ಕನ್ನಡದ ಮನಸ್ಸುಗಳಿಗೆ ಚೌಕಟ್ಟು ನಿರ್ಮಿಸಿಕೊಟ್ಟ ನನ್ನ ಶಿಷ್ಯನ ಸಾವು ನಂಬಲಾಗುತ್ತಿಲ್ಲ.
(SHIVAMOGA): ಸೊರಬ: ಕನ್ನಡದ ಮನಸ್ಸುಗಳಿಗೆ ಚೌಕಟ್ಟು ನಿರ್ಮಿಸಿಕೊಟ್ಟ ನನ್ನ ಶಿಷ್ಯನ ಸಾವು ನಂಬಲಾಗುತ್ತಿಲ್ಲ. ಸಾಹಿತ್ಯ ವಲಯ ಇಂತಹ ಪ್ರಕಾಶಕನನ್ನು ಕಳೆದುಕೊಂಡು ಸಾಹಿತ್ಯ ಲೋಕ ಬಡವಾಗಿದೆ ಎಂದು ಚಿಂತಕ ರಾಜಪ್ಪಮಾಸ್ಟರ್ ಸಂತಾಪ ವ್ಯಕ್ತಪಡಿಸಿದರು.
ಸೊರಬದ ಏಕೈಕ ಕನ್ನಡ ಪುಸ್ತಕಗಳ ಪ್ರಕಾಶಕ ನೇಕಾರ ಪ್ರಕಾಶನದ ರಾಮಕೃಷ್ಣ ಅಕಾಲಿಕ ನಿಧನ ಹೊಂದಿರುವ ಹಿನ್ನೆಲೆಯಲ್ಲಿ ತಾಲ್ಲೂಕು ಕಸಾಪ ಕರೆದಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.
ನನ್ನ ಶಿಷ್ಯ ರಾಮಕೃಷ್ಣ ಸಾಹಿತ್ಯ ವಲಯದಲ್ಲಿ ಪ್ರಕಾಶಕನಾಗಿ ಗುರುತಿಸಿಕೊಂಡಿದ್ದಕ್ಕೆ ಹೆಮ್ಮೆ ಪಟ್ಟಿದ್ದೆ. ಇಂದು ಆತ ನಮ್ಮೊಂದಿಗಿಲ್ಲ. ಆದರೆ ಅವನು ಪ್ರಕಾಶಿಸಿದ ನೂರಾರು ಪುಸ್ತಕಗಳು ಸದಾ ಅವನ್ನು ನೆನಪಿಸುತ್ತವೆ. ಪುಸ್ತಕ ಪ್ರಕಾಶನವೆ ಉಸಿರಾಗಿದ್ದ ಅವನ ಕುಟುಂಬವೀಗ ಜರ್ಝರಿತವಾಗಿದೆ. ಸಾಹಿತ್ಯಾಸಕ್ತರು ಆತನ ಕುಟುಂಬಕ್ಕೆ ನೆರವಾಗುವ ಮೂಲಕ ಅರ್ಥಪೂರ್ಣ ಶ್ರದ್ಧಾಂಜಲಿ ಸಲ್ಲಿಸೋಣ ಎಂದರು.
ರಾಮಕೃಷ್ಣ ಅವರ ಸನ್ನಡತೆ, ಪ್ರಕಾಶನದ ಏಳುಬೀಳು, ಪುಸ್ತಕ ಮಾರಾಟಕ್ಕೆ ಪರದಾಡಿದ ಸ್ಥಿತಿಯ ಕುರಿತು ಶ್ರೀಪಾದ ಬಿಚ್ಚುಗತ್ತಿ ನೆನಪಿಸಿಕೊಂಡು ಕಂಬನಿ ಮಿಡಿದರು.
ಶ್ರದ್ಧಾಂಜಲಿ ಬಳಿಕ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ರಾಷ್ಟ್ರ ಕವಿ ಕುವೆಂಪು ಅವರ ಕವಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಡಾ.ಜ್ನಾನೇಶ್ ಹೆಚ್ ಇ ಅವರು ಕುವೆಂಪು ಭಾವಚಿತ್ರಕ್ಕೆ ಪುಷ್ಪ ಅಪಿ೯ಸುವ ಮೂಲಕ ಉದ್ಘಾಟಿಸಿ , ಕುವೆಂಪು ಕುರಿತು ಮಾತನಾಡಿದರು. ಧಾರ್ಮಿಕ ಡಾಂಭಿಕತೆಯನ್ನು ವಿಮರ್ಶೆ ಮಾಡಿ ಅಂತರಾಳದ ಆಧ್ಯಾತ್ಮಿಕತೆಯನ್ನು ರೂಡಿಸಿಕೊಳ್ಳಬೇಕು. ಕುವೆಂಪು ಅವರ ಸಾಹಿತ್ಯದಲ್ಲಿನ ಪ್ರಕೃತಿ ಸೌಂದರ್ಯ, ರಾಷ್ಟ್ರೀಯತೆ, ಅವಲೋಕನವನ್ನು ಅರಿಯಬೇಕು ಎಂದರು.
ಉಪನ್ಯಾಸಕ ಭೀಮಪ್ಪ ಅವರು ಕುವೆಂಪು ಅವರ ಬದುಕು -ಬರಹದ ಕುರಿತು ಉಪನ್ಯಾಸ ನೀಡಿದರು.
ತಾಲ್ಲೂಕು ಕಸಾಪ ಅಧ್ಯಕ್ಷ ಷಣ್ಮುಖಾಚಾರ್ ಎನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೂಪಾ ಮಧುಕೇಶ್ವರ, ಮೋಹನ್ ಸುರಭಿ, ಹೆಚ್ ಗುರುಮೂರ್ತಿ ಅವರು ಕುವೆಂಪು ಗೀತೆಗಳನ್ನು ಹಾಡಿದರು.
ಕಸಾಪದ ಸುಜಾತಾ ಜೋತಾಡಿ, ಸವಿತಾಭಟ್, ರೇಣುಕಮ್ಮಗೌಳಿ, ಪಾಣಿರಾಜಪ್ಪ, ಪ್ರತಿಭಾ, ಅಫ್ಜಲ್ ಹನೀಫ್, ಮಂಜಪ್ಪ ಹುಲ್ತಿಕೊಪ್ಪ, ರೇವಣಪ್ಪ ಬಿದರಗೇರಿ, ಮಾಲತೇಶ್, ಭಾರತಿ, ಲಿಂಗರಾಜ ಕೆ ಗೌಡ್ರು, ಅನುಕೃತಾ, ಶ್ರೀಮತಿ ಅನೇಕರು ಇದ್ದರು.
ವರದಿ: ಮಧು ರಾಮ್ ಸೊರಬ