್ ಬಂದರೂ ನಾವು ಅಚ್ಚರಿ ಪಡಬೇಕಿಲ್ಲ. ಅಂಥ ಸ್ಥಿತಿಯಲ್ಲಿ ನಾವಿದ್ದೇವೆ. ರಾಜ್ಯದಲ್ಲಿ ಸಾವಿರಾರು ಬಡ ರೈತರು, ದಲಿತರು, ಕೂಲಿ ಕೆಲಸ ಮಾಡುವವರ ಮನೆ, ಜಮೀನನ್ನು ತನ್ನದೆಂದು ಹೇಳಿ ಒಕ್ಕಲೆಬ್ಬಿಸಲು ವಕ್ಫ್ ಮಂಡಳಿ ಮುಂದಾಗಿದೆ. ಇದನ್ನು ತಡೆಯಬೇಕಿದ್ದ ರಾಜ್ಯ ಸರಕಾರ ತುಷ್ಟೀಕರಣ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಆದ್ದರಿಂದ ಜನಸಾಮಾನ್ಯರು ಇಂದು ರಸ್ತೆಗಿಳಿದು ತಮ್ಮ ಆಸ್ತಿ, ಮನೆ ರಕ್ಷಿಸಿಕೊಳ್ಳಬೇಕಾದ ಸ್ಥಿತಿ ಬಂದಿದೆ. ಈ ಕುರಿತು ಪ್ರಕಟವಾಗಿರುವ ರಾಜ್ಯ ಗೆಜೆಟ್ ಆದೇಶವನ್ನು ತಕ್ಷಣ ರಾಜ್ಯಪಾಲರು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ನಗರ ಮಂಡಲ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್ ಮಾತನಾಡಿ, ರಾಜ್ಯದಲ್ಲಿ ತಾಲಿಬಾನ್ನ ಕಾನೂನು ಜಾರಿಯಲ್ಲಿದ್ದಂತೆ ಕಾಣುತ್ತಿದೆ. ತನಗೆ ಸರಿ ಕಂಡoತೆ ಮಾಡಿ, ಜನರಿಂದ ವಿರೋಧ ಬರುತ್ತಿದ್ದಂತೆ ಯೂಟರ್ನ್ ತೆಗೆದುಕೊಳ್ಳುವ ಸರಕಾರವಿದು. ಮೂಡ, ವಾಲ್ಮೀಕಿ ಹಗರಣ ಮುಚ್ಚಿಕೊಳ್ಳಲು ಇಂತಹ ಸಮಾಜಘಾತುಕ ಕೆಲಸಕ್ಕೆ ಒತ್ತು ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡ ಮಲ್ಲಿಕಾರ್ಜುನ ಹಕ್ರೆ, ನೂರಾರು ವರ್ಷದಿಂದ ರೈತರು ಸಾಗುವಳಿ, ವಾಸವಿರುವ ಭೂಮಿ ತನ್ನದೆಂದು ವಕ್ಫ್ ಮಂಡಳಿ ಅಧಿಪತ್ಯ ಸ್ಥಾಪನೆಗೆ ಮುಂದಾಗಿರುವುದು ಅಕ್ಷಮ್ಯ. ಬಡ, ದಲಿತ ಹಿಂದುಗಳು ಮಾತ್ರವಲ್ಲದೆ ಇತರ ಅಲ್ಪಸಂಖ್ಯಾತರೂ ವಕ್ಫ್ ನೋಟೀಸ್ನಿಂದ ಭೂಮಿ ಕಳೆದುಕೊಳ್ಳಲಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ವಕ್ಫ್ ಕಾನೂನು ಮತ್ತು ಮಂಡಳಿಗೆ ನೀಡಿರುವ ಪರಮಾಧಿಕಾರ ರದ್ದುಗೊಳಿಸಬೇಕು. ಭೂಸುಧಾರಣಾ ಕಾಯ್ದೆ ಅನ್ವಯ ವಕ್ಫ್ ವಶದಲ್ಲಿರುವ ಭೂಮಿಗೆ ಅರ್ಜಿ ಹಾಕಲು ರೈತರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಮಧುರಾ ಶಿವಾನಂದ್, ಗಿರೀಶ್ ಹಕ್ರೆ, ದೇವೇಂದ್ರಪ್ಪ, ರತ್ನಾಕರ ಹೊನಗೋಡು, ಪ್ರತಿಮಾ ಜೋಗಿ ಮೊದಲಾದವರು ಮಾತನಾಡಿದರು. ಮೈತ್ರಿ ಪಾಟೀಲ್, ಸವಿತಾ ವಾಸು, ಪ್ರೇಮ ಸಿಂಗ್, ಆರ್.ಶ್ರೀನಿವಾಸ್, ಶಂಕರ ಅಳ್ವಿಕೋಡಿ, ಪರಶುರಾಮ್, ಮಹೇಶ್, ವಿನೋದ್ ರಾಜ್, ಸತೀಶಬಾಬು, ರಾಜೇಶ್ ಮಾವಿನಸರ, ಸಂತೋಷ್ ಶೇಟ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ