‘ಎಲ್ಲೂ ನಮ್ಮಪ್ಪನಿಗೆ ಭಾರ ಆಗಲಿಲ್ಲ ಅನ್ನೋದೆ ಸಮಾಧಾನದ ಸಂಗತಿ ನನಗೆ’
(ARTICAL): ‘ನಮ್ಮ ಪೋಷಕರು ಇರೋದು ನಾನು ಕೇಳಿದ್ದನ್ನ ಕೊಡಿಸೋದಕ್ಕೆ’ ಅನ್ನೋ ಮಕ್ಕಳ ಮನಸ್ಥಿತಿಯ ನಡುವೆ ಕೆಲವೊಂದು ವಿದ್ಯಾರ್ಥಿಗಳು ‘ನಮ್ಮ ಪೋಷಕರಿಗೆ ಹೊರೆಯಾಗದಂತೆ ಇರ್ತಿನಿ’ ಅಂತ ಹೇಳಿ ಅಕ್ಷರಶಃ ಅದನ್ನು ಪಾಲಿಸುವವ ಮಕ್ಕಳು ವಿರಳ. ಅಂತ ವಿರಳದ ಮಕ್ಕಳ ಸಂಖ್ಯೆ ಹೇರಳವಾಗಲಿ ಎಂಬುದು ಒಂದು ಸಣ್ಣ ಆಸೆ. ಆ ರೀತಿ ನುಡಿದಂತೆ ನಡೆದ ವಿದ್ಯಾರ್ಥಿನಿಯೊಬ್ಬಳ ಕಥೆ ನಿಮಗಾಗಿ…
ಪೂಜಾ.ಸಿ.ಕೆ ಎನ್ನುವ ವಿದ್ಯಾರ್ಥಿನಿ. ನಮ್ಮ ಶಾಲೆಯಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಪ್ರೌಢಶಾಲೆಗೆ ಬಂದಳು. ಎಲ್ಲಿ ಜೋರಾಗಿ ಗಾಳಿ ಬಂದರೆ ಹಾರಿ ಹೋಗುತ್ತಾಳೋ ಎನ್ನುವ ಹಾಗಿದ್ದಳು. ಸದಾ ಕನ್ನಡಕ ಇದ್ದೇ ಇರುತ್ತಿತ್ತು. ಅದರ ಜೊತೆಗೆ ಆಕೆಗೆ ಗೊತ್ತಿಲ್ಲದ, ಯಾವುದಾದರೂ ಆಶ್ಚರ್ಯಕರವಾಗ ಸಂಗತಿಯನ್ನು ತರಗತಿಯಲ್ಲಿ ಹೇಳುತ್ತಿದ್ದರೆ ಬಿಟ್ಟಕಣ್ಣು ಬಿಟ್ಟಂತೆ ಕೇಳಿಸಿಕೊಳ್ಳುತ್ತಿದ್ದಳು. ಶಾಲೆಯ ಸಮೀಪದಲ್ಲಿಯೇ ಮನೆಯಿದ್ದರೂ ತನ್ನ ‘ಲೇಡಿ ಬರ್ಡ್’ ಸೈಕಲ್ ತರುತ್ತಿದ್ದಳು. ಅದೆಷ್ಟೋ ಬಾರಿ ತನ್ನ ತಮ್ಮನನ್ನು ಕರೆದುಕೊಂಡು ಸೈಕಲ್ ನಲ್ಲಿ ಇಬ್ಬರ ಬ್ಯಾಗ್ ಗಳನ್ನು ಇಟ್ಟುಕೊಂಡು, ತಳ್ಳಿಕೊಂಡು ಹೋಗುತ್ತಿದ್ದರು. ಒಮ್ಮೊಮ್ಮೆ ತಡವಾಗಿ ಹೊರಟು, ಇನ್ನೂ ಶಾಲೆಗೆ ಬರುವ ಮಾರ್ಗದಲ್ಲಿ ನಿಧಾನವಾಗಿ ಸಾಗುತ್ತಿದ್ದಾಗ ಇವರನ್ನು ಕಂಡ ಶಿಕ್ಷಕರು ‘ಬೇಗಬೇಗ ಮನೆಗೆ ಹೊರಡಿ’ ಎಂದು ಗದರಿ ಹೋಗುತ್ತಿದ್ದರು. ಅವರುಗಳ ಹಿಂದೆಯೇ ನಾನೂ ಹೋಗುತ್ತಿದ್ದೆ ಅವರು ಬುದ್ಧಿಮಾತುಗಳನ್ನು ಹೇಳಿ ಹೊರಟ ನಂತರ ‘ಬೇಕಿತ್ತಾ ಇದೆಲ್ಲಾ? ಮನೆ ಹತ್ರ ಇದ್ರೂ, ಸೈಕಲ್ ಇದ್ರೂ ಇಷ್ಟು ತಡವಾಗಿ ಹೋಗಿ ಮನೆಗೆ ಹೋಗ್ತಿರೋ, ಇಲ್ಲವೋ ಗೊತ್ತಿಲ್ಲ ಆದರೆ ಶಿಕ್ಷಕರ ಹತ್ರ ಮಾತ್ರ ಬೈಸಿಕೊಳ್ತಿರ ಹುಷಾರು’ ಎಂದು ನಾನೂ ಒಂದು ಮಾತು ಹೇಳಿ ಹೊರಟೆ.
ತರಗತಿಯಲ್ಲಿ ಪಾಠಗಳ ಜೊತೆಗೆ ಇತರ ವಿಷಯಗಳನ್ನು ಹೇಳುವಾಗ ಬೆರಗಿನಿಂದ ನೋಡಿದ್ದಾಳೆ. ನನ್ನ ಬಳಿ ಮಾತನಾಡಲು ಹೆದರಿಕೆ ಆಗುತ್ತದೆ ಎಂದಿದ್ದಳು. ‘ಧೈರ್ಯವಾಗಿ ಮಾತನಾಡು’ ಎಂಬ ಭರವಸೆ ನೀಡಿದ ಮೇಲೆ ಆಗಾಗ ಸಣ್ಣದಾಗಿ ಮಾತನಾಡುತ್ತಿದ್ದಳು. ನಂತರದ ದಿನಗಳಲ್ಲಿ ತರಗತಿ ಮುಗಿಸಿ ಹೊರ ಬಂದಾಗ ಇನ್ನೂ ಹೆಚ್ಚಿನ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾಳೆ. ಇತರರೊಂದಿಗೆ ಬೆರೆತದ್ದು ಕಡಿಮೆಯೇ ಆದರೂ ನನ್ನೊಂದಿಗೆ ಆಗಾಗ ಪಾಠಕ್ಕೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಕೇಳಿದ್ದಾಳೆ, ಹೇಳಿದ್ದಾಳೆ. ಪಾಠಗಳ ನಡುವೆ ಹೇಳುತ್ತಿದ್ದ ಸಣ್ಣಸಣ್ಣ ಕಥೆಗಳ ಬಗ್ಗೆ ಹೆಚ್ಚಿನದಾಗಿ ತಿಳಿಯುವ ಹಂಬಲವಿದ್ದಿತು. ‘ಆ ಸ್ಫೂರ್ತಿದಾಯಕ ಕಥೆಗಳು ತನಗೆ ನಿಜಕ್ಕೂ ಪ್ರೇರಣೆ ನೀಡಿವೆ’ ಎಂದು ಅನೇಕ ಸಲ ಹೇಳಿದ್ದಾಳೆ. ಯಾವುದಾದರೂ ಕನ್ನಡ ಪುಸ್ತಕ ಓದಿ ಅದರಲ್ಲಿರುವ ಒಂದಿಷ್ಟು ಕಥೆಗಳು ನಿಮ್ಮ ಮೇಲೆ ಬೀರಿದ ಪ್ರಭಾವದ ಬಗ್ಗೆ ಬರೆಯಿರಿ. ಎಂದಾಗ ಎ.ಆರ್.ಮಣಿಕಾಂತ್ ಅವರ ಪುಸ್ತಕಗಳನ್ನು ಓದಿದ್ದಾಳೆ. ಅದರಲ್ಲಿನ ಒಂದಿಷ್ಟು ಕಥೆಗಳನ್ನು ಮನಸ್ಸಿಗೆ ತೆಗೆದುಕೊಂಡಿದ್ದಾಳೆ. ಈ ವಿಚಾರಗಳ ಬಗ್ಗೆ ೮ನೇ ತರಗತಿಯ ಸಮಯದಲ್ಲಿ ಅನೇಕ ಮಾತುಗಳನ್ನಾಡಿದ್ದಾಳೆ.
ಆಕೆ 9ನೇ ತರಗತಿಗೆ ಬಂದಾಗ ಅವರಿಗೆ ನಾನು ತರಗತಿ ತೆಗೆದುಕೊಳ್ಳುತ್ತಿರಲಿಲ್ಲ. ಹಾಗಾಗಿ ಪಠ್ಯಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದು ಕಡಿಮೆಯೇ ಇತ್ತು. ಬಿಡುವಿದ್ದಾಗ, ಪಿ.ಇ ತರಗತಿ ಇದ್ದಾಗ ಸಿಕ್ಕರೆ ‘ಹೆಚ್ಚಿನ ಓದು ಹೇಗೆ ಮಾಡಬೇಕು? ನೆನಪಿಟ್ಟುಕೊಳ್ಳುವ ಮಾರ್ಗಗಳಾವುವು? ಎಂದು ಕೇಳುತ್ತಿದ್ದಳು. ಗೊತ್ತಿದ್ದಷ್ಟು ಹೇಳುತ್ತಿದ್ದೆ. ಅದಕ್ಕೆ ಸಂಬಂಧಿಸಿದಂತೆ ಮತ್ತೊಂದಿಷ್ಟು ಕಥೆಗಳನ್ನು ಹೇಳಿ ಎಂದು ಹೇಳಿದ ಕಥೆಗಳನ್ನು ಕಿವಿಗೊಟ್ಟು ಆಲಿಸಿದ್ದಾಳೆ. ೧೦ನೇ ತರಗತಿಗೆ ಬಂದಾಗಲಂತೂ ಓದು ಓದು ಓದು ಎಂದಿರುತ್ತಿದ್ದಳು. ಡ್ರಾಯಿಂಗ್, ಟೆಕ್ ರಂಗೋಲಿ, ರಸಪ್ರಶ್ನೆ ಬಿಟ್ಟು ಇತರ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದನ್ನು ನಾನು ಕಂಡಿಲ್ಲ. ಆದರೆ ಐಶ್ವರ್ಯ, ಅನನ್ಯಳ ಜೊತೆಗೆ ಹೆಚ್ಚು ಬೆರೆಯುತ್ತಿದ್ದಳು. ತಂಡವಾಗಿ ಭಾಗವಹಿಸುವುದು ಎಂದರೆ ಐಶ್ವರ್ಯಳ ಜೊತೆಗೇ ಇರುತ್ತಿದ್ದಳು. ಹಾಗೇ ಇಬ್ಬರೂ ಅಂಟಿಕೊಂಡಿರುತ್ತಿದ್ದರು. ಐಶ್ವರ್ಯ ಸಂಸ್ಕೃತದ ವಿದ್ಯಾರ್ಥಿನಿ. ಪೂಜಾ ಕನ್ನಡದ ವಿದ್ಯಾರ್ಥಿನಿ ಆಗಿದ್ದಳು. ‘ಏನ್ರಮ್ಮಾ ಕ್ಲೋಸ್ ಫ್ರೆಂಡ್ಸ್ ಬೇರೆಬೇರೆ ವಿಭಾಗದಲ್ಲಿ ಇದೀರಲ್ಲವಾ? ಎಂದರೆ ‘ಹೌದು ಸರ್ ಹಾಗಾಗಿ ಇಬ್ಬರಿಗೂ ತರಗತಿ ಬಿಡೋದನ್ನೇ ಕಾಯ್ತಾ ಇರ್ತಿವಿ. ಇಬ್ಬರೂ ಒಟ್ಟಿಗೆ ಊಟಕ್ಕೆ ಕೂರುತ್ತೇವೆ. ಒಂದಿಷ್ಟು ಮಾತುಕತೆಗಳನ್ನಾಡುತ್ತೇವೆ. ಸ್ವಲ್ಪ ಸಮಯ ಸಿಕ್ಕರೂ ಸಾಕು ಒಟ್ಟಿಗೆ ಇರಲು ಬಯಸುತ್ತೇವೆ’ ಎಂದು ತಿಳಿಸಿದ್ದಳು.
ಅದೊಂದು ದಿನ ಶಾಲೆಯಿಂದ ತಡವಾಗಿ ಹೊರಟೆ. ಇವರ ಮನೆಯ ರಸ್ತೆದಾಟಿಯೇ ಹೋಗುತ್ತಿದ್ದೆ ಇಬ್ಬರೂ ಮನೆಯ ಹೊರಭಾಗದಲ್ಲಿಯೇ ನಿಂತು ಹರಟೆ ಹೊಡೆಯುತ್ತ ನಿಂತಿದ್ದರು. ‘ಐಶೂ ನಿಮ್ಮ ಮನೆಯಲ್ಲಿ ಕಾಯ್ತಾ ಇರ್ತಾರೆ. ಬೇಗ ಬರಲಿ ಅಂತ ಸೈಕಲ್ ಕೂಡ ಕೊಡಿಸಿದ್ದಾರೆ ಮಾತಾಡಿದ್ದು ಸಾಕು ಮನೆಗೆ ಹೊರಡು’ ಎಂದು ಹೇಳಿ ನಾನು ಹೊರಟೆ. ಆದರೆ ಅವಳು ಹೋದಳೋ ಇಲ್ಲವೋ ತಿಳಿಯಲಿಲ್ಲ. ಒಂದಿಷ್ಟು ದಿನಗಳು ಕಳೆಯುವುದರೊಳಗೆ ‘ಶಾಲಾ ವಾರ್ಷಿಕೋತ್ಸವ’ ಕ್ಕೆಂದು ಮಕ್ಕಳು ನೃತ್ಯ ಇತರೆ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು. ಪೂಜಾ ಕೂಡ ಕಡೆಯ ವರ್ಷವಾಗಿದ್ದರಿಂದ ಯಾವುದೋ ಒಂದು ನೃತ್ಯದಲ್ಲಿ ಭಾಗವಹಿಸುತ್ತಿದ್ದಳು. ಶಾಲೆಯಲ್ಲಿ ದಿನವೂ ಸಂಜೆಯ ಸಮಯದಲ್ಲಿ ಅಥವಾ ಪಿ.ಇ ತರಗತಿಯ ಸಮಯದಲ್ಲಿ ಮಕ್ಕಳು ನೃತ್ಯದ ಅಭ್ಯಾಸವನ್ನು ಹೆಚ್ಚುವರಿಯಾಗಿ ಮಾಡಲು ಮುಂದಾಗುತ್ತಿದ್ದರು. ಈಕೆಯಂತೂ ತಾವು ಕಲಿತಿರುವ ಹೆಜ್ಜೆಯ ಗುರುತುಗಳನ್ನು ಬೇರೆಬೇರೆ ವಿಭಾಗಗಳಲ್ಲಿರುವ ತಮ್ಮತಮ್ಮ ಗೆಳತಿಯರಿಗೆ ಹೇಳದೇ ಹೋದರೆ ಸಮಾಧಾನವೇ ಆಗುವುದಿಲ್ಲ ಎನಿಸಿ ತಮ್ಮ ಆತ್ಮೀಯರಿಗೆ ಅವರ ಹಾಡು, ಹೆಜ್ಜೆಗಳು ಎಲ್ಲವನ್ನೂ ತಿಳಿಸುತ್ತಿದ್ದರು. ಒಮ್ಮೆ ಸಂಜೆ ಶಾಲೆ ಮುಗಿಸಿ ಹೊರಟಿದ್ದೆ. ಇವರ ಮನೆಯ ತಿರುವಿನ ಆರಂಭದಲ್ಲಿಯೇ ಇವರುಗಳು ರಸ್ತೆ ಮಧ್ಯೆ ನಿಂತು ಮಾತನಾಡುತ್ತಿರುತ್ತಾರೆ ಎಂದು ತಿಳಿದು ಅಲ್ಲಿಯೇ ನಿಂತೆ. ಆಗ ಇವರಿಬ್ಬರೂ ಆ ರಸ್ತೆಯಲ್ಲಿಯೇ ತಮ್ಮತಮ್ಮ ನೃತ್ಯದ ಹೆಜ್ಜೆಗಳನ್ನು ಹಾಕಿ ತೋರಿಸುತ್ತಿದ್ದಾರೆ. ರಸ್ತೆ ಮಧ್ಯೆ ಕುಣಿಯುವುದನ್ನು ಕಂಡು ಇವರ ಬಳಿಗೆ ಹೋಗಿ, ‘ಹೀಗೆ ರಸ್ತೆ ಮೇಲೆ ಕುಣಿತಾ ಇದ್ದರೆ ಕಷ್ಟ ಆಗತ್ತೆ ನಿಮಗೆ. ಯಾರಾದರೂ ಚಿಲ್ಲರೆ ಹಣ ಹಾಕಿದರೂ ಹಾಕಬಹುದು, ರಸ್ತೆಲಿ ಬಿಟ್ಟು ಮನೆಯಲ್ಲಾದರೂ, ಇಲ್ಲ ಶಾಲೆಲೂ ಕುಣೀರಿ ಅದಕ್ಕೆ ಒಂದರ್ಥ ಇರತ್ತೆ ಅದು ಬಿಟ್ಟು ಹೀಗೇ ಮಾಡ್ತಾ ಇದ್ರೆ… ಒಳ್ಳೆ ಕಲೆಕ್ಷನ್ ಆಗಬಹುದು’ ಎಂದಾಗ ನಕ್ಕು ಸುಮ್ಮನಾದರೂ. ಸರಿ ಸರ್ ಎಂದರು
ಈ ಎಸ್.ಎಸ್.ಎಲ್.ಸಿ ಪರೀಕ್ಷೆಯ ಸಮಯದಲ್ಲಂತೂ ಓದಿನ ಕಡೆಗೆ ಹೆಚ್ಚು ಗಮನಹರಿಸಿದಳು. ಇತರ ಆಟೋಟಗಳೆಲ್ಲವೂ ಬೇಗ ಮುಗಿದಿದ್ದರಿಂದ ಓದು, ಪರೀಕ್ಷೆ, ಹಳೆಯ ವರ್ಷದ ಪ್ರಶ್ನೆಪತ್ರಿಕೆ ಇವುಗಳ ವಿಷಯದಲ್ಲಿಯೇ ಮುಳುಗಿರುತ್ತಿದ್ದಳು. ಈ ಬಾರಿಯ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದೇ ಪಡೆಯುತ್ತೇನೆ ಎನ್ನುವ ತೀರ್ಮಾನಕ್ಕೆ ಬಂದಳು. ಮೊದಲ ದಿನ ಪರೀಕ್ಷೆ ಮುಗಿಸಿ, ‘ಪರೀಕ್ಷೆ ಸುಲಭವಾಗಿ ಇತ್ತು. ಚೆನಾಗಿ ಆಗಿದೆ. ಅಷ್ಟೂ ಮಾರ್ಕ್ಸ್ ಬಂದೇ ಬರತ್ತೇ’ ಎಂದಿದ್ದಳು. ಇಂಗ್ಲೀಷ್ ಪರೀಕ್ಷೆ ಮುಗಿಸಿ ಯಾವುದೋ ಒಂದು ಪ್ರಶ್ನೆಯ ಬಗ್ಗೆ ಅನುಮಾನ ಇದೆ ಎಂದು ಹೇಳಿ, ಇಂಗ್ಲೀಷ್ ಶಿಕ್ಷಕಿ ಮಂಜುಳಾ ಮೇಡಂ ಗೆ ಫೋನ್ ಮಾಡಿ ಕೇಳಿದಾಗ ‘1 ಅಂಕದ ಪ್ರಶ್ನೆಗೆ ಗೊತ್ತಿದ್ದರೂ ತಪ್ಪಾಗಿ ಉತ್ತರ ಬರೆದು ಬಂದಿರುವೆ’ ಎಂದು ತಿಳಿಯಿತು. ‘ಆಗಿರುವ ಪರೀಕ್ಷೆಯ ಬಗ್ಗೆ ಏನು ಮಾತಾಡಿದರೂ ಪ್ರಯೋಜನವಿಲ್ಲದ ಕಾರಣ ಮುಂದಿನ ಪರೀಕ್ಷೆಗಳ ಬಗ್ಗೆ ಗಮನವಿರಲಿ’ ಎಂದು ಹೇಳಿದೆ. ನಂತರದ ಎಲ್ಲಾ ಪರೀಕ್ಷೆಗಳು ಉತ್ತಮವಾಗಿಯೇ ಆಗಿವೆ ಎನ್ನುತ್ತಿದ್ದಳು.
ನಿರೀಕ್ಷೆಯಂತೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 624/625 ಅಂಕಗಳು ಬಂದಿದ್ದವು. ಒಂದು ಅಂಕಕ್ಕಾಗಿ ಮರುಮೌಲ್ಯಮಾಪನಕ್ಕೆ ಹಾಕುವೆಯ? ಅಂದಾಗ, ‘ಇಂಗ್ಲೀಷ್ ಲಿ ತಪ್ಪಾಗಿ ಬರೆದಿದ್ದೇನೆ ಹಾಗಾಗಿ ಅದು ಬರುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದಳು. ‘ಆದರೂ ಪರವಾಗಿಲ್ಲ ಜಿಲ್ಲೆಗೆ ದ್ವಿತೀಯ ಸ್ಥಾನ ಬೇಸರ ಏಕೆ?’ ಎಂದದ್ದಕ್ಕೆ? ‘ಗೊತ್ತಿದ್ದೂ ಅದು-ಇದು ಎಂದು ನಾನೇ ತಪ್ಪಾಗಿ ಉತ್ತರ ಬರೆದಿದ್ದೇನೆ. ಅದೊಂದು ಸರಿ ಆಗಿದ್ದರೆ ಎಷ್ಟು ಚೆನ್ನಾಗಿ ಇರೋದಲ್ಲ?’ ಎಂದಳು. ‘ಇರುವ ಭಾಗ್ಯವ ನೆನೆದು ಬಾರೆನೆಂಬುದನ್ನು ಬಿಡು ಹರುಷಕ್ಕಿದೆ ದಾರಿ’ ಎಂಬ ಡಿ.ವಿ.ಜಿ ಅವರ ಸಾಲನ್ನು ನೆನಪಿಸಿದೆ. ಅವರ ತಂದೆಯು ಅವಳ ಅಂಕಗಳಿಂದ ತೃಪ್ತರಾಗಿದ್ದರು. ಒಂದು ಚೆಂದದ ಫಲಿತಾಂಶ ಬಂದಾಗಿತ್ತು.
ಫಲಿತಾಂಶ ಮುಗಿಸಿ ಕೆಲವೇ ದಿನಗಳಲ್ಲಿ ಶಾಲೆಗೆ ಬಂದಾಗ ಮುಂದಿನ ವಿದ್ಯಾಭ್ಯಾಸ ಹೇಗೆ? ಎಲ್ಲಿ? ಎಂದಾಗ ದಾವಣಗೆರೆಯ ಟೀಂ ಅಕಾಡೆಮಿ ಕಾಲೇಜ್ ನಲ್ಲಿ ಉಚಿತವಾಗಿ ಸೀಟ್ ನೀಡಿದ್ದಾರೆ ಹಾಗಾಗಿ ದಾವಣಗೆರೆಗೆ ಹೋಗಬೇಕಿದೆ’ ಎಂದಳು. ಮುಂದಿನ ವಿದ್ಯಾಭ್ಯಾಸದ ಜೀವನವೂ ಉತ್ತಮವಾಗಿರಲಿ ಎಂದು ಹೇಳಿ ಕಳಿಸಿದೆ. ಅದಾದ ಕೆಲವು ದಿನಗಳ ನಂತರ ಅವರ ಮನೆಯ ರಸ್ತೆಯಲ್ಲಿ ಹೋಗುವಾಗ ಇವರ ಮನೆಯೆಡೆಗೆ ನೋಡಿದರೆ ಇವರ ಮನೆಯಲ್ಲಿ ಯಾರು ಇಲ್ಲವೆಂದು ತಿಳಿಯಿತು. ಅದಾದ ಸ್ವಲ್ಪ ದಿನಗಳಲ್ಲಿ ಮನೆಗೆ ಬಂದಿದ್ದೇನೆ ಎಂದು ಕಾಲ್ ಮಾಡಿದಳು. ‘ನಿಮ್ಮ ಮನೆ ಖಾಲಿ ಇದ್ದ ಹಾಗೆ ಇದೆಯಲ್ಲ?’ ಎಂದಾಗ ‘ಅದು ಸರ್ ನಾನು ಹಾಸ್ಟೆಲ್ ನಲ್ಲಿ ಇದ್ದೀನಿ. ಅಪ್ಪ ಎಲ್ಲರೂ ಈಗ ದಾವಣಗೆರೆಗೆ ಬಂದಿದಾರೆ. ಇಲ್ಲಿಯೇ ಮನೆ ಮಾಡಿದ್ದಾರೆ ಎಂಬ ಸಂಗತಿಯನ್ನು ತಿಳಿಸಿದಳು. ಶುಭವಾಗಲಿ ಎಂದಾಗ ‘ಒಂದಿಷ್ಟು ಸ್ಪೂರ್ತಿದಾಯಕ ಮಾತುಗಳನ್ನು ಹೇಳಿ ಸರ್ ಎಂದಳು. ‘ಈಗ ಕಾಲೇಜ್ ವಿದ್ಯಾರ್ಥಿ. ನಿಮಗೆ ನಾನು ಏನು ಹೇಳೋದು? ಎಲ್ಲಾ ನಿಮಗೆ ಗೊತ್ತಾಗತ್ತೆ. ಆದರೂ ಚೆನ್ನಾಗಿ ಓದು, ಒಳ್ಳೆಯದಾಗಲಿ, ಪೋಷಕರಿಗೆ ಗೌರವ ತರುವ ಹಾಗೇ ಇರು’ ಎಂದೆ. ‘ಆಗಾಗ ಮನೆಗೆ ಬಂದಾಗ ಕಾಲ್ ಮಾಡ್ತಿನಿ ಸರ್’ ಎಂದಳು. ಧಾರಾಳವಾಗಿ ಆಗಬಹುದು ಎಂದೆ.
ದ್ವಿತೀಯ ಪಿ.ಯು.ಸಿ ಓದುವಾಗ ದೀಪಾವಳಿ ಹಬ್ಬದ ಸಮಯದಲ್ಲಿ ಒಂದಿಷ್ಟು ದಿನಗಳ ಕಾಲ ರಜೆ ಕೊಟ್ಟಿದ್ದರಂತೆ ಹಾಗಾಗಿ ಎಲ್ಲರೂ ಅಜ್ಜಿ ಊರಿಗೆ ಹೋಗಿದ್ದ ಸಂದರ್ಭದಲ್ಲಿ ಕಾಲ್ ಮಾಡಿದಳು. ‘ಏನಮ್ಮಾ ಎಷ್ಟು ದಿನ ಆಯ್ತು ಮಾತಾಡದೇ? ಹೇಗಿದೆ ಕಾಲೇಜ್? ಓದ್ತಾ ಇದೀಯ ಹೇಗೆ? ಹೀಗೆ ಒಂದಿಷ್ಟು ಪ್ರಶ್ನೆಗಳನ್ನು ಒಟ್ಟಿಗೆ ಕೇಳಿದೆ. ಎಲ್ಲದಕ್ಕೂ ಸಮಾಧಾನದಿಂದ ಉತ್ತರ ನೀಡಿದಳು. ‘ಕಾಲೇಜ್ ನಡೀತಾ ಇದೆ. ಪಾಠಗಳು ಓಡ್ತಾ ಇದಾವೆ, ನಾವೇ ಇನ್ನೂ ತೆವಳುತ್ತಾ ಇದ್ದೀವಿ ಅಂತ ಅನ್ನಿಸ್ತಾ ಇದೆ ಸರ್. ತುಂಬಾ ಓದೋದು ಇದೆ. ಜೊತೆಗೆ ಸಿ.ಇ.ಟಿ, ಜೆ.ಇ.ಇ ಅದು ಇದು ಅಂತ ಸಮಯವೇ ಸಾಕಾಗಲ್ಲ. ಬೆಳಗ್ಗೆ ಎದ್ದು ರೆಡಿ ಆಗಿ ಕಾಲೇಜ್, ತಿಂಡಿ ಮುಗಿಸಿ ಮತ್ತೆ ಕಾಲೇಜ್, ಸಂಜೆ ರೂಂ ಗೆ ಬಂದು ಸ್ವಲ್ಪ ವಿಶ್ರಾಂತಿ ಪಡೆದು ಮತ್ತೆ ಓದು, ರಾತ್ರಿ ಊಟ ಆಮೇಲೆ ಮತ್ತೇ ಓದು’ ಹಾಗಾಗಿ ಒಂತರಾ ನಾನೇ ಇಲ್ಲಿಗೆ ಹೊಂದಿಕೊಂಡಿದಿನಿ. ಕೆಲವು ನಮ್ಮ ಶಾಲೆಯವರು ಇಲ್ಲಿಗೆ ಸೇರಿದ್ದರು. ಸರಿ ಆಗಲ್ಲ ಅಂತ ಬಿಟ್ಟು ಹೋದರು. ನಾನು ಮಾತ್ರ ಇಲ್ಲೇ ಇರ್ತಿನಿ ಅಂತ ನಿರ್ಧಾರ ಮಾಡಿದಿನಿ. ಸ್ವಲ್ಪ ದಿನ ಕಷ್ಟಪಟ್ಟು ಓದಿದರೆ ಮುಂದಿನ ದಿನಗಳು ಸುಂದರವಾಗಿರುತ್ತೆ’ ಎಂದಳು. ಅದೆಷ್ಟು ಪ್ರೌಢಿಮೆ ಬಂದಿದೆ ಇವಳಲ್ಲಿ ಎನಿಸಿತು. ‘ಹೇಗಿದೆ ಕಾಲೇಜ್ ಫೀಜ್ ಎಲ್ಲವೂ?’ ಎಂದಾಗ ಆಕೆ ಹೇಳಿದ ಮಾತು ಮಾತ್ರ ಇಂದಿಗೂ ಹಾಗೇ ಕಿವಿಯಲ್ಲಿದೆ. ‘ಸರ್ ಎಸ್.ಎಸ್.ಎಲ್.ಸಿ ಫಲಿತಾಂಶದ ಮೇಲೆ ಫ್ರೀಸೀಟ್ ಸಿಕ್ಕಿತ್ತು. ಪ್ರಥಮವರ್ಷದ ಫಲಿತಾಂಶವೂ ಚೆನ್ನಾಗಿ ಬಂದಿದ್ದರಿಂದ ಅದರ ಆಧಾರದ ಮೇಲೆ ಈಗಲೂ ನನಗೆ ಫ್ರೀಸೀಟ್ ಕೊಟ್ಟಿದ್ದಾರೆ. ತೃಪ್ತಿ ಏನು ಅಂದರೆ ನಾನು ನನ್ನಪ್ಪನಿಗೆ ಕಷ್ಟ ಕೊಡಲಿಲ್ಲ ಅಂತ ಅನ್ಕೊಂಡಿದಿನಿ. ಹೆಚ್ಚೂಕಡಿಮೆ ೩/೪ ಲಕ್ಷ ಉಳಿಸಿದಿನಿ ಅನ್ಸತ್ತೆ. ಎಲ್ಲೂ ನಮ್ಮಪ್ಪನಿಗೆ ಭಾರ ಆಗಲಿಲ್ಲ ಅನ್ನೋದೆ ಸಮಾಧಾನದ ಸಂಗತಿ ನನಗೆ’ ಎಂದಳು. ಇವಳ ಮಾತನ್ನು ಕೇಳಿ ಆಶ್ಚರ್ಯವೆನಿಸಿತು. ಈ ವಯಸ್ಸಲ್ಲಿ ತಾನು ತಮ್ಮ ಪೋಷಕರಿಗೆ ಖರ್ಚು ಮಾಡಿಸದೇ, ಹೊರೆ ಎನಿಸಿದೇ ತನ್ನ ವಿದ್ಯೆಯಿಂದ ಅವರಿಗೆ ಹೆಚ್ಚು ಖರ್ಚು ಮಾಡಿಸಲಿಲ್ಲ ಅದೇ ಸಮಾಧಾನದ ಸಂಗತಿ ಎಂದರೆ, ಪೋಷಕರ ಬಗ್ಗೆ ಈ ವಯಸ್ಸಲ್ಲಿ ಈಕೆಗಿರುವ ಕಾಳಜಿ ಮೆಚ್ಚುಗೆಯಾಯಿತು. ಅವಳ ಮಾತುಗಳಿಗೆ ಆಗಲೇ ಮೆಚ್ಚುಗೆ ಸೂಚಿಸಿದೆ. ಇನ್ನೇನಿದ್ದರೂ ಎಲ್ಲಾ ಪರೀಕ್ಷೆಗಳನ್ನು ಮುಗಿಸಿ ಸಿಗುತ್ತೇನೆ ಸರ್’ ಎಂದಳು. ಅದೇ ಆತ್ಮೀಯತೆಯ ಭಾವದಿಂದ.
ಪೋಷಕರೆಂದರೆ ತಮಗೆ ಬೇಕಾದ್ದನ್ನು ಕೇಳಿದಾಗ ಕೊಡುವ, ಕೊಡಿಸುವ ಎ.ಟಿ.ಎಂ ನಂತೆ ಎಂದು ಕೊಳ್ಳುವ ಮಕ್ಕಳ ನಡುವೆ ಅಪ್ಪನ ದುಡಿಮೆ, ಜವಾಬ್ದಾರಿಯನ್ನು ಅರಿತುಕೊಂಡು, ಅವರಿಗೆ ಎಲ್ಲೂ ದುಂದುವೆಚ್ಚ ಮಾಡಿಸದೇ, ಶಿಕ್ಷಣಕ್ಕೆಂದೂ ಅಪ್ಪನಿಂದ ಹಣವನ್ನು ಖರ್ಚು ಮಾಡಿಸದೇ ವಿದ್ಯೆಯೇ ಸಂಪತ್ತೆಂದು ಭಾವಿಸಿ, ಪೋಷಕರಿಗೆ ಪೂರಕವಾಗಿ ನಿಂತ ಪೂಜಾ ನಿಜಕ್ಕೂ ಆದರ್ಶ ವಿದ್ಯಾರ್ಥಿನಿಯೇ ಸರಿ. ಎಲ್ಲಾ ಮಕ್ಕಳು ಇವಳಂತೆ ಯೋಚಿಸಿದರೆ ಪೋಷಕರಿಗೆ, ‘ಮಕ್ಕಳನ್ನು ಹೆತ್ತದಕ್ಕೆ ಸಾರ್ಥಕ ಎನಿಸಿದರೆ’ ಇದಕ್ಕಿಂತ ಮತ್ತೊಂದು ಉಡುಗೊರೆ ಬೇಕೆ? ಹೊರೆಯಾಗದ ಮಕ್ಕಳು ಪೋಷಕರಿಗೆ ಆಸರೆಯಾಗುತ್ತಾರೆ ಎನ್ನುವುದಕ್ಕೆ ಈಕೆಯೇ ಒಂದು ನಿದರ್ಶನ ಅಲ್ಲವೇ? ಇಂತ ಮಕ್ಕಳ ಸಂಖ್ಯೆ ಸಾವಿರವಾಗಲಿ ಎಂಬುದೊಂದೆ ಈ ಬರವಣಿಗೆಯ ಆಶಯ…
ಚಿತ್ರ ರಚನೆ: ನವ್ಯ ಆರ್ ಕಶ್ಯಪ್ 10ನೇ ತರಗತಿ, ಸಾಂದೀಪನಿ ಆಂಗ್ಲಶಾಲೆ, ಶಿವಮೊಗ್ಗ