ದಿನಾಲೂ 6ಗಂಟೆ ಓದುತ್ತಿದ್ದೆ, ರಾಜ್ಯಕ್ಕೆ 2ನೇ ಸ್ಥಾನ ಪಡೆದ ಬಡ ರೈತನ ಮಗ
(BELAGAVI): ಚಿಕ್ಕೋಡಿ: ಇಂದು ಪ್ರಕಟವಾಗಿರುವ ರಾಜ್ಯದ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶದಲ್ಲಿ 625ಕ್ಕೆ 624 ಅಂಕಗಳನ್ನು ಪಡೆಯುವ ಮೂಲಕ ಕಾಗವಾಡ ತಾಲೂಕಿನ ವಿದ್ಯಾರ್ಥಿಯೋರ್ವ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದು ಕೀರ್ತಿ ತಂದಿದ್ದಾನೆ.
ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ ಸುಬಲಸಾಗರ ಪ್ರೌಢಶಾಲೆಯ ವಿದ್ಯಾರ್ಥಿ ಸಿದ್ದಾಂತ ನಾಯಿಕಬಾ ಗಡಗೆ ಈ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಎಲ್ಲರ ಸಂತಸಕ್ಕೆ ಕಾರಣವಾಗಿದ್ದಾನೆ.
ಬಡ ರೈತ ಕುಟುಂಬದಲ್ಲಿ ಹುಟ್ಟಿದ ವಿದ್ಯಾರ್ಥಿಯ ಈ ಸಾಧನೆಗೆ ಇದೀಗ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದ್ದು, ಶಿಕ್ಷಣ ಇಲಾಖೆ ವತಿಯಿಂದಲೂ ಉಪನಿರ್ದೇಶಕರಾದ ಮೋಹನ್ ಕುಮಾರ್ ಹಂಚಾಟೆ ವಿದ್ಯಾರ್ಥಿಯ ಸಾಧನೆಗೆ ಸನ್ಮಾನಿಸಿ ಗೌರವಿಸಿದರು. ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿಯಿಂದ ಓದಬೇಕು ಅಂದಾಗ ಮಾತ್ರ ಈ ರೀತಿಯ ಅಸಾಮಾನ್ಯ ಸಾಧನೆ ಸಾಧ್ಯವಾಗುತ್ತದೆ ಎಂದು ಡಿಡಿಪಿಐ ಹಂಚಾಟೆ ಹರ್ಷ ವ್ಯಕ್ತಪಡಿಸಿದ್ದಾರೆ.
ನನ್ನ ಸಾಧನೆಗೆ ಶಿಕ್ಷಕರು, ಪೋಷಕರು ಕಾರಣ:
ನಾನು ನನ್ನ ಓದಿಗೆ ನಿರಂತರ ಪ್ರಯತ್ನ ಮಾಡಿದ್ದೇನೆ. ದಿನಾಲೂ 7ರಿಂದ 8ಗಂಟೆಯವರೆಗೆ ಆಸಕ್ತಿಯಿಂದ ಓದಿದ ಫಲವಾಗಿಯೇ ಇಂದು ನನ್ನ ಫಲಿತಾಂಶ ಇಷ್ಟೊಂದು ಉತ್ತಮವಾಗಿ ಬರಲು ಸಾಧ್ಯವಾಗಿದೆ. ಬಡತನದಲ್ಲಿಯೂ ಕೂಡ ಪೋಷಕರು ನನ್ನ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಸಂಪೂರ್ಣ ಪ್ರೋತ್ಸಾಹ ನೀಡಿದ್ದಾರೆ ಎಂದು ವಿದ್ಯಾರ್ಥಿ ಸಂತಸ ಹಂಚಿಕೊಂಡಿದ್ದಾನೆ.
ವಿದ್ಯಾರ್ಥಿಯ ಈ ಸಾಧನೆಗೆ ಕಾಗವಾಡ ಶಾಸಕ ರಾಜು ಕಾಗೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಹಾಗೂ ಜಿಲ್ಲಾಧಿಕಾರಿ ಡಾ.ನಿತೇಶ್ ಪಾಟೀಲ್ ಸೇರಿದಂತೆ ಗಣ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.
ವರದಿ: ಪ್ರಹ್ಲಾದ್ ಬೆಳಗಾವಿ