ಗಿಡ ಮರಗಳು ನಾಶವಾದರೆ ಅದನ್ನು ನಂಬಿಕೊಂಡಿರುವ ಮಾನವನು ಕೂಡ ನಾಶವಾಗುತ್ತಾನೆ.
(SHIVAMOGA): ಸೊರಬ: ಗಿಡ ಮರಗಳು ನಾಶವಾದರೆ ಅದನ್ನು ನಂಬಿಕೊಂಡಿರುವ ಮಾನವನು ಕೂಡ ನಾಶವಾಗುತ್ತಾನೆ. ಪ್ರಸ್ತುತ ನಡೆಯುತ್ತಿರುವ ಪ್ರಕೃತಿ ವಿಕೋಪಗಳಿಗೆ ಹಲವಾರು ಕಾಯಿಲೆಗಳಿಗೆ ಪರಿಸರ, ಅರಣ್ಯ ನಾಶವೂ ಕಾರಣವಾಗಿದೆ ಎಂದು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಉದ್ರಿ ವೈದ್ಯಾಧಿಕಾರಿ ಡಾ. ಮಹೇಶ್ ಎಂ.ಕೆ ಹೇಳಿದರು.
ಉದ್ರಿ ಗ್ರಾಮದ ಸರ್ಕಾರಿ ಆಯುಷ್ ಆಸ್ಪತ್ರೆಗೆ ಆಗಮಿಸಿದ್ದ ನಡಹಳ್ಳಿ ಸಹಿಪ್ರಾ ಶಾಲೆ ಜಗದೀಶ್ ಚಂದ್ರ ಬೋಸ್ ಇಕೋ ಕ್ಲಬ್ ಟೀಂ ವಿದ್ಯಾರ್ಥಿಗಳು, ಶಿಕ್ಷಕರಿಗೆ ಆಸ್ಪತ್ರೆಯಲ್ಲಿನ ಔಷಧೀಯ ವನದ ಸಸ್ಯಗಳ ಕುರಿತು ಮಾಹಿತಿ ನೀಡಿದರು.
ಪ್ರಸ್ತುತ ಪರಿಸರ ನಾಶ ಅವ್ಯಾಹತವಾಗಿ ನಡೆಯುತ್ತಿದ್ದು, ಜೀವವೈವಿಧ್ಯತೆಯ ಕೊಂಡಿ ಕಳಚಲಾರಂಭಿಸಿದೆ. ನಾವಿಲ್ಲದಿದ್ದರೂ ಸಸ್ಯಗಳು ಸಮೃದ್ಧವಾಗಿ ಬೆಳೆಯುತ್ತವೆ. ಸಸ್ಯವಿಲ್ಲದೆ ನಾವು ಬದುಕಲಾರೆವು. ಮುಂಪೀಳಿಗೆಯವರಿಗೆ ವನ, ಸಸ್ಯ, ಅರಣ್ಯ, ಜೀವವೈವಿಧ್ಯತೆ ಮುಂತಾದ ಪರಿಸರಾತ್ಮಕ ಅಂಶಗಳನ್ನು ಮನದಟ್ಟು ಮಾಡಿಕೊಡುವ ಅಗತ್ಯವೀಗ ತೀರಾ ಅವಶ್ಯವಿದೆ. ಈ ನಿಟ್ಟಿನಲ್ಲಿ ಶಾಲೆಗಳ ಇಕೋ ಕ್ಲಬ್ ಕಾರ್ಯ ಶ್ಲಾಘನೀಯ ಎಂದರು.
ಅಸಂಕ್ರಮಿಕ ರೋಗಗಳು, ಸಮತೋಲನ ಆಹಾರ, ಆರೋಗ್ಯ ಕಾಪಾಡಿಕೊಳ್ಳುವ ಸರಳ ವಿಧಾನಗಳು, ದಿನನಿತ್ಯ ಮಕ್ಕಳು ವಯಸ್ಕರು ಅನುಸರಿಸಬೇಕಾದ ಆರೋಗ್ಯ ನಿಯಮಗಳು, ಜೀವನಶೈಲಿ ಮುಂತಾದ ವಿಷಯಗಳ ಬಗ್ಗೆ ತಿಳಿಸಿದರು.
ನಡಹಳ್ಳಿ ಸಹಿಪ್ರಶಾಲಾ ಮುಖ್ಯ ಶಿಕ್ಷಕಿ ವನಜಾಕ್ಷಿ ಮಾತನಾಡಿ, ವೈದ್ಯರಿಂದ ಮಕ್ಕಳಿಗೆ ಅಗತ್ಯ ಮಾಹಿತಿ ದೊರಕಿದೆ. ಬೆಳೆಯುವ ಹಂತದಲ್ಲಿಯೆ ಅರಿವು ಮೂಡಿಸುವ ಕಾರ್ಯ ಅಗತ್ಯವೆನಿಸಿದ್ದು ಮಕ್ಕಳಿಗೆ ಇಕೋ ಕ್ಲಬ್ ಮೂಲಕ ಪರಿಸರ ಜಾಗೃತಿ ಮೂಡಿಸಲಾಗುತ್ತಿದೆ. ವೈದ್ಯರು ತಮ್ಮ ಬಿಡುವಿಲ್ಲದ ಅವಧಿಯಲ್ಲಿಯೂ ಪರಿಸರ ಕಾಳಜಿ ಇರಿಸಿ ಮಕ್ಕಳಿಗೆ ಪರಿಸರ ಪ್ರಜ್ಞೆ ಮೂಡಿಸಿದ್ದಾರೆ. ಅವರ ಔಷಧೀಯ ವನ ಕಲ್ಪನೆ, ಮೂರ್ತತೆ ಮಾದರಿಯಾಗಿದ್ದು ಅಭಿನಂದನಾರ್ಹರು ಎಂದರು.
ಶಿಕ್ಷಕ ಪರಮೇಶ್ವರಪ್ಪ, ಲಕ್ಷ್ಮಣಪ್ಪ, ಷಣ್ಮುಖಪ್ಪ ಹಾಗೂ ಮೀನಾಕ್ಷಿ ಮುಖ್ಯ ಶಿಕ್ಷಕಿ ವನಜಾಕ್ಷಮ್ಮ, ಉದ್ರಿ ಚಿಕಿತ್ಸಲಯದ ಸಿಬ್ಬಂದಿ ಶಿವಮೂರ್ತಪ್ಪ ಹಾಗೂ ಗ್ರಾಮಸ್ಥರಿದ್ದರು.
ವರದಿ: ಮಧು ರಾಮ್ ಸೊರಬ