Entertainmentಮನರಂಜನೆ

‘ಇಲ್ಲಿ ಸಿಗೋ ತಿಂಡಿನ ಮಿಸ್ ಮಾಡೋಕೆ ಇಷ್ಟ ಇರಲಿಲ್ಲ ಹಾಗಾಗಿ ಬಂದೆ’

‘ಇಲ್ಲಿ ಸಿಗೋ ತಿಂಡಿನ ಮಿಸ್ ಮಾಡೋಕೆ ಇಷ್ಟ ಇರಲಿಲ್ಲ ಹಾಗಾಗಿ ಬಂದೆ’


(ARTICAL): ‘ಪಥಸಂಚಲನ’ ಅನ್ನೋದು ಅಲ್ಲಿಗೆ ಅಭ್ಯಾಸಕ್ಕೆಂದು ಹೋಗುವ ಮಕ್ಕಳಿಗೆ ಮಾತ್ರ ಅರ್ಥ ಆಗತ್ತೆ. ಅದೊಂದು ಶಿಸ್ತನ್ನು ಕಲಿಯುವ ಜಾಗ. ಅದಕ್ಕೆ ತಯಾರಿ, ತರಗತಿಯಿಂದ ಹೊರಬಂದು ಅಭ್ಯಾಸ ಮಾಡುವ ಕ್ಷಣಗಳು, ಹೆಜ್ಜೆ ಸರಿಯಾಗಿ ಹಾಕಲು ಪಡುವ ಶ್ರಮ, ಅಭ್ಯಾಸಕ್ಕೆ ಬರುವುದು ಬೇಡ ಎಂದಾಗ ಆಗುವ ಬೇಸರ, ಇದರ ನಡುವೆ ಜಿಲ್ಲಾಡಳಿತದಿಂದ ಆಯೋಜಿಸುವ ಅಭ್ಯಾಸದ ಸಮಯ… ಹೀಗೆ ಎಲ್ಲವನ್ನೂ ಒಂದೊಮ್ಮೆ ನೋಡುತ್ತ ಹೋದರೆ ಇವುಗಳು ‘ಸುಮಧುರ ಕ್ಷಣ’ಗಳು ಅನ್ನಿಸದೇ ಇರದು.

ಶಾಲೆಯಲ್ಲಿ ಪಥಸಂಚಲನದ ಅಭ್ಯಾಸ ಶುರುವಾಗುವುದು ಸಾಮಾನ್ಯವಾಗಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ಮೊದಲು. ನಮ್ಮ ಪ್ರೌಢಶಾಲೆಯ ಬಾಲಕ-ಬಾಲಕಿಯರ ಎರಡು ತಂಡಗಳ ಪಥಸಂಚಲನದಲ್ಲಿ ಭಾಗವಹಿಸುತ್ತಿರುವ ವಿದ್ಯಾರ್ಥಿಗಳಿಗೆ ಮೊದಲೇ ತಿಳಿದಿರುವುದರಿಂದ ನಿಗಧಿತ ಸಮಯಕ್ಕಿಂತ ಮೊದಲೇ ಬಂದು 'ಸರ್ ಯವಾಗ ಪ್ರಾಕ್ಟೀಸ್ ಆರಂಭ?' ಎಂದು ಕೇಳುತ್ತಿದ್ದರು. ಮೊದಮೊದಲ ಬಾರಿಗೆ ಅನೇಕ ವಿದ್ಯಾರ್ಥಿಗಳು ಅಭ್ಯಾಸಕ್ಕೆಂದು ಬರುತ್ತಿದ್ದರು. ಇದನ್ನು ಕಂಡು ಮಕ್ಕಳಿಗೆ ಅದೆಷ್ಟು ಆಸಕ್ತಿ ಎನಿಸುತ್ತಿತ್ತು. ನಿಜವಾದ ಕಾರಣ ಏನೆಂದರೆ ಕೋಚಿಂಗ್ ತರಗತಿಯಿಂದ ತಪ್ಪಿಸಿಕೊಳ್ಳಲು ಏನಾದರೊಂದು ಕಾರಣ ಬೇಕಿತ್ತು ಎನಿಸಿ ಪಥಸಂಚಲನದ ಅಭ್ಯಾಸಕ್ಕಿಂತ ಮತ್ತೊಂದಿಲ್ಲ ಎನಿಸಿ ಬರುತ್ತಿದ್ದರು ಎಂದು ತದನಂತರ ತಿಳಿಯಿತು. ಒಂದಿಷ್ಟು ದಿನಗಳಲ್ಲಿ ಮಧ್ಯಾಹ್ನ, ಸಂಜೆ ಎಂದು ನಿರಂತರ ಅಭ್ಯಾಸ ಮಾಡುವ ಸಮಯದಲ್ಲಿ ಕೈಜೋರಾಗಿ ಬೀಸದ, ಸರಿಯಾಗಿ ಹೆಜ್ಜೆ ಹಾಕದ ವಿದ್ಯಾರ್ಥಿಗಳನ್ನು ಅನಿವಾರ್‍ಯವಾಗಿ ತೆಗೆಯಬೇಕಿತ್ತು. ಈ ಸಮಯದಲ್ಲಿ ಇಷ್ಟುದಿನ ಅಭ್ಯಾಸಕ್ಕೆ ಬಂದಿದ್ದೇವೆ. ಈಗ ತೆಗೆಯಬೇಡಿ ಎಂದು ಗೋಗರೆಯುತ್ತಿದ್ದರು. ಇಲ್ಲಿ ನಮಗೆ ತಂಡವಾಗಿ, ಚೆಂದವಾಗಿ ಮೂಡಿಬರುವಂತೆ ಪ್ರಯತ್ನ ಮಾಡುವ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ಇತ್ತು. ಇದರಲ್ಲಿ ತಂಡದ ಹೆಸರನ್ನು ಹಿಡಿದು ಸಾಗಲು ಮತ್ತು ತಂಡವನ್ನು ಮುನ್ನಡೆಸುವವರು ಇದ್ದೇ ಇರುತ್ತಿದ್ದರು.

ಹಾಗಾಗಿ ಮೊದಲು ಈ ಸ್ಥಾನಗಳಿಗೆ ಪೈಪೋಟಿ ನೀಡುತ್ತಿದ್ದರು. ಮೊದಲು ಇದರ ಆಯ್ಕೆಗೆ ಮುಂದಾದಾಗ ಈ ಹಂತದಲ್ಲಿ ಕಮಾಂಡಿಂಗ್ ಕೊಡಲು ಜೋರಾದ ಧ್ವನಿಯುಳ್ಳವರು ತಂಡದ ನಾಯಕ/ನಾಯಕಿಯರಾದರೆ, ಹೆಜ್ಜೆಯನ್ನು ಕರಾರುವಕ್ಕಾಗಿ ಇಡುವವರು ಶಾಲಾ ಹೆಸರಿರುವ ಬೋರ್ಡ್ ಅನ್ನು ಹಿಡಿಯಲು ಇರುವವರಲ್ಲಿ ಚೆಂದವಾಗಿ ಪಥಸಂಚಲನ ಮಾಡುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೆವು. ಇದಾದ ನಂತರದಲ್ಲಿ ತಂಡದ ಸದಸ್ಯರನ್ನು ಆಯ್ಕೆ ಮಾಡುವ ಪ್ರಕ್ರಿಯೆ. ಇದೇ ಬಹಳ ಕಷ್ಟದ ಕೆಲಸ. ಒಂದೊಂದು ತಂಡಕ್ಕೆ ೨೩ ವಿದ್ಯಾರ್ಥಿಗಳು ಹೆಚ್ಚುವರಿಯಾಗಿ ೨/೩ ವಿದ್ಯಾರ್ಥಿಗಳು ಬೇಕಿತ್ತು. ಆದರೆ ಅದಕ್ಕಿಂತ ಹೆಚ್ಚಿದ್ದ ಮಕ್ಕಳಿಗೆ, 'ಸಂಜೆ ಅಭ್ಯಾಸಕ್ಕೆ ಬನ್ನಿ. ಅಂತಿಮವಾಗಿ ತಂಡಕ್ಕೆ ಆಯ್ಕೆ ಮಾಡುವ ಸಮಯ' ಎಂದು ಹೇಳಿ ಹೆಚ್ಚುವರಿ ಸಮಯವನ್ನು ತೆಗೆದುಕೊಂಡು ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದೆವು. ಮಕ್ಕಳನ್ನು ಪಥಸಂಚಲನಕ್ಕೆ ಸಾಲಿನಲ್ಲಿ ನಿಲ್ಲಿಸಿ, ಎಲ್ಲರನ್ನು ಉದ್ದೇಶಿಸಿ 'ನೋಡಿ ನಿಮ್ಮಲ್ಲಿ ಎಲ್ಲರನ್ನು ಆಯ್ಕೆ ಮಾಡಿಕೊಳ್ಳಲು ಆಗುವುದಿಲ್ಲ, ಇಷ್ಟುದಿನ ಅಭ್ಯಾಸಕ್ಕೆ ಬಂದಿದ್ದೆ ಆದರೂ ನನ್ನ ಸೆಲೆಕ್ಟ್ ಮಾಡಿಲ್ಲ ಅಂತ ಅಳೋದು ಆಗಲಿ, ಪೋಷಕರಿಗೆ ದೂರನ್ನು ನೀಡೋದಾಗಲಿ ಮಾಡೋದನ್ನ ಬಿಡಿ, ಆಯ್ಕೆಯಾದ ಮಕ್ಕಳು ನಾಡಿದ್ದಿಂದ ಬೆಳಗ್ಗೆ ೬.೩೦ಕ್ಕೆ ಡಿ.ಎ.ಆರ್ ಮೈದಾನದಲ್ಲಿ ಇರಬೇಕು. ಪೋಷಕರೇ ಕರೆದುಕೊಂಡು ಬರಬೇಕು. ಅಲ್ಲಿಂದ ಶಾಲೆಗೆ ಶಾಲಾ ಬಸ್ ನಲ್ಲಿ ಕರೆದುಕೊಂಡು ಹೋಗಲಾಗುವುದು. ಯಾರಿಗೆ ಬರೋಕೆ ಆಗಲ್ಲ ಈಗಲೇ ಹೇಳಿಬಿಡಿ' ಎಂದಾಗ ಕೆಲವು ಮಕ್ಕಳು 'ಅಷ್ಟು ಬೆಳಗ್ಗೆ ಬರೋಕೆ ಆಗಲ್ಲ' ಎಂದು ಹೊರನಡೆದರು. ಕೆಲವರು 'ನಮ್ಮ ಮನೆ ದೂರ ಇರೋದರಿಂದ ಅಲ್ಲಿಗೆ ಬಿಡಲು ಯಾರೂ ಇಲ್ಲ' ಎಂದು ಇನ್ನೂ ಕೆಲವರು ಹೊರ ನಡೆದರು. ಇನ್ನುಳಿದ ಕೆಲವರಲ್ಲಿ ನಿರಂತರವಾಗಿ ಅಭ್ಯಾಸ ಮಾಡಿಸುತ್ತ, 'ಯಾರಾದರೂ ಸರಿಯಾಗಿ ಹೆಜ್ಜೆ ಹಾಕದಿದ್ದಲ್ಲಿ, ಕೈ ಜೋರಾಗಿ ಬೀಸದಿದ್ದಲ್ಲಿ ಅನಿವಾರ್ಯವಾಗಿ ಹೊರಗಿಡಬೇಕಾಗುತ್ತದೆ' ಎಂದು ಎಚ್ಚರಿಸಿ ಆಯ್ಕೆಯ ಪ್ರಕ್ರಿಯೆಯನ್ನು ಮುಂದುವರೆಸಿದೆವು. ಕೆಲವರಂತೂ ದೊಡ್ಡ ಪರೀಕ್ಷೆ ಎನ್ನುವ ಹಾಗೇ ಹೆಜ್ಜೆ ಹಾಕುತ್ತಿದ್ದರು. ಯಾರನ್ನಾದರೂ ಹೊರಬನ್ನಿ ಎಂದು ಕರೆದರೆ ಅಲ್ಲಿಗೆ ಅವರು ಆಯ್ಕೆಯಾಗಿಲ್ಲ ಎಂದೇ ಅರ್ಥ. ಅವರಿಗೆ 'ಮುಂದಿನ ಬಾರಿಗೆ ಸಿದ್ಧರಾಗಿ' ಎಂದು ಹೇಳಿ ಕಳಿಸುತ್ತಿದ್ದೆವು. ಅಲ್ಲಿಯೇ ಉಳಿದವರಂತೂ ಆಯ್ಕೆಯಾಗಿದ್ದೇವೆ ಎಂಬ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರು. ಅಂತಿಮವಾಗಿ ತಂಡವೊಂದರ ರಚನೆಯಾದಾಗ ಅವರಿಗೂ, 'ಇದರಲ್ಲಿ ಅಂತಿಮವಾಗಿ ಯಾರನ್ನು ಬೇಕಾದರೂ ತೆಗೆಯಬಹುದು ಅದಕ್ಕೆ ಸಿದ್ಧರಿದ್ದರೆ ಮಾತ್ರ ಬನ್ನಿ' ಎಂದಾಗಲೂ ಎಲ್ಲರೂ ಅಲ್ಲಿಯೇ ಇದ್ದರು. ಬೆಳಗ್ಗೆ ಬರುವಾಗ ಬ್ರೆಡ್, ಬಿಸ್ಕೇಟ್ ತಿಂದುಕೊಂಡು ಬರುವಂತೆ ತಿಳಿಸಿ, ಅವರಿಗೆ ಎಷ್ಟೊತ್ತಿಗೆ ಬರಬೇಕು? ಸಮವಸ್ತ್ರ ಎಲ್ಲದರ ಬಗ್ಗೆ ತಿಳಿಸಿ ಮುಖ್ಯೋಪ್ಯಾಧ್ಯಾಯರು ಶುಭ ಹಾರೈಸಿ ಕಳಿಸಿದರು. ಆಯ್ಕೆಯಾಗಿದ್ದ ಮಕ್ಕಳ ಖುಷಿಗೆ ಪಾರವೇ ಇರಲಿಲ್ಲ. ಮರುದಿನ ಬೆಳಗ್ಗೆ ೬.೩೦ರ ಒಳಗಾಗಿ ಡಿ.ಎ.ಆರ್ ಮೈದಾನಕ್ಕೆ ಬಂದರೆ ಅದಾಗಲೇ ಒಂದಿಬ್ಬರು ವಿದ್ಯಾರ್ಥಿಗಳು ಬಂದಿದ್ದವರು. ಅವರ ಪೋಷಕರು ಜವಾಬ್ದಾರಿ ನೀಡಿ ಅಲ್ಲಿಂದ ತೆರಳಿದರು. ಹಂತಹಂತವಾಗಿ ಮಕ್ಕಳು ಬಂದು ಸೇರಿದರು. ಮೊದಲ ದಿನವಾದ್ದರಿಂದ ಅಭ್ಯಾಸ ಆರಂಭವಾಗುವುದು ತಡವಾಗಿತ್ತು. ನಮ್ಮ ಮಕ್ಕಳನ್ನು ನಮಗೆಂದು ನಿಗಧಿಪಡಿಸಿದ್ದ ಜಾಗದಲ್ಲಿ ಹೇಗೆ ನಿಲ್ಲುವುದು? ಲೀಡರ್ ಗಳು ಏನೇನು ಮಾಡಬೇಕು? ಎಂಬುದನ್ನು ತಿಳಿಸಿದೆವು.

ನಮ್ಮ ಮುಂದಿದ್ದ ಪೊಲೀಸ್ ತಂಡದವರು ಕಳೆದಬಾರಿ ಪಥಸಂಚಲನಕ್ಕೆ ಬಂದಿದ್ದ ಮಕ್ಕಳನ್ನು ಮಾತನಾಡಿಸಿ 'ಈ ಬಾರಿಯೂ ಬಹುಮಾನ ಪಡೆಯಿರಿ' ಎಂದು ಹುರಿದುಂಬಿಸಿದರು. ಇಲಾಖೆಯ ಅಧಿಕಾರಿಗಳು ಎಲ್ಲರಿಗೂ ಸಲಹೆ, ಸೂಚನೆಗಳನ್ನು ನೀಡುತ್ತಿದ್ದರು. ಎಲ್ಲವೂ ಮುಗಿದು, ಮೊದಲ ಸುತ್ತಿನ ಅಭ್ಯಾಸ ಆರಂಭವಾದದ್ದು ೮.೦೦ ಕ್ಕೆ. ಅಂತೂ ಶುರುವಾಯಿತಲ್ಲ ಎಂದು ಮಕ್ಕಳ ಜೊತೆಗೆ ಸಾಗುತ್ತ, ಅವರಿಗೆ ಮಾರ್ಗದರ್ಶನ ಮಾಡಲು ಅವಕಾಶ ಇದ್ದದ್ದರಿಂದ ಮಕ್ಕಳಿಗೆ ಸರಿಯಾಗಿ ಹೆಜ್ಜೆ ಹಾಕಲು, ಸಾಲಿನಲ್ಲಿಯೇ ಸಾಗುವಂತೆ ಹೇಳುತ್ತ ಅವರ ಜೊತೆಗೆ ಸಾಗಿದೆವು. ವೇದಿಕೆಯ ತನಕ ಜೊತೆಗಿದ್ದು, ಅದಾದ ನಂತ ಮೂಲಸ್ಥಾನಕ್ಕೆ ನಾವು ಬಂದೆವು. ಮಕ್ಕಳು ಒಂದು ಸುತ್ತನ್ನು ಸುತ್ತಿ ಬರುವುದರೊಳಗಾಗಿ ನಾವು ಬಂದಿದ್ದೆವು. ಹೆಜ್ಜೆ ಹಾಕುವಲ್ಲಿ ತಪ್ಪು ಮಾಡಿದ್ದ ಕೆಲ ವಿದ್ಯಾರ್ಥಿಗಳನ್ನು ಬದಲಾವಣೆ ಮಾಡಿದೆವು. ಹೊರಗೆ ಬಂದ ವಿದ್ಯಾರ್ಥಿಗಳು, 'ಸರ್ ಈ ಸಲ ಸರಿಯಾಗಿ ಮಾಡುತ್ತೇನೆ. ಮತ್ತೊಂದು ಅವಕಾಶ ನೀಡಿ' ಎಂದು ಕೇಳುತ್ತಿದ್ದರು. 'ನೀವು ಚೆನಾಗಿಯೇ ಮಾಡಿದ್ದೀರಿ, ಪಾಪ ಅವರೂ ಸಹ ಬೆಳಗ್ಗೆ ಬೇಗನೇ ಬಂದಿರುವುದರಿಂದ ಅವರು ಸುಮ್ಮನೆ ನಿಲ್ಲುವುದರ ಬದಲು ಒಂದು ಸುತ್ತು ಅಭ್ಯಾಸ ಮಾಡಲಿ ಎಂದು ಹೇಳಿದ್ದು. ಅನ್ಯತಾ ಭಾವಿಸಬೇಡಿ' ಎಂದು ಹೇಳಿದಾಗ ಆ ಮಕ್ಕಳಿಗೆ ಒಂದು ರೀತಿಯ ಸಮಾಧಾನ. ಹೀಗೆ ಎರಡು/ಮೂರು ಸುತ್ತು ಮುಗಿದ ಮೇಲೆ ಭಾಗವಹಿಸಿದ್ದವರೆಲ್ಲರಿಗೂ ತಿಂಡಿಯ ವ್ಯವಸ್ಥೆ ಇತ್ತು. ಎಲ್ಲರೂ ಅತ್ತ ಓಡಿದ್ದೇ ಓಡಿದ್ದು. ದಿನವೂ ಒಂದಿಲ್ಲೊಂದು ತಿಂಡಿ ಅಭ್ಯಾಸದ ಸಮಯದಲ್ಲಿ ಇದ್ದೇ ಇರುತ್ತಿತ್ತು. ಹೊಟ್ಟೆ ತುಂಬುವಷ್ಟು ತಿಂಡಿ ಕೊಡುತ್ತಿದ್ದರು. ರುಚಿಯೂ ಚೆನ್ನಾಗಿಯೇ ಇರುತ್ತಿತ್ತು. ನಮನಳ ತಾಯಿ ಸಂಜೆ ಶಾಲೆಯ ಬಳಿ ಸಿಕ್ಕಾಗ 'ನಾವು ಮನೇಲಿ ಅದೇ ತಿಂಡಿ ಮಾಡಿದರೆ ಸರಿಯಾಗಿ ತಿನ್ನಲ್ಲ, ಅಲ್ಲಿ ತುಂಬಾ ಚೆನ್ನಾಗಿ ಇರತ್ತೆ ಅಂತಾರೆ. ಮೂರು ದಿನವೂ ತಿಂಡಿ ತಿನ್ನಿ ಅಂತ ಹೇಳೋದು ಬೇಡ, ಅಷ್ಟು ಚೆನಾಗಿ ತಿಂದಿರ್ತಾರೆ. ಅದೇನು ಹಾಗೇ ಅನ್ನೋದೇ ಗೊತ್ತಾಗ್ತಾ ಇಲ್ಲ' ಎಂದಾಗ. 'ರುಚಿ ನಿಜವಾಗಿಯೂ ಚೆನಾಗಿ ಇರತ್ತೆ. ನಾವು ಅಲ್ಲಿಯೇ ತಿಂಡಿ ತಿಂದು ಬರೋದಲ್ವೆ? ಹಾಗಾಗಿ ಗೊತ್ತಿದೆ' ಎಂದಾಗ 'ಒಟ್ಟಿನಲ್ಲಿ ಮನೆ ತಿಂಡಿಗಿಂತ ಅದೇ ರುಚಿ ಅಂತಾರೆ. ಇರಲಿ ಮೂರು ದಿನ. ಆಮೇಲೆ ನಮ್ಮ ಹತ್ರಾನೇ ಬರಬೇಕಲ್ಲ?' ಎಂದು ನಕ್ಕರು. ಅದು ನಿಜವೂ ಕೂಡ ಆಗಿತ್ತು. ಇದರ ಮಧ್ಯೆ. ಮಾನ್ಯತ, 'ಸರ್, ಬೈಬೇಡಿ ನಾಳೆಯಿಂದ ನಾನು ಬರಲ್ಲ. ಅದು ಊರಲ್ಲಿ ಮದುವೆ ಅಂತೆ ಅಲ್ಲಿಗೆ ಹೋಗಲೇಬೇಕಿದೆ. ಹಾಗಾಗಿ ಬರೋಕೆ ಆಗಲ್ಲ. ಈ ಬಾರಿ ಪಥಸಂಚಲನ ಮಿಸ್ ಮಾಡ್ಕೋತೀನಿ. ಅದರ ಜೊತೆಗೆ ಇಲ್ಲಿ ಕೊಡೋ ತಿಂಡಿನ ತುಂಬಾನೆ ಮಿಸ್ ಮಾಡ್ಕೋತೀನಿ' ಎಂದು ತನ್ನ ಮನಸ್ಸಿನ ಮಾತನ್ನು ಹೇಳಿದಳು. 'ಇದು ಗೊತ್ತಿದ್ದು ಇವತ್ತು ಯಾಕೆ ಬಂದಿದ್ದೆ? ಮುಂಚೇನೆ ಹೇಳೋದಲ್ವಾ?' ಎಂದಾಗ, 'ಹೇಳಬಹುದಿತ್ತು. ಆದರೆ ಇಲ್ಲಿ ಸಿಗೋ ತಿಂಡಿನ ಮಿಸ್ ಮಾಡೋಕೆ ಇಷ್ಟ ಇರಲಿಲ್ಲ ಹಾಗಾಗಿ ಬಂದೆ' ಎಂದಾಗ ತಿಂಡಿ ತಿನ್ನೋಕೆ ಹೀಗೂ ಮಾಡ್ತಾರಾ? ಅನ್ನಿಸಿದ್ದಂತೂ ಸುಳ್ಳಲ್ಲ.

ಅಭ್ಯಾಸ ಮುಗಿದ ನಂತರ ತಿಂಡಿ ತಿನ್ನಲು ವಿವಿಧ ಶಾಲೆಯ ಮಕ್ಕಳು ಓಡೋಡಿ ಬರುವುದು, ಸಾಲಲ್ಲಿ ನಿಲ್ಲುವುದು ಇದ್ದೇ ಇರುತ್ತಿತ್ತು. ನಮ್ಮ ಶಾಲೆಯಿಂದ ಬಂದ ಹೆಚ್ಚುವರಿ ವಿದ್ಯಾರ್ಥಿಗಳಿಗೆ ಅದಾಗಲೆ ತಿಂಡಿಯ ಬಳಿಗೆ ಕಳಿಸಿರುತ್ತಿದ್ದೆವು. ಎಲ್ಲರೂ ತಿಂಡಿ ಹಾಕಿಸಿಕೊಂಡು ಒಂದೆಡೆ ಕುಳಿತು ಒಟ್ಟಿಗೆ ತಿನ್ನುತ್ತಿದ್ದೆವು. ಈ ಸಮಯದಲ್ಲಿ ಅದೇನೋ ಜಗತ್ತೆ ಇವರ ಮೇಲಿದೆ ಎನ್ನುವಂತೆ ಮಾತುಮಾತುಮಾತು… ನಮ್ಮ ಮಕ್ಕಳೋ ಕೆಲವರು ತಿನ್ನುವುದರಲ್ಲಿ ಬಹಳ ನಿಧಾನ. ಇನ್ನೂ ಕೆಲವರು ಎಲ್ಲರೂ ಹಾಕಿಸಿಕೊಂಡು ಬರುವುದರೊಳಗೆ ಖಾಲಿ ಮಾಡಿ ‘ಸರ್ ಮತ್ತೊಮ್ಮೆ ತಿಂಡಿ ಹಾಕಿಸಿಕೊಂಡು ಬರಬಹುದೇ?’ ಎಂದು ಕೇಳುತ್ತಿದ್ದರು. ‘ಕೊಡ್ತಾರೆ ಅಂದರೆ ಧಾರಾಳವಾಗಿ ಹಾಕಿಸಿಕೊಂಡು ಬನ್ನಿ’ ಎನ್ನುತ್ತಿದ್ದೆವು. ಯಾವುದೇ ಕಾರಣಕ್ಕೂ ತಿಂಡಿಯನ್ನು ತಟ್ಟೆಯಲ್ಲಿ ಬಿಡುವಂತಿರಲಿಲ್ಲ. ತಿನ್ನಲೇಬೇಕಿತ್ತು. ಕೆಲವರಂತೂ ತಮ್ಮ ಆತ್ಮೀಯರಿಗೆ ತಿನ್ನಿಸಿಯಾದರೂ ಸರಿ ಒಟ್ಟಿನಲ್ಲಿ ಖಾಲಿ ಮಾಡುತ್ತಿದ್ದರು. ತಿಂಡಿ ತಿಂದ ನಂತರ ಶಾಲಾಬಸ್ ಗೆ ಹೋಗಬೇಕಿದ್ದರಿಂದ ಕೆಲವರು ನಿಧಾನವಾಗಿ ತಿನ್ನುತ್ತಿದ್ದರು. ‘ಬಸ್ ಬಂದಿದೆ. ಬೇಗಬೇಗ ತಿನ್ನಬೇಕು’ ಎಂದು ಹೇಳಿ ಎಲ್ಲರಿಗೂ ಬಸ್ ಹತ್ತಿಸಿ ನಾವು ಶಾಲೆಯ ಕಡೆಗೆ ತೆರಳುತ್ತಿದ್ದೆವು.

ಪಥಸಂಚಲನದ ಅಭ್ಯಾಸದ ಸಮಯದ 'ತಿಂಡಿ'ಯ ರುಚಿ ಅಲ್ಲಿಗೆ ಹೋಗುವ ಮಕ್ಕಳಿಗೆ ಮಾತ್ರ ಗೊತ್ತು. ಬೆಳಗ್ಗೆ ಬೇಗ ಬಂದು, ಅಭ್ಯಾಸ ಮಾಡಿರುವುದರಿಂದಲೇನೋ ಮಕ್ಕಳು ಚೆನ್ನಾಗಿ ತಿಂಡಿ ತಿನ್ನುತ್ತಿದ್ದರು. ಕೆಲವರಂತೂ ತಿಂಡಿ ಬರುತ್ತಿದ್ದ ಹಾಗೆಯೇ ಅದರ ಪರಿಮಳದಿಂದ ಇವತ್ತು ಯಾವ ತಿಂಡಿ ಇರಬಹುದು ಎಂದು ಅಂದಾಜಿಸುತ್ತಿದ್ದರು. ಪಥಸಂಚಲನಕ್ಕಿಂತ ಅದರ ತಯಾರಿಯಲ್ಲಿನ ಈ ಘಟನೆಗಳು ಹೆಚ್ಚು ಖುಷಿ ಕೊಡುವುದು ಮತ್ತು ನೆನಪಲ್ಲಿ ಉಳಿಯುವುದು. ಮನೆಯಲ್ಲಿ ಸರಿಯಾಗಿ ತಿನ್ನದ ಮಕ್ಕಳು ಇಲ್ಲಿ ಮಾತ್ರ ಚೆನ್ನಾಗಿಯೇ 'ಬ್ಯಾಟಿಂಗ್' ಮಾಡುತ್ತಿದ್ದರು. ಇದರ ಮಧ್ಯೆ ಕೆಲವು ಮಕ್ಕಳು ಬಾಕ್ಸ್ ನಲ್ಲಿ ತಿಂಡಿ ತಂದು ಅದನ್ನು ಇದರೊಂದಿಗೆ ಸೇರಿಸಿ ತಿನ್ನುತ್ತಿದ್ದರು. ಈ ತಿಂಡಿ ತಿನ್ನುವ ಸಮಯದಲ್ಲಿ ನೋಟ್ಸ್ ಬರೆಯುವವರ ಸಂಖ್ಯೆಯೂ ಕಡಿಮೆ ಇರಲಿಲ್ಲ. ಈಗಲೂ ಕೆಲವು ಹಿರಿಯ ವಿದ್ಯಾರ್ಥಿಗಳು ಹೇಳುತ್ತಾರೆ, 'ಪಥಸಂಚಲನ ಇದ್ದಾಗ ಹೇಳಿ ಬರ್ತಿವಿ. ಮಕ್ಕಳಿಗೆ ಪ್ರಾಕ್ಟೀಸ್ ಮಾಡಿಸಿ, ಚೆನ್ನಾಗಿ ತಿಂಡಿ ತಿನ್ಕೊಂಡು ಬರ್ತಿವಿ' ಎಂದು. ಇವೆಲ್ಲವೂ ಒಟ್ಟಿಗೆ ಕುಳಿತು ತಿಂಡಿ ತಿನ್ನುವುದನ್ನು ಕಂಡಾಗ ನೆನಪಾಗುತ್ತವೆ. ಆದಷ್ಟು ಬೇಗ ಅಭ್ಯಾಸ ಆರಂಭವಾಗಲಿ ಎನಿಸುತ್ತದೆ. ಪಥಸಂಚಲನದಷ್ಟೇ ಪ್ರಾಮುಖ್ಯತೆ ಅಲ್ಲಿಯ ತಿಂಡಿಗೂ ಇದೇ ಎನ್ನುವಾಗ ಒಮ್ಮೆಯಾದಾರೂ ಅಲ್ಲಿಯ ತಿಂಡಿ ತಿನ್ನುವ ಮನಸ್ಸಾಗುವುದು ಸಹಜವೇ ಆಗಿರುತ್ತದೆ...

Leave a Reply

Your email address will not be published. Required fields are marked *

Scan the code