Entertainmentಮನರಂಜನೆ

‘ನಮ್ಮ ಟೀಚರ್ ಗಳು ಇಷ್ಟು ಚೆನ್ನಾಗಿ  ಆಟ ಆಡ್ತಾರೆ ಅಂತ ಅನ್ಕೊಂಡೇ ಇರಲಿಲ್ಲ’

‘ನಮ್ಮ ಟೀಚರ್ ಗಳು ಇಷ್ಟು ಚೆನ್ನಾಗಿ  ಆಟ ಆಡ್ತಾರೆ ಅಂತ ಅನ್ಕೊಂಡೇ ಇರಲಿಲ್ಲ’



(ARTICAL): ಪ್ರತಿಯೊಬ್ಬ ಶಿಕ್ಷಕರ ಬದುಕಲ್ಲೂ ‘ಶಿಕ್ಷಕರ ದಿನಾಚರಣೆ’ ಎಂಬುದು ಮರೆಯದ ದಿನವಾಗಿರುತ್ತದೆ. ಅಂದು ಯಾವುದೇ ಶಿಕ್ಷಕರು ಪಾಠವನ್ನು ಮಾಡುವುದಿಲ್ಲ ಎಂದೇ ಮಕ್ಕಳು ಭಾವಿಸಿರುತ್ತಾರೆ. ಶಿಕ್ಷಕರು ತರಗತಿಗೆ ಬಂದಾಗ ಎಲ್ಲರೂ ಸೇರಿ ಶುಭಾಶಯಗಳನ್ನು ತಿಳಿಸುತ್ತಾರೆ. ಕೆಲವರು ಖುಷಿಯಿಂದ, ಇನ್ನೂ ಕೆಲವರು, ಎಲ್ಲರೂ ಶುಭಕೋರುತ್ತಿದ್ದಾರೆ ನಾವು ಎಲ್ಲರ ಜೊತೆಗಿದ್ದೀವಿ. ಎನ್ನಲು ಶುಭಾಶಗಳನ್ನು ಹೇಳುತ್ತಾರೆ. ಮಕ್ಕಳು, ‘ಸಾರ್… ಇವತ್ತು ಪಾಠ ಮಾಡಬೇಡಿ’ ಎಂದೂ, ‘ಮ್ಯಾಮ್… ಇವತ್ತು ಏನಾದರೂ ನಮಗೆ ಆಟ ಆಡಿಸಿ, ಪಾಠ ಮಾತ್ರ ಇವತ್ತು ಮಾಡಬೇಡಿ’ ಎನ್ನುತ್ತಿದ್ದರು. ಇವೆಲ್ಲವನ್ನು ನಮ್ಮ ತರಗತಿಯಲ್ಲೂ ಹೇಳುತ್ತಿದ್ದರು. ಆಗ, ‘ಶಿಕ್ಷಕರ ದಿನಾಚರಣೆ ನಮಗೂ ನೆನಪಲ್ಲಿ ಉಳಿಯುತ್ತದೆ. ನಿಮಗೂ ನೆನಪಿನಲ್ಲಿ ಉಳಿಯುವಂತೆ ಮಾಡುತ್ತೇನೆ. ಎಂದು ಪಾಠವನ್ನು ಶುರು ಮಾಡುತ್ತಿದ್ದಂತೆ ಎಲ್ಲರೂ ಜೋರಾಗಿ, ‘ಸಾರ್…’ ಎಂದು ಒಕ್ಕೋರಲಿನಿಂದ ಕೂಗುತ್ತಿದ್ದಂತೆ. ‘ಸರಿ ನಿಮ್ಮೆಲರ ಇಷ್ಟದಂತೆ ಪಾಠ ಮಾಡುತ್ತೇನೆ’ ಎಂದು ಒಂದಿಷ್ಟು ಕಾಲ ಮಕ್ಕಳಿಗೆ ಕಾಡಿಸಿ ನಂತರದಲ್ಲಿ ಪಾಠವನ್ನು ಮಾಡಿದ್ದಿದೆ. ಮಕ್ಕಳು ಅದೆಷ್ಟು ಬೈದುಕೊಂಡಿದ್ದಾರೊ ಗೊತ್ತಿಲ್ಲ. ಆದರೂ ಪಾಠವನ್ನು ಬಿಡದೇ ಮಾಡಿದ್ದೆ.



ಮೊದಲ ಬಾರಿಗೆ ಶಿಕ್ಷಕನಾಗಿದ್ದ ಸಮಯದಲ್ಲಿ ಎಸ್.ಎಸ್.ಎಲ್.ಸಿ ಓದುತ್ತಿರುವ ಮಕ್ಕಳು ಎಲ್ಲಾ ಶಿಕ್ಷಕರಿಗೂ ಏನೇನೋ ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ಎಲ್ಲವನ್ನು ಖುಷಿಯಿಂದ ಆಡಿದ್ದೆವು. ತಮ್ಮತಮ್ಮ ತರಗತಿಯ ಶಿಕ್ಷಕರು ಗೆಲ್ಲಬೇಕೆಂದು ಪ್ರತೀ ತರಗತಿಯ ಮಕ್ಕಳು ಕೂಗಿಕೂಗಿ ತಮ್ಮ ಶಿಕ್ಷಕರನ್ನು ಹುರಿದುಂಬಿಸುತ್ತಿದ್ದರು. ಕಡೆಯದಾಗಿ ಯಾರಾದರೂ ಶಿಕ್ಷಕರು ಗೆದ್ದಲ್ಲಿ ಉಳಿದವರೆಲ್ಲರೂ ಖುಷಿಯಿಂದಲೇ ಅವರನ್ನು ಅಭಿನಂದಿಸಿ, ಸಂಭ್ರಮಿಸುತ್ತಿದ್ದರು. ಶಿಕ್ಷಕರು ಮಾತ್ರವಲ್ಲದೇ ಶಾಲೆಯ ಆಯಾಗಳಿಗೂ, ಡ್ರೈವರ್-ಕಂಡಕ್ಟರ್ ಗಳಿಗೂ ಆಟಗಳನ್ನು ಆಡಿಸುತ್ತಿದ್ದರು. ಅಗಂತು ಬೇಧಭಾವವಿಲ್ಲದೇ ಸಂಭ್ರಮಿಸುತ್ತಿದ್ದ ಪರಿಯೇ ಭಿನ್ನ.

ಪ್ರಾಥಮಿಕ ಶಾಲೆ ಆರಂಭವಾದಾಗಿನಿಂದ ಶಿಕ್ಷಕರ ಸಂಖ್ಯೆ ಹೆಚ್ಚಾಗಿರುತ್ತಿದ್ದುದರಿಂದ ಶಿಕ್ಷಕರುಗಳ ಹೆಸರನ್ನು ಚೀಟಿ ಬರೆದು ಅದರಲ್ಲಿ ಆಯ್ಕೆಯಾದವರಿಗೆ ಒಂದು ಸ್ಪರ್ಧೆ, ಮತ್ತೊಂದು ಸ್ಪರ್ಧೆಯಲ್ಲಿ ಅವರಿಗೆ ಅವಕಾಶವಿರಲಿಲ್ಲ. ಹೀಗೆ ಆಟೋಟಗಳಲ್ಲಿ ಸೂಜಿಗೆ ದಾರವನ್ನು ಪೋಣಿಸುವ ಸ್ಪರ್ಧೆ. ಅದರಲ್ಲಿ ಬೇಗ ದಾರ ಪೋಣಿಸಿ ಗೆದ್ದಾಗ ರವೀಂದ್ರಸರ್, ‘ನಿಮ್ಮ ಕಣ್ಣು ಸರಿಯಾಗಿದೆ ಅಂತ ಈಗ ಗೊತ್ತಾಯಿತು. ಅಷ್ಟು ಬೇಗ ಪೋಣಿಸಿದ್ರಿ, ಖುಷಿಯಾಯ್ತು ಅಂದರು. ಮನೆಯಲ್ಲಿ ಹೀಗೆ ಪೋಣಿಸಿ ಅಭ್ಯಾಸ ಇದೆ. ಹಾಗಾಗಿ ಗುರುಗಳೇ’ ಎಂದಾಗ, ‘ಅದಕ್ಕೆ ಗೆದ್ದಿರೋದು, ನಮಗೆ ಕನ್ನಡಕ ಬೇಕೆಬೇಕು. ಇರಲಿ ಬಿಡಿ, ಏನೋ ಒಂದು ಆಡಿದಿವಿ, ಮಕ್ಕಳು ಖುಷಿಯಿಂದ ಆಡಿಸಿದರ ಅಷ್ಟು ಸಾಕು’ ಎಂದರು.  ಯಾವ ಆಟವನ್ನು ಆಡಿಸಬೇಕು? ಯಾರು ಅದರ ಉಸ್ತುವಾರಿ ತೆಗೆದುಕೊಳ್ಳಬೇಕು? ಅದರ ಸಾಮಗ್ರಿಗಳನ್ನು ಯಾರುಯಾರು ತರಬೇಕು? ಗೆದ್ದವರಿಗೇನು ಬಹುಮಾನ ನೀಡಬೇಕು? ಹೀಗೆ ಅನೇಕ ಜವಾಬ್ಧಾರಿಗಳನ್ನು ಹಂಚಿಕೊಂಡಿದ್ದರು. ಒಂದಿಷ್ಟು ಮಕ್ಕಳು ಆಸಕ್ತಿಯಿಂದ ನಿರ್ವಹಿಸುತ್ತಿದ್ದರೆ. ಕೆಲವರು ಅದರಲ್ಲೂ ಕೊಂಕು ಹುಡುಕುವಾಗ ಮಕ್ಕಳು ಬೇಸರಗೊಂಡಿದ್ದಾರೆ, ಅತ್ತಿದ್ದಾರೆ. ‘ನಿಮಗೆ ನಿಮ್ಮ ಕೆಲಸ ತೃಪ್ತಿಕೊಡ್ತಾ ಇದೆ ಅಂದರೆ ಮುಂದುವರೆಸಿ. ಇತರರ ಬಗ್ಗೆ ಯೋಚಿಸ್ತಾ ನಿಮ್ಮ ಅಮೂಲ್ಯವಾದ ಸಮಯವನ್ನು ಹಾಳುಮಾಡಿಕೊಳ್ಳಬೇಡಿ’ ಎಂಬ ಸಲಹೆ ನೀಡಿದಾಗ, ‘ಬಂದರೆ ಜೊತೆಗೆ ಹೋಗುತ್ತೇವೆ. ಬರದಿದ್ದರೆ ಬಿಟ್ಟು ಹೋಗುತ್ತೇವೆ. ನಮಗೆ ಪಾಠ ಹೇಳಿದವರಿಗೆ ನಾವು ಏನಾದರೂ ನೀಡಬೇಕು. ಹಾಗಾಗಿ ಮಾಡುತ್ತಿದ್ದೇವೆ. ಒತ್ತಾಯವೇನಿಲ್ಲ. ಬಂದರೆ ಸ್ವಾಗತ, ಬರದೇಹೋದರೆ ನಿಮ್ಮ ಹಣೆಬರಹ…’ ಎಂದು ಧೈರ್ಯತಂದುಕೊಂಡು ಈ ಮಾತುಗಳನ್ನು ಹೇಳಿದ್ದಾರೆ.


ಆಗ ತಾನೇ ‘ಸೂಪರ್ ಮಿನಿಟ್’ ಎಂಬ ಕಾರ್ಯಕ್ರಮ ಬೇರೆ ಟಿ.ವಿಯಲ್ಲಿ ಶುರುವಾಗಿತ್ತು. ಇದರಲ್ಲಿನ ಕೆಲವು ಆಟಗಳನ್ನು ಸ್ಪರ್ಧೆಗಳಲ್ಲಿ ಬಳಸಿಕೂಂಡರು. ಲೋಟಗಳನ್ನು ಒಂದರ ಮೇಲೊಂದು ಜೋಡಿಸಿ ಒಮ್ಮೆಲೆ ಒಂದೆಡೆಯಿಂದ ಅವುಗಳನ್ನು ತೆಗೆಯುವ ಆಟ ಬಹಳ ಖುಷಿ ಕೊಟ್ಟಿತ್ತು. ಮತ್ತೊಮ್ಮೆ ಒಂದು ಬಟ್ಟಲಿನಲ್ಲಿರುವ್ವ ಥರ್ಮಾಕೋಲ್ ಮಣಿಗಳನ್ನು ಜ್ಯೂಸ್ ಕುಡಿಯುವ ಸ್ಟ್ರಾ ಬಳಲಿ ಒಂದೊಂದನ್ನು ನಿಮಿಷದಲ್ಲಿ ಮತ್ತೊಂದೆ ಬಟ್ಟಲಿಗೆ ಹಾಕುವ ಆಟವಂತೂ ಚೆಂದ ಇತ್ತು. ಎಷ್ಟೋಬಾರಿ ಬೀಳಿಸಿಕೊಂಡು ಮತ್ತೆ ಓಡಿ ಹೋಗಿ ತಂದು ಹಾಕುವಾಗ, ಸಮಯ ಮುಗಿಯುವಾಗ ಎಲ್ಲಾ ಮಕ್ಕಳು ಕೂಗುವ ಧ್ವನಿ. ಎಲ್ಲವೂ ಮಜವಾಗಿತ್ತು. ಗೆಲ್ಲುತ್ತೇವೋ ಸೋಲುತ್ತೇವೋ ಎನ್ನುವುದಕ್ಕಿಂತ ಆಡಿದಷ್ಟು ಸಮಯ ಸರಿಯಾಗಿ ಆಡಿದ್ದೀವಾ? ಎಂಬುದೇ ನಮ್ಮ ಸಂತೋಷಕ್ಕೆ ಕಾರಣವಾಗುತ್ತಿತ್ತು.

ಈ ಎಲ್ಲಾ ಆಟೋಟಗಳ ಮಧ್ಯೆ ಬಹಳ ಚೆಂದವಾಗಿ ನೆನಪಲ್ಲಿ ಇರುವುದೆಂದರೆ. ಶಾಲಾ ಕಟ್ಟಡದ ಮಧ್ಯೆ ಮಕ್ಕಳೆಲ್ಲ ಕುಳಿತು ಶಿಕ್ಷಕರ ತಂಡಮಾಡಿ ಕ್ರಿಕೇಟ್ ಆಡಿಸಿದ್ದು.
ವಿದ್ಯಾರ್ಥಿ ದೆಸೆಯಲ್ಲಿದ್ದಾಗ ಗಲ್ಲಿ ಕ್ರಿಕೇಟ್ ಆಡ್ತಾ ಇದ್ದವರು. ಚಿಕ್ಕಮಗಳೂರಿನ ನಮ್ಮ ಕೋಟೆ ಶಾಲಾ ಮೈದಾನಕ್ಕೆ ಕಾಂಪೌಂಡ್ ಇಲ್ಲದ ಕಾರಣ ಶಾಲಾ ಅವಧಿಯ ನಂತರ ಅದು ಕ್ರಿಕೇಟ್ ಆಡುವ ಜಾಗವಾಗುತ್ತಿತ್ತು. ಅದೆಷ್ಟೋ ಬಾರಿ ಆಟವಾಡಲು ಬೆಳಗ್ಗೆ ಹೋದವರು ಸಂಜೆ ಮನೆಗೆ ಬಂದು ಬೈಸಿಕೊಂಡದ್ದು, ಪೆಟ್ಟುತಿಂದದ್ದು ಇದೆ. ಎಲ್ಲೂ ಜಾಗ ಸಿಗದಿದ್ದಾಗ ರಸ್ತೆಯನ್ನೇ ಆಟದ ಮೈದಾನ ಮಾಡಿಕೊಂಡಿರುತ್ತಿದ್ದೆವು. ಶಿವಮೊಗ್ಗಕ್ಕೆ ಬಂದಾಗಲೂ ಸ್ಟೇಡಿಯಂನಲ್ಲಿ ಕೆಲವು ದಿನಗಳ ಕಾಲ ಆಟವಾಡಿದ್ದು, ಸ್ಕೌಟ್ ಭವನ್ ನಲ್ಲಿ ಮೀಟಿಂಗ್ ಮುಗಿದಾಗಲೂ ಶಿಕ್ಷಕರು ವಿದ್ಯಾರ್ಥಿಗಳು ಆಗಾಗ ಆಟವಾಡುತ್ತಿದ್ದದ್ದು ಉಂಟು. ಸಾಮಾನ್ಯವಾಗಿ ಸಹ್ಯಾದ್ರಿ ಕಾಲೇಜ್ ನಲ್ಲಿ ಯಥೇಚ್ಚವಾಗಿ ಎಲ್ಲಾ ಹುಡುಗರು ಕ್ರಿಕೇಟ್ ಆಡಿಯೇ ಇರುವವರಾಗಿರುತ್ತಾರೆ. ಏಕೆಂದರೆ ಆ ಕಾಲೇಜ್ ನಲ್ಲಿರುವ ದೊಡ್ಡದೊಡ್ಡ ಆಟದ ಮೈದಾನಗಳು. ಆಗಾಗ ಅಲ್ಲಿ ಕ್ರಿಕೇಟ್ ಟೂರ್ನಮೆಂಟ್ ಕೂಡ ನಡೆಯುತ್ತಿರುತ್ತದೆ. ತರಗತಿಯ ಬಿಡುವಿನ ಸಮಯದಲ್ಲಿ ಬಹುತೇಕರು ಅಲ್ಲಿಯೇ ಇರುತ್ತಿದ್ದರು. ನಮ್ಮ ಶಾಲೆಯಲ್ಲಿದ್ದ ಶಿಕ್ಷಕರಲ್ಲಿ ಲೋಕೇಶ್ ಸರ್, ಚನ್ನೇಶ್ ಸರ್, ಸುದೀಂಧ್ರಸರ್, ವರ್ಮಾಸರ್ ನಾನು ಕೂಡ ಸಹ್ಯಾದ್ರಿ ಕಾಲೇಜ್ ನಲ್ಲಿಯೇ ಓದಿದ್ದರಿಂದ ಕ್ರಿಕೇಟ್ ಆತ್ಮೀಯವಾಗಿತ್ತು.


ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಎಲ್ಲಾ ರೀತಿಯ ಆಟವಾದ ನಂತರ ರಿಭವ್ ಮತ್ತು ಮೊದಲಾದವರು ಕ್ರಿಕೇಟ್ ಆಡಿಸುವ ಯೋಚನೆ ಮಾಡಿದ್ದರು ಮಹಿಳಾ ಶಿಕ್ಷಕರು, ‘ನಾವು ಯಾರೂ ಆಡುವುದಿಲ್ಲ, ನಿಮ್ಮ ಸರ್ ಗಳಿಗೆ ಆಡಿಸಿ’ ಎಂದರಂತೆ ಹಾಗಾಗಿ ಬರೀ ನಾವುಗಳೇ ಆಡಲು ಮುಂದಾದೆವು. ಬ್ಯಾಟ್-ಬಾಲ್, ವಿಕೆಟ್ ಗಳನ್ನು ತಂದಿಟ್ಟರು. ಬ್ಯಾಟಿಂಗ್-ಬೌಲಿಂಗ್ ನಲ್ಲಿ ಶಿಕ್ಷಕರೇ ಇದ್ದ ಕಾರಣ ಕೆಲವು ವಿದ್ಯಾರ್ಥಿಗಳು ಫೀಲ್ಡಿಂಗ್ ಗೆ ನಿಂತರು. ಸುತ್ತಲೂ ಮಕ್ಕಳೆಲ್ಲ ಕುಳಿತು ಕೂಗುತ್ತ, ಚಪ್ಪಾಳೆ ತಟ್ಟುತ್ತಿದ್ದರು.  ಚನ್ನೇಶ್ ಸರ್ ಬ್ಯಾಟ್ ಹಿಡಿದು ಆಡಿದ್ದೇ ಆಡಿದ್ದೇ. ಪ್ರತೀ ಬಾರಿಯೂ ಇತರ ಶಿಕ್ಷಕರು ಬಾಲ್ ಮಾಡುವಾಗ ಎಲ್ಲಾ ವಿದ್ಯಾರ್ಥಿಗಳು ಹೋ… ಎಂದು ಕೂಗುತ್ತಿದ್ದರು. ಲೋಕೇಶ್ ಸರ್ ಆಡುವಾಗ ಸುಬ್ರಹ್ಮಣ್ಯಸರ್ ಮೂರು ವೈಡ್ ಬಾಲ್ ಮಾಡಿದರು.’ ಹೀಗೆ ಮಾಡಿದರೆ ಹೇಗೆ ಆಡೋದು? ಸರಿಯಾಗಿ ಮಾಡಪ್ಪ’ ಅಂತ ಹೇಳಿದಾಗಲೂ ಮಕ್ಕಳಿಂದ ಹೋ… ಎನ್ನುವ ಉದ್ಗಾರ. ಬ್ಯಾಟ್ ಬೀಸಿದ ರಭಸಕ್ಕೆ ಚೆಂಡು ಮೊದಲ ಮಹಡಿಗೆ ಹೋಯಿತು. ಮಕ್ಕಳ ಉದ್ಗಾರ ಇನ್ನೂ ಹೆಚ್ಚಾಯಿತು. ಸುದೀಂಧ್ರಸರ್ ಬೌಲಿಂಗ್ ಮಾಡುವಾಗ ಎಡಗೈಲಿ ಮಾಡಿದಾಗ ಎಲ್ಲರೂ ಆಶ್ಚರ್ಯದಿಂದ ನೋಡುತ್ತಿದ್ದೆವು. ಕಾರಣ ಹೆಚ್ಚಾಗಿ ಬಲಗೈ ಬಳಸುತ್ತಿದ್ದ ಇವರು ಎಡಗೈಲಿ ಬೌಲಿಂಗ್ ಮಾಡಿದ್ದು. ನಂತರ ಕೇಳಿದಾಗ ‘ನಾನು ಮೂಲತಃ ಎಡಗೈಯವನು. ಬರವಣಿಗೆ ಬಲಗೈಲೂ ಕಲಿತಿದ್ದೆ ಹಾಗಾಗಿ. ಆಟೋಟಗಳಲ್ಲಿ ಈಗಲೂ ಎಡಗೈ ಆಟಗಾರನಾಗಿಯೇ ಇದ್ದೇನೆ’. ಎಂದಾಗ ಎಲ್ಲರಿಗೂ ಆಶ್ಚರ್ಯವಾದದ್ದಂತು ಸುಳ್ಳಲ್ಲ. ಇದರ ಮಧ್ಯೆ ಒಬ್ಬ ಶಿಕ್ಷಕರು ಹೊಡೆದ ಹೊಡೆತಕ್ಕೆ ಮೇಲಿನ ಮಹಡಿಯ ಕಿಟಕಿಯ ಗ್ಲಾಸ್ ಸಣ್ಣದಾಗಿ ಬಿರುಕು ಬಿಟ್ಟುಕೊಂಡಿತು.

ಮುಖ್ಯೋಪಾಧ್ಯಾಯರು ಏನೂ ಅನ್ನಲಿಲ್ಲ. ಹಾಗಾಗಿ ಆಟ ಮುಂದುವರೆಯಿತು. ನನಗೆ ಬ್ಯಾಟಿಂಗ್ ಸರದಿ ಬಂದಾಗ ಕೈ ಸಮಸ್ಯೆ ಇದ್ದರೂ ಅದನ್ನು ಮರೆತು ಆಡಲು ಮುಂದಾಗಿದ್ದೆ. ಬಸವರಾಜ್ ಸರ್, ಮತ್ತು ಲೋಕೇಶ್ ಸರ್ ಇಬ್ಬರು ಬೌಲರ್ ಗಳಾಗಿದ್ದರು. ಒಮ್ಮೆ ರೈಟ್ ಹ್ಯಾಂಡ್ ಬ್ಯಾಟ್ಸಮನ್, ಮತ್ತೊಮ್ಮೆ ಲೆಫ್ಟ್ ಹ್ಯಾಂಡ್ ಬ್ಯಾಟ್ಸಮನ್ ಆಗಿ ಆಡಿದ್ದೆ. ಇರುವುದರಲ್ಲಿ ಪರವಾಗಿಲ್ಲ ಚೆನ್ನಾಗಿಯೇ ಆಡಿದ್ದೆ. ಆದರೂ ಲೋಕೇಶ್ ಸರ್, ‘ಹೋ ಒಂದು ಕಡೆನಿಂತು ಸರಿಯಾಗಿ ಆಡು’ ಎಂದರು. ಆಡಿದ ಅಷ್ಟೂ ಸಮಯ ಎಲ್ಲಾ ಶಿಕ್ಷಕರು ಬೇರೊಂದು ರೀತಿಯಲ್ಲಿ ಕಾಣುತ್ತಿದ್ದರು.   ಕೆಲವು ಮಕ್ಕಳು, ‘ಸರ್ ನೀವು ಲೆಫ್ಟ್-ರೈಟ್ ಇವುಗಳಲ್ಲಿ ಯಾವುದು?’ ಎಂದು. ‘ರೈಟ್ ಆದರೆ ಲೆಫ್ಟ್ ಕೂಡ ಆಡಿದ್ದೇನೆ. ಅಭ್ಯಾಸ ಇದೆ. ಗಲ್ಲಿ ಕ್ರಿಕೇಟ್ ಆಡಿ ಬೆಳೆದವರಲ್ಲವೇ? ಹಾಗಾಗಿ ಎರಡೂ ಅಭ್ಯಾಸ ಇದೆ’ ಎಂದಾಗ ‘ನಾವುಗಳು ಬೆಳಗ್ಗೆ-ಸಂಜೆ ಆಟ ಆಡ್ತ ಇರ್ತಿವಿ. ನೀವು ಬೇಕಾದರೆ ನಮ್ಮ ಜೊತೆಗೆ ಆಡೋಕೆ ಬನ್ನಿ ಸರ್’ ಎಂದರು. ‘ಬಿಡುವು ಇದ್ದರೆ ನೋಡೋಣ’ ಎಂದೆ. ರಿಭವ್ ಶೆಟ್ಟಿ, ‘ಸರ್ ನಮ್ಮ ಟೀಚರ್ ಗಳು ಇಷ್ಟು ಚೆನಾಗಿ ಕ್ರಿಕೇಟ್ ಆಡ್ತಾರೆ ಅಂತ ಅನ್ಕೊಂಡೇ ಇರಲಿಲ್ಲ. ಆದರೂ ಸೂಪರ್ ಆಗಿತ್ತು ಸರ್ ಆಟ. ಎಲ್ಲರೂ ಎಷ್ಟು ಎಂಜಾಯ್ ಮಾಡಿದರು ಗೊತ್ತಾ?’ ಎಂದನು ಅಪರೂಪಕ್ಕೆ ಆಟ ಆಡೋ ಅವಕಾಶ ಸಿಕ್ಕಾಗ ಎಲ್ಲಾ ಮೇಷ್ಟ್ರುಗಳು ಬಾಲ್ಯದಲ್ಲಿಯೋ, ಕಾಲೇಜ್ ನಲ್ಲಿಯೋ ಆಡಿದವರೇ ಆಗಿರುತ್ತಾರೆ. ಈಗ ಅವಕಾಶ ಸಿಕ್ಕಿದೆ. ಚೆನಾಗಿ ಬಳಸಿಕೊಂಡಿದಾರೆ. ಇವತ್ತಿನ ಆಟದ ಮೂಲಕ ಎಲ್ಲಾರೂ ಒಮ್ಮೆ ತಮ್ಮ ಹಳೆಯದಿನಗಳನ್ನು ಮೆಲುಕು ಹಾಕುವಂತೆ ಮಾಡಿದ್ದಂತೂ ನಿಜ. ಆಯೋಜನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೂ ಧನ್ಯವಾದಗಳು’ ಎಂದು ತಿಳಿಸಿದೆ. ಕೆಲವರಂತೂ ‘ಸರ್ ನಮಗೂ ಮಕ್ಕಳ ದಿನಾಚರಣೆಗೆ ಏನಾದರೂ ಹೀಗೇ ಆಟ ಆಡಿಸ್ತಿರಾ?’ ಎಂದಾಗ ಆಟ ಆಡಿಸುವುದು ಏನಿದ್ದರೂ ಪಿ.ಇ ಟೀಚರ್ ಕಡೆಯಿಂದ ಬರೋದು ಅವರನ್ನ ಕೇಳಿ, ಒಪ್ಪಿಗೆ ಸಿಕ್ಕರೆ ಆಡಿಸೋದೆ, ಎಲ್ಲಾರೂ ಸೇರಿ ಆಡೋದೆ’ ಎಂದಾಗ, ‘ಅದು ಬಂದಾಗ ನೋಡೋಣ ಸರ್, ಆದರೆ ಮರೆಯಬೇಡಿ’ ಎಂದಿದ್ದಾರೆ.



ಇದಾದ ನಂತರ ಹಾಲ್ ನಲ್ಲಿ ಎಲ್ಲಾ ಮಕ್ಕಳನ್ನು ಕೂರಿಸಿ. ಮಕ್ಕಳು ಶಿಕ್ಷಕರಿಗೆ ಸಿಹಿಯನ್ನು ವಿತರಿಸಿ, ವಿಷಯವಾರು ಶಿಕ್ಷಕರನ್ನು ಕರೆದು ಮಕ್ಕಳು ನೆನಪಿನ ಕಾಣಿಕೆಯನ್ನು ನೀಡಿದರು. ವ್ಯರ್ಥವಾಗುವ ವಸ್ತುವಿನ ಬದಲು ಪುಸ್ತಕವನ್ನು ನೀಡಿದ್ದರು. ಜೊತೆಗೆ ಶಾಲೆಗೆಂದು ಹೂವಿನ ಗಿಡಗಳನ್ನು ನೀಡಿದರು. ಇವೆರಡೂ ಉತ್ತಮ ಉಡುಗೊರೆಗಳಾಗಿದ್ದವು. ಬಹುಕಾಲ ಉಳಿಯುವಂತವಾಗಿದ್ದವು. ಪುಸ್ತಕವನ್ನು ಓದಿ ಅದನ್ನು ಶಾಲಾ ಗ್ರಂಥಾಲಯಕ್ಕೆ ನೀಡಿದೆವು.
ಪ್ರತೀ ಬಾರಿಯೂ ಶಿಕ್ಷಕರ ದಿನಾಚರಣೆಗೆಂದು ಮಕ್ಕಳು ಶಿಕ್ಷಕರಿಗೆಂದು ಗುಟ್ಟಾಗಿ ಏನೇನೋ ವಿಧವಿಧವಾದ ಆಟಗಳನ್ನು ಆಡಿಸುವುದು, ಶಿಕ್ಷಕರು ಆಡುವಾಗ ಹುರಿದುಂಬಿಸುವುದು, ನಮಗಂತೂ ಮರೆಯದ ಕ್ಷಣಗಳಾಗಿರುತ್ತವೆ. ನೋಟ್ಸ್, ಬುಕ್ಸ್, ಹೋಂವರ್ಕ್ ಎನ್ನುವುದನ್ನು ಬಿಟ್ಟು ಎಲ್ಲಾ ಶಿಕ್ಷಕರು ಮಕ್ಕಳೊಂದಿಗೆ ಮಕ್ಕಳಾಗಿರುವ ಸಮಯ ಆಗಿರುತ್ತದೆ. ಆದ್ದರಿಂದ ಮಕ್ಕಳಿಗೂ-ಶಿಕ್ಷಕರಿಗೂ ಇದೊಂದು ಮರೆಯದ ದಿನವಾಗಿರುತ್ತದೆ. ಬಹಳ ಕಾಲ ನೆನಪಲ್ಲಿ ಉಳಿಯುವಂತ ದಿನವೂ ಆಗಿರುತ್ತದೆ.

xr:d:DAF0TrtiFCc:3,j:3992857672398404020,t:24012513

Leave a Reply

Your email address will not be published. Required fields are marked *

Scan the code