ಚಿಕ್ಕಮಗಳೂರುನ್ಯೂಸ್

ಗೊಬ್ಬರ ಹೆಚ್ಚಿಗೆ ಹಾಕಿದ ಮಾತ್ರಕ್ಕೆ ಇಳುವರಿ ಹೆಚ್ಚು ಬರುವುದಿಲ್ಲ. ಗೊಬ್ಬರ ಹೆಚ್ಚಾದರೆ ಅದು ವಿಷಪೂರಿತವೂ ಆಗಬಹುದು.

ಗೊಬ್ಬರ ಹೆಚ್ಚಿಗೆ ಹಾಕಿದ ಮಾತ್ರಕ್ಕೆ ಇಳುವರಿ ಹೆಚ್ಚು ಬರುವುದಿಲ್ಲ. ಗೊಬ್ಬರ ಹೆಚ್ಚಾದರೆ ಅದು ವಿಷಪೂರಿತವೂ ಆಗಬಹುದು.

(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು ಕಾಫಿ ಬೆಳೆಗಾರರು ಹಾಗೂ ಕಾರ್ಮಿಕರ ಹಿತ ಕಾಯಲು ಕಾಫಿ ಮಂಡಳಿ ಸದಾ ಬದ್ಧವಾಗಿದೆ ಎಂದು ಕಾಫಿ ಮಂಡಳಿ ಸದಸ್ಯ ಭಾಸ್ಕರ್ ವೆನಿಲ್ಲಾ ಹೇಳಿದರು. ಪಟ್ಟಣದ ರೋಟರಿ ಭವನದಲ್ಲಿ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ, ರೋಟರಿ ಕ್ಲಬ್ ಹಾಗೂ ಜೇಸಿಐ ಸಂಸ್ಥೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ  ಮಣ್ಣು ಪರೀಕ್ಷಾ ಶಿಬಿರ ಹಾಗೂ ಮಣ್ಣಿನ ಫಲವತತ್ತೆ, ಸಂರಕ್ಷಣಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.


ಕಾಫಿ ಮಂಡಳಿಯು ಬೆಳೆಗಾರರು, ಕಾರ್ಮಿಕ ಪರವಾಗಿಯೇ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ವರ್ಷ ರೂ.63.7 ಕೋಟಿ ಸಹಾಯದನವನ್ನು ಬೆಳೆಗಾರರಿಗಾಗಿ ಬಿಡುಗಡೆ ಮಾಡಿದೆ. ಇತ್ತೀಚೆಗಷ್ಟೆ ಕೆನರಾ ಬ್ಯಾಂಕ್ ಸಹಯೋಗದಲ್ಲಿ ಕಾಫಿ ಬೆಳೆಗಾರರು, ಕಾರ್ಮಿಕರ ಕಲ್ಯಾಣಕ್ಕಾಗಿ ಸಾಮಾಜಿಕ ಭದ್ರತಾ ಯೋಜನೆಯಡಿ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆಯನ್ನು ಆರಂಭಿಸಿದೆ. ರೂ.436, ರೂ.2೦ರ ಪ್ರೀಮಿಯಂ ಪಾವತಿಸಿ ಯೋಜನೆಯ ಸದುಪಯೋಗಪಡೆದುಕೊಳ್ಳಬಹುದು.
ಕಾಫಿ ಮಂಡಳಿಯಿoದ  ಕಾಫಿ ಪ್ಲಾಂಟೇಷನ್ ಹಾಗೂ ಕ್ಯೂರಿಂಗ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್‌ಸಿ, ಎಸ್‌ಟಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದು, ಎಸ್ಸೆಸ್ಸೆಲ್ಸಿಯಿಂದ ಪಿಯುಸಿವರೆಗೆ ರೂ.2250, ಪದವಿ, ಐಟಿಐ ನರ್ಸಿಂಗ್, ಕಾನೂನು ಪದವಿಗೆ ರೂ.3750, ಎಂಜಿನಿಯರಿoಗ್, ವೈದ್ಯ, ಕೃಷಿ ಕೋರ್ಸುಗಳಿಗೆ ರೂ.7500 ವಿದ್ಯಾರ್ಥಿ ವೇತನ ನೀಡಲಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 2450 ವಿದ್ಯಾರ್ಥಿಗಳಿಗೆ ರೂ.98.75ಲಕ್ಷ ವಿದ್ಯಾರ್ಥಿ ವೇತನ ನೀಡಿದೆ ಎಂದರು.


ಗ್ರಾಮೀಣ ಭಾಗಗಳಿಗೆ ಕಾಫಿ ಮಂಡಳಿಯು ತೆರಳಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಮಣ್ಣು ಪರೀಕ್ಷೆಯನ್ನು ನಡೆಸುತ್ತಿದ್ದು, ಮಣ್ಣು ಪರೀಕ್ಷೆಯ ಮೂಲಕ ಬೆಳೆಗಾರರು ತಮ್ಮ ತೋಟಗಳಲ್ಲಿ ಉತ್ತಮ ಬೆಳೆಯಲು ಪಡೆಯಲು ಸಾಧ್ಯವಿದೆ. ಮಣ್ಣು ಪರೀಕ್ಷೆ ಪ್ರತಿಯೊಬ್ಬ ರೈತರಿಗೂ ಅಗತ್ಯವಿದ್ದು ಭೂಮಿಯ ಫಲವತ್ತತೆ ತಿಳಿಯಲು ಸಾಧ್ಯವಿದೆ ಎಂದರು.
ಕಾಫಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಎಸ್.ಬಿ.ಹರೀಶ್ ಮಾತನಾಡಿ, ಮಣ್ಣಿಗೆ ಗೊಬ್ಬರ ನೀಡುವ ಮುನ್ನ ಮಣ್ಣಿನ ಪೂರ್ವಾಪರತೆಯನ್ನು ತಿಳಿದುಕೊಂಡಿರಬೇಕು. ಗೊಬ್ಬರ ಹೆಚ್ಚಿಗೆ ಹಾಕಿದ ಮಾತ್ರಕ್ಕೆ ಇಳುವರಿ ಹೆಚ್ಚು ಬರುವುದಿಲ್ಲ. ಗೊಬ್ಬರ ಹೆಚ್ಚಾದರೆ ಅದು ವಿಷಪೂರಿತವೂ ಆಗಬಹುದು.
ಮಣ್ಣಿಗೆ 18 ಪೋಷಕಾಂಶಗಳು ಬೇಕಿದ್ದು, ರೈತರು ಇದನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕಿದೆ. ಭೂಮಿಗೆ ಹೆಚ್ಚಿನ ಸುಣ್ಣ ಬಳಕೆ ಮಾಡಿದರೂ ಸಹ ಅಸಮತೋಲನ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ಬೆಳೆಗಾರರು ಪ್ರತೀ ವರ್ಷವೂ ಮಣ್ಣಿನ ಪರೀಕ್ಷೆ ಮಾಡಿಸಿ ಸೂಕ್ತ ಪೋಷಕಾಂಶಗಳನ್ನು ನೀಡಬೇಕಿದೆ ಎಂದರು.


ರೋಟರಿ ಕ್ಲಬ್ ಅಧ್ಯಕ್ಷ ಎ.ಆರ್.ಸುರೇಂದ್ರ, ಜೇಸಿಐ ಅಧ್ಯಕ್ಷ ಎನ್.ಶಶಿಧರ್, ಕಾರ್ಯದರ್ಶಿ ಶೃಜಿತ್ ಹುಯಿಗೆರೆ, ಕಾಫಿ ಮಂಡಳಿಯ ಸಂಪರ್ಕಾಧಿಕಾರಿ ಚರಣ್, ಸ್ನೇಹ, ವೈಷ್ಣವಿ, ರೋಟರಿ ಸದಸ್ಯರಾದ ಸತೀಶ್ ಅರಳೀಕೊಪ್ಪ, ಸಿ.ವಿ.ಸುನೀಲ್, ಟಿ.ಸುರೇಶ್ ಮತ್ತಿತರರು ಹಾಜರಿದ್ದರು.


Leave a Reply

Your email address will not be published. Required fields are marked *

Scan the code